Monday 16 July, 2007

ಚಿತ್ರ - 10


ಇದು ಶ್ರೀನಿಧಿಯ ಕ್ಯಾಮರಾದಲ್ಲಿ ಸೃಷ್ಟಿಯಾದ ಚಿತ್ರ.
ದೇವಸ್ಥಾನಕ್ಕೆ ಬರುವ ಭಕ್ತನು ಭಿಕ್ಷುಕನೇ ಅಲ್ಲವೇ ಎನ್ನುತ್ತಾರೆ ಪಾರಿಜಾತ
1.ಜಗವ ಕಾಯುವನನ್ನು ಬೇಡುತಿರುವರು ಒಳಗೆ
ಅವರನ್ನು ಕಾದಿಹೆವು ನಾವಿಲ್ಲಿ ಹೊರಗೆ
ಕೋಟಿಗಟ್ಟಲೆ ಹಣವು, ಬಂಗಲೆಯು ಬೇಕಿಲ್ಲ
ಹಸಿವ ತಣಿಸಲು ಸಾಕು ಕಾಸೈದು ನಮಗೆ
2.ಒಳಗೆ ಇರುವವರನ್ನು "ದಾನಿಗಳು" ಎನ್ನುವರು
ಆದರೂ ಅವರೆಲ್ಲ ಭಿಕ್ಷುಕರೆ ತಾನೆ?
ನಮಗೇಕೆ ಈ ಪಟ್ಟಿ, ತಿಳಿಯದಾದೆವು ನಾವು
ನಿಮಗೆ ತಿಳಿದರೆ, ನಮಗೆ ತಿಳಿಹೇಳಿ ನೀವು !
ಭಿಕ್ಷುಕರ ವೇದನೆಯನ್ನು ಮನೋಜ್ಞವಾಗಿ ಹೇಳಿದ್ದು ಗುಹೆ

ಅ)
ಬೇಡುತಿಹೆವು ಬಾಗಿಲಲಿ
ಬಾಡುತಿಹೆವು ಬಿಸಿಲಿನಲಿ
ಇದು ನಾವು ನೀಡುವ ಕಾಟವಲ್ಲಯ್ಯ
ನಮ್ಮ ಹೊಟ್ಟೆಪಾಡಿನ ಪೀಕಲಾಟವಯ್ಯ

ಬ)
ಫೋಟೊ ತೆಗೆಯೆಯುವಾ ಶ್ರೀನಿಧಿ?
ಬದಲಾಗದು ನಮ್ಮೀ ದುರ್ವಿಧಿ...

ಸಣ್ಣ ಕಥೆಯ ಮೂಲಕ ಸುಶ್ರುತ ಹೇಳಿದ್ದು

ನಾವೂ ನಿಮ್ಮವರೇ..



ನಿನ್ನೆ ರಾತ್ರಿ ಆಫೀಸಿನಿಂದ ಮನೆಗೆ ಮರಳುತ್ತಿದ್ದಾಗ ಬಸ್‍ಸ್ಟಾಂಡಿನಲ್ಲಿ ಒಂದು ಅಪರಿಚಿತ ಮಗು ನನ್ನ ಪ್ಯಾಂಟನ್ನು ಜಗ್ಗಿ 'ಅಣ್ಣಾ' ಅಂತು. ಒಡ್ಡಿದ ಅದರ ಕೈಯಲ್ಲಿ ಒಂದು ರೂಪಾಯಿ, ಐವತ್ತು ಪೈಸೆಯ ನಾಣ್ಯಗಳಿದ್ದವು. ಅದರ ಮುಖವನ್ನು ಎಲ್ಲೋ ನೋಡಿದಂತಿದೆ ಅನ್ನಿಸಿತು. ತಕ್ಷಣ ನನಗೆ ಈ ಚಿತ್ರ ನೆನಪಾಯಿತು. ಇಲ್ಲಿ ಕುಳಿತಿರುವ ಜನರ ಪೈಕಿಯದೇ ಈ ಮಗು ಅಂತ ನನಗೇಕೋ ಬಲವಾಗಿ ಅನ್ನಿಸಿತು. ಈ ಎದುರಿಗೆ ಕುಳಿತ ಅಜ್ಜನ ಮುಖವನ್ನೇ ಹೋಲುತ್ತಿದೆ ಈ ಕೂಸಿನ ಮುಖ. ಅಂದರೆ ಈ ಕೂಸು ಈ ಅಜ್ಜನ ಮಗಳ ಮಗು ಆಗಿರಬಹುದು. ಅಥವಾ ಸೊಸೆಯ ಮಗು ಆಗಿರಬಹುದು. ಇಲ್ಲವೇ ತಂಗಿಯ ಅತ್ತಿಗೆಯ ಮಗಳ ಅತ್ತೆಯ ಮೊಮ್ಮಗುವೂ ಆಗಿರಬಹುದು. 'ಆಗಿರಬಹುದು' ಏನು, ಆಗಿರಲೇಬೇಕು.

ನಾನು ಆ ಮಗುವಿನ ಕೈ ಹಿಡಿದು ಕೇಳುತ್ತೇನೆ: 'ಏನು ನಿನ್ನ ಹೆಸರು?' ಮಗು ಗಾಭರಿಯಾಗುತ್ತದೆ. ನನ್ನ ಕಣ್ಣು ತಪ್ಪಿಸುತ್ತದೆ. ಕೈ ಬಿಡಿಸಿಕೊಂಡು ಓಡಲು ಅಣಿಯಾಗುತ್ತದೆ. ನಾನು ಮತ್ತೆ ಅದನ್ನು ಹಿಡಿದುಕೊಳ್ಳುತ್ತೇನೆ. 'ನಿನ್ನ ಊರು ಯಾವುದು?' -ಕೇಳುತ್ತೇನೆ. ನನ್ನ ಭಾಷೆ ಅರ್ಥವೇ ಆಗುವುದಿಲ್ಲವೇನೋ ಎಂಬಂತೆ ಪಿಳಪಿಳನೆ ಹೊಸ ಜೀವಿಯನ್ನು ನೋಡುವಂತೆ ಕಣ್ಣು ಮಾಡುತ್ತದೆ ಮಗು. 'ಹೀಗೆ ಭಿಕ್ಷೆ ಬೇಡುವುದು ತಪ್ಪು, ಶಾಲೆಗೆ ಹೋಗಬೇಕು ನೀನು' ಎನ್ನುತ್ತೇನೆ. ಮಗು ನನ್ನನ್ನು ಪಕ್ಕಕ್ಕೆ ತಳ್ಳಿ (ಅಬ್ಬ! ಎಷ್ಟು ಶಕ್ತಿ!) ಓಡತೊಡಗುತ್ತದೆ. ಸಾವರಿಸಿಕೊಂಡ ನಾನೂ ಹಿಂಬಾಲಿಸಿಕೊಂಡು ಓಡುತ್ತೇನೆ. ಮಗು ತನ್ನ ಜಾರುವ ಜೋಳಿಗೆಯನ್ನು ಹೆಗಲಿಗೇರಿಸಿಕೊಳ್ಳುತ್ತ, ಬೆನ್ನಟ್ಟಿಕೊಂಡು ಬರುತ್ತಿರುವ ನನ್ನನ್ನು ಹಿಂದಿರುಗಿ ನೋಡುತ್ತ ನೋಡುತ್ತ ಓಡುತ್ತಿದೆ... ಪ್ರಾಣಭೀತಿಯಿಂದ ಓಡುತ್ತಿದೆ...

ಓಡಿ ಓಡಿ ಅದು ಸೀದಾ ಇದೇ ದೇವಸ್ಥಾನದ ಬಳಿ ಬಂದಿದೆ. ಪುಟಪುಟನೆ ಈ ಮೆಟ್ಟಿಲುಗಳನ್ನೇರಿ, ಅಗೋ, ಆ ಆರನೇ ಮೆಟ್ಟಿಲಿನ ಮೇಲಿನ ತಾಯಿಯ ಬೆನ್ನ ಹಿಂದೆ ಅವಿತುಕೊಂಡಿದೆ. ಏದುಸಿರು ಬಿಡುತ್ತಾ ಬಂದ ನಾನು ಆರನೇ ಮೆಟ್ಟಿಲನ್ನೂ ದಾಟಿ ಮುಂದುವರೆದಿದ್ದೇನೆ... ದೇವಳದ ಹೊರಗೆ ಬಿಡೋಣವೆಂದು ನೋಡಿದರೆ ಕಾಲಲ್ಲಿ ಚಪ್ಪಲಿಯೇ ಇಲ್ಲ! ಹಾಗೇ ಒಳನಡೆದಿದ್ದೇನೆ. ಕೈ ಮುಗಿದು ಮಂಗಳಾರತಿ ಪಡೆದಿದ್ದೇನೆ. ಕಾಣಿಕೆ ಹಾಕೋಣವೆಂದು ಜೇಬಿಗೆ ಕೈ ಹಾಕಿದರೆ ಬಿಡಿಗಾಸೂ ಇಲ್ಲ! ಓಡುವ ಭರದಲ್ಲಿ ಎಲ್ಲಾ ದಾರಿಯಲ್ಲೇ ಬಿದ್ದುಹೋಗಿದೆ. ನನ್ನ ಮೊಬೈಲು, ವಾಚು, ವ್ಯಾಲೆಟ್ಟು, ಬಾಚಣಿಕೆ, ಪೆನ್ನು, ಕರ್ಚೀಫು.. ಎಲ್ಲಾ ಎಲ್ಲೋ ಬಿದ್ದುಹೋಗಿವೆ. ನನ್ನ ಬಟ್ಟೆಯನ್ನೆಲ್ಲಾ ಒಮ್ಮೆ ನೋಡಿಕೊಳ್ಳುತ್ತೇನೆ: ಪೂರ್ತಿ ಧೂಳು, ಮಣ್ಣು, ಅಲ್ಲಲ್ಲಿ ಹರಿದು ಹೋಗಿದೆ..

ಯಾಕೋ ನನಗೆ ಅಳು ಬರುತ್ತದೆ.. ನಾನು ಅನಾಥನೆಂಬ ಭಾವ ಆವರಿಸಿಕೊಳ್ಳುತ್ತದೆ.. ವಾಪಸು ಮನೆಗೆ ಹೋಗುವ ದಾರಿ ಸಹ ಗೊತ್ತಿಲ್ಲ.. ಒಂದೊಂದೇ ಮೆಟ್ಟಿಲು ಇಳಿಯುತ್ತೇನೆ.. ಆರನೇ ಮೆಟ್ಟಿಲಿಗೆ ಬಂದಾಗ ಅದೇ ಕೂಸು 'ಬಾ ಮಾವಾ.. ಕೂತುಕೋ..' ಎನ್ನುತ್ತದೆ. ಕುಡಿಯಲು ನೀರು ಕೊಡುತ್ತದೆ.. ತನ್ನ ಜೋಳಿಗೆಯಿಂದ ರೊಟ್ಟಿಯ ಚೂರು ತೆಗೆದು ಕೊಡುತ್ತದೆ.. ನನ್ನ ಜೀವಮಾನದಲ್ಲೇ ತಿಂದಿರದ ಒಣಕಲು ರಾಗಿ ರೊಟ್ಟಿ.. ನಾನದನ್ನು ಮುಕ್ಕುತ್ತೇನೆ.. ನನ್ನನ್ನು ನಿಧಾನಕ್ಕೆ ಕೈ ಹಿಡಿದು ನಡೆಸಿಕೊಂಡು ಹೋಗಿ ಈ ಅಜ್ಜನ ಪಕ್ಕ ಕೂರಿಸುತ್ತದೆ. 'ಬಾರಪ್ಪಾ ಕೂತುಕೋ.. ನೀನೂ ನಮ್ಮವನೇ.. ಇಲ್ಲಿ ಎಲ್ಲಾ ನಮ್ಮವರೇ.. ಯಾರೂ ಅನಾಥರಲ್ಲ.. ಒಬ್ಬರಿಗೊಬ್ಬರು ಹೇಗೋ ಸಂಬಂಧಿಕರು..' ಎನ್ನುತ್ತಾನೆ ಅಜ್ಜ. ನನಗೂ ಅದು ಹೌದೆನಿಸುತ್ತದೆ. ಬಹುಶಃ ನಾನು ಈ ಅಜ್ಜನ ನಾದಿನಿಯ ತಮ್ಮನ ಹೆಂಡತಿಯ ಅಣ್ಣನ ಭಾವನ ಷಡ್ಡಕನ ಮಗನಿರಬೇಕು ಎನಿಸುತ್ತದೆ.. ಅಜ್ಜನ ಪಕ್ಕ ಕೂತ ನಾನು ಜನ ಕಂಡದ್ದೇ ಜೋರಾಗಿ ಅರಚುತ್ತೇನೆ: 'ಅಮ್ಮಾ.. ಅಣ್ಣಾ.. ಭಿಕ್ಷಾ..' ಮತ್ತೂ ಜೋರಾಗಿ ಅರಚುತ್ತೇನೆ: 'ದಾನ ಮಾಡೀ ತಾಯೀ..' ಇನ್ನೂ ಜೋರಾಗಿ, ನನ್ನ ಕನಸಿನ ಲೋಕದಿಂದ ಹೊರಬರುವಷ್ಟು ಜೋರಾಗಿ ಅರಚುತ್ತೇನೆ: 'ನಾನೂ ನಿಮ್ಮವನೇ.. ದೂರದ ಸಂಬಂಧಿಕ.. ಸ್ವೀಕರಿಸಿ ಸ್ವಾಮೀ..'

md ಹೇಳಿದ್ದು

"ವಕ್ತ್ ಸೆ ದಿನ್ ಔರ್ ರಾತ್
ವಕ್ತ್ ಸೆ ಕಲ್ ಔರ್ ಆಜ್
ವಕ್ತ್ ಕಾ ಹರ್ ಶಯ್ ಗುಲಾಮ್
ವಕ್ತ್ ಕಾ ಹರ್ ಶಯ್ ಪೆ ರಾಜ್ .."

ಎಷ್ಟೊಂದು ನೋವು ಆ ಮುದುಕನ ದನಿಯಲ್ಲಿ. ಗೋಣೆತ್ತದೆ ಜೀವನದ ಬಗ್ಗೆ ಗೊಣಗುತ್ತಲೇ ಹಾಡುತ್ತಿದ್ದಾನೆ, ಆ ಆರನೆ ಅಗಲವಾದ ಮೆಟ್ಟಿಲಲ್ಲಿ ಕುಳಿತಿರುವ ಪಿಚ್ಚು ಕಣ್ಣಿನ ಭಿಕ್ಷುಕ.
"ಭಿಕ್ಷುಕ ಅವನು ! ಹಾಗಾದರೆ ನೀನು?" ಎಂದು ಕೇಳಿತು ನನ್ನ ಒಳಮನಸ್ಸು.
"ನಾನು ಭಿಕ್ಷುಕನ ಹಾಗೆ ಕಾಣಿಸುತ್ತೀನೋ?". ಅರೆ ಯಾರದು ಕೇಳಿದ್ದು? ಯಾರೋ ಮೂರ್ಖರು ಇರಬೇಕು.
'ನಾನು' ಮೂರು ಡಿಗ್ರೀ, ಎರಡು ಮನೆ (ಹಳೆಯದ್ದು ಮತ್ತು ಹೊಸದೊಂದು), ಒಂದು ಕಾರು, ಲಕ್ಷಗಳಲ್ಲಷ್ಟೇ ಇರುವ ಬ್ಯಾಂಕ್ ದುಡ್ಡು, ಇವುಗಳೆಲ್ಲದರ ಮಾಲೀಕ, ಕಂಪನಿಯ ಅಧಿಕಾರಿ, ಸಾಕಷ್ಟು ಗೆಳೆಯರು ಸಂಪಾದಿಸಿರುವ ಸ್ನೇಹ ಜೀವಿ, ಹೆಂಡತಿ-ಮಕ್ಕಳೊಂದಿಗೆ ಸುಖ ಸಂಸಾರಿ. ನನ್ನನ್ನು ಈ ಪ್ರಶ್ನೆ ಕೇಳುವವನು ಮೂರ್ಖನೇ ಇರಬೇಕು.

"ಪಾಪಾ, ೧ ರುಪಿ ಪ್ಲೀಸ್. ಆ ಬೆಗ್ಗರಗೆ ಡೊನೇಟ್ ಮಾಡ್ತೀನಿ"
"ಒ.ಕೆ. ಮೈ ಸ್ವೀಟ್ ಚೈಲ್ಡ್. ಯು ಸೀ ದೆ ಆರ್ ಪೂರ್ ಪೀಪಲ್. ಬಟ್ ಬ್ಲಡಿ ಬೆಗ್ಗರ್ಸ್."
"ಶ್ರೀನಿ ಇದೆಲ್ಲ ಭಾಷಣ ಮಗೂಗೆ ತಿಳಿಯುತ್ತಾ? ನೀವೊಂದು. ಹೇ ಚಿನ್ನು ಬಾ ಇಲ್ಲಿ. ಇದು ತಗೊ ೫ ರುಪೀಸ್. ಗಿವ್ ಇಟ್ ಟು ದ್ಯಾಟ್ ಸಿಂಗಿಂಗ್ ಬೆಗ್ಗರ್. ಮ್ಮ್"

"ನಿಶಾ, ನಿನಗೆ ಗೊತ್ತಲ್ಲ. ನಾನು ಹೇಗೆ ಅಂತ. ಏನಾದರೂ ಕೆಲಸ ಮಾಡಿ ದುಡ್ಡು ಗಳಿಸಿ ಹೊಟ್ಟೆ ಹೊರಕೋಳ್ಳೋಕಾಗದಿರೋ ಲೇಜಿ ಬುಲ್ಲ್ ಶಿಟ್ ಅವರು. ಅವರಿಗೆ ಹೀಗೆ ಐದೈದು ರೂಪಾಯಿ ದಾನ ಧರ್ಮ ಅಂತ ಕೊಟ್ರೆ ಹೇಗೆ. ಆ ದುಡ್ಡು ಈ ಹೆಸರು, ಮನೆ, ಕಾರು, ಈ ೩೫೦೦೦ ರೂ ಮೊಬೈಲು ಇವನ್ನೆಲ್ಲಾ ನಾನು ಗಳಿಸಿದ್ದೇನೆ. ಯಾರೋ ಬಂದು ನನಗೆ ಭಿಕ್ಷೆ ಕೊಟ್ಟು ಹೋಗಿಲ್ಲ. ತಿಳೀತಾ?"

"ಶ್ರೀನಿ, ಪ್ಲೀಸ್"

"ಲಿಸನ್ ಲಿಸನ್ ಟು ಮಿ. ಈ ಕೆಲಸ ನನ್ನ ಕೈಲಿರದಿದ್ರೆ ನಿನ್ನ ತಂದೆ ನಮ್ಮ ಪ್ರೀತಿನ ಒಪ್ಪಿಕೊಂಡು ನಮ್ಮ ಮದುವೆಗೆ ಹೂಂ ಅಂತಿದ್ದ್ನಾ? ಇಲ್ಲ. ನೋಡು ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ. ಈ ನನ್ನ ಯಶಸ್ಸು, ನಾನು ಇಂಡಷ್ಟ್ರಿಯಲ್ಲಿ ಮಾಡಿದ ಹೆಸರು, ಈ ಬಂಧು-ಬಳಗ, ಗಳಿಸಿದ ದುಡ್ಡು ಇದೆಲ್ಲ ನನ್ನ ಕೇವಲ ನನ್ನ ಪರಿಶ್ರಮದ ಫಲ. ಇದನ್ನ ನನ್ನಿಂದ ಯಾರು ಕಿತ್ತುಕೊಳ್ಳೋಕಾಗಲ್ಲ. ಅಂಡರ್ಸ್ಟಾಂಡ್"

"ಆಯ್ತು ನಿಮ್ಮ ವಿಚಾರಧಾರೆ ನಿಮಗೆ ಇರಲಿ. ನನಗೆ ಅವನು ಕುಳಿತಿದ್ದಾನಲ್ಲ ಆ ಮುದುಕ ಅವನು ಭಿಕ್ಷುಕ, ನಾನು ಆ ದೇವರಿಗೆ ಭಿಕ್ಷುಕಿ.ಇದು ನನ್ನ ವಿಚಾರಧಾರೆ. ಸಿಂಪಲ್. ಚಿನ್ನು...."

ಮರದ ಮೇಲಿರುವ ಎಲೆ ಆ ಸೃಷ್ಟಿಕರ್ತನ ಅಪ್ಪಣೆಯೊಂದಿಗೆ ಅಲ್ಪ ಸ್ವಲ್ಪ ಭಯದಿಂದ ಓಲಾಡಿ ಸುಮ್ಮನಾಯಿತು. ಇರುವೆಗಳ ಸಾಲು ಮುಂಬರುವ ಮಾಸಕ್ಕೆ ಅಂತ ಕಾಳು-ಕಡಿ ಕೂಡಿಡುವಲ್ಲಿ ನಿರತವಾಗಿವೆ. ಗಾಡಿಗಳು ಜೀವನವನ್ನು 'ಬೇಗ ಬೇಗ ಕೆಲಸವಾಗಬೇಕು, ತಲುಪಬೇಕು' ಅನ್ನುವವರಿಗೆ ಸಾಧನಗಳಾಗಿ ಓಡುತ್ತಿವೆ. ಆ ಲಾರಿಗಾಡಿ ಚಕ್ರಕ್ಕೆ ಒಂದು ಚಿಕ್ಕ ತೊಡಕಾಗಿ ಶ್ರೀನಿಯ ರುಂಡ ಬಂದಿದೆ. ಅಷ್ಟೆ.

ಯಾವುದರ ಮಾಲೀಕ ಯಾರು ಅನ್ನೋದು ಗೊತ್ತಿರೋನಿಗೆ, ಎಲ್ಲದರ ಮಾಲೀಕ ಯಾರು ಅನ್ನೋದು ತಿಳಿಯಳಿಲ್ಲ.
ನಾನಂತೂ ಮೂರ್ಖನಲ್ಲ !!. ಯಾರದು ಹೇಳಿದ್ದು?? ಬರೆಯುವವನೋ ಅಥವಾ ಓದುವವನೋ

"ಶ್ರೀನೀ............" ಚೀತ್ಕಾರ.

ನೀಲಗ್ರಿವ ಹೇಳಿದ್ದು
ಶ್ರೀನಿಧಿಯೆಂಬ ಹೆಸರನ್ನು ಇಟ್ಟು
ನತ-ಭಾಗ್ಯರ ಚಿತ್ರವ ಸೆರೆಹಿಡಿದಿರಲ್ಲ! :)
ಹೆಸರಲ್ಲಿ ಏನುಂಟು ಚಿತ್ರವನು ನೋಡಿ
ಅನ್ನುವಿರಿ ನೀವೆಂದು ನನಗೆ ಗೊತ್ತು

ಶ್ರೀಕಲಾ ಹೇಳಿದ್ದು
ಆ ವೃದ್ಧ...

ಎದುರಿಗೆ ಕುಳಿತ ವೃದ್ಧನನ್ನು ನೋಡುವಾಗ ಆ ವೃದ್ಧನದೇ
ನೆನಪಾಗುತ್ತದೆ. ಆತನೂ ಹೀಗೆ ಕುಳಿತಿರುತ್ತಿದ್ದ. ಕುಕ್ಕರುಗಾಲಿನಲ್ಲಿ,
ತಲೆಗೊಂದು ಟವೆಲ್ ಸುತ್ತಿಕೊಂಡು, ಮಾಸಲು ಬಟ್ಟೆ ತೊಟ್ಟು..
ಬದುಕ ನೋಡುತ್ತಿದ್ದುದು ಆತ ಇಂತಹುದ್ದೇ ಮಬ್ಬು
ಕನ್ನಡಕದೊಳಗಿಂದ. ಕೈಗಳಲ್ಲಿ ಇದೇ ಹಿಂಜರಿಕೆ. ಮುಖದಲ್ಲಿ
ಇಂತಹುದ್ದೇ ನಿರ್ಭಾವ.
ದಿನವೂ ಆತನನ್ನು ನೋಡುತ್ತಿದ್ದೆ. ಇದೇ ಭಂಗಿ,ಇದೇ ಭಾವ.
ಆದರೆ ಒಂದು ವ್ಯತ್ಯಾಸ.
ಈತನಿಗೆ ಒಂದು ಮೆಟ್ಟಿಲು ಸವೆದಾಗ ಇನ್ನೊಂದು ಮೆಟ್ಟಿಲು. ಗುಡಿಸಲ
ಕನಸ ಹಂಚಿಕೊಳ್ಳಲು ಜತೆಗಾರರು.
ಆತ ಕುಳಿತಿರುತ್ತಿದ್ದುದು ವಸಂತದಲ್ಲಿ ಕೆಂಪು ಹೂ ಬಿಡುವ ಒಂಟಿ
ಮರದ ಕೆಳಗೆ ಒಂಟಿಯಾಗಿ!

ಶ್ಯಾಮಾ ಅವರ ಅನಿಸಿಕೆ
"ಅಮ್ಮ ತಾಯಿ ಭಿಕ್ಷೆ ಹಾಕಿ"
ಯಾರದ್ದೋ ಧ್ವನಿ ಮನೆ ಬಾಗಿಲ ಹತ್ತಿರ ಕೇಳುತ್ತಲೇ ಅಮ್ಮ ಹೆಳುತ್ತಿದ್ದಳು "ನೋಡು ಯಾರೋ ಭಿಕ್ಷುಕರು, ಭಿಕ್ಷೆ ಹಾಕಿ ಕಳ್ಸು".

ಕಿಟಕಿಯಿಂದಲೇ ಹೊರಗೆ ನೋಡಿ ಹೆಳುತ್ತಿದ್ದೆ "ಅಮ್ಮ ಅವಳೇ ನಮ್ಮ ಫ್ರೆಂಡ್ ಭಿಕ್ಷುಕಿ ಅಜ್ಜಿ"

ಇದೇನಿದು ಭಿಕ್ಷುಕರೂ ಫ್ರೆಂಡ್ಸಾ ಅಂತ ಅನ್ನಿಸಬಹುದು. ಹೌದು. ಆ ಭಿಕ್ಷುಕಿ ಅಜ್ಜಿ ವಾರಕ್ಕೊಂದು ದಿನ ಖಾಯಂ ಆಗಿ ಭಿಕ್ಷೆ ಬೇಡಲು ಬರುತ್ತಿದ್ದಳು ಮನೆ ಬಾಗಿಲಿಗೆ. ತುಂಬಾ ಒಳ್ಳೇ ಅಜ್ಜಿ. ಜಾಸ್ತಿ ಕಾಟ ಕೊಡುತ್ತಿರಲಿಲ್ಲ. ಕೊಟ್ಟಷ್ಟು ತೆಗೆದುಕೊಂಡು ಸುಮ್ಮನೇ ಹೋಗುತ್ತಿದ್ದಳು. ಒಮ್ಮೊಮ್ಮೆ "ಕುಡಿಯಲು ನೀರು ಕೊಡೆ ಮಗಳೆ" ಅಂತಲೂ ಕೇಳುತ್ತಿದ್ದಳು. ಅಂಥ ಸಮಯದಲ್ಲಿ ಅವಳು ಮನೆಯ ಕಟ್ಟೆಯ ಮೇಲೆ ಕೂತರೆ ಏನಾದರೂ ತನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದಳು.
"ಇಷ್ಟು ವಯಸ್ಸಾಗಿದೆಯಲ್ಲ ಯಾಕೆ ಭಿಕ್ಷೆ ಬೇಡುತ್ತಿಯ. ನಿಂಗೆ ಮಕ್ಕಾಳಿಲ್ವಾ ನೋಡಿಕೊಳ್ಳೋಕೆ" ಅಂತ ಕೆಳಿದ್ದಕ್ಕೆ ಅವಳ ಮಗ ಸೊಸೆ ಸತ್ತುಹೋಗಿರುವುದಾಗಿಯೂ, ಅವರ ಮಗುವನ್ನು ಇವಳೇ ಸಾಕುತ್ತಿರುವುದಾಗಿಯೂ ದುಃಖ ತೋಡಿಕೊಂಡಿದ್ದಳು.

ಮಳೆಗಾಲದಲ್ಲಿ ಆಕೆ ಭಿಕ್ಷೆ ಬೇಡಲು ಬರುತ್ತಿರಲಿಲ್ಲ. ಆಗೆಲ್ಲ ಯಾವಾಗಲಾದರೂ ದೇವಸ್ಥಾನಕ್ಕೆ ಹೋದಾಗ ಇದೆ ಈ ಚಿತ್ರದಲ್ಲಿರುವಂತೆ ಮೆಟ್ಟಿಲ ಮೇಲೆ ಕೂತಿದ್ದವಳು ನಮ್ಮನ್ನು ನೋಡಿ ಗುರುತಿಟ್ಟು ಮಾತಾಡಿಸುತ್ತಿದ್ದಳು. ಅವಳನ್ನು ನೋಡಿದಾಗಲೆಲ್ಲ ಇಂಥವರ ಕಷ್ಟಕ್ಕೆ ಕೊನೆಯಿಲ್ಲವೆ? ಬಾಳ ಮುಸ್ಸಂಜೆಯಲ್ಲಿ ಇವರ ಕಣ್ಣಿಂದ ಜಾರುವ ಹನಿಗಳನ್ನು ಒರೆಸುವ ಕೈಗಳಿಲ್ಲವೇ? ಅನ್ನಿಸುತ್ತಿತ್ತು. ಈಗ ವಾರಕ್ಕೊಮ್ಮೆ ಬರುವ ಆ ಅಜ್ಜಿ ನಮ್ಮನೆ ಬಾಗಿಲಿಗೆ ಬರುವುದೇ ಇಲ್ಲ. ದೇವಸ್ಥಾನದ ಮೆಟ್ಟಿಲ ಬಳಿಯೂ ಕಾಣುವುದಿಲ್ಲ. ಆಕೆ ಇಲ್ಲದಿರಬಹುದು ಈ ಲೋಕದಲ್ಲಿ, ಆದರೆ ಅಂಥ ಇನ್ನೆಷ್ಟೋ ಜನ ಇನ್ನೂ ಆ ಮೆಟ್ಟಿಲ ಮೇಲೆ ದಿನಾ ಕಾಣುತ್ತಾರೆ. ಆ ಮೆಟ್ಟಿಲುಗಳ ಮೇಲೆ ಅವಳ ಹೆಜ್ಜೆ ಗುರುತುಗಳ ಮೇಲೆ ಇನ್ನೆಷ್ಟೋ ಅಂಥದೆ ಹೆಜ್ಜೆ ಗುರುತುಗಳು. ಬರೀ ನೋಟದಲ್ಲಿ ಮರುಕ ಸೂಸಿ ಮುಂದೆ ಹೋಗುವ ನಮ್ಮಂಥ ಅದೆಷ್ಟೋ ಕಣ್ಣುಗಳು.
ಸತೀಶ ಹೇಳಿದ್ದು

ಕೂಡ್ ಹಾಕಿರೋ ದೇವ್ರು
ಇಪ್ಪತ್ತೊಂದು ಮೆಟ್ಲನ್ನ್ ದಾಟಿ ಕೂಡ್ ಹಾಕಿರೋ ದೇವ್ರನ್ನ
ಕದ್ಕೊಂಡ್ ಯಾರೂ ಹೋಗ್ದೇ ಇರ್ಲಿ ಎಂದು ಕಾಯ್ತಾ ಇರೋ ನಮ್ಮನ್ನ
ಭಿಕ್ಷುಕರೆಂದು ಕರ್‌ದವ್ರ್ ಯಾರು, ಬೇಡ್ದವರೆಂದು ಜರೆದೋರ್ ಯಾರು?

ನಮ್ ದೇಶ್‌ದೋರೇ ನಮ್ ನಮ್ ಚಿತ್ರಾ ತೇಗೀತಾ ಹೋದ್ರೆ ಹೇಗೆ
ದೀನತೆಯನ್ನು ಎಂದೂ ಯಾರೋ ನೋಡ್ಲೇ ಇಲ್ಲಾ ಅನ್ನೋ ಹಾಗೆ
ಬಿಸಿಲಿಗೆ ನೆರಳಾ ಆಸರೆ ಎಲ್ಲಿ, ಹೊಟ್ಟೆಯ ತುಂಬಿಸೋ ಒಸಗೆ ಎಲ್ಲಿ?

ದೇವ್ರು ದರ್ಶನಕ್ ಬರೋ ಜನ ಹೊತ್ತು ತರೋ ಅಂತಃಕರಣ
ನಮ್ಮನ್ನಿಲ್ಲಿ ದಿನಂಪ್ರತಿ ಕೂರೋ ಹಾಗ್ ಮಾಡಿರೋ ಕಾರಣ
ಇನ್ನುಳಿದ ಪ್ರಶ್ನೆಗಳಿಗೆ ಉತ್ತರವೇನು, ನಮ್ಮಯ ಚಿತ್ರ ಮೆಚ್ಚುಗೆಯೇನು?

ಸೋಂಬೇರಿಗಳೆಂದು ಜರೀ ಬೇಡಿ
ಹಾಳ್ ಹೊಟ್ಟೇ ಸಂಕ್ಟಾ ಮರೀಬೇಡಿ
ನಮ್ ಮಕ್ಳೆಲ್ಲಾ ಕೈ ಕೊಟ್ಟ್ ಹೋದ್ವು ಯಾವ್ದೋ ರಾಗಾ ಹಾಡಿ
ಇಂದಿನ ಸ್ಥಿತಿಗೆ ನೀವೂ ಕಾರ್ಣಾ ನಮ್ಮಯ ದುಸ್ಥಿತಿ ನೋಡಿ.

ಯೋಚಿಸ್‌ಬೋದೂ ನೀವು ಕೆಲವು ಖಾಲಿ ಮೆಟ್ಲೂ ಯಾಕೆ
ಮೇಲಕ್ ಹತ್ತಿ ಹೋದವ್ರು ಇಲ್ಲಿಗೆ ಬರ್‌ಬಹುದು ಮುಂದೆ ಜೋಕೆ!

ಸನತ್ ಕೂಡ ಸಣ್ಣ ಕಥೆಯ ಮೂಲಕ ಹೇಳಿದ್ದು


"ಅಯ್ಯಾ...ಅಮ್ಮಾ....."

"ಅಯ್ಯಾ...ಅಮ್ಮಾ.....ಧರ್ಮಾ ಮಾಡಿ"
" ಏಯ್ ನಿಂಗಣ್ಣಾ, ಯಾರೋ ಅಲ್ಲಿ ಫೋಟೋ ಓಡಿತಾವ್ರೆ"
"ಅಯ್ಯಾ ಸುಮ್ಕಿರು ,ಈ ಫೋಟೋದವರೆಲ್ಲಾ ಅಂಗೇಯಾ,ಸುಮ್ಕೆ ನಿತ್ತು ನಮ್ಮ ಪೊಟೋ ಒಡ್ದು ಮಜಾ ನೋಡ್ತಾರೆ"
"ಒಡ್ಕೊಂಡೂಗ್ಲಿ ಬುಡಣ್ಣ"
"ಒಡ್ಕೊಂಡೂಗ್ಲಿ ಅಂತೆ ಒಡ್ಕೊಂಡೂಗ್ಲಿ..ಅದನ್ನ ಯಾರ್ಗಾರು ಮಾರಿ ಯಾವುದಾರು ಪೇಪರ್ ಗೆ ಮಾರ್ಕಂಡು ಕಾಸ್ ಮಾಡ್ಕೊತಾರೆ"
"ಕಾಸು ಮಾಡ್ಕೊತಾರೆ ,ಅವರ ನಸೀಬು"
"ನಸೀಬಂತೆ ನಸೀಬು..ನಮ್ಮ ಪೊಟೋ ತಗಂಡಿ ಕಾಸ ಮಾಡೋದು ತಪ್ಪಲ್ಲಾ ಕಣಣ್ಣಾ.. ನಮಗೆ ಒಂದು ಪೈಸೆನೂ ಹಾಕದೇ ಓಗ್ತಾರೆ, ಮನುಸ್ಸತ್ವ ಇಲ್ಲದ ಜನಾ"
"ಈ ಕಲಿಕಾಲದಾಗೆ ಎಲ್ಲಾರೂ ಒಳ್ಳೇರು ಇರೋಕಾಯಿತದ ಹೇಳು"
"ಹುಂ ಹೂಂ ನೀನು ಹೇಳೂದು ಸರಿನೇ ಅನ್ನು ಅದ್ರೂ...ಈ ಪ್ಯಾಟೆ ಜನ ಯಾಕೋ ಸರಿ ಯಿಲ್ಲ"
"ಸರಿ ಇರ್ಲಿ ಇಲ್ಲದೇ ಇರ್ಲಿ ..ನಿಂಗ್ಯಾಕೆ ಯಾರೋ ಪುನ್ಯಾತ್ಮರು ಹಾಕೋ ಧರ್ಮದಲ್ಲಿ ನಮ್ಮ ಜೀವನ ಸಾಗೋತ್ತೆ ಅದೇ ಸಾಕು"
"ಎನೋಪ್ಪಾ ಭಗ್ವಂತ ಇಟ್ಟಂಗೆ ನಮ್ಮದೇನೈತೆ"
"ಅಲ್ಲಾ ಕಣಣ್ಣ್ಸಾ..ಈ ಹಳ್ಳೀ ಹೈಕಳು ಸರಿ ಇದಾವೆ ಅಂತ ನೀನು ಯೋಳೋದಾ..ಈಗ ನೋಡು ನಿನ್ನ ಮಗ ನಿನ್ನ ಮನೆಯಿಂದ ಹೊರಗಡೆ ಹಾಕಿ ಎಲ್ಲಾ ಕಾಸು ಲಾಟ್ರಿಗೆ ಹಾಕಿಲ್ವಾ"
"ಬೇ***,ಅದು ಯಾವ ಕಾಲದಲ್ಲಿ ಹುಟ್ಟಿದ್ನೋ ಶನಿ..ನಮ್ಮ ವಂಸನೇ ಹಾಳ್ಮಾಡೋಕೆ..ಥಥ್"
"ಈ ಮಗನೆಲ್ಲಾ ಈ ತರ ಬೈಬಾರ್ದು ಕಣಣ್ಣಾ"
"ನೀ ಸುಂಕಿರಮ್ಮಾ..ನಿಂಗೇನು ಗೊತ್ತಾಯಿತದೇ ನನ್ನ ಕಷ್ಟ"
"ಏ..ನಿಂಗೊಬ್ಬಂಗೇಯಾ ಕಸ್ಟ ಇರೋದು ನಾವೆಲ್ಲಾ ಇಲ್ಲಿ ಮಾರಾಜರ್ ತರ ಅದೀವಿ.."
"ಹುಂ ಇವತ್ತುಗು ನಾನು ಹಳ್ಳಿಲಿದ್ರೆ ಮಾರಾಜಂತರನೇ ಬದೀಕಂಡಿರ್ ತಿದ್ದೇ"
"ಆಯ್ತಾ..ನಿಮ್ಮುದೆಲ್ಲಾ..ಅಯ್ಯನೋರು ಮೆಟ್ಟಿಳಿದು ಬರ್ತಾವ್ರೆ ಪ್ರಸಾದನೋ ಎನಾದ್ರು ಹಾಕಿದ್ರೆ ಸಾಕು ಒಟ್ಟೆ ಚುರ್ರ್ ಅಂತದೇ"
"ಅಯ್ಯಾ...ಅಮ್ಮಾ....."

No comments: