Wednesday, 22 April 2009

ಚಿತ್ರ ೧೦೧



ಚಿತ್ರಕವನದ ನೂರರ ಗಡಿಯನ್ನ ದಾಟುತ್ತ ನಮ್ಮೊಂದಿಗಿರುವ ಎಲ್ಲ ಸಾಹಿತ್ಯಾಸಕ್ತರಿಗೂ ಅನಂತ ವಂದನೆಗಳು. "ಚಿತ್ರಕವನ" ಹೆಸರು ಸೂಚಿಸುವಂತೆ ಕೇವಲ ಕವನ ಪ್ರಕಾರಕ್ಕೆ ಸೀಮಿತವಾಗಿರದೆ, "ಚಿತ್ರ" ನಿಮ್ಮಲ್ಲಿ ಮೂಡಿಸುವ ಭಾವನೆಗಳ ಬರಹ ಕೂಡ ಆಗಿರಬಹುದು. ಇಲ್ಲಿಯವರೆಗೆ ಹೆಚ್ಚಿನ ಆಸಕ್ತರು ಕವನ ಪ್ರಕಾರವನ್ನೆ ಬರೆದಿದ್ದಾರೆ ಮುಂದೆ ವಿಭಿನ್ನ ಪ್ರತಿಕ್ರಿಯೆಗಳು ಮೂಡಿಬರಲಿ ನಿಮ್ಮಿಂದ ಎಂದು ಆಶಿಸುತ್ತ.

ವಂದನೆಗಳು
ಚಿತ್ರಕವನ ಬಳಗ

...

ತವಿಶ್ರೀ:

ದೇಶದ ನಾಡಿ
ಸುಗ್ಗಿ ಬಂತೋ ಅಣ್ಣ ಸುಗ್ಗಿ
ನಮ್ಮೆಲ್ಲರ ಹೃದಯ ಹಿಗ್ಗಿ ಹಿಗ್ಗಿ
ಮನೆ ಅಂಗಳದಲಿ ತುಂಬುವುದು ಕಾಳು
ಎಲ್ಲರಿಗೂ ಸಿಗುವುದು ಕೂಳು

ಮಾರಣ್ಣ ಸಿಂಗಣ್ಣ
ಕೊಯ್ಲು ಕೊಯುವರು ಹೊಲದಲಿ
ಮೂಟೆ ಮೂಟೆ ರಾಗಿ ಭತ್ತ
ಸುರಿವರು ಮಾಳದಲಿ

ಸಾಕವ್ವ ಮಾರವ್ವ
ಬನ್ನೀರೆ ಜೊಳ್ಳನು ತೂರೂವಾ
ಜೊಳ್ಳ ತೂರಿ
ಕಾಳನು ಕೇರೂವಾ

ಕಾಳಲೇ ಕೂಳು
ಕೂಳಲೇ ಬಾಳು
ಎಲ್ಲ ಸೇರಿ ದುಡಿಯುವಾ
ದೇಶದ ನಾಡಿಯ ಮಿಡಿಯುವಾ


Tuesday, 14 April 2009

ಚಿತ್ರ ೧೦೦



ತವಿಶ್ರೀ:


ಪ್ರತಿಕ್ರಿಯೆಗಳು ಬರಲಿ, ಬರದಿರಲಿ, ಮನ ಮುದುಡಿಸಿಕೊಳ್ಳದೆಯೇ, ವಾರಕ್ಕೊಂದರಂತೆ ಶತಕ ಚಿತ್ರಗಳನ್ನು ಇತ್ತು, ಅನಿಸಿಕೆಗಳನ್ನು ಮೂಡಿಸಲು ಹಲವು ಮನಗಳಿಗೆ ಅನುವು ಮಾಡಿ ಕೊಟ್ಟ ಅಮರ, ಶ್ರೀ ಮತ್ತು ಶ್ರೀನಿಧಿಯವರುಗಳಿಗೆ ಮನಃಪೂರ್ವಕ ಕೃತಜ್ಞತೆಗಳು ಹಾಗೂ ಅಭಿನಂದನೆಗಳು

ಸ್ವಹಿತದೆಡೆಗೇ ಮನ ಮತ್ತೆ ವಸಂತನಾಗಮನ
ಮತ್ತೆ ಮತ್ತೆ ತರು ಲತೆಗಳಲಿ ನವ ಚೇತನ
ನೇಸರನ ತೀಕ್ಷಣತೆಗೆ ಒತ್ತು ಕೊಡುವ ಕಾಲ
ಬರುತಿದೆ ನೀರಿಗಾಗಿ ಬಾಯಿ ಬಿಡುವ ದಿನ

ಮೇಲೇರುತಿದೆ ಉರಿ ಬಿಸಿಲು
ಕಾಲ್ಕೆಳಗೆ ಸುಡು ಕಲ್ನಾರು
ಮರ ಒಣಗಿದರೇನು
ಗಿಡ ಚಿಗುರಿದರೇನು

ಇಂದಿನ ಹಸಿವು ತಣಿಸಬೇಕು
ಮಕ್ಕಳ ನಾಳೆ ಸುಗಮವಾಗಿರಿಸಿರಬೇಕು
ಇದೇ ನನ್ನ ಹಂಬಲ
ಇದಕಾಗೇ ನನ್ನ ಚಿಂತನೆ

ಒಮ್ಮೆ ಕೂಗಿದೆ ನಾನು
ಮಗು ಬೀಳುತಿರಲು,
ಅದ ಹಾಡೆಂದರು
ತಾವು ನಲಿದರು :(

ಹಸಿವಲಿ ನರಳಿದೆ
ಅದನರ್ಥ ಮಾಡಿಕೊಳ್ಳದವರು
ಅದನೂ ಹಾಡೆಂದರು
ಕಥೆ ಕವನ ಕಟ್ಟಿದರು

ಕವಿಯಂತೆ ಮನ ಓಡಿಸಿದರು
ಕಪಿಯಂತೆ ಮರದೆಡೆಗೆ ನೋಟವಿಟ್ಟರು
ನನ್ನಿಂದ ಇನ್ನೂ ಹೆಚ್ಚು ಅಪೇಕ್ಷಿಸಿದರು
ಎನ್ನ ತಿಳಿಯದಾದರು
ತಿಳಿಯಲು ಇಚ್ಛೆಯೂ ಇಲ್ಲದವರು
ತಮ್ಮ ಸಂತಸವೇ ಮಿಗಿಲೆಂದವರು

ನನ್ನಳಲು ನನಗೇ ಗೊತ್ತು
ಮೂಢರಿಗೇನು ತಿಳಿದೀತು!
ನನ್ನ ಸ್ನೇಹಿತೆ ಕಾಗೆಯ
ವೈರಿ ಎಂದರು, ಎನ್ನ ಹೊನ್ನಶೂಲಕೇರಿಸಿದರು

ನಿಮಗೇನು ಗೊತ್ತು? ಹೇಗೆ ತಾನೆ ಗೊತ್ತಾಗಬೇಕು
ನಾನೇನೇ ಉಲಿದರೂ ಹಾಡೆಂದು ಅರ್ಥೈಸುವಿರಿ