Monday, 24 September 2007

ಚಿತ್ರ - ೨೦


ಸತೀಶ ಅವರು 'ನೆರಳಿಗೊಂದು ನೆಲೆ' ಯಲ್ಲಿ ಬರೆದದ್ದು ಹೀಗೆ...

ಜನರೆಲ್ಲ ನಗರಗಳಲ್ಲೇ ತುಂಬಿಹರೇ ಹೊರತು
ಸ್ವಚ್ಛಂದ ಗಾಳಿಯಾಡುವಲ್ಲಲ್ಲ
ಈಗಾಗಲೇ ಕುಳಿತ ಆಸನಗಳ ಆಸೆಯೇ ಹೊರತು
ಖಾಲಿ ಬಿದ್ದ ಆಸನಗಳ ಮೇಲಲ್ಲ.

ಪ್ರತಿ ಆಸನಕೂ ಪಕ್ಕದಲಿ ನೆರಳನೊಡ್ಡಿದರೂ
ಬಿಸಿಲಲಿ ಬೇಯುವ ಬಯಕೆ
ಎಂದೂ ಕೆಸರಾಗದ ಇಟ್ಟಿಗೆ ಹಾಸಿದರೂ
ಹಿಂಗದ ದಾಹ ನೆಲಕೆ.

ಕೆಸರೂ-ಮಣ್ಣೂ ನಿಧಾನವಾಗಿ ನೆಲವ ಕ್ರಮಿಸಿ
ಜೊತೆಗೆ ಅದೆಲ್ಲೆಲ್ಲಿಂದಲೋ ಎಲೆಗಳು ಹಾರಿ
ಬಾಗಿದ ರೆಂಬೆಕೊಂಬೆಗಳು ಒಂದನ್ನೊಂದು ರಮಿಸಿ
ಹಸಿರಾಗಿರುವ ಎಲೆಗಳ ತುದಿಯಿಂದ ನೀರು ಜಾರಿ.

ನೆರಳಿದೆ ಆಸನವಿದೆ ಕೆಸರಿರದ ಜಾಗವಿದೆಯೆಂದರೂ
ಕೂತು ಸ್ವಚ್ಛಂದವನು ಆಸ್ವಾದಿಸುವ ಮನವಿಲ್ಲ
ನೆರಳ ಸೂಸುವ ನೆಪದಲ್ಲಿ ಕೊಂಬೆಗಳು ಬಳುಕಿವೆಯಾದರೂ
ನೆರಳಿಗೊಂದು ನೆಲೆ ತೋರಿಸೋ ಬಿಸಿಲಿಲ್ಲ.



Monday, 17 September 2007

ಚಿತ್ರ - ೧೯




ಸತೀಶ ತಮ್ಮ "ಎಲ್ಲೋ ಹುಟ್ಟಿದ್ ಮರಾ ಯಾರೋ ಕೊಡೋ ರೂಪಾ
ದಲ್ಲಿ
" ಹೇಳಿದ್ದು


ಸುತ್ಗೇ ಚಾಣಾ ಹಿಡ್ಕೊಂಡು ಕುಕ್ಕರಗಾಲಲ್ ಕುತ್ಗೊಂಡು
ಭೀಷ್ಮನ್ನ್ ಹುಬ್ಬಿನ್ ಒಳಗಿನ್ ದೃಷ್ಟೀಲ್ ನೋಡಿದ್ದನ್ನೇ ನೋಡ್ಕೊಂಡು
ಎಲ್ಲೋ ಹುಟ್ಟಿದ ಮರಕ್ ನೀನೂ ಏನೋ ರೂಪಾ ಕೊಡ್ತೀಯಾ
ರಚ್ಚೇ ಹಿಡಿದಾ ಮಕ್ಕಳ ಹಾಗೆ ಚಕ್ಕಳೆಯನ್ನು ಹರಡ್ತೀಯಾ.

ಕಲ್ಲಲ್ಲ್ ಕೆತ್ತೋದ್ ಕಷ್ಟಾ ಅಂತ ಮರವನ್ನ್ ಜನ ಹಿಡ್ಕೊಂಡ್ರು
ಬಂದಿದ್ದ್ ಬುದ್ದೀ ನೋಡಿದ್ದ್ ವಿಷ್ಯಾ ಅಂತಾ ಕಾಯ್ಕಾ ಕಂಡ್ಕೊಂಡ್ರು
ಕೆತ್ತೋರೆಲ್ಲ ಬಡಗೀ ಅಲ್ಲ ಬಿಟ್ಟೋರೆಲ್ಲ ಹೊರಡೋದಿಲ್ಲ
ಏನೋ ರೀತೀ ಯಾವ್ದೋ ನೀತಿ ಬಗ್ಸಿದ ಗೋಣಿಗೆ ತಿಳಿಯೋದಿಲ್ಲ.

ಯಾವ್ದೋ ಜಾತಿ ಏನೋ ಮರ ಸುತ್ಗೇ ಉಳಿ ಒಂದೇ ಪರ
ನೋಡೋರ್ ನೋಟಾ ವಕ್ರಾ ಇದ್ರೂ ನಿನ್ನಯ ಗೆರೆ ಒಂದೇ ಥರ
ಏಟಿನ್ ಮೇಲೇ ಏಟದು ಬಿದ್ದು ಸಣ್ಣಗೆ ತಾನು ಧೂಳದು ಎದ್ದು
ಗಟ್ಟೀ ಇರೋವ್ ಸುಮ್ನಿರೋವಾಗ ಹಾರೋವೆಲ್ಲ ಮಾಡ್ತಾವ್ ಸದ್ದು.

ಕೆಲಸಕೆ ನೇರಾ ಬೇಕೋ ಅನ್ನೋ ನಿನ್ನಾ ಸೀಸದ ಕಡ್ಡೀ ಆಧಾರ
ಪದೇ ಪದೇ ನೋವನು ತಿಂದು ನೇರದೆ ಹುಟ್ಟುತ್ತಲ್ಲಾ ಆಕಾರ.