Wednesday 29 October, 2008

ಚಿತ್ರ ೭೬





ತಿರುಕ ಅವರ ಕವನ:
ಎರಡು ದೀಪಗಳು

ನಾವು ಹಚ್ಚಿಟ್ಟ ಹಾಗೆ ಉರಿವ
ಉರಿದು, ಬೆಳಗುವ ಈ ದೀಪ
ಆ ದೀಪ ಪ್ರದೀಪ - ಸಂದೀಪ
ತನ್ನತನವ ಬದಿಗೊತ್ತಿ
ಜಗವ ಬೆಳಗಿಸುವ ಈ ದೀಪಗಳು

ಒಂದಕೆ ಬೆಂಕಿಯೆಂಬ ಹೊತ್ತಿಸುವಿಕೆ
ಇನ್ನೊಂದಕೆ ಆತ್ಮವೆಂಬ ಜಾಗೃತಗೊಳಿಸುವಿಕೆ
ಇದು ಕ್ಷಣಗಳಲಿ ನಂದುವ ದೀಪ
ಅದು ಯುಗಗಳವರೆವಿಗೆ ತೋರುವ ದೀಪ

ವಯಸ್ಸು ಕಳೆದುಕೊಳ್ಳುತಿಹ ಈ ದೀಪ
ವಯಸ್ಸು ತುಂಬಿಕೊಳ್ಳುತಿಹ ಆ ತೇಜೋದೀಪ
ತೋರಿದ ಕಡೆಗೆ ಹರಿವ ನೋಟಗಳು
ತನ್ನತನವ ತೋರ್ಪಡದಿಹ ಈ ದೀಪ
ದಿಗಂತಕೂ ಅಂತ ತೋರುವ
ಕಾತರ, ನಿರೀಕ್ಷೆ ಹೊಂದಿರುವ ಆ ದೀಪ

ಪುಟ್ಟ ದೀಪ
ಬೆಳಗುತಿಹುದು
ದೊಡ್ಡ ಕೋಣೆ
ಬೆಳಗಬಲ್ಲದು ದೊಡ್ಡ ಜಗತ್ತು
ತನ್ನ ಮನೆಯ ಕತ್ತಲಲಿಟ್ಟು
ಊರೆಲ್ಲಾ ಬೆಳಗುವುದು
ಅವುಗಳ ನಂದದಂತೆ ಕಾಪಾಡುವ

ಜಗದ ಒಳಿತಿಗಾಗಿ, ಆ ಸರ್ವಶಕ್ತನಲಿ ಬೇಡುವೆ - ಎಂದಿಗೂ ದೀಪಗಳು ನಂದದಿರಲಿ
ಹೊಳೆಯುತ, ಹೊಳೆಸುತ, ನಳಿಸುತ ದೇದೀಪ್ಯಮಾನವಾಗಿರಲಿ

ಈ ದೀಪ - ಮೋಂಬತ್ತಿ
ಆ ದೀಪ - ಪುಟ್ಟ ಪೋರ


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -


ಬೆಳಗುಂಟು ಕತ್ತೆಲೆಯ ಒಡಲಾಳದಿ
ಕತ್ತಲೆಯುಂಟು ಬೆಳಗಿನ ಬುಡದಲ್ಲಿ
ನಗುವುಂಟು ನೋವಿನಾಟದಲೂ
ಏನುಂಟು ಏನಿಲ್ಲ ಬದುಕಲ್ಲಿ ತಿಳಿಯಲಾಗದು

ಹಸಿವುಂಟು ಹಂಬಲಿಸಿ ಕೂಳು ಹುಡುಕಲು
ನೋವುಂಟು ಕಳೆದ ನಲಿವನುಡುಕಿಸಲು
ಅಳುವುಂಟು ನಗುವಿನ ದಾರಿ ತೋರಲು
ಬವಣೆಯುಂಟು ಬದುಕಿನ ಹೆದ್ದಾರಿಯಾಗಲು

ಬೆಳಗಿದೆ ನನಗಿರುವ ಕತ್ತಲಾದಿಯಲ್ಲಿ
ನಡೆವೆ ದೂರ ದೂರಕೆ ಅಷ್ಟೆ ಸಾಕಲ್ಲವೆ?
ಕಣ್ಣಲ್ಲಿ ಗೆಲುವುಂಟು ಕಾಣುವ ಕಾತುರ ಉಂಟು
ಕಾದಾಡುವೆ ಬದುಕಿನಲಿ ಗುರಿಯ ಕಾಣಲು

ಬವಣೆಯಲ್ಲೂ ಬಳಲಿಕೆಯಲ್ಲೂ ಕಾಣುವೆ ಬೆಳಕನು
ಕಿರಿದಾದರೇನು ಹಿರಿದಾದರೇನು ದಾರಿತೋರದೇನು?
ಹುಟ್ಟಿರುವೆ ಗೆಲುವಲು, ಇದುವೆ ನಾಕಾಣುವೆ
ಗೆಲುವೆಂದು ನನ್ನದು ಈ ಬೆಳಕೇ ಮುನ್ನಡೆಸುವುದು

Wednesday 22 October, 2008

ಚಿತ್ರ ೭೫



















ತವಿಶ್ರೀ ಅವರ ಕವನ:

ಜೀವನವಿಷ್ಟೇ!

ಇದೇ ಕೈಲಾಸ ಇದೇ ವೈಕುಂಠ
ಇಲ್ಲೇ ಸ್ವರ್ಗ ಇಲ್ಲೆ ನರಕ

ಜೀವನವಿಷ್ಟೇ!

ಏಳು, ತೊಳೆ, ಸಾರಿಸು, ಬಾಡಿಸು
ಇಟ್ಟು ಉರ್ಳಿ ಸಾರು
ಅಬ್ಬಕ್ಕೆ ಮಾತ್ರ ಬಾಡು

ಒಲದಾಗೆ ಗೇಯುತಿಹರು ಮಗ ಅವರು
ಸಿಲ್ವಾರ ತಟ್ಟೆ ಪಾತ್ರೆ (ಅಲ್ಯೂಮಿನಿಯಮ್)
ತಲೆಗೇರಿಸಿದೆ ಸಿಂಬಿ
ಒತ್ತು ಉಣ್ಣಕ್ಕಿಕ್ಕಲು ನಾ ಒಂಟೆ

ಹಾದಿಯಲಿ ಹಳ್ಳ ಕೊಳ್ಳ
ಅವುಗಳ ಅರಿವಿಲ್ಲದೇ ನಡೆದಿಹ ನಾ ಮಳ್ಳ
ತುಂಬಿಸಬೇಕಲ್ಲ ಬಳ್ಳ
ತೂರಬೇಕಲ್ಲ ಜೊಳ್ಳ
ನಾವೆಂದಿಗೂ ಆಗೆವು ಕಳ್ಳ

ಎತ್ತುಗಳಿಗೆ ಉಣಿಸು ನೀರು ಕಟ್ಟು
ಮನೆಗೆ ಬಂದು ಎರಡಗುಳು ಗತುಕು
ಹಸುವಿಗೆ ತಿನ್ನಲು ಹುಲ್ಲು, ಬೂಸಾ
ಪಸೆಯಾರಿಸಲು ಬಾನಿಗೆ ನೀರು

ಸಂಜೆ ಬರುವ ಎತ್ತುಗಳಿಗಾಗಿ
ಕೊಟ್ಟಿಗೆಯಲಿ ಎಲ್ಲ ಒತ್ತಟ್ಟು
ಗಂಗೆ ಕೊಡುವ ಹಾಲು ಕರೆ
ಗಂಡ ಮಕ್ಕಳ ಆರೈಕೆ

ಸವೆಸಿದ್ದೇ ಹಾದಿ
ಇಟ್ಟದ್ದೇ ಹೆಜ್ಜೆ
ಆಲಿಸಿದ್ದೇ ಗೆಜ್ಜೆ

ಬಸ್ವೇಸರ ಜಾತ್ರೆಯಲಿ
ಆತ ಕೊಡಿಸಿದ ಕಾಸಿನ ಸರ
ಅಮ್ಮ ಇತ್ತ ಕಾಲುಂಗುರು ಮೂಗುತಿ

ತೆಲಿಗೆ ಹಚ್ಚುವೆ ಕೈಯೆಣ್ಣೆ
ಕಾಲಿಗೆ ಮೆಟ್ಟುವೆ ಹವಾಯಿ
ಕಾಸಿನಗಲದ ಕುಂಕುಮ ಹಣೆಯಲಿ
ಅರಿಸಿನ ಪಟ್ಟೆ ಕೆನ್ನೆಯಲಿ

ಮುನಿಯನೇ ಎನ್ನ ದೈವ
ಚಂದ್ರಿ ಸೋಮರಲ್ಲೇ ಎನ್ನ ಭಾವ
ಎನ್ನ ರಕ್ಷಕ ಹುಣಿಸೇ ಬರಲು

ಎಮಗೆ ಆರ ಚಿಂತೆಯಿಲ್ಲ
ಯಾರಿಗೂ ನಮ್ಮ ಚಿಂತೆಯಿಲ್ಲ
ಹಂಗಿಲ್ಲ
ಜೀವ ಯಾತ್ರೆಗೆ ಎಣೆಯಿಲ್ಲ

ಜೀವನವಿಷ್ಟೇ!



Wednesday 15 October, 2008

ಚಿತ್ರ ೭೪


ಶ್ವೇತ:
ಇಂದೇತಕೋ ಪ್ರಕೃತಿ ಸೌಂದರ್ಯ ಸವಿಯುವ ಮನಸಾಗಿದೆ.

ಶ್ರೀನಿವಾಸ್:

ರೀಕ್ಷೆ

ಮುಗಿಯಿತೇ ವಾರ್ಷಿಕ ಪರೀಕ್ಷೆ
ಮುಂದಿನ ಎತ್ತ ಕಡೆ ಹೆಜ್ಜೆ ಇಡುಬೇಕೆಂಬ ನಿರೀಕ್ಷೆ
ಮದುವೆಯಾಗಿ ಗಂಡ ಮಕ್ಕಳ ಸಂಭಾಳಿಕೆಯೋ
ಎದುರಿಸುಬೇಕೇ ಅತ್ತೆ ನಾದಿನಿಯರ ದಬ್ಬಾಳಿಕೆಯೋ
ಕೆಲಸ ಸೇರಿ ಲೋಕದ ಸಂಭಾಳಿಕೆಯೋ
ಎದುರಿಸುವುದೇ ಸಹವರ್ತಿಗಳ ತುಂಟಾಟಿಕೆಯೋ

ಮರೆಯಾಗಿ ಹೋಯಿತೇ ಲಂಗ ದಾವಣಿ
ಎಲ್ಲಿ ಹುಡುಕಬೇಕೀಗ ಸೀರೆಯನುಡುವ ನೀರೆ
ಲೋಕದಲಿ ಎಲ್ಲ ತಲೆಕೆಳಗು - ಗಂಡಿನಂತೆ ಕಾಣುವ ಹೆಣ್ಣು
ಹೆಣ್ಣಿನಂತೆ ಕಾಣುವ ಗಂಡು

ಕರದಲಿರುವುದೇನು ಮೊಬೈಲೋ
ಕಾಫಿಯ ಲೋಟವೋ
ಪುಂಖಾನುಪುಂಖವಾಗು ಹೊರಹೊಮ್ಮುತಿಹುದು
ಸಿಗರೇಟಿನ ಹೊಗೆಯೋ

ಎಲ್ಲೆಲ್ಲೂ ಹರಡಿಹುದು
ಸಂಸಾರದಿ ಕಳಚಿದ ತರಗೆಲೆ, ಹಣ್ಣೆಲೆ
ಎನ್ನ ಜೀವನವೂ ಹೀಗೆಯಾ?
ಅಪ್ಪ ಅಮ್ಮ ಅಣ್ಣ ತಂಗಿಯರ ತೊರೆದ
ಅಬ್ಬೇಪಾರಿ ಮುದುಡುತಿಹ ಚಿಗುರೆಲೆ :(

ದಾಮೋದರ:

ತರಗೆಲೆಗಳು ನೆಲಕ್ಕುರುಳುತ್ತಲೇ ಇವೆ, ದಿನ, ವಾರ, ತಿಂಗಳು ಸರಾಗ ಪಯಣದಲ್ಲಿವೆ, ನಮಗೆ ಹೊಸ ಕನಸು,ಹೊಸ ಕ್ಷಣ, ನವ ಉಲ್ಲಾಸಗಳ ನಿರೀಕ್ಷೆಯಲ್ಲೇ ಕಾಯುತ್ತೇವೆ,ನವ ಹರುಷಕ್ಕಾಗಿ.


ಸತೀಶ್:
ಸುಖದ ಚಿಂತನೆ


ಕಳೆದು ಹೋದ ಕಾಲವನು ಹುಡುಕುವೆ ಏಕೆ
ಹಣ್ಣೆಲೆಯ ಪರಿ ಉದುರಿದ ನೆನಪುಗಳು ಬೇಕೆ

ಏರುವಾಗಿಹ ಅರ್ಭಟ ಇಳಿಯುವಲಿ ಕಾಣಲಿಲ್ಲ
ಏರಿ ಇಳಿಯುವ ಸೂತ್ರದ ನಿಷ್ಠೆಗೆ ಭಿನ್ನ ಸಲ್ಲ
ಮುಸ್ಸಂಜೆ ಪದರುಗಳು ಹಗಲ ಕೊನೆ ಉಸಿರು
ಹರಡಿದ ಅವಶೇಷಗಳ ಅಡಿಯ ಹುಲ್ಲ ಹಸಿರು.

ಕುದಿವ ಬದುಕಿನ ಕಟ್ಟಕಡೆಗಿಹುದು ಬಿಳಿಯ ಕಟ್ಟೆ
ಸಿಕ್ಕ ಕಾವಿಗೆ ಬಿರುಕು ಬಿಡುವ ಶಾಂತಿ ಮೊಟ್ಟೆ
ಸುತ್ತುವ ಆತ್ಮಗಳ ನಡುವೆ ಏಳುಬೀಳುವ ಕಲ್ಪನೆ
ನಾಳೆ ಹೋಗುವ ದೇಹದ ಸುಖದ ಚಿಂತನೆ.

Tuesday 7 October, 2008

ಚಿತ್ರ ೭೩




ತಿರುಕ ಹೇಳುತ್ತಾರೆ:

ಬೇಕಿತ್ತೇ ಈ ಐಷಾರಾಮ

ಅಮಾವಾಸ್ಯೆಯ ರಾತ್ರಿಯೋ!
ಹುಣ್ಣಿಮೆಯ ಬೆಳದಿಂಗಳೋ?
ಎಂಬ ಅನುಮಾನವೇ
ಕಣ್ಣು ಕೋರೈಸುವ ದೀಪಾಲಂಕೃತ ಮನೆಯೇ?
ಮನೆಯಲ್ಲ ಸ್ವಾಮಿ ಇದು ಅರಮನೆ
ಅರ್ಧ ಮನೆ ಅರ್ಧ ಗೋರಿ :(

ಅತ್ತ ನೋಡುವ ಬದಲು ಇತ್ತ ನೋಡಿ ಸ್ವಾಮಿ
ನನ್ನ ಕಡೆಯೊಮ್ಮೆ ನೋಡಿ
ನಮ್ಮ ಗುಡ್ಲಿನ ಕಡೆಗೊಮ್ಮೆ ಕಣ್ಣು ಹಾಯಿಸಿ
ಕಟ್ಟುಕಥೆಯ ಕೇಳುವ ಬದಲು
ಪಟ್ಟಪಾಡಿನ ವ್ಯಥೆಯ ಕಡೆಗೊಮ್ಮೆ
ಕಿವಿಗೊಡಿ

ಅರಮನೆಯ ಕಟ್ಟಲು ನಮ್ಮವರೂ ಇದ್ದರು
ಅಂದಿನಿಂದ ಇಂದಿಗೂ ನಾವು ಬಡವರು
ಒಂದು ಸಂತತಿಯ ಐಷಾರಾಮಕ್ಕೆ ಬೆವರು ತೆತ್ತರು
ಬೆವರಿನಂತೆ ಸುರಿದುದು ಅವರ ನೆತ್ತರು

ಅಣ್ಣಗಳಿರಾ, ಅಕ್ಕಗಳಿರಾ - ಏಳಿರಿ ಎದ್ದೇಳಿರಿ
ಸಾಕಿನ್ನು ನಮಗೆ ಈ ಉಪವಾಸದ ಆಚರಣೆ
ಕೋಟಿ ಜನರು ನಮ್ಮ ಕೆಲಸ ನೋಡಿ ಸಂತೋಷಿಸುವುದು ಸಾಕು
ಗೇಣು ಹೊಟ್ಟೆಗೆ ಎರಡಗುಳು ಅನ್ನವು ಬೇಕು

ಮುನಿಯ ಮಂಜಣ್ಣ
ರಾಜಪ್ಪ ಕರೀಮಣ್ಣರ
ಬೆವರು ರಕ್ತ ಮಾಂಸ ಮೂಳೆಗಳೇ
ಅಡಿಪಾಯದ ಕಲ್ಲುಗಳು
ಗೋಡೆಯ ಇಟ್ಟಿಗೆಗಳು

ನಮ್ಮ ನಿಮ್ಮ ಪಿತೃಗಳು ಬುನಾದಿಯಾದರು
ತಣ್ಣನೆಯ ಹವೆಯಲಿ ಕುಳಿತವರು
ಬೆಚ್ಚನೆ ಹಬೆಯಲಿ ಮಿಂದವರು
ಎಂದೂ ಬೆವರು ಸುರಿಸದವರು
ಸುಖದ ಸೋಪಾನದಲಿ ತೇಲಿದವರು


ನಾವೆಲ್ಲ ಒಂದೇ
ಮನುಜ ಕುಲ ಒಂದೇ
ಕನ್ನಡಮ್ಮನ ಮಕ್ಕಳೆಲ್ಲ ಒಂದೇ
ಎಮ್ಮೆಲ್ಲರದೊಂದೇ ನೆಲವೆಂಬುದ ಮರೆತವರು

ಎಮ್ಮ ಭಿಕ್ಷೆಯಲಿಯೂ
ಆರನೆಯ ಒಂದು ಭಾಗ ರಾಜಧನವ ಕಸಿದುಕೊಂಡವರು
ರಾಜ ಮಹಾರಾಜರಿವರು - ರಾಜ್ಯವಾಳಿದವರು
ಮುಗ್ಧ ಜನಗಳ ಅಳಿಸಿದವರು
ತಮ್ಮ ಪುಂಡಾಟಗಳ ಮೆರೆಸಿ
ಬಡವರ ಹೆಜ್ಜೆ ಗುರುತುಗಳ ಅಳಿಸಿದವರು

ಅಂದು ಶೋಷಿಸಿದವರವರು
ಇಂದು ಶೋಷಿಸುತಿರುವವರಿವರು
ಎಂದಿಗೆ ನಮ್ಮ ಪೋಷಿಪರು

ಈ ವ್ಯರ್ಥ ಆಚರಣೆ ನಮಗೆ ಬೇಕಿತ್ತೇ?



ಸತೀಶ್ ಕವನ ಹೀಗಿದೆ:

ವಿಸ್ಮಯದ ಬೆಳಕು

ನಾಡು ಬೆಳಗಿತು ತೋಪು ಹಾರಿತು
ಎಲ್ಲೆಡೆ ವಿಜಯದ ಸಂಭ್ರಮವು
ಡಿಂಡಿಮ ನುಡಿಯಿತು ಗುಂಡಿಗೆ ಬಡಿಯಿತು
ಬೆಳಕಿನೆಲೆ ನೋಟದ ವಿಸ್ಮಯವು.

ವಿಶ್ವವು ನಮ್ಮೆಡೆ ನೋಡುವುದಣ್ಣ
ಇತಿಹಾಸದುದ್ದಕು ಅಲಂಕಾರ
ದಸರೆ ಬೆಳಕಲಿ ಮುಗಿಲಿಗು ಬಣ್ಣ
ರಾಕ್ಷಸ ಗುಣಗಳ ಸಂಹಾರ.

ಸೂರಿರುವ ನಾವು ಬೇರಿನೆಡೆ ನೋವು
ಗುರಿಯತ್ತ ನೋಟ ನಿರ್ಲಕ್ಷ್ಯ ತಾರದಿರಲಿ
ಓಡುತಲೆ ನಾವು ಬೆಳಕಿನಡಿಯ ತಮವು
ನುಡಿ ಹಳೆಯದನು ಮರೆಸದಿರಲಿ.

ಅರಿಯುವ ಪರಿ ಹಳೆಯದನು ಹಳಿಯದಿರಲಿ
ಇಂದಿನ ಸರಿ ನಿನ್ನೆ ನಾಳೆಗಳ ತೂಗುತಿರಲಿ.

Wednesday 1 October, 2008

ಚಿತ್ರ ೭೨


ಚಿತ್ರ ೭೨ ಕ್ಕೆ ತವಿಶ್ರೀ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -

ಪಾಡು

ನಾನೊಬ್ಬ ಅಲೆಮಾರಿ
ಬಂದಿಹೆನು ಅನ್ನವರಸಿ ಆ ಊರಿನಿಂದ
ಅನ್ನ ಸಿಗದ ಊರಿನಿಂದ
ಈ ಊರಿಗೆ
ಅನ್ನ ನೆಲೆ ಪುಕ್ಕಟೆಯಾಗಿ ನೀ
ಡುವ ಊರಿಗೆ

ಕಾಲೇಜು ಮೆಟ್ಟಿಲ ಹತ್ತಿದವಗೆ
ಕೂಲಿ ಮಾಡಲು ಇಷ್ಟವಿಲ್ಲ - ತರವೂ ಅಲ್ಲ
ಗಡ್ಡ ಬೋಳಿಸಲು,
ಬಟ್ಟೆಗಂಟಿದ ಕೊಳಕ ತೆಗೆಯಲು
ಚಂದ ಕಾಣಲು ಹಣವಿಲ್ಲ
ಜೇಬು ಬರಿದೇ ಬರಿದು :(


ಬಿಟ್ಟ ಗಡ್ಡ - ಕಟ್ಟಿದ್ದ ಮುಂಡಾಸ ನೋಡಿ
ಹುಚ್ಚನೆಂದರು
ಕಡಿದರೆ ನಾಲ್ಕು ಮಂದಿಗೆ ಅನ್ನವಾಗುವನೆಂದರು
ಯಾವುದೋ ಪತ್ರಿಕೆಯಲಿ ಕಂಡ
ಉಗ್ರಗಾಮಿಯ ನೆನೆದು
ಉಗ್ರಗಾಮಿಯೆಂಬ ಪಟ್ಟಕಟ್ಟಿದರು
ತಮ್ಮ ಮನೆಯ ಅಂಗಳವ
ಪರಿವೀಕ್ಷಿಸುತಿಹನೆಂದು -
ಪೊಲೀಸರಿಗೆ ದೂರಿತ್ತಿಹರು
ಹೊಡೆದರು - ಬಡಿದರು
ಸಾಯುವಂತೆ ಮಾಡಿದರು
ಅಕ್ಕನ ಮಕ್ಕಳಂತೆ ಕಾಣುವ
ಮುದ್ದು ಮಕ್ಕಳ ಮುಟ್ಟಗೊಡದಾದರು
ಇವರಿಗೆ ಎದುರಾಡಲು,
ಸತ್ಯವ ಮುಂದಿಡಲು
ನಾ ಅಶಕ್ತ

ನನ್ನಪಾಡು ಪಡುತ್ತಿರುವ
ತದೇಕಚಿತ್ತದಿ
ನಾಯಿಯ ವೀಕ್ಷಿಸುತಿಹೆ
ನಾಯಿಗೆ ನನ್ನ ಪಾಡೇ!
ನನಗೆ ನಾಯಿ ಪಾಡೇ?


ಸತೀಶ್ ಅವರ ಕವನ -

ಏನ್ ಹೇಳೋಣ ಹೇಳಿ?

ಮೈಮೇಲಿನ ಅಂಗಿ ಕಟ್ಟಿದೆ ಹರಳು
ಸಾಲದ್ದಕ್ಕೆ ತಲೆ ಏರಿ ನಿಂತ ಬಟ್ಟೆಗಳು
ಬೇರೆ ಕಡೆ ಹೋಗುವ ಪ್ರಚೋದನೆ
ತರುವ ಆಲೋಚನೆಯನ್ನು ಕುರಿತು
ಏನ್ ಹೇಳೋಣ ಹೇಳಿ?

ದೂರ ನಿಂತ ಮಗನ ಓದು ನಾಳೆ
ಬರುವ ಮಗಳಾ ಮದುವೆ ಇನ್ಯಾರೋ
ಎಲ್ಲೋ ಹುಡುಕೀ ಬಿದ್ದು ಎಂದವರೆಂದೋ
ದಿನದ ಬದುಕಿಗೆ ನೊಂದವರ ಕುರಿತು
ಏನ್ ಹೇಳೋಣ ಹೇಳಿ?

ಅರ್ಥವ್ಯವಸ್ಥೆ ಹಗಲೇ ಕಂಗಾಲಾಯ್ತು
ದಿಕ್ಕೆಟ್ಟ ಸಂಜೆ ಬಾಡಿ ಹಾಳಾಯ್ತು
ಹಾಕಿದ ಹಣವೂ ಸೋರಿ ಹೋಗುತಿದೆ
ನಾಳೆಯ ನೆಮ್ಮದಿ ಇಲ್ಲದವರ ಕುರಿತು
ಏನ್ ಹೇಳೋಣ ಹೇಳಿ?

ಮುಚ್ಚಿದ ಬಾಗಿಲು ತೆರೆಯದ ಅಂಗಡಿ
ಮನೆ ಮನಗಳಲಿ ಮಸುಕಾದ ಕನ್ನಡಿ
ಕೈ ಕಟ್ಟಿ ನಿಂತರೂ ಕರೆಯದ ಜನರ
ಬರಿ ಬೀದಿಯಲ್ಲಿ ಹಾರುವ ಧೂಳನು ಕುರಿತು
ಏನ್ ಹೇಳೋಣ ಹೇಳಿ?

ಎಲ್ಲಾ ಇಂದು ತಿನ್ನುವ ಕೂಳಿನ ಕರ್ಮ
ಬರಿ ಉರಿಬಿಸಿಲಿನಲಿ ನಲುಗಿದೆ ಚರ್ಮ
ವಠಾರದಿ ಠಿಕಾಣಿ ಹೂಡಿ ಮೆರೆದೂ
ಮೌನದಿ ನೋಟವ ಹರಿಸುವವರ ಕುರಿತು
ಏನ್ ಹೇಳೋಣ ಹೇಳಿ?