Thursday, 12 March 2009

ಚಿತ್ರ ೯೫



ತವಿಶ್ರೀ:

ನನ್ನಳಲು


ಜಗವು ಮದವೇರಿದ ಬಿಸಿಯಾರುವಿಕೆಯ ಆಲಯ
ಮನದಲಿ ಭುಗಿಲೇಳುವಿಕೆಯ ಸಮಯ
ತಂಬೆಳಕಿನಲಿ ತಂಪೆರೆಯುತಿಹ ತಂಗಾಳಿ
ಮನ ಸೋತುಹೋಗುತಿದೆ ನಿಸರ್ಗದ ಬಳಿ

ದಿಗಂತವ ಸೇರುತಿಹುದು ಕಲ್ಪವೃಕ್ಷದ ಬೀಡು
ಕಾಣ ಹೊರಟಿಹೆ ಕಾಣದ ಕಾಡು
ಕಾಯಕದಿ ಪಡೆದದ್ದೇ ಬೆನ್ನ ಹಿಂದೆ
ಕರ್ಮಫಲ ಅರುಹಬೇಕಿದೆ ಸರ್ವಶಕ್ತನ ಮುಂದೆ

ಬಳಿ ಸಾಗಲು ದಾಟಿಯೇನೇ ಆಳದ ನದಿಪಾತ್ರ
ಆಸರೆಯೊಂದೇ ಅಂಬಿಗ ಆತನ ದೋಣಿ
ನಂಬದಿರಲಾದೀತೇ ಆತನ ದೋಣಿ
ನಂಬದಿರೆ ಬಾಳಿಲ್ಲ ನಂಬಿದುದೇ ಬದುಕೆಲ್ಲ

ಆಳದ ನದಿಯ ದಾಟಿಸಲು ನಂಬಿಹೆನು
ಅಂಬಿಗನ ಉದ್ದನೆಯ ಊರುಗೋಲು
ಜಗವ ಪಾರಿಸಲು ಬಿಡದೆ ಉಸುರುತಿಹೆ
ಶ್ರೀಹರಿಯ ಬಳಿ ನನ್ನಳಲು

Wednesday, 4 March 2009

ಚಿತ್ರ ೯೪



ತವಿಶ್ರೀ:

ಬೇಡಕ್ಕಾ ಬೇಡ


ಅಕ್ಕ

ಬಾರೋ ತಮ್ಮ ಏರಿ ಏರಿ ಹೋಗುವಾ
ಏರಿ ಇಳಿದು ನೀರ ಕಡೆಗೆ ಸಾಗುವಾ
ನೀರಲಿಳಿದು ದೋಣಿಗಿಳಿದು
ತೇಲಿ ತೇಲಿ ಹೋಗುವಾ

ಮನೆಯಲಾರಿಗೂ ಹೇಳಬೇಡ
ನೀರಗಿಳಿದು ಮುತ್ತು ತರುವ ಬಾರ
ಕಾಣದೂರಿಗೆ ಹೋಗಿ ಬರುವ
ಕ್ಷಣ ಕಾಲ ಜಗವ ಮರೆವ ಬಾರ

ತಮ್ಮ

ಬೇಡಾಕ್ಕ ಬೇಡ
ಯಾರಿಗೂ ಹೇಳದೇ ಹೋಗುವುದು ಬೇಡ
ನೀರಿಗಿಳಿಯುವುದು ಬೇಡ
ಜಗವ ಮರೆಯುವುದು ಬೇಡ

ನಾ ಅಮ್ಮನ ಬಿಡುಲಾರೆ
ಅಪ್ಪನ ಬಿರುಗಣ್ಣಿಗೆ ತುತ್ತಾಗಲಾರೆ
ನಿನ್ನನೂ ನಾ ಬಿಡಲಾರೆ
ಇಬ್ಬರೂ ಹೋಗುವುದು ಬೇಡ

ಅಕ್ಕ

ಬೆಳೆಯೋ ಕಂದಾ!
ಎತ್ತರಕೆ ಬೆಳೆ
ಆಲದ ಮರದಂತೆ ಬೆಳೆ
ಜಗವ ನೋಡು
ಅತ್ತಿತ್ತ ಓಡು
ಅದೋ ಕರೆಯುತ್ತಿದೆ ಕಾಡು
ಒಮ್ಮೆಯಾದರೂ ಅಲ್ಲಿ ಬಿಡೋಣ ಬೀಡು
ಅವುಚಿದ ಮೈ ಕೈ ಝಾಡಿಸು
ಹೆದರಿಕೆಯ ಹೋಗಲಾಡಿಸು
ಅಪ್ಪನಂತೆ ನೀ ಎತ್ತರಕೆ ಬೆಳೆ

ತಮ್ಮ

ಯಾಕೋ ಹೆದರಿಕೆಯಾಗುತಿದೆ
ನಿನ್ನ ಮೇಲಿನ ನಂಬಿಕೆ ಮಾಯವಾಗುತ್ತಿದೆ
ಸಂಜೆಯೂಟವ ಕೊಡುವವರಾರೆ
ಪುಸ್ತಕ ಬಳಪ ಕೊಡಿಸುವವರಾರೆ
ಪಾಠವ ಹೇಳಿಕೊಡುವವರಾರೆ
ನಿದ್ರೆ ಬರಲು ಹೊದಿಸುವವರಾರೆ
ಬೇಡಕ್ಕಾ ಬೇಡ
ನೀನೂ ಹೋಗಬೇಡ
ನನ್ನ ಜೊತೆ ಎಂದಿಗೂ ನೀನಿರು
ನಾವೆಲ್ಲಿಗೂ ಹೋಗುವುದು ಬೇಡ


ಸುನಾಥ:
ವಿಶ್ವಾಸ ತುಂಬಿದ, ನಗುಮುಖದ ಪುಟ್ಟ ಪಯಣಿಗನೆ,
ನಿನ್ನ ದೀರ್ಘಪ್ರಯಾಣಕ್ಕೆ ಶುಭಾಶಯಗಳು.