Monday, 9 June 2008

ಚಿತ್ರ ೫೭



ಚಿತ್ರ ೫೭ ಕ್ಕೆ ಟೀನಾ, ತವಿಶ್ರೀ ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಟೀನಾ ಅವರ ಕವನ -
ಬೆಳಕು ಮುಗಿವ ಮುನ್ನ
.

ಇಲ್ಲಿ ನಾನು ಪುಸ್ತಕ ದೀಪ
ಜತೆಯಾಗಿ
ಕತ್ತಲೆಯ ಅನುಭೂತಿ
ಇನ್ನೇನು ಮುಗಿದೇಹೋಯಿತು ಎಣ್ಣೆ
ಅಕ್ಷರ ನುಂಗುವ
ಕಣ್ಣ ನೋಟ
ಕಾಣದ್ದ ಕಂಡುಕೊಂಡೇನೆ ನಾನು
ಎಂದಾದರು?
ಮುಗಿದು ಹೋಗಬಹುದು
ಪುಟ್ಟ ಹುಳಗಳ ಭರಾಟೆ
ಅಮ್ಮ ಎದ್ದು
ನಿದ್ದೆಯಲೆ ಮುದ್ದಾಗಿ
'ಎಣ್ಣೆ ತುಂಬಿಸಲೆ ಮಗು?
ಮಂದವಾಗಿದೆ ಬೆಳಕು
ಕಣ್ಣಿಗೆ ಪೆಟ್ಟು
ಕಾಫಿ ಬೇಕೆ?'
ಅಂದಂತೆ
ಅನ್ನಿಸಿ
ನಾನು ನೋಡುವೆ
ಬೆನ್ನಹುರಿಯಲ್ಲೇಳುವ
ನೋವ ಅದುಮಿ
ಆಕಳಿಸಿ
ಇದೆಲ್ಲವ ಒಳಗಿಳಿಸಬೇಕು
ಜೋಪಾನವಾಗಿ
ದೀಪದಲಿ
ಬೆಳಕು ಮುಗಿವ ಮುನ್ನ.


ತವಿಶ್ರೀ ಅವರ ಕವನ -

ಚಂಗನೆ ನೆಗೆಯುವ
ಮೃಗ, ಮನೆ ಮನಗಳ ಹಿಗ್ಗಿಸುವ
ಕಸ್ತೂರಿ
ಎನಗೆ ತಿಳಿದಿಹುದಿದೊಂದರದೇ ಅಕ್ಕರಗಳು
ಕನ್ನಡ ಎಂಬ ಕಸ್ತೂರಿ ಆಕರಗಳು
ಕಣ್ಮುಚ್ಚಿಯೂ ಓದಬಲ್ಲೆ
ಆ ಪದಗಳ
ಮುದ್ರಿಸಿರದ - ಮನಗಳು ಮೂಡಿಸುವ
ಆ ಮಾತುಗಳ

ಆದರೇನು!
ಪರೀಕ್ಷೆಯ ಎದುರಿಸಲು
ಅಮ್ಮನ ಕೆಂಗಣ್ಣ ತಂಪಾಗಿಸಲು
ಹಿಡಿಯಲೇಬೇಕು ಹೊತ್ತಿಗೆಯ
ನೆಡಲೇಬೇಕು ದೃಷ್ಟಿಯ
ಅಕ್ಷರಗಳ ಮೇಲೆ
ಓಡಿಸಲೇಬೇಕು ಪುಟಗಳ
ನನಗೇ ಮೋಸಿಸುವೆಯಾ
ಬೆಳಕೆಂಬ ರವಿಯ ಬಂಟ

ಹಿಗ್ಗಬೇಡ!
ನೀ ನೇಸರನ ಬಂಟನೆಂದು
ತಿಳಿಯದೇ ನಿನ ಶಕ್ತಿಯ
ನಾ ತಿಳಿಯನೇ ನಿನ್ನ

ಎತ್ತಲೋ ನೋಡುತಿಹ
ಎನಗೆ ಒಂದಗುಳು
ಬೆಳಕ ನೀಡದವ
ನೀ ನಿಷ್ಕರುಣಿ
ಕತ್ತಲಿಗ್ಯಾಕೆ ಬೇಕಿಹುದು
ನಿರುಪಯೋಗಿ ನಿನ್ನ ಕರುಣೆ

ತಿಳಿಯದೇ ನಾನೆಲ್ಲಿ
ನೋಡುತಿಹೆ
ಸಹಾಯಿಸಬಾರದೇ
ಎನ ಕಂಗಳಿಗೆ ದೃಷ್ಟಿಯ ನೀಡಲು
ಎತ್ತಲೋ ನೋಡುವ ನಿನಗಿರಲಿ
ಎನ ಬಹಿಷ್ಕಾರ
ಇಗೋ ಮುಚ್ಚುವೆ ಪುಸ್ತಕವ
ಹೊದೆಯುವೆ ಚಾದರವ
ಕಾಣುವೆ ಹಗಲು ಕಾಣದ ಕನಸ :P

ಸತೀಶ್ ಅವರ ಕವನ -
ಬೆಳಕಿನ ನಂಟು ಕತ್ತಲ ಗಂಟು.

ಅಂದು ಬ್ರಾಹ್ಮೀ ಮಹೂರ್ತದೆ ಎದ್ದು
ಆಗಾಗ್ಗೆ ಅಲ್ಲಲ್ಲಿ ತೂಕಡಿಸಿ ಬಿದ್ದು
ಹೊತ್ತಿಗೆಯ ಭಾರವನು ತಾ ಹೊತ್ತು
ಓದಿದ್ದೆಲ್ಲವು ತಲೆಗೆ ಹತ್ತದೆ ಬೇಸತ್ತು.

ಬುದ್ದಿವಂತರೊಳಗೆ ದಡ್ಡ ತಾನಾಗಿ
ದಡ್ಡರೊಳಗೆ ತನ್ನ ದಡ್ಡತನವ ನೀಗಿ
ಏನೋ ಹೇಳಿ ಇನ್ನೇನನ್ನೋ ಮಾಡಿ
ಪುಸ್ತಕದ ಬದನೆಕಾಯಿ ಪಲ್ಯದಿ ಬಾಡಿ.

ಓದಿ ಕಡಿದು ಕಟ್ಟಿ ಹಾಕಿದ ಸಮಯವೇ
ಇತಿಹಾಸ ಮರುಕಳಿಸುತಲೇ ಇಲ್ಲವೇ
ಮೈ ಮುರಿದು ಕೆಲಸ ಮಾಡುವ ಬದಲು
ಪುಸ್ತಕದ ನೆಪ ಹಾಸಿಗೆಯ ಸಂಗ ಹಗಲು.

ಈ ಹೊತ್ತಿಗೆಯ ಪದರಗಳು ಮೇಲೆ ಕೆಳಗೆ
ಬೆಳಕು ಕಾಣುವುದು ಒಂದೊಂದೇ ಪುಟಗಳಿಗೆ
ಒಂದು ಪುಟ ಬೆಳಕಿಗಾದಂತೆ ನಂಟು
ಉಳಿದವಕ್ಕಂತೂ ಸದಾ ಕತ್ತಲ ಗಂಟು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಜ್ಞಾನದ ಸುಳಿವು.

ಕತ್ತಲೆಯ ನಮ್ಮ ಬದುಕನ್ನು
ಜ್ಞಾನ ತಿರೆಗೊಯ್ಯವ
ಅದೋ ಅಲ್ಲಿ ಹೊನಲು ಚೆಲ್ಲಿದೆ
ಇದೋ ಇಲ್ಲಿ ಹೊತ್ತಿಗೆ ಸಾರದೊಂದಿಗೆ

ಬಾಳು ಅಜ್ಞಾನದ ಸೆಳವು
ಬಿಡಿಸಿಕೊಳ್ಳಲು ಬೇಕು ಜ್ಞಾನದ
ಸುಳಿವು, ಅನುಭವಗಳ ತೆವಳು
ಎದೆಗುಂದದೆ ಹುಡುಕುವ ಗೀಳು

ಹುಡುಕೋಣ ಜ್ಞಾನವನ್ನು
ಅನುಭಗಳನು ಅಡಗಿಸಿಕೊಂಡು
ಹೊತ್ತಿಗೆಯಲ್ಲೂ ಭಿತ್ತಿಗಳಲ್ಲೂ
ಬಿತ್ತಿ ಬೆಳೆಸೋಣ ಜ್ಞಾನ ಬುದ್ಧಿಯನ್ನು

ಬೆಳಕಿನ ಬಲದಿಂದ ಕತ್ತಲೆಯ ಕೇಡು
ಜ್ಞಾನದ ಬಲದಿಂದ ಅಜ್ಞಾನದ ಕೇಡು
ಮೌನದ ಬಲದಿಂದ ಜಂಜಾಟದ ಕೇಡು
ಪ್ರೀತಿಯ ಬಲದಿಂದ ದ್ವೇಷದ ಕೇಡು

** ಕುಕೂಊ...

Monday, 2 June 2008

ಚಿತ್ರ ೫೬




ಚಿತ್ರ ೫೬ ಕ್ಕೆ ಕುಮಾರ ಸ್ವಾಮಿ ಕಡಾಕೊಳ್ಳ, ತವಿಶ್ರೀ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಹಸುಳೆ

ಹಾಲುಗಲ್ಲದ ಹಸುಳೆ
ತೂಗಾಡುವ ತಲೆಯೆ
ತೊದಲಾಡುವ ನುಡಿಯೆ
ಹಾಲು ಮೆತ್ತಿದ ತುಟಿಗಳೇ
ತೊಡಕಾಗುವ ಹೆಜ್ಜೆಗಳೇ
ಕಾಂತಿಯುಕ್ಕುವ ಕಂಗಳೇ
ಕಿಲಕಿಲ ಮಂಜುಳ ನಗುವೆ
ಕೆದರಿದ ನಯ ಕೂದಲೇ
ಕರಿ ಕಾಡಿಗೆ ಸಿಂಚಿತೆ
ಕಿವಿಯ ಓಲೆಯ ಭೂಷಿತೆ
ಸುಕೋಮಲ ಸ್ಪರ್ಷವೆ
ನೆಲದ ಮೇಲೆ ತೆವಳುವೆ
ಬಿಸಿಲ ಕುದುರೆ ಏರುವೆ
ಹಸಿವನು ಕಣ್ಣೀರಲೇ ತೋರುವೆ
ಕೋಪಕೆ ನಿನಗಾರು ಸರಿಯೇ
ಸಿಕ್ಕಿದ್ದೆಲ್ಲ ನಿನ್ನ ಆಯುಧವೆ
ಚಂದ್ರನನೇ ಬೇಕೆನ್ನುವೆ
ಬೆಂಕಿಯಲ್ಲಿಯು ನುಗ್ಗುವೆ
ಹುಲಿಯ ಬೆನ್ನನ್ನಾದರು ಏರುವೆ
ಅಂಜಿಕೆ ನಿನಗೆಲ್ಲಿದೆ?
ಅಮ್ಮನನು ಬಿಡದಪ್ಪುವೆ
ಅವಳೇ ಬೇಕು ಸಧಾ ನಿನಗೆ
ಎಲ್ಲರಲು ಪ್ರೀತಿಯುಕ್ಕಿಸುವೆ
ನಿನಗೆ ಆದೇವನು ಸಮವೆ?

** ಕುಕೂಊs....
ಪುಣೆ


ತವಿಶ್ರೀ ಅವರ ಕವನ -
ಮಗುವಿನ ಕೋರಿಕೆ

ಕೈನಲಿರುವುದು ಏನದು
ಆಟದ ಸಾಮಾನಿನಂತೆ ತೋರುವುದು
ನನ್ನ ಕೈಗೆ ಕೊಡೋ
ಕೊಡದಿರೆ ಅಮ್ಮನ ಕರೆವೆ

ನೀ ಚಿತ್ರ ತೆಗೆಯುವೆಯಾ
ಅಮ್ಮ ಮೊಗವ ತೊಳೆವರೆಗೆ ಕಾಯುವೆಯಾ
ಮೊಗದಲಿ ಲೇಪಿಸಿಲ್ಲ ಪವುಡರು
ಬದಲಿಸಿಲ್ಲ ಬೆಳಗಿನ ದಿರಿಸು
ಸ್ವಲ್ಪ ಕಾಲ ತಡೆಯುವೆಯಾ?

ಮೊಂಡಂತೆ ನನ್ನ ಮೂಗು
ಬೊಚ್ಚಂತೆ ನನ್ನ ಬಾಯಿ
ಕೆದರಿದೆಯಂತೆ ತಲೆಗೂದಲು
ಪಿಸಿರು ಕಾಣುವುದಂತೆ ಕಣ್ಣಲಿ
ಇವಾವುದೂ ಬಾರದ ಚಿತ್ರ ತೆಗೆಯುವೆಯಾ?

ಅವರಿವರ ಮಾತಿಗೆ ನೀ ಹೆದರಬೇಡ
ಎನ್ನ ಚಿತ್ರ ತೆಗೆಯಲು ದೃಷ್ಟಿಯಾಗದು
ತಗುಲದಂತೆ ಹಚ್ಚಿದೆಯಲ್ಲ ಬೊಟ್ಟು
ನೋಡುವೆಯಾ!
ಒಮ್ಮೆ ಆ ಡಬ್ಬ ನನ್ನ ಕೈಗೆ ಕೊಟ್ಟು

ಸುಂದರ ಚಿತ್ರ ನೀ ತೆಗೆದುಕೊಡಲು
ರೂಪದರ್ಶಿ ನಾನಾಗಬಲ್ಲೆ
ಒಂದೆಳೆ ಸರವ ನೂರೆಳೆ ಮಾಡಬಲ್ಲೆ
ಅದರಲಿ ನಿನಗೂ ಪಾಲು ಕೊಡಬಲ್ಲೆ
ತೆಗೆಯುವೆಯಾ ಸುಂದರ ಚಿತ್ರ ಒಂದನು?


ಸತೀಶ್ ಅವರ ಕವನ -
ನಮ್ಮ ಮನೆಯ ಪುಟ್ಟ ಪಾಪ

ಎನೇನೋ ಬೊಟ್ಟುಗಳನ್ನು ತಿದ್ದಿ ತೀಡಿದ ಅಮ್ಮ
ಮುದ್ದಿಸಿ ಮಲಗದಿರೆ ಹೆದರಿಸಿ ಬರುವನೆಂದು ಗುಮ್ಮ
ಸಂಪ್ರದಾಯವೆಂದು ದೊಡ್ಡ ರೂಪವೊಂದನು ಕೊಟ್ಟು
ಆಸೆ ಮೋಡಗಳ ಕುರುಳನು ಹಾಗೇ ಹಾರಲು ಬಿಟ್ಟು.

ಮಲಗಿದಲ್ಲೇ ಹಣೆ ನೇವರಿಸಿ ದಿವ್ಯ ದಿರಿಸು ತೊಟ್ಟ ತಂದೆ
ಹುಟ್ಟುವ ಸೂರ್ಯನ ಜೊತೆ ಆರಂಭವಾಗುವ ದಂದೆ
ವಾರಕ್ಕೆರಡೇ ದಿನ ಮುಖ ನೋಡುವುದಕ್ಕೆ ಸಿಕ್ಕು
ರಾತ್ರಿ ಉಂಡು ಮಲಗಿದ ನಂತರ ನೋಡಿ ನಕ್ಕು.

ಕುಟುಂಬ ಯೋಜನೆಯ ಫಲವೋ ಜಾಗತಿಕರಣದ ಒಲವೋ
ನಮ್ಮ ಚಿಕ್ಕ ಕುಟುಂಬಗಳ ಬೆರಳೆಣಿಕೆಯ ಜನರ ಬಲವೋ
ತಮ್ಮನಿದ್ದರೆ ತಂಗಿಯಿಲ್ಲ, ತಂಗಿಯಿರೆ ಅಕ್ಕನಿಲ್ಲದ ಬಳಗ
ಅತ್ತು ಕರೆಯುವುದಿರಲಿ ಕಿತ್ತು ಖುಷಿ ಪಡಲೂ ಬಾರದ ವಾಲಗ.

ದಿವ್ಯತೆ ಇರಲಿ ಇಲ್ಲದಿರಲೀ ದೂರದೃಷ್ಟಿ ಇರಲೇ ಬೇಕಾದ ಕಾಲ
ಸುತ್ತಲೂ ಸ್ಪರ್ಧೆಯನು ಮೈಗೂಡಿಸಿಕೊಂಡಿರುವ ನೆಲ-ಜಲ.