Monday 27 August, 2007

ಚಿತ್ರ - 16

ಸಾಗರ ಅವರು ಹೇಳಿದ್ದು :


ನನ್ನ ಪ್ರೀತಿಯ ಹುಡುಗಿ ,
ನಾನು ಜನರ, ಆತ್ಮೀಯರ ಮಧ್ಯದಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಒಬ್ಬಂಟಿಯಾದಂತೆ ಅನಿಸಿಬಿಡುತ್ತಿದೆ.
ಈ ಶೂನ್ಯ ಸ್ಥಿತಿ ನನ್ನ ನೆರಳು. ಎಲ್ಲ ಒಬ್ಬಂಟಿತನಕ್ಕೆ ,ಶೂನ್ಯತೆಗೆ ಉತ್ತರವನ್ನು ಅರಸಿ ಬಸವಳಿಯುವುದು ಕೊನೆಗೆ Relax ಆಗುವುದು ' ನಿನ್ನ ಧ್ಯಾನವೆಂಬ ' ಜಗಲಿಯಲ್ಲಿ., ನಿನ್ನ ನಿಷ್ಕಳಂಕ, ಹೃದಯಪೂರ್ವಕ ನಗುವಿನ ಮನಮೋಹಕ ಕ್ಷಣಗಳ ಆ ಮಧುರ ನೆನಪಿನಲ್ಲಿ. ಈ ಧ್ಯಾನ ಮೋಹಕವಾದದ್ದು. ಕಾರಣ ಈ ಧ್ಯಾನಕ್ಕೆ ಸಾಕ್ಷಿ ಭಾವವೇ ನೀನು !
ನಿನ್ನ ಸ್ಥಿತಿವಂತಿಕೆಗೆ ಎರಡು ಮಾತಿಲ್ಲ. ನೀನು ಭಾವನೆಗಳ ಆಗರ. ನೀನು ಜೊತೆಯಲ್ಲಿದ್ದರೆ ಭಾವನೆಗಳ ದಾರಿದ್ರ್ಯವಿಲ್ಲ.ನಾನು ಧನ್ಯ! ನೀನು ನನ್ನ ಯೌವ್ವನಕ್ಕೆ ಒಂದು ಅರ್ಥ ನೀಡಿದವಳು, ನಿನ್ನ ನಿಷ್ಕಳಂಕ ಪ್ರೇಮದಿಂದ....

ಸತೀಶ , ತಮ್ಮ ಎಂದಿನ ಲಯಬದ್ದ ದಾಟಿಯಲ್ಲಿ ಬರೆದಿದ್ದು :
'ಅತ್ತಲೋ ಇತ್ತಲೋ ಬೇಗನೇ ಹೊರಡಿ '
ನಿಂತು ಹೊರಡುವ ಪಯಣಿಗರು ನಾವು
ಯೋಚಿಸಿ ಆಯ್ದುಕೊಳ್ಳುವೆವೊಂದು ತಾವು
ಎತ್ತೆತ್ತಲಿಂದ ಹುಲುಸಾಗಿ ಬಂದ ಭೌದ್ಧ ಕರ್ಮ
ಬಿರು ಬೇಸುಗೆಗೂ ಬಾಡದೆಮ್ಮ ಹಳದಿ ಚರ್ಮ.

ಕಿರಿದಾದ ಗಲ್ಲಿಯಲೂ ಸ್ವಚ್ಛತೆಯ ಮಂತ್ರ
ಓರೆ ಕಣ್ಣ ನೋಟದಲಿ ಅಡಗಿಹುದು ವಿಶ್ವಸೂತ್ರ
ಪೂರ್ವದಾ ಪೂರ್ವ ನಮ್ಮೊಳಗೆ ಇಹುದು
ಹೊರ ಹೊಮ್ಮೋ ತತ್ವ ಹೊಸದು.

ಚಂಚಲದ ಚಿತ್ತ ಮೈವೆತ್ತ ಪುರುಷನದು
ಚಿತ್ತಾರವಿಹ ನಿಲುವಂಗಿಯಷ್ಟೇ ಹೊಸದು
ಅಚಲವಾಗಿಹ ಅಬಲೆಯೊಲುಮೆಯಡಿ
ಶತಶತಮಾನಗಳ ಹಸೆಯ ಹಾಡಿ.

ಕೈ ಬೀಸಿ ಸಮಯ ಮುಂದೆ ಹಾಯುತಿದೆ
ಈ ಘಳಿಗೆ ಸಿಗದೇ ಹಾಗೇ ಹೋಗುತಿದೆ
ಬಲುಬೇಗ ನಿರ್ಧರಿತ ನೆಮ್ಮದಿಯ ಫಲ
ಆಳಿಗೊಂದರಂತೆ ಅವರದೇ ಆದ ಚೀಲ.

ಕಾಲನು ಜೋಡಿಸಿ ನಿಂತರದಾಗದು
ಕಾಲವು ಹಾಗೇ ಸುಮ್ಮನೆ ಹೋಗ್ವುದು
ಅತ್ತಲೋ ಇತ್ತಲೋ ಬೇಗನೇ ಹೊರಡಿ
ಮುಂದಿನ ಪಾತ್ರಕೆ ತಡೆಯದ ಗಡಿಬಿಡಿ.

ಪಾರಿಜಾತ ಅವರು ಬರೆದಿದ್ದು ಈ ರೀತಿಯಲ್ಲಿ :
ಕಳೆದುಹೋದರು ಎಂದು ಎಮ ನೋಡಿ ಮರುಗದಿರಿ
ನಮ್ಮ ಪಥದಲಿ ನೇರ ನಡೆಯುತಿಹೆವು
ಸುತ್ತಲಿನ ಜಗಕಿಂತ ಬೇರೆಯಲ್ಲವು ನಾವು
ನಮ್ಮ ಮನದಲಿ ದ್ವಿಧೆಯು ಕಾಣಸಿಗದು
ಚಿಗುರು ಹೊಸದಾದರೂ ಬೇರು ಹಳೆಯದೆ ತಾನೆ
ಬೇರನ್ನು ಬಿಡದೆ ನಾವ್ ಹಿಡಿದಿರುವೆವು
ಸಂಪ್ರದಾಯವ ಬಿಟ್ಟು ಕದಲದೆಯೆ ಇದ್ದರೂ
ಹೊಸದರಂಗೀಕಾರ ನಮಗೆ ಹಳತು!

ಶ್ರೀತ್ರಿಯವರು ' ಜಾಕಿಚಾನ್ 'ದಲ್ಲಿ ಬರೆದಿದ್ದು ಹೀಗೆ :
ನಡು ದಾರೀಲಿ ಏನ್ ಕಂಡು
ಬೆಕ್ಕಸ ಬೆರಗಾಗ್ ನಿಂತೆ ನೀನು?
ಶೂಟಿಂಗ್ ಮುಗೀತು ಪ್ಯಾಕಪ್ ಆಯ್ತು
ಮೇಕಪ್ ತೆಗಿ ಅಯ್ಯಾ ಜಾಕಿಚಾನು!

ಯಾವ ಸಿನಿಮಾ ಅಂತೆ ಇದು
ಮತ್ತೊಂದ್ ರಷ್ ಅವರ್ರು?
ಯಾವುದೋ ಒಂದು ಕೇಳ್ದೋರ್ ಯಾರು
ನಿಮ್ಮ ಹಾಗೆ ನಾವೂ ಈಗಲೇ ಬಂದೋರು!

Monday 20 August, 2007

ಚಿತ್ರ - 15




ಅಗೋಚರತೆಯಲಿ ಅರ್ಥ ಹುಡುಕುವ ಬದುಕಿನ ಸಂಜೆಯಲ್ಲಿರುವವರ ಅನಿಸಿಕೆ -ಬರೆದಿದ್ದು ಆರ್ಬಿ
ನಾನು ಪ್ರತಿ ಸಾಯಂಕಾಲವೂ ಇವತ್ತು ಏನಾದರೋದು ಘಟಿಸುತ್ತದೆ ಎಂದು ಕೊಂಡೇ ಸೂರ್ಯನ ಸಾವನ್ನು ಕಣ್ಣಾರೆ ನೋಡುತ್ತಾ ಅಗೋಚರವಾದದ್ಯಾವುದಕ್ಕೋ ಕಾಯುತ್ತಿರುತ್ತೇನೆ.
ಯಾವುದಕ್ಕಾಗಿ ?
ಯಾರಿಗಾಗಿ ?
ಯಾವತ್ತಿನಿಂದ?
ಮತ್ತು ಯಾವತ್ತಿನ ತನಕ ?
ಎಂಬ ಪ್ರಶ್ನೆಗಳಿಗೆ ಉತ್ತರವನ್ನೇ ಹುಡುಕದೆ ಸುಮ್ಮನೆ ಕಾಯುತ್ತೇನೆ.
ಬೇಸಿಗೆಯ ಬಿಸಿಲಿಗೆ ತಿಂಗಳುಗಳ ಕಾಲ ಕಾದು ಕಾಯ್ದ ಬಂಡೆಗಳು, ಗುಡ್ಡಗಳು , ಸಸ್ಯಗಳು ಮಳೆಗಾಳದ ಮಳೆಗೆ ತಣ್ಣಗಾದರೂ ಆಗುತ್ತವೆ.
ಆದರೆ ನಾನು ? ......
(ಕೊನೆಗೆ ಮತ್ತೆ ಮೊದಲಿನಂತೆ ಪ್ರಶ್ನೆ - ನನ್ನ ಗೂನು ಬೆನ್ನಿನಂತೆ !)
ನಾನು ಕಾಯುತ್ತಲೇ ಇರುತ್ತೇನೆ.
ನನ್ನ ನಾಳೆ ಕಾಣದ ಜೀವನದ ಹಾದಿಯಲ್ಲಿ ....

ತಮ್ಮದೆ ಆದ ಲಯದಲ್ಲಿ ಎಂದಿನಂತೆ ಅರ್ಥಪೂರ್ಣವಾಗಿ ಸತೀಶ 'ಕಪ್ಪು ಬಿಳುಪು ಕತ್ತಲು ' ಎನ್ನುತ್ತಾ ಹೇಳಿದ್ದು :
ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ಎತ್ತ ದಾರಿ ಎತ್ತ ಪಯಣ ಎನ್ನುವಂತೆ ಆಗಿದೆ.

ಮಾರ್ಕ್ಸ್ ಗಡ್ಡ ಹಳೆಯದಾಯ್ತು ಮುದುಕ ಗಡ್ಡ ಬೆಳೆದು ನಿಂತು
ಕಪ್ಪು ಬಿಳುಪು ಕತ್ತಲಲ್ಲಿ ಒಬ್ಬೊಂಟಿ ಯಹೂದಿಯಾಗಿ
ಮುಂದೆ ಎಂದೋ ಬೂದಿಯಾಗಿ.

ಹಣೆಯ ಮೇಲೆ ಸಣ್ಣ ನೆರಿಗೆ ಯಾರೋ ಕರೆಯದಿದ್ದ ಕರೆಗೆ
ಕಪ್ಪು ಬಿಳುಪು ಕತ್ತಲಲ್ಲಿ ನಿರಾಶ್ರಿತವಾದ ಚಿಂತನೆ
ನೆಲದ ದೃಷ್ಟಿ ಮಂಥನೆ.

ಆಸೆ ಅಮರಿ ಬೆಳೆಯುತಿಲ್ಲ ಬಾಸೆ ಕೊಸರಿ ಮೊಳೆಯುತಿಲ್ಲ
ಕಪ್ಪು ಬಿಳುಪು ಕತ್ತಲಲ್ಲಿ ಒಂದೇ ಒಂದು ರಾಗವು
ಸಹಜವಾದ ಯೋಗವು.

ಚೀಲದಲ್ಲಿ ಚಿಂತೆ ಕೆಲವು ಬೆನ್ನ ಮೇಲೆ ಭಾರ ಹಲವು
ಕಪ್ಪು ಬಿಳುಪು ಕತ್ತಲಲ್ಲಿ ಶೂನ್ಯದಾಚೆ ಲೋಕದ
ಕಣ್ಣ ತಣಿಸೋ ಮಾಟದ.

ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ನೋವು ನಲಿವು ಎರಡೂ ಸೇರಿ ಹೊಸತು ಭಾವ ಹುಟ್ಟಿದೆ.

ದ್ವಂದ್ವದಲ್ಲಿರುವವನ ಮನಸ್ಥಿತಿ/ಆಲೋಚನೆಯ ಬಗ್ಗೆ ಹೇಳಿದ್ದು -ಸೀಮಾ
ಎಡವಿದೆನೇಕೆ?

ಎಡವಿದೆ ನಿಜ; ಎಂದೂ ಮಾಡದ ತಪ್ಪನ್ನು
ಇಂದೇಕೆ ಮಾಡಿದೆ? ನನ್ನ ಅಗಾಧ ತಾಳ್ಮೆ ಎಲ್ಲಿ ಹೋಯಿತು?

ಆದರೂ ಹಿಂತಿರುಗಿ ಅವಲೋಕಿಸಲು ಏನೋ ಆತಂಕ, ಭಯ.
ಹಿಂತಿರುಗಿ ನೋಡದಿರಲು ಕಾಡುವುದು ಪಾಪ ಪ್ರಜ್ಞೆ.

ಮುಂದಿರುವ ಜೀವನ ಬರೀ ಕತ್ತಲು...
ಹಿಂದಿರುವ ಬೆಳಕಿನ ಕಡೆಗೆ ಮತ್ತೊಮ್ಮೆ ತಿರುಗಿ ನೋಡಲೇ?

ಕಳೆದು ಹೋದ ಜೀವನದಬಗ್ಗೆ ಆಲೋಚಿಸುವವನ ಶೈಲಿಯಲಿ ರಾಘವೇಂದ್ರ ಪ್ರಸಾದ ಬರೆದಿದ್ದು :
ಏಲ್ ಮರ್ತೆ ಕೋಣೆ ಬೀಗ?
ಗಲ್ಲಿ ಮರೀಲಿಲ್ಲ
ಗೂಡ್ ಮರೀಲಿಲ್ಲ
ಏಲ್ಲೊ ಮರ್ತೆ ಕೋಣೆ ಬೀಗ.

ಏಲ್ ಹೊದ್ವು ನನ್ ಮರಿಹಕ್ಕಿಗಳು?
ರೆಕ್ಕೆ ಬಲ್ತಿಲ್ಲ
ಕೊಕ್ಕೆ ಬನ್ದಿಲ್ಲ
ಏಲ್ಲೊ ಹೊದ್ವು ನನ್ ಮರಿಹಕ್ಕಿಗಳು.

ಏಲ್ ಕಳ್ದ್ಹೊಯ್ತು ನನ್ ಟೈಮು?
ನೋವು ಮರ್ರ್ತಿಲ್ಲ
ಗಾಯ ಮಾಸಿಲ್ಲ
ಏಲ್ಲೊ ಕಳ್ದ್ಹೊಯ್ತ್ ನನ್ ಟೈಮು.

ರವಿ ಬೆಳಗೆರೆಯವರ 'ಮಾಂಡೋವಿ' ನೆನಪಿಸುವ ಶೈಲಿಯಲಿ ಸಿಂಧು ಅವರು ಹೇಳಿದ್ದು ಈ ರೀತಿ :
ಹುಡುಕಲೇ..ಬೇಡವೇ?

ಎಲ್ಲವಳೆಲ್ಲವಳೆಲ್ಲವಳೂ?
ಈ ಕಂಬದಲ್ಲೂ ಇಲ್ಲ..!
ದಿನಾ ದೇಗುಲದ ಅಂಗಳದಲ್ಲಿ
ಆಡುವಾಗ ಈ ಕಂಬದ ಹಿಂದೇ
ಅಡಗುವ ಅವಳೆಲ್ಲಿ?
ಯಾವ ಗಿಡದ ಹಿಂದೆ ನಿಂತಿರಬಹುದು
ಯಾವ ಮೊಗ್ಗಿನ ತೆರೆಹೊದ್ದು..?
ಯಾವ ಕಟ್ಟೆಯ ಕೆಳಗೆ ಅವಿತಿರಬಹುದು
ಯಾವ ಕುಸುರಿಯ ಕಲೆ ಹೊದ್ದು?
ಇನ್ನೆಲ್ಲಿ ಹೋಗಿರಬಹುದು
ಅಲ್ಲಿ ಬಲೂನಿನವನ ಬಳಿ ಮಕ್ಕಳಿಲ್ಲ..
ಜೋಕಾಲಿಯಿರುವೆಡೆ ಪ್ರವೇಶದ ಸಮಯವಲ್ಲ..
ಹುಡುಕಲೇ..ಬೇಡವೇ?
ಸುಮ್ಮನೆ ಕೂತರೆ
ಅವಳ ಕೈಗಳೇ ಬಂದು ಬಳಸವೇ?
ಯಾವುದಕ್ಕೂ ಇರಲಿ
ಒಮ್ಮೆ ನಶ್ಯವ ಸೇದಿಬಿಡಲೆ
ಆಕ್ಷೀ ಕೇಳಿದರೆ ಓಡಿಬರಬಹುದು.
ಬೆಟ್ಟವೇ ಮೊಹಮ್ಮದನ ಬಳಿಗೆ ಬಂದಂತೆ
ಅವಳೇ ಕರುಣಿಸಿ ಒಲಿಯಬಹುದು..
ಗುಣವಿರುವ ಮಗುವಲ್ಲವೇ
ಗುಡಿಯ ದೇವರಿಗಿಂತ ಮಿಗಿಲಹುದು..

'ನಾನಿನ್ನು ಯುವಕ ' ಎನ್ನುತ್ತಾ ಶ್ರೀತ್ರಿಯವರು ಹೇಳಿದ್ದು :

ನಾನಿನ್ನೂ ಯುವಕ!

ಹಾಲುಗಲ್ಲದ ಹಸುಳೆ ಇದ್ದಾಗ
"ಮಗು" ಎಂದು ಕರೆದು
ಅಪ್ಪಿ ಮುದ್ದಿಸಿದಿರಿ ;

ಅಂಗಿ ಚಡ್ಡಿ ತೊಟ್ಟು
ಸ್ಲೇಟು ಬಳಪ ಹಿಡಿದು
ಶಾಲೆಗೆ ಹೊರಟು ನಿಂತಾಗ
"ಹುಡುಗ" ಎಂದು ಹುರಿದುಂಬಿಸಿದಿರಿ ;

ಮೀಸೆ ಮೊಳೆತು ಆಸೆ ಬೆಳೆದು
ಹರಯದ ಹುರುಪು
ತೋಳುಗಳಲ್ಲಿ ಖಂಡಗಟ್ಟಿದಾಗ
"ಯುವಕ" ಎಂದು ಉಬ್ಬಿಸಿದಿರಿ ;

ಈಗಲೂ ಹಾಗೇ ಇದೆ
ನನ್ನ ಮಗುವಿನ ಮನಸ್ಸು
ಈಗಲೂ ಹಾಗೇ ಇದೆ
ಕಂಡಿದ್ದೆಲ್ಲ ಕಲಿಯುವ ಹುಮ್ಮಸ್ಸು
ಈಗಲೂ ಕಣ್ಮುಂದೆ ಬರತ್ತೆ
ಹರಯದಲ್ಲಿ ಕಂಡ ಕನಸು

ಮತ್ತೆ ಈಗೇಕೆ ನೀವೆಲ್ಲ
ನನ್ನ "ಮುದುಕ" ಅಂತೀರಿ?

Monday 13 August, 2007

ಚಿತ್ರ - 14



ಬಂಡಿಯ ಓಟ ಸುತ್ತಲ ನೋಟ ಎನ್ನುವ ಕವನದ ಮೂಲಕ ಸತೀಶ ಹೇಳಿದ್ದು

ಬೆಟ್ಟದ ತಪ್ಪಲ ಸುರಂಗದ ಬಳಿಯಲಿ
ದೂರಕೆ ಬಂಡಿಯು ಓಡುತಿದೆ
ಬಂಡಿಯ ಓಟವು ಒಂದು ಬಗೆ
ಸುತ್ತಲ ನೋಟವು ಹಲವು ಬಗೆ.

ಮುಖಗಳು ಹಲವು ನೂರಿರಬಹುದು
ಎರಡೇ ಎರಡು ಕಾಣುತಿವೆ
ಡಬ್ಬಿಗಳು ತಮ್ಮನು ಎಳೆದೆಳಕೊಂಡು
ಒಂದೇ ದಿಕ್ಕಲಿ ಸಾಗುತಿವೆ.

ಒಟ್ಟಿಗೆ ನಡೆದು ಹೊತ್ತು ಸಾಗುವ
ಪೂರ್ಣಪಕ್ಷದ ದ್ವಾದಶ ಡಬ್ಬಿಗಳು
ಎಷ್ಟೇ ದೂರ ಪಯಣ ಬೆಳೆಸಿದರೂ
ದೂರವೇ ಉಳಿಯೋ ಕಂಬಿಗಳು.

ಮಣ್ಣಿನ ಮೇಲೆ ಜಲ್ಲಿಯ ರಾಶಿ
ಜಲ್ಲಿಯ ಮೇಲೆ ಉಕ್ಕಿನ ಕಂಬಿ
ಕಂಬಿಗೆ ತಿಕ್ಕೋ ಬಗೆ ಬಗೆ ಗಾಲಿ
ಗಾಲಿಗೆ ಅಂಟಿದ ಉಕ್ಕಿನ ಡಬ್ಬ
ಡಬ್ಬದಲಿರುವ ಹಲವು ಮನಸ್ಥಿತಿ
ಮನಕಿದೆ ಬೇರೆ ದಿಕ್ಕಿನ ಪಯಣ
ಅಂತಹ ಪಯಣಕೆ ಯಾರೋ ಕಾರಣ
ಎಲ್ಲರೂ ಒಂದೇ ಎನ್ನುವ ಹೂರಣ.

ಉದ್ದಕೆ ಬೆಳೆದೂ ಅಡ್ಡಕೆ ಚಾಚುವ
ಜನ ಬದಲಾದಂತೆ ತಾ ಬದಲಾಗುವ
ತನ್ನದೇ ದಾರಿಯ ತಾನು ಹಿಡಿದು
ಅಳುಕಿಲ್ಲದೆ ಗುರಿಯ ಕಡೆಗೆ ನಡೆದು
ಬೆಟ್ಟದ ತಪ್ಪಲ ಸುರಂಗದ ಬಳಿಯಲಿ
ದೂರಕೆ ಬಂಡಿಯು ಓಡುತಿದೆ
ಬಂಡಿಯ ಓಟವು ಒಂದು ಬಗೆ
ಸುತ್ತಲ ಓಟವು ಹಲವು ಬಗೆ.

ರಾಘವೇಂದ್ರ ಪ್ರಸಾದ ಅವರು ಎಂದಿನಂತೆ ಆಂಗ್ಲಭಾಷೆಯಲ್ಲಿ ಬರೆದ ಕನ್ನಡ ಕವಿತೆಯನ್ನು ಅನುವಾದಿಸಿದಾಗ ದೊರೆತಿದ್ದು
ಅಂಕು ಡೊಂಕಿನ ಹಳಿಗಳ ಮೇಲೆ
ಕೊಂಕು ಬಿಂಕದ ಪಯಣ
ಸುಂಕವಿಲ್ಲದ ಸಮಾಧಿಯೆಡೆಗೆ
ತಂಗು ತಣಿಸುವ ನಿಲ್ಧಾಣ.

ನಿನ್ನೆಯ ನೆನಪುಗಳ ಬಂಡಿ
ನಾಳೆಯ ಕನಸುಗಳ ಕೊಂಡಿ.

ನಲಿಯುವ ನಯನಗಳ ನಾಟ್ಯ
ಉಲಿಯುವ ಹೃದಯಗಳ ಕಾವ್ಯ.

ಬೆಂದ ಬಯಕೆಗಳ ಬಯಲು
ನೊಂದ ಮನಗಳ ಕುಯಿಲು.

ಬದುಕೆ ಒಂದು ನಿರಂತರ ಪಯಣ
ಜೀವನ್ಮರಣಗಳೇ ಇಲ್ಲಿ ನಿಲ್ಧಾಣ.

ಅಂಕು ಡೊಂಕಿನ ಹಳಿಗಳ ಮೇಲೆ
ಕೊಂಕು ಬಿಂಕದ ಪಯಣ
ಸುಂಕವಿಲ್ಲದ ಸಮಾಧಿಯೆಡೆಗೆ
ತಂಗು ತಣಿಸುವ ನಿಲ್ಧಾಣ.

Monday 6 August, 2007

ಚಿತ್ರ - 13



ಭಾವಜೀವಿ ಮಾರ್ಮಿಕವಾಗಿ ಬರೆದಿದ್ದು ಹೀಗೆ :
*ಮುಚ್ಚುಳವಿಲ್ಲದ ಕ್ಯಾನ್*
ಬಟ್ಟೆಯೆ ಖುರ್ಚಿ, ಬಟ್ಟೆಯೆ ಮಂಚ
ತಣ್ಣೀರಿಗದ್ದಿದ ಬಟ್ಟೆಯೆ ನಮ್ಮ ಹೊಟ್ಟೆಗೆ ಒಮ್ಮೊಮ್ಮೆ
ಟ್ಯಾಕ್ಸಿಲ್ಲ, ಬಿಡಾರದ ಬಾಡಿಗೆಯೆ ಗೋಳಿಲ್ಲ
ಮನೆಯಿಂದ ಕದ್ದೊಯ್ಯಲು ಏನೂ ಇಲ್ಲ
ಸುಟ್ಟ ಪಾತ್ರೆ, ಮುಚ್ಚುಳಿರದ ಕ್ಯಾನ್ ,
ಸವೆದು ಕುಬ್ಜಗೊಂಡ ಪೂರಕೆಯೇ ನಮಗೆಲ್ಲ
ದೂರದೆಲ್ಲಿಂದನೂ ನೀರು ಹೊತ್ತು
ಆಕಾಶದ ಸೂರಿನಡಿ, ರಸ್ತೆಯ ಬದಿಯಲ್ಲೆ ಸ್ನಾನಿಸಿ
ಖಾಲಿಯಾದ ಸುಟ್ಟ ಪಾತ್ರೆ ಕ್ಯಾನಲ್ಲೆಲ್ಲಾ
ಪ್ರೀತಿಯನ್ನು ತುಂಬಿಡುತ್ತೇವೆ
ಕದ್ದು ಹೋದೀತೆಂಬ ಭಯವಿಲ್ಲದೆ!

ಪಾರಿಜಾತ ಅವರು ನೂತನ ಶೈಲಿಯಲ್ಲಿ ಸಂಸ್ಕೃತದಲ್ಲಿ ಬರೆದಿದ್ದು ಹೀಗೆ :
वीथीतटेष्वुशितमस्तु सुरालये वा
चीनाम्बरं धरतु वाथ विदीर्णचीरम् ।
अश्नातु मृष्टमनिशं बत वा कुभैक्ष्यम्
माता सदैव सुतलालन एव तृप्ता ॥

ರಸ್ತೆಬದಿಯಲ್ಲಿರಲಿ ಸುರರ ಮನೆಯಲ್ಲಿರಲಿ, ಚೀನಾಂಬರ ಧರಿಸಿರಲಿ
ಹರಿದುದನ್ನುಟ್ಟಿರಲಿ, ಮೃಷ್ಟಾನ್ನವುಣ್ಣಲಿ ಭಿಕ್ಷೆಯನು ಭಕ್ಷಿಸಲಿ,ತಾಯಿಗೆ
ತೃಪ್ತಿ ಸಿಗುವುದು ಮಗುವಿನ ಲಾಲನೆಯಲ್ಲಿಯೇ ಅಲ್ಲವೇ!

" ನಾವು ಬಡುವ್ರಲ್ಲಾ ಸಾಮೀ " ಅಂಥ ಹೇಳಿದ್ದು ಸತೀಶ ಅವರು :
ಏನ್ ಸಾಮೀ ನೀವೂ ತಗಡಿನ್ ಡಬ್ಬೀ ಒಳಗೆ
ಬಡ್‍ತನದ ಚಿತ್ರ ತೆಗಿತೀನಿ ಅಂತ ಕುಂತೀರಲ್ಲಾ
ನಾವಿರೋ ಸೀಮೇ ಜನ ಎಲ್ಲಾ ಹಿಂಗೇಯಾ
ಗೊತ್ತಿದ್ದೂ ಎಲ್ಲ ಅರಿದೋರಂಗ್ ಆಡ್ತೀರಲ್ಲಾ.

ತಲಿಮ್ಯಾಗೆ ಸೂರು ಸುತ್ಲೂ ಗ್ವಾಡೆ ಇಲ್ಲದೇನೂ
ನಮ್ ಬದ್ಕೇ ನಮ್ಮನ್ ನಡಸ್ತಾ ಇಲ್ವೇನು?
ಎಲ್ಲಾನೂ ತೆರೆದ ಬಯಲಲ್ಲೇ ನಡೆಸೋ ಜನ್ರ
ಸೊಂಟದ ದಾರಾನೂ ಗಟ್ಟೀ ಅಲ್ವೇನು?

ನೀರೂ-ನಿಡಿ ಉಳ್ಸೀ ಬೆಳ್ಸೋ ದೊಡ್ಡ್ ಮಾತು ಗೊತ್ತಿಲ್ಲ
ನಮ್ ಜನ್ರ ಶೋಕಿ-ಜೋಕಿ ಇವೆಲ್ಲ ಇರೋವೇಯಾ
ಹಾಳ್ ಗ್ವಾಡೇ ನೋಡುದ್ರೇನೇ ತಿಳಿಯಾಕಿಲ್ವಾ
ಈ ಸುತ್ಲೂ ನಮ್ಮಂಥೋರ್ಗೇನೂ ಕಮ್ಮೀ ಇಲ್ಲಾ.

ನಾವು ಬಡುವ್ರಲ್ಲಾ ಸಾಮೀ ನಾವಿರೋದೇ ಹಿಂಗೆ
ನಿಮ್ ಕಣ್ಣಿಗ್ ಕಂಡು ಕರುಳು ಚುರುಕ್ ಅಂದ್ರೆ ಹೆಂಗೆ?

ರಾಘವೇಂದ್ರ ಪ್ರಸಾದ.ಪಿ ಸಿನಿಕರಾಗಿ ಹೇಳಿದ್ದು ಹೀಗೆ :
ಭಾರತ ಪ್ರಕಾಶಿಸುತ್ತಿದೆ
ತಳ ಸುಟ್ಟ ಪಾತ್ರೆಯಲ್ಲಿ
ಬಟ್ಟೆ ಕಾಣದ ಬೆತ್ತಲೆ ದೇಹದಲ್ಲಿ
ಹೊಟ್ಟೆ ಹಸಿದ ಕರುಳ ಕುಡಿಯಲ್ಲಿ
ಕನಸೇ ಕಾಣದ ಫುಟ್ ಪಾತ್ ಕಂಗಳಲಿ ನಿಜ ಭಾರ ಪ್ರಕಾಶಿಸುತ್ತಿದೆ !