Wednesday 9 September, 2009
Thursday 3 September, 2009
Thursday 27 August, 2009
Thursday 20 August, 2009
Friday 14 August, 2009
ಚಿತ್ರ ೧೧೫
ದೇಗುಲದ ಗೂಡಿನಲಿ ತುಂಬಿಹುದು
ಜೀವನಾನುನುಭವದ ಮೆಲುಕು
ತಿಮ್ಮಕ್ಕನ ಮೇಲ್ವಿಚಾರಿಕೆಯಲಿ ಹುಡುಕು
ದೇಗುಲದಿ ಸ್ವಾಮಿಗೆ ಮಂದಿಯ ಸೇವೆ
ಸ್ವಾಮಿಯ ಕೃಪೆಗಾಗಿ ಬೇಡಿಕೆ
ಮಂದಿಗೆ ತಿಮ್ಮಕ್ಕ ಅಮ್ಮಕ್ಕರ ಸೇವೆ
ಅವರಿಗಿಲ್ಲ ಯಾವುದೂ ಕೋರಿಕೆ
ದೈವ ಸೇವೆಗೆ ಬಂದಿಹರ ಸೇವೆಯೇ ಅವರ ಧ್ಯೇಯ
ಅನವರತ ದುಡಿಮೆಯೇ ಕಾಯ
ಭಕುತರು ಹುಡುಕುತಿಹರು ಕಾಣದ ದೈವವ ಅಲ್ಲಿ ಇಲ್ಲಿ
ಹುಡುಕದೇ ಅನುಭವಿಸುತಿಹರು ತಿಮ್ಮಕ್ಕ ಅಮ್ಮಕ್ಕರು ದೈವ ಸಾನ್ನಿಧ್ಯ
ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ)
ಬಲು ಘಾಟು, ಕತ್ತರಿಸಲು ಕಣ್ಣಿನಲ್ಲಿ ನೀರು
ಸುಲಿದಷ್ಟೂ ಪದರಗಳು
ಗಟ್ಟಿಯಾದ ಸಾರವಿಲ್ಲವೇ ಇಲ್ಲ
ತಿರುಳೇ ಇಲ್ಲದ ಸುರುಳಿ
ಸವಿಯಲು ಬಲು ಆನಂದ
ಜೊತೆಗೆ ಬಾಯಿ ವಾಸನೆ
ಬದುಕೂ ಬಲು ಘಾಟು,
ಹಾದಿಯಲ್ಲಿ ಕೆಲವೊಮ್ಮೆ ಕಣ್ಣಿನಲ್ಲಿ ನೀರು
ದಿನಗಳು ಸವೆಯುತ್ತಲೇ ಇರುವುದು
ಆದರೂ ಸಾರ್ಥಕ್ಯದ ದಿನಗಳು ಕಾಣಸಿಗದು
ಬದುಕೂ ಸವಿಯಲು ಬಲು ಆನಂದ
ಆ ಸವಿಯ ಹಿಂದೆಯೇ ದುರ್ವಾಸನೆ (ಕರ್ಮಫಲ ಎನ್ನೋಣವೇ)
ದುರ್ವಾಸನೆಯಲೂ ದೈವ ಸಾಕ್ಷಾತ್ಕಾರ
ಅದನು ಅಮ್ಮಕ್ಕ ತಿಮ್ಮಕ್ಕರು ತೋರುತಿಹರು
Posted by ಅಮರ at 1:25 pm 1 ಕವನ/ಬರಹಗಳು
Wednesday 5 August, 2009
Wednesday 29 July, 2009
Thursday 23 July, 2009
Thursday 16 July, 2009
ಚಿತ್ರ ೧೧೧
ಭರ ಭರ ದಾಪುಗಾಲು ಹಾಕಿ ಹೋಗುತ್ತಿದ್ದವನನ್ನು ಸಮೀಪಿಸಲು ನಾನು ಓಡಲೇ ಬೇಕಾಯಿತು. ಈ ಮಧ್ಯೆ ಓಡುತ್ತಿರುವಾಗ ನನ್ನ ಚಪ್ಪಲಿಯ ಉಂಗುಷ್ಠ ಕಿತ್ತು ಹೋಯಿತು. ಚಪ್ಪಲಿಗಳನ್ನು ಅಲ್ಲಿಯೇ ಬಿಸಾಕಿ ಹಿಂದೆ ಓಡಿದೆ. ಅನತಿ ದೂರದಲ್ಲಿರಲು, ಪುರುಷೀ ಅಂತ ಕೂಗಿದೆ. ಚಿರಪರಿಚಿತ ಧ್ವನಿ ಕೇಳಿದರೂ ಆತ ಹಿಂದೆ ನೋಡಲಿಲ್ಲ. ಏನೋ ಅಚಾತುರ್ಯ ಸಂಭವಿಸಿದೆ ಎಂದಂದುಕೊಂಡು, ಇನ್ನೂ ರಭಸದಿಂದ ಓಡಿ, ಆತನ ಓವರ್ ಕೋಟನ್ನು ಹಿಂಭಾಗದಿಂದ ಜಗ್ಗಿ ಆತನನ್ನು ನಿಲ್ಲಿಸಿದೆ.
’ಏನಯ್ಯಾ ಇದು ವೇಷ? ಯಾಕಯ್ಯಾ ನನ್ನ ಕರೆಗೂ ಓಗೊಡುತ್ತಿಲ್ಲ? ಎಲ್ಲಯ್ಯಾ ನಿನ್ನ ಕಿರಾತಕ ಹಿಂಬಾಲಕ?’ ಎಂದೆಲ್ಲ ಪ್ರಶ್ನೆಗಳನ್ನೂ ಒಂದೇ ಉಸುರಿನಲ್ಲಿ ಉಸುರಿದೆ. ಓಡು ನಡಿಗೆಯಲ್ಲಿದ್ದ ಆತನೂ ಏದುಸಿರು ಬಿಡುತ್ತಿದ್ದ. ಮೇಲಕ್ಕೆ ಬೆರಳೆತ್ತಿ, ಖಿನ್ನ ಮುಖವನ್ನು ನನ್ನೆಡೆಗೆ ಪ್ರದರ್ಶಿಸಿದ. ಒಂದೆರಡು ಕ್ಷಣಗಳ ತರುವಾಯ, ’ಇನ್ನೆಲ್ಲಿಯ್ಯ ಕಿಟ್ಟಣ್ಣನಯ್ಯಾ? ಆತನ ಕೊಲೆ ಆಗಿದೆ. ನಿನಗೇ ಗೊತ್ತಿರುವಂತೆ ನಿನ್ನೆ ನಾನೂ ಮತ್ತು ಕಿಟ್ಟಣ್ಣ ಇದೇ ಕಾಡಿನ ಸರಹದ್ದಿನಲಿ, ಯಾವುದೋ ಕೇಸೊಂದಕ್ಕಾಗಿ ಬಂದೆವು. ಕಾಡಿನ ಮುಖದಲ್ಲಿಯೇ ಇರುವ ಪಾಳು ಬಂಗಲೆಯಲ್ಲಿ ಉಳಿದುಕೊಂಡಿದ್ದೆವು. ಇಂದು ಬೆಳಗಿನ ಜಾವ ನಾಲ್ಕು ಘಂಟೆಯ ವೇಳೆಯಲ್ಲಿ, ಬಹಿರ್ದೆಶೆಗೆಂದು ಹೋಗಿದ್ದ ಕಿಟ್ಟಣ್ಣನನ್ನು, ಹಿಂದಿನಿಂದ ಯಾರೋ ಮಚ್ಚಿನಲ್ಲಿ ಹೊಡೆದು, ಸಾಯಿಸಿದ್ದಾರೆ. ಆತನ ರುಂಡವೊಂದು ಮಾತ್ರ ಈ ಕಾಡಿನ ಬಂಗಲೆಯ ಹಿಂಭಾಗದಲ್ಲಿ ಸಿಕ್ಕಿದೆ. ಆತನ ಮುಂಡ ಎಲ್ಲಿ ಹೋಯಿತೋ ತಿಳಿಯದಾಗಿದೆ. ಅದನ್ನು ಹುಡುಕ ಹೊರಟಿರುವೆ. ಅದಕ್ಕಾಗಿಯೇ ಯಾರಿಗೂ ಹೇಳದೇ, ಎಲ್ಲಿಯೂ ನಿಲ್ಲದೇ ನಾನೊಬ್ಬನೇ ಹೊರಟು ಬಂದಿರುವೆ. ಈಗ ಪೊಲೀಸರೂ ನನ್ನ ಕಡೆ ಸಂಶಯಾಸ್ಪದವಾಗಿ ನೋಡುತ್ತಿದ್ದು, ನನ್ನ ಹಿಂದೆಯೇ ಬಿದ್ದಿದ್ದಾರೆ. ಮೊದಲೀಗ ನಾನು ನನ್ನನ್ನು ಪೊಲೀಸರಿಂದ ರಕ್ಷಿಸಿಕೊಳ್ಳಬೇಕು. ನಂತರ ಕಿಟ್ಟಣ್ಣನ ಮುಂಡವನ್ನು ದೊರಕಿಸಿಕೋಬೇಕು. ಇದುವರೆವಿಗೆ ಯಾರಿಗೂ ಈ ವಿಷಯವನ್ನು ಅರುಹಿಲ್ಲ. ನೀನೇ ಮೊದಲಿಗ. ನನಗೆ ಸಾಥಿ ನೀಡುವೆಯಾ? ಆಗುವುದಿಲ್ಲ ಎಂದು ಮಾತ್ರ ಹೇಳಬೇಡ’.
ಏನೂ ಕೆಲಸವಿಲ್ಲದೇ, ಬರಹಕ್ಕೂ ಮನಸಿಲ್ಲದ ನಾನು ಪುರುಷೋತ್ತಮನೊಂದಿಗೆ ಹೊರಡಲು ತಕ್ಷಣ ಒಪ್ಪಿಗೆ ನೀಡಿದೆ.
ಇದು ಇಲ್ಲಿಯವರೆವಿಗೆ ನಡೆದಿರುವ ಪ್ರಸಂಗ. ನಮ್ಮ ಕೆಲಸ ಆದ ನಂತರ ಮುಂದಿನ ವರದಿಯನ್ನು ನಿಮ್ಮ ಮುಂದಿಡುವೆ. ಅಲ್ಲಿಯವರೆವಿಗೆ ತಾಳ್ಮೆಯಿಂದಿರಿ. ಯಾರಿಗಾದರೂ ನನಗಿಂತ ಮೊದಲೇ ಈ ಕೇಸಿನ ಬಗ್ಗೆ ಗೊತ್ತಾದರೆ, ಅವರು ಇಲ್ಲಿ ಬರಹವನ್ನು ಮುಂದುವರೆಸಬೇಕೆಂದು ಕೋರುವ
ಇತಿ ನಿಮ್ಮ
೯೯೯
Posted by ಅಮರ at 5:05 pm 2 ಕವನ/ಬರಹಗಳು
Wednesday 8 July, 2009
ಚಿತ್ರ ೧೧೦
ತವಿಶ್ರೀ :
ಇದೇನಾ ಜಲಸಮಾಧಿ
ಗಾಳಿಯೊಡನೆ ಹಾರಿದ ಆಷಾಢ
ಹಿಂದೆಯೇ ಸೋ ಎನುವ ಶ್ರಾವಣ
ಎಲ್ಲೆಲ್ಲೂ ಎಡಬಿಡದ ಮುಸಲಧಾರೆ
ಕಳೆ ಕೀಳಲು ಹೊರಟಿಹಳು ನೀರೆ
ಸುರಿಯುತಿದೆ ಜೋರಿನ ಮಳೆ
ತಂಪಾಯಿತು ಕಾದು ರೋಸಿದೆ ಇಳೆ
ಹೊರಗೆ ತೊಳೆಯುತಿದೆ ಕೊಳೆ
ಒಳಗೆ ಕಲ್ಮಶದ ಹೊಳೆ
ಇಳಿಯುತಿದೆ ಗಾಜಿನ ಹೊರಗೆ ಹನಿ
ಪಸೆ ಆರಿದ ಬಾಯೊಳಗಿಲ್ಲ ಹನಿ
ಕಗ್ಗತ್ತಲ ನಿರ್ಮಿಸಿದ ಕಾರ್ಮೋಡ
ಆವ ಕಾಲದಲಿ ಚಕ್ರ ನೋಡುವುದು ಹೊಂಡ
ಮೊರೆತದ ಜಲರಾಶಿ ಒಳನುಗ್ಗಲು
ಸೆಟೆದುಕೊಳ್ಳುತಿಹ ಬಾಗಿಲು
ಇಂಧನವು ಕೈ ಮುಗಿದು ಮಲಗುತಿರಲು
ಭೋರ್ಗರೆಯುತಿದ್ದ ಕಾರು ತಣ್ಣಗಾಗಲು
ಆಗೊಲೊಲ್ಲದು ಒಳೆಗೆಳೆದ ಉಸಿರು ಹೊರಗೆ ಬಿಡಲು
ಸೂಚನೆ:
೨೦೦೭ನೆಯ ಇಸವಿ ಜುಲೈ ತಿಂಗಳಿನಲಿ ಇಂತಹ ಸನ್ನಿವೇಶಗಳು ಮುಂಬಯಿಯಲ್ಲಿ ಸಂಭವಿಸಿ ಹಲವು ಮಂದಿ, ತಾವು ಪ್ರಯಾಣಿಸುತ್ತಿದ್ದ ಕಾರಿನೊಳಗೇ ಸಾವನ್ನಪ್ಪಿದರು.
Posted by ಅಮರ at 11:24 am 2 ಕವನ/ಬರಹಗಳು
Thursday 2 July, 2009
ಚಿತ್ರ ೧೦೯
ರಾಮುವಿಗೆ ಸೈಕಲ್ ಸವಾರಿ ಮಾಡಲು ಬರುತ್ತಿತ್ತು. ಆದರೆ ಇನ್ನು ಮೂವರು ಚಿಣ್ಣರಿಗೆ ಅದು ತಿಳಿಯದು. ಬಹಳ ದಿನಗಳಿಂದ ’ಸೈಕಲ್ ಸವಾರಿ ಕಲಿಸಿಕೊಡೆಂದು’ ರಾಮುವನ್ನು ಪೀಡಿಸುತ್ತಿದ್ದವರಿಗೆ ಇಂದು ಸಕಾಲ ಒದಗಿತ್ತು. ಸ್ವತಂತ್ರ ಪಕ್ಷಿಯಂತೆ ರಾಮುವು ಉದ್ಯಾನವನವನ್ನು ಒಂದು ಸುತ್ತು ಹಾಕಿದ ನಂತರ ಒಂದೇ ಕೈನಲ್ಲಿ ಸೈಕಲಿನ ಕೈಪಿಡಿಯನ್ನು ಹಿಡಿದು ಇನ್ನೊಂದು ಸುತ್ತು ಹಾಕಿದ. ತದನಂತರ ಪುಟ್ಟಿಯನ್ನು ಹಿಂದೆ ಕುಳ್ಳಿರಿಸಿಕೊಂಡು ಒಂದು ಸುತ್ತು ಹಾಕಿ, ನಂತರದ ಸುತ್ತಿನಲ್ಲಿ ಮುಂದೆ ಪುಟ್ಟ ಮತ್ತು ಹಿಂದೆ ಪುಟ್ಟಿಯರನ್ನು ಸುತ್ತು ಹಾಕಿಸಿದ. ಇದೆಲ್ಲವನ್ನೂ ತದೇಕಚಿತ್ತದಿಂದ ನೋಡುತ್ತಿದ್ದ, ಸೈಕಲ್ ಸವಾರಿ ಬಾರದ ಕೃಷ್ಣ ತನಗೂ ಒಂದು ಸುತ್ತು ಕೊಡು ಎಂದ. ಅದಕ್ಕೆ ಉತ್ತರವಾಗಿ ರಾಮುವು, ಮೊದಲು ಹಿಂದೆ ಕುಳಿತು ಒಂದು ಸುತ್ತು ಹೋಗೋಣ ಬಾ, ನಂತರ ನೀನು ಕಲಿಯುವಂತೆ ಎಂದು ಹೇಳಿದ. ಸ್ವಲ್ಪ ಮೊಂಡು ಸ್ವಭಾವದ ಕೃಷ್ಣ ಅಷ್ಟು ಸುಲಭಕ್ಕೆ ಅಣ್ಣನಿಗೆ ಮಣಿಯಲಿಲ್ಲ. ತನಗೆ ಸವಾರಿ ಬರುವುದೆಂದೂ, ತಕ್ಷಣವೇ ಸೈಕಲನ್ನು ತನಗೆ ಕೊಡಬೇಕೆಂದೂ, ಇಲ್ಲದಿದ್ದರೆ ಅಪ್ಪ ಅಮ್ಮನಿಗೆ ಹೇಳಿ ತಕ್ಕ ಶಾಸ್ತಿ ಮಾಡಿಸುತ್ತೇನೆಂದೂ ಹೆದರಿಸಿದ. ಈ ಮಾತುಗಳಿಗೆ ಹೆದರಿದ ರಾಮುವು ಸೈಕಲನ್ನು ಕೃಷ್ಣನಿಗೆ ಕೊಟ್ಟುಬಿಟ್ಟನು. ಸುಲಭದಲ್ಲಿ ಮೊದಲ ಬಾರಿಗೆ ತನ್ನ ಕೈಗೆ ಸೈಕಲ್ ಸಿಕ್ಕಿದ ಸಂಭ್ರಮದಲ್ಲಿ ಹೀಗೆ ಹಾಡು ಹೇಳಿಕೊಂಡು ಸವಾರಿ ಮಾಡಲು ಅಣಿಯಾದ, ಪುಟ್ಟ ಕೃಷ್ಣ.
ಸೈಕಲೇರಿ ಹೋಗುವಾ ಒಂದು ಸುತ್ತು
ಬಾರೇ ಜುಟ್ಟು, ಬಾರೋ ಪುಟ್ಟು, ಬಾರೋ ಕಿಟ್ಟು
ಮನೆಯಲ್ಲಿಲ್ಲ ಅಮ್ಮ ಅಪ್ಪ
ಇನ್ಯಾರ ಭಯ ನಮಗಿಲ್ಲಪ್ಪ
ನಾನೇ ನಿಮಗೆಲ್ಲ ಲೀಡರ್
ಇಲ್ಲೀಗ ಸೈಕಲಿನ ಡೀಲರ್
ಹೇಳಿದಂತೆ ನೀವು ಕೇಳದಿರೋ
ನಿಂಗೊಂದ ಛಾನ್ಸು ಕೊಡುವಿನೆರೋ
ಹಾಡುತಾ ಆಡುತಾ ನಮ್ಮ ಪುಟ್ಟು
ಹಾಕಿದ ಉದ್ಯಾನವನವ ಒಂದು ಸುತ್ತು
ಹಿಂದಿನ ಚಕ್ರಕ್ಕೆ ಮುಳ್ಳೊಂದು ಚುಚ್ಚಿತ್ತು
ಠುಸ್ಸೆಂದು ಅದರೊಳ ಗಾಳಿ ಇಲ್ಲವಾಗಿತ್ತು
ಸೈಕಲಿಂದ ಕೆಳಗೆ ಬಿದ್ದ
ಆಸರೆ ಇಲ್ಲದೇ ಮೇಲೇಳೇದಾಗಿದ್ದ
ಪೆಡಲು ಬಾರಿನ ಮಧ್ಯೆ ಕಾಲು
ಅರಳಿದ್ದ ಮುಖ ಜೋಲು ಜೋಲು
ಏಳಲಾಗದೇ ನೋವೆಂದು ಒದರಿದ್ದ
ರಾಮುವಿನ ಆಸರೆಯಲಿ ಮನೆ ಸೇರಿದ್ದ
ಕಾಲಿನ ಮೂಳೆ ಮುರಿದಿತ್ತು
ನೋವಿನಿಂದ ಕಣ್ಣೀರು ಸುರಿದಿತ್ತು
ಅಪ್ಪ ಅಮ್ಮಗೆ ತಿಳಿಯದೇ ಸೈಕಲಿಗೆ ಬಂದದ್ದು ತಪ್ಪೆಂದರಿವಾಗಿತ್ತು.
ಸುಪ್ತದೀಪ್ತಿ :
ಬೇಸಿಗೆ ರಜೆಯಲಿ ಬಾಡಿಗೆ ಸೈಕಲು
ಜೊತೆಯಲಿ ನಡೆದರು ಬೀದಿಯ ಮಕ್ಕಳು
ಊರಿನ ತೋಪಲಿ ಹೊಸದೇ ಆಟ
ಅರಿಯದ ಕಿರಿಯಗೆ ಹಿರಿಯನ ಪಾಠ
ಕತ್ತರಿ ಕಾಲು ಹಾಕುತ ಏರು
ಪೆಡಲ್ ತುಳಿದು ಹಿಡಿ ಹ್ಯಾಂಡಲ್ ಬಾರು
ಹಾದಿಯ ಮೇಲೆ ಇರಬೇಕು ಗಮನ
ಕಲಿಕೆಯೇನಲ್ಲ ರಾಕೆಟ್ ವಿಜ್ಞಾನ
ನೀನೂ ಬಾರಮ್ಮ, ಮುಂದಿನ ಸುತ್ತಿಗೆ
ನಾವಿದ್ದೇವೆ ಭಯಬೇಡ, ಹತ್ತು ಮೆಲ್ಲಗೆ
ಎಲ್ಲರಿಗೂ ಇದೆ ಸಮಯಾವಕಾಶ
ಕಲಿಕೆಗೆ ಕೊಡುವನು ಸೈಕಲಂಗಡಿ ಪಾಷ
Posted by ಅಮರ at 11:30 am 2 ಕವನ/ಬರಹಗಳು
Friday 26 June, 2009
ಚಿತ್ರ ೧೦೮
ತವಿಶ್ರೀ:
ಕರ್ಣಕುಂಡಲ
ಕೃಪಾ ತಾಯಿಯಿಲ್ಲದ ತಬ್ಬಲಿ. ಹುಟ್ಟಿದ ಕೂಡಲೇ ಆಕೆಯ ತಾಯಿ ತೀರಿ ಹೋದಳು. ತದನಂತರದಿಂದ ತಂದೆಯೇ ತಾಯಿಯ ಸ್ಥಾನವನ್ನೂ ಹೊತ್ತು ಸಾಕಿ ಸಲುಹುತ್ತಿರುವನು. ಕಡುಬಡತನದಲ್ಲಿರುವ ತಂದೆಯ ನೊಗಕ್ಕೆ ಸಾಥಿ ಕೊಟ್ಟು ಜೀವನಬಂಡಿಯನ್ನು ಸಾಗಿಸಲು ಮುಂದೆ ಬಂದಿದ್ದವಳು ಕರುಣಾ. ಆಕೆಯ ಅಕಾಲಿಕ ಮರಣದಿಂದ ಕಂಗೆಟ್ಟ ತಂದೆ ಕೃಷ್ಣಪ್ಪ, ಮಗುವಿಗೆ ಮಲತಾಯಿಯ ಸೋಂಕು ತಟ್ಟದಿರಲೆಂದೆ ಮರು ಮದುವೆ ಆಗಲಿಲ್ಲ.
ಕರುಣಾ ಸಾಯುವ ಸಮಯದಲ್ಲಿ ಅವಳ ಮೈ ಮೇಲಿದ್ದ ಆಭರಣವೆಂದರೆ ಒಂದು ಜೊತೆ ಕಿವಿಯೋಲೆ. ಮದುವೆಯ ಸಮಯದಲ್ಲಿ ತನ್ನ ತಾಯಿಯ ಮನೆಯಿಂದ ಬಳುವಳಿಯಾಗಿ ಬಂದ ಕಿವಿಯೋಲೆಯನ್ನು ಅವಳು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಆಕೆಯ ನೆನಪಾಗಿ ತಂದೆ ಕೃಷ್ಣಪ್ಪ ಪುಟ್ಟ ಕೃಪಾಳಿಗೆ ಓಲೆಯನ್ನು ಕಿವಿಗೇರಿಸಿದ್ದನು. ಎಂದಿಗೂ ಬಿಟ್ಟಿರಲಾರದ ಆ ಕಿವಿಯೋಲೆ, ಮಹಾಭಾರತದ ಕರ್ಣನ ಪ್ರೀತಿಯ ಕರ್ಣಕುಂಡಲಗಳಷ್ಟೇ ಅಪ್ರತಿಮವಾದುದೆಂದರೆ ಅತಿಶಯೋಕ್ತಿಯಲ್ಲ.
ಒಂದು ದಿನ ಬೆಳಗ್ಗೆ ಕೃಪಾ ಎದ್ದು ಹಲ್ಲುಜ್ಜುತ್ತಿರುವಾಗ, ಅವಳ ಕಿವಿಯಲ್ಲಿ ಕಿವಿಯೋಲೆ ಕಾಣದೇ, ಕೃಷ್ಣಪ್ಪನಿಗೆ ಘಾಬರಿಯಾಯಿತು. ಇದರ ಬಗ್ಗೆ ಇನ್ನೂ ತಿಳಿವರಿಯದ ಆಕೆಯ ಮನಸ್ಸಿಗೆ ಎಷ್ಟು ನೋವಾಗಬಹುದೆಂಬುದನ್ನು ಅರಿತ ಆತ, ತಕ್ಷಣ ಮನೆಯೆಲ್ಲವನ್ನೂ ಜಾಲಾಡಿದನು. ಆದರೂ ಕಾಣಸಿಗದ, ಕಿವಿಯೋಲೆಯಂತೆಯೇ ಇರುವ ಇನ್ನೊಂದು ಜೊತೆ ಓಲೆಯನ್ನು. ಆಕೆಗೆ ತಿಳಿಯದಂತೆ ಬೇಗ ಅಂಗಡಿಯಿಂದ ತರಲೆಂದು ಹೊರಟನು. ಆ ಬೆಳಗಿನ ಜಾವದಲ್ಲಿ ಯಾವ ಅಂಗಡಿ ತಾನೇ ತೆರೆದಿರುತ್ತದೆ. ಚಿಂತಿತನಾದ ಕೃಷ್ಣಪ್ಪ, ತನ್ನ ಮಗಳ ಅಳು ಮೋರೆಯನ್ನು ನೋಡುವ ಶಕ್ತಿಯಿರದೇ, ಓಲೆಯ ಅಂಗಡಿ ತೆರೆದು, ತಾನು ಮನೆಗೆ ಅದನ್ನು ತರುವವರೆವಿಗೂ ಮಗಳ ಕಣ್ತಪ್ಪಿಸುವುದೇ ಕ್ಷೇಮವೆಂದೆ ಹೊರಗೇ ಉಳಿದನು.
ಈ ಮಧ್ಯೆ ರಾತ್ರಿ ಇದ್ದಕ್ಕಿದ್ದಂತೆ ಕಿವಿನೋವು ಹೆಚ್ಚಾಗಿ, ಕೃಪಾ ನಿದ್ರೆಯಿಂದ ಎಚ್ಚತ್ತಳು. ತನ್ನನ್ನು ತಾಯಿ ತಂದೆ ಎರಡೂ ಸ್ಥಾನದಲ್ಲಿ ಕಾಪಾಡುತ್ತಿರುವ ಕೃಷ್ಣಪ್ಪನನ್ನು ಎಬ್ಬಿಸಿ ತೊಂದರೆ ಕೊಡಬಾರದೆಂದು ತಾನೇ, ಕಿವಿನೋವಿನ ಔಷಧಿಯನ್ನು ಹಾಕಿಕೊಂಡಳು. ಹೀಗೆ ಹಾಕಿಕೊಳ್ಳುವಾಗ, ಓಲೆ ಅಡ್ಡ ಬಾರದಿರಲೆಂದು ಅದನ್ನು ತೆಗೆದು, ದಿಂಬಿನ ಕೆಳಗಿಟ್ಟಿದ್ದಳು. ಬೆಳಗ್ಗೆ ಎದ್ದು ಹಲ್ಲುಜ್ಜಿದ ನಂತರ ಓಲೆಯನ್ನು ಹಾಕಿಕೊಳ್ಳೋಣವೆಂದುಕೊಂಡಿದ್ದಳು.
ಹಲ್ಲುಜ್ಜಿ ಓಲೆ ಏರಿಸಿಕೊಂಡು, ಅಡುಗೆ ಮನೆಯೊಳಗೆ ಕಾಲಿಟ್ಟ ಕೃಪಾ ತನ್ನ ತಂದೆಯನ್ನು ಕಾಣದಾದಳು. ಮನೆಯೆಲ್ಲಾ ಹುಡುಕಿದರೂ, ಅಕ್ಕ ಪಕ್ಕದವರೆಲ್ಲ್ರರಲ್ಲೂ ಕೇಳಿದರೂ, ತಂದೆಯ ಸುದ್ದಿ ತಿಳಿಯದೇ ಹೋಗಿ, ಆತನ ಪ್ರಾಣಕ್ಕೇನಾದರೂ ಅಪಾಯವಾಯಿತೇ ಎಂಬ ಭಯ ಆಕೆಯನ್ನಾವರಿಸತೊಡಗಿತು.
ಮುಂದಿನದು ... ಓದುಗರ ತಲೆಯೊಳಗೆ ಬಿಟ್ಟದ್ದು ... :)
Posted by ಅಮರ at 11:46 am 1 ಕವನ/ಬರಹಗಳು
Wednesday 17 June, 2009
ಚಿತ್ರ ೧೦೭
ತಲೆಯ ಮೇಲೆ ಕುಟ್ಟಿ
ಒಳಗೆ ಬಾ ಕುಟ್ಟಿಗನೇ
ಪ್ಲಾಸ್ಟಿಕ್ಕಲ್ಲವೋ ಇದು
ಚಿಂತನೆಯ ಚಿಲುಮೆಯು
ಕುಟ್ಟಿಸಿಕೊಳ್ಳಲು
ಕಾಯುತಿಹುವು ಎನ್ನೆದೆಯ ೧೦೪ ಕೀಲಿಗಳು
ಏಟು ತಿಂದರೂ ಓಡಿಹೋಗದಂತಿರಲು
ಗಟ್ಟಿಯಾಗಿ ಹಿಡಿದಿಹುದು
ಒಂದು ಮಣೆಯು
ಯಾವುದೇ ಭಾಷೆಯ ಅರಿವಿಲ್ಲದಿದ್ದರೇನಂತೆ
ಕುಟ್ಟಿ ಕುಟ್ಟಿ ತೋರಿಸಬಹುದು
ಅದರಲೂ ಮನ ಬಂದಂತೆ
ತನು ತೋರಿದಂತೆ
ನಿನ್ನ ತಲೆಯಲಿರದ ಜಾಣ್ಮೆಯ
ನಿನ್ನ ಅಣತಿಯೇ ಎನಗೆ ಪ್ರಾಪ್ತಿ
ಅದರದೂ ಕೊಡುವೆ ಗಣತಿ
ನಿನಗೆ ತಿಳಿದಿಹುದು ಡಾಸು ಲೈನಕ್ಸು
ಎನಗೆಲ್ಲವೂ ಬೂಸು ಬುರ್ನಾಸು
Posted by ಅಮರ at 3:04 pm 2 ಕವನ/ಬರಹಗಳು
Wednesday 10 June, 2009
Wednesday 3 June, 2009
ಚಿತ್ರ ೧೦೫
ಎಚ್ಚೆತ್ಕೋಳಿ ಮುಂಚೇಯ
ಎಚ್ಚೆತ್ಕೋಳಿ ಮುಂಚೇಯ
ಇಳಿವಯಸ್ನಾಗ್ ಇವ್ನಿ
ದುಡ್ಯಾಕಾಯ್ತದಾ ನಿಮ್ಮಂಗೆ ?
ನಾನಲ್ಲೇಯವ್ವಾ ಜವ್ನಿ
ಒಟ್ಟೆ-ಬಟ್ಟೆ ಕಟ್ಟೀ ಸಾಕ್ದೆ
ದುಡ್ದು ಮದ್ವಿ ಆಗೋಗಂಟ
ಅಗ್ಲು-ರಾತ್ರೆ ಅನ್ದೇ ತಂದಾಕ್ದೆ
ಸಾಲನೋವಾಲನೋ ಮಾಡಿ
ನೂರ್ ಸುಳ್ಳೇಳಿ ನಿನ್ಮದ್ವೆ ಮಾಡ್ದೆ
ಗಂಡ ಓದ್ಮ್ಯಾಲೆ ನಿನ್ನಣ್ಣನ್ ಓದ್ಗೆ
ಅಡ ಇಟ್ಟ ಬೂಮಿ ಬುಡ್ಸ್ಕಳ್ಳಾಕಾಗ್ದೆ
ಅವನ್ಮದ್ವೇಗೆ ಅಂತ ಮಾರಾಕ್ದೆ
ಅವ್ನೋ ಇದ್ ಮನೆ ಬರ್ಸ್ಕಂಡ
ಇದ್ಬದ್ದ ವಡ್ವೆ ಹೆಂಡ್ತಿಗಂತ ಕಸ್ಕೊಂಡ
ಇಳೀವಯಸ್ನಾಗೆ ಕಲ್ಲೊರ್ತೀನಿ
ಮರ ಚೆಕ್ಕೆ ಮಾರಿ ಒಟ್ಟೆ ಒರ್ಕೋತಿವ್ನಿ
ಕಡೀತಾ ಇಲ್ವೇ ನೀವೂ
ಅಣ್ಣೂ ಅಂಪ್ಲೂ ಕೊಡೋ ಮರಾವ
ಬಗೀತಾ ಇಲ್ವಾ ಅನ್ನಾಕೊಡೋ
ತಾಯಿ ಒಟ್ಟೇಯ....
ಜ್ವಾಕೆ ಕಣ್ರಪ್ಪಾ ಜ್ವಾಕೆ..!!
ಉರಿಸ್ಬ್ಯಾಡಿ ಅಡ್ದ್ ಒಟ್ಟೇಯಾ
ಏನ್ ಆಕ್ಕಂಡೀರಿ ಕಡ್ದ್ ಕಟ್ಟೇಯಾ?
ಅದ್ಕೇ ಏಳ್ತಿವ್ನಿ ಎಚ್ಚೆತ್ಕೊಳ್ಳಿ
ನೀವು ಎತ್ತೋರ್ಗೆ ಬೂತಾಯ್ಗೆ
ಮಾಡ್ದಂಗೆ ನಿಮ್ಮಕ್ಕ್ಳೂ ನಿಮಗೆ
ಮಾಡೋದಕ್ಕೆ ಮುಂಚೇಯಾ
Posted by ಅಮರ at 5:27 pm 2 ಕವನ/ಬರಹಗಳು
Friday 29 May, 2009
Thursday 7 May, 2009
Wednesday 29 April, 2009
Wednesday 22 April, 2009
ಚಿತ್ರ ೧೦೧
ವಂದನೆಗಳು
ಚಿತ್ರಕವನ ಬಳಗ
...
ಸುಗ್ಗಿ ಬಂತೋ ಅಣ್ಣ ಸುಗ್ಗಿ
ನಮ್ಮೆಲ್ಲರ ಹೃದಯ ಹಿಗ್ಗಿ ಹಿಗ್ಗಿ
ಮನೆ ಅಂಗಳದಲಿ ತುಂಬುವುದು ಕಾಳು
ಎಲ್ಲರಿಗೂ ಸಿಗುವುದು ಕೂಳು
ಮಾರಣ್ಣ ಸಿಂಗಣ್ಣ
ಕೊಯ್ಲು ಕೊಯುವರು ಹೊಲದಲಿ
ಮೂಟೆ ಮೂಟೆ ರಾಗಿ ಭತ್ತ
ಸುರಿವರು ಮಾಳದಲಿ
ಸಾಕವ್ವ ಮಾರವ್ವ
ಬನ್ನೀರೆ ಜೊಳ್ಳನು ತೂರೂವಾ
ಜೊಳ್ಳ ತೂರಿ
ಕಾಳನು ಕೇರೂವಾ
ಕಾಳಲೇ ಕೂಳು
ಕೂಳಲೇ ಬಾಳು
ಎಲ್ಲ ಸೇರಿ ದುಡಿಯುವಾ
ದೇಶದ ನಾಡಿಯ ಮಿಡಿಯುವಾ
Posted by ಅಮರ at 5:16 pm 2 ಕವನ/ಬರಹಗಳು
Tuesday 14 April, 2009
ಚಿತ್ರ ೧೦೦
ತವಿಶ್ರೀ:
ಪ್ರತಿಕ್ರಿಯೆಗಳು ಬರಲಿ, ಬರದಿರಲಿ, ಮನ ಮುದುಡಿಸಿಕೊಳ್ಳದೆಯೇ, ವಾರಕ್ಕೊಂದರಂತೆ ಶತಕ ಚಿತ್ರಗಳನ್ನು ಇತ್ತು, ಅನಿಸಿಕೆಗಳನ್ನು ಮೂಡಿಸಲು ಹಲವು ಮನಗಳಿಗೆ ಅನುವು ಮಾಡಿ ಕೊಟ್ಟ ಅಮರ, ಶ್ರೀ ಮತ್ತು ಶ್ರೀನಿಧಿಯವರುಗಳಿಗೆ ಮನಃಪೂರ್ವಕ ಕೃತಜ್ಞತೆಗಳು ಹಾಗೂ ಅಭಿನಂದನೆಗಳು
ಸ್ವಹಿತದೆಡೆಗೇ ಮನ ಮತ್ತೆ ವಸಂತನಾಗಮನ
ಮತ್ತೆ ಮತ್ತೆ ತರು ಲತೆಗಳಲಿ ನವ ಚೇತನ
ನೇಸರನ ತೀಕ್ಷಣತೆಗೆ ಒತ್ತು ಕೊಡುವ ಕಾಲ
ಬರುತಿದೆ ನೀರಿಗಾಗಿ ಬಾಯಿ ಬಿಡುವ ದಿನ
ಮೇಲೇರುತಿದೆ ಉರಿ ಬಿಸಿಲು
ಕಾಲ್ಕೆಳಗೆ ಸುಡು ಕಲ್ನಾರು
ಮರ ಒಣಗಿದರೇನು
ಗಿಡ ಚಿಗುರಿದರೇನು
ಇಂದಿನ ಹಸಿವು ತಣಿಸಬೇಕು
ಮಕ್ಕಳ ನಾಳೆ ಸುಗಮವಾಗಿರಿಸಿರಬೇಕು
ಇದೇ ನನ್ನ ಹಂಬಲ
ಇದಕಾಗೇ ನನ್ನ ಚಿಂತನೆ
ಒಮ್ಮೆ ಕೂಗಿದೆ ನಾನು
ಮಗು ಬೀಳುತಿರಲು,
ಅದ ಹಾಡೆಂದರು
ತಾವು ನಲಿದರು :(
ಹಸಿವಲಿ ನರಳಿದೆ
ಅದನರ್ಥ ಮಾಡಿಕೊಳ್ಳದವರು
ಅದನೂ ಹಾಡೆಂದರು
ಕಥೆ ಕವನ ಕಟ್ಟಿದರು
ಕವಿಯಂತೆ ಮನ ಓಡಿಸಿದರು
ಕಪಿಯಂತೆ ಮರದೆಡೆಗೆ ನೋಟವಿಟ್ಟರು
ನನ್ನಿಂದ ಇನ್ನೂ ಹೆಚ್ಚು ಅಪೇಕ್ಷಿಸಿದರು
ಎನ್ನ ತಿಳಿಯದಾದರು
ತಿಳಿಯಲು ಇಚ್ಛೆಯೂ ಇಲ್ಲದವರು
ತಮ್ಮ ಸಂತಸವೇ ಮಿಗಿಲೆಂದವರು
ನನ್ನಳಲು ನನಗೇ ಗೊತ್ತು
ಮೂಢರಿಗೇನು ತಿಳಿದೀತು!
ನನ್ನ ಸ್ನೇಹಿತೆ ಕಾಗೆಯ
ವೈರಿ ಎಂದರು, ಎನ್ನ ಹೊನ್ನಶೂಲಕೇರಿಸಿದರು
ನಿಮಗೇನು ಗೊತ್ತು? ಹೇಗೆ ತಾನೆ ಗೊತ್ತಾಗಬೇಕು
ನಾನೇನೇ ಉಲಿದರೂ ಹಾಡೆಂದು ಅರ್ಥೈಸುವಿರಿ
Posted by ಅಮರ at 11:22 am 1 ಕವನ/ಬರಹಗಳು
Thursday 9 April, 2009
ಚಿತ್ರ ೯೯
ಮೊನಚು ಹುಲ್ಲಿನ ಕೊನೆಯಲಿ
ಗಟ್ಟಿ ಹಿಡಿತದಿ ಕುಳಿತಿಹ
ಮುತ್ತಿನೋಪಾದಿಯಲಿಹ
ಯಾವ ಕ್ಷಣದಲೂ ಮಾಯವಾಗಬಹುದಾದ
ಗರಿಕೆಯ ಒಣಗದಂತೆ ಕಾಪಾಡುವುದು
ದರ್ಪದ ತೋರಿಕೆಯ ಕೊಡುತಿಹುದು
ಈಗಿಹ ಗುಳ್ಳೆ ಇನ್ನೊಂದು ಕ್ಷಣ ಇರದಿರಬಹುದು
ಹಸುರು ಗರಿಕೆ ಒಣಹುಲ್ಲಾಗುವುದು
ಗುಳ್ಳೆ ಒಡೆಯಲೂಬಹುದು
ಆಸಕ್ತಿಯ ವಿರಕ್ತಿಗೊಳಿಸಬಹುದು
ಮುತ್ತಾಗಲೂಬಹುದು
ಮುಡಿಯೇರಬಹುದು
ರಾಗಕೆ ವಿರಾಗವ ತೋರುವುದು
ವಿರಾಗದಿ ತರಂಗವ ತೂರುವುದು
ಹುಟ್ಟಿಗೆ ಸಾವನು ತೋರಿಪುದು
ಜೀವ ಜೀವನ ಮರ್ಮವ ಜಗಕೆ ಸಾರುವುದು
ಬಿಳಿ ಬಣ್ಣಕೆ ಜೀವ ಕೊಡುವುದು
ಕಾಮನಬಿಲ್ಲನು ಸೃಷ್ಟಿಸಬಹುದು
ಜೀವರಾಶಿಗೆ ತಂಪೆರೆಯಬಹುದು
ಜ್ವಾಲೆಯ ನಂದಿಸಲೂ ತಿಳಿದಿಹುದು
ಆತನ ಕರುಣೆ ಇಲ್ಲದೇ
ನಿಂತಿಲ್ಲ ಈ ಹುಲ್ಲು
ನಿಲಲಾರದು - ಅಲ್ಲಾಡಲಾರದು
ಎಲ್ಲವೂ ಆತನ ಕರುಣೆಗೆ ಕಾದಿಹುದು
ಈ ಗುಳ್ಳೆ ತಿಳಿ ಹೇಳುತಿದೆ
ಜೀವನದ ಮರ್ಮ
ಅಂಟಿಯೂ ಅಂಟದಂತಿರು
ಇಂದಿಹುದು ಇಲ್ಲದಿಹುದು
ಮುಂದಿನ ಕ್ಷಣ ಇಲ್ಲದಿರಬಹುದು
Posted by ಅಮರ at 9:07 am 1 ಕವನ/ಬರಹಗಳು
Wednesday 1 April, 2009
ಚಿತ್ರ ೯೮
ಮೌನ ಗೋಪುರ (ಟವರ್ ಆಫ್ ಸೈಲೆನ್ಸ್)
ನಾನೂ ನೀನೂ ಜೋಡಿ
ಹೆಜ್ಜೆ ಇಡುವ ಅತ್ತ ಇತ್ತ ನೋಡಿ
ಕೆಳಗಿಹರು ಕುಶಾಗ್ರಮತಿಗಳು
ಸ್ವರ್ಗ ತೋರಿಸುವುದು ವಿದ್ಯುತ್ತಿನ ತಂತಿಗಳು
ಕಾಲ ಬುಡದಲ್ಲಿಲ್ಲ ಆಹಾರ
ನೆಲದ ಹುಳು ಹೊಟ್ಟೆ ಸೇರಲೊಲ್ಲ
ಹಸಿವ ಮರೆಯುವುದೆಂತು
ಹರಿದು ತಿನ್ನಲು ಕಾಯುತಿಹರು ಕೆಳಗೆ ನಿಂತು
ದೂರವಿರಲಿ ಜೋಡಿ ತಂತಿಗಳು
ಮಸಣ ಸೇರಿಸುವುವು ಅವು ಸೇರಲು
ಸೇರದಿರದಂತೆ ಜೋಪಾನವಿರಲಿ
ಬಿಸಿಲೇನು ಮಳೆಯೇನು ಕಾಲು ಗಟ್ಟಿ ಇರಲಿ
ಮಾನವನ ಹೆಣ ಬಂದು ಬೀಳಲಿ ಬಾವಿಯಲಿ
ನಮ್ಮೀರ್ವರ ನಿರೀಕ್ಷೆ ಅದೇ ಆಗಿರಲಿ
ನೀರಿರದ ಬಾವಿಯಲಿ ನಮ್ಮ ಸರಕು ಬರಲು
ಗುರಿಯಿರಲಿ ಬಾವಿಯೊಳ ನಾವು ಸೇರಲು
ನಿಸರ್ಗದಿಂದ ಬಂದ ಜೀವ ನಿಸರ್ಗ ಸೇರಲಂತೆ
ಇದೇ ಅವರ ತತ್ವವಂತೆ
ನಾವುಗಳೇ ಮೋಕ್ಷ ತೋರಿಪ ದೈವವಂತೆ
ಏನಾದರೇನಂತೆ ಎಂತಾದರೇನಂತೆ
ನಮ್ಮ ಹೊಟ್ಟೆ ತುಂಬಿದರೆ ಸಾಕಂತೆ
ಇದೇ ನಮ್ಮ ತತ್ವವಂತೆ
Posted by ಅಮರ at 9:50 am 1 ಕವನ/ಬರಹಗಳು
Wednesday 25 March, 2009
ಚಿತ್ರ ೯೭
ಅಮ್ಮ-ಮಗಳು
ಅಮ್ಮ ನಾ ನಿನ್ನ ಮೊರೆ ಹೋಗುವೆ
ನೀನಲ್ಲದೆ ನನಗಿನ್ಯಾರೇ?
ತಲೆಯ ನಾಲಗೆಯಲಿ ನೇವರಿಸುವವರಾರೇ?
ಎನಗೆ ಉಣಗೊಡುವವರಾರೇ?
ಮಗಳೇ ನೀ ನನ್ನ ಜಗವೇ
ನಿನ್ನ ಬಿಟ್ಟು ಎನ್ನ ಜೀವ ಇರುವುದೇ?
ನಿನಗಾಗೇ ಹಾಲನು ತುಂಬಿರುವೆ
ಪಾಪಿಗಳು ಬರುವ ಮೊದಲೇ ನೀ ಕುಡಿಯೇ!
ಸೂಚ್ಯವಾಗಿ ನಾನಾಡಿಸುವೆ ಕತ್ತಿನ ಗೆಜ್ಜೆ
ಕೋಪದಲಿ ಮೂಡಿಸುವೆ ಹೆಜ್ಜೆಯ ಘಾಢ
ಪಾಪಿಗಳೆಲ್ಲೆಂದು ಅತ್ತಿತ್ತ ನೋಡುತಿಹ ಕಂಗಳು
ಬಳಿ ನೀನಿರಲು ಮೊಗದಲಿ ಮುದದಲಿ ಅರಳಿದ ಮುಗುಳು
ಕಾಲಿಗೆ ಸಿಲುಕುತಿಹ ಅಂಬೆಗಾಲ ಕಂದ
ಜೋಡಿ ಹಲ್ಲಿನ ನಗುವು ಎಂತಹ ಚಂದ
ತಂಟೆಕೋರಗೆ ನಾ ಕೊಡುವೆ ಮುದ್ದಿನ ಗುದ್ದು
ಕೇಕೆ ಹಾಕಿ ನಗುವುದೇ ಅಂಗಳದಿ ಸದ್ದು
ವಿ.ಸೂ: ಸ್ವಲ್ಪ ವ್ಯಸ್ತನಿರುವ ಕಾರಣ ಬರವಣಿಗೆಯ ಕಡೆಗೆ ಗಮನ ಹರಿಸಲಾಗಿಲ್ಲ.
Posted by ಅಮರ at 5:54 pm 2 ಕವನ/ಬರಹಗಳು
Thursday 19 March, 2009
ಚಿತ್ರ ೯೬
ಚೈತ್ರೋದಯ
ತಣ್ಣನೆಯ ಹಳದಿ ಕೆಂಪು ನಸು ಹಸುರು ಚಿಗುರು
ಚಿಗುರೆಡೆದು ಹೂವ ತೋರುವವು ಮಾವು ಹೊಂಗೆ
ತುಂಬಿ ತುಳುಕಲಿ ಬತ್ತುತಿಹ ಕಾವೇರಿ ತುಂಗೆ
ಹಾಡಿ ಪಾಡಲಿ ಮರೆಯಾಗುತಿಹ ಕೋಗಿಲೆ
ಕಾಲ ಉರುಳಿ ಉರುಳಿ ಸಾಗುತಿದೆ
ತಡೆಯಲ್ಯಾರಿಂದಲೂ ಆಗದೇ?
ಆಗದು, ಏನೇ ಮಾಡಬಲ್ಲ, ಏನನೂ ತಡೆಯಬಲ್ಲ
ಹುಲುಮಾನವನಿಂದಂತೂ ಅದಾಗದು!
ಸರ್ವಜಿತುವಿನಂತಿರಲಿಲ್ಲ ಸರ್ವಧಾರಿ
ಸರ್ವಧಾರಿಯಂತಲ್ಲ ವಿರೋಧಿ
ಎಲ್ಲ ವರುಷಗಳಲ್ಲೂ ಏಳು ಬೀಳು
ಬರುವ ವರುಷದಲಿ ಹಾಗಾಗದಿರಲೆಂದು ಕೇಳು
ಕಣ್ಣಿಗೆ ಕಂಡುದು ನೋವು ಸಾವುಗಳು ಸಾವಿರಾರು
ಕಣ್ಣಿಗೆ ಕಾಣದದು ನಲಿವು ಜನನಗಳು ಲಕ್ಷಾಂತರ
ಕಂಡುದರಿಂದ ಮನಕೆ ದುಃಖ ದುಮ್ಮಾನ ಆತಂಕ
ಕಾಣದುದರಿಂದ ಎಲ್ಲವೂ ನಿರಾತಂಕ
ಬಲ್ಲವರು ನುಡಿದುದು
ಬದಲಾವಣೆಯೇ ಜಗದ ನಿಯಮ
ಮೋಡದಿ ಕಾಲೂರಿ ನಡೆಯುವುದೂ
ಇನ್ನೊಂದು ಆಯಾಮ
ಹರಿದು ಹಂಚಿ ಹೋಗಿಹುದು ಈ ದಿರಿಸು
ತೇಪೆ ಹಚ್ಚಿ ಒಟ್ಟು ಮಾಡಿದರೆ ನೋಡಲು ಸೊಗಸು
ಏರಲಿ ಮೈ ಮೇಲೆ ಹೊಸ ವರುಷದ ಹೊಸ ಬಟ್ಟೆ
ಹಳೆಯ ನೆನಪು ಮಾಸದಿರುವಂತೆ ಮೂಲೆಯಲಿರಲಿ ಹಳೆ ಬಟ್ಟೆ
ಹೊಸ ವರುಷದಾಗಮನದಿ ಮನಗಳಲಿ ಹರುಷ
ಇದೇ ಎಲ್ಲರ ನಿರೀಕ್ಷೆ
ಕಳೆದುದ ಮತ್ತೆ ನಿರೀಕ್ಷಿಸುವುದು ಬೇಡ
ಹರುಷಕಾಗಿ ಎದುರಿಸಬಲ್ಲೆವು ಎಲ್ಲ ತೆರದ ಪರೀಕ್ಷೆ
Posted by ಅಮರ at 11:16 am 1 ಕವನ/ಬರಹಗಳು
Thursday 12 March, 2009
ಚಿತ್ರ ೯೫
ನನ್ನಳಲು
ಜಗವು ಮದವೇರಿದ ಬಿಸಿಯಾರುವಿಕೆಯ ಆಲಯ
ಮನದಲಿ ಭುಗಿಲೇಳುವಿಕೆಯ ಸಮಯ
ತಂಬೆಳಕಿನಲಿ ತಂಪೆರೆಯುತಿಹ ತಂಗಾಳಿ
ಮನ ಸೋತುಹೋಗುತಿದೆ ನಿಸರ್ಗದ ಬಳಿ
ದಿಗಂತವ ಸೇರುತಿಹುದು ಕಲ್ಪವೃಕ್ಷದ ಬೀಡು
ಕಾಣ ಹೊರಟಿಹೆ ಕಾಣದ ಕಾಡು
ಕಾಯಕದಿ ಪಡೆದದ್ದೇ ಬೆನ್ನ ಹಿಂದೆ
ಕರ್ಮಫಲ ಅರುಹಬೇಕಿದೆ ಸರ್ವಶಕ್ತನ ಮುಂದೆ
ಬಳಿ ಸಾಗಲು ದಾಟಿಯೇನೇ ಆಳದ ನದಿಪಾತ್ರ
ಆಸರೆಯೊಂದೇ ಅಂಬಿಗ ಆತನ ದೋಣಿ
ನಂಬದಿರಲಾದೀತೇ ಆತನ ದೋಣಿ
ನಂಬದಿರೆ ಬಾಳಿಲ್ಲ ನಂಬಿದುದೇ ಬದುಕೆಲ್ಲ
ಆಳದ ನದಿಯ ದಾಟಿಸಲು ನಂಬಿಹೆನು
ಅಂಬಿಗನ ಉದ್ದನೆಯ ಊರುಗೋಲು
ಜಗವ ಪಾರಿಸಲು ಬಿಡದೆ ಉಸುರುತಿಹೆ
ಶ್ರೀಹರಿಯ ಬಳಿ ನನ್ನಳಲು
Posted by ಅಮರ at 9:10 am 2 ಕವನ/ಬರಹಗಳು
Wednesday 4 March, 2009
ಚಿತ್ರ ೯೪
ಬೇಡಕ್ಕಾ ಬೇಡ
ಅಕ್ಕ
ಬಾರೋ ತಮ್ಮ ಏರಿ ಏರಿ ಹೋಗುವಾ
ಏರಿ ಇಳಿದು ನೀರ ಕಡೆಗೆ ಸಾಗುವಾ
ನೀರಲಿಳಿದು ದೋಣಿಗಿಳಿದು
ತೇಲಿ ತೇಲಿ ಹೋಗುವಾ
ಮನೆಯಲಾರಿಗೂ ಹೇಳಬೇಡ
ನೀರಗಿಳಿದು ಮುತ್ತು ತರುವ ಬಾರ
ಕಾಣದೂರಿಗೆ ಹೋಗಿ ಬರುವ
ಕ್ಷಣ ಕಾಲ ಜಗವ ಮರೆವ ಬಾರ
ತಮ್ಮ
ಬೇಡಾಕ್ಕ ಬೇಡ
ಯಾರಿಗೂ ಹೇಳದೇ ಹೋಗುವುದು ಬೇಡ
ನೀರಿಗಿಳಿಯುವುದು ಬೇಡ
ಜಗವ ಮರೆಯುವುದು ಬೇಡ
ನಾ ಅಮ್ಮನ ಬಿಡುಲಾರೆ
ಅಪ್ಪನ ಬಿರುಗಣ್ಣಿಗೆ ತುತ್ತಾಗಲಾರೆ
ನಿನ್ನನೂ ನಾ ಬಿಡಲಾರೆ
ಇಬ್ಬರೂ ಹೋಗುವುದು ಬೇಡ
ಅಕ್ಕ
ಬೆಳೆಯೋ ಕಂದಾ!
ಎತ್ತರಕೆ ಬೆಳೆ
ಆಲದ ಮರದಂತೆ ಬೆಳೆ
ಜಗವ ನೋಡು
ಅತ್ತಿತ್ತ ಓಡು
ಅದೋ ಕರೆಯುತ್ತಿದೆ ಕಾಡು
ಒಮ್ಮೆಯಾದರೂ ಅಲ್ಲಿ ಬಿಡೋಣ ಬೀಡು
ಅವುಚಿದ ಮೈ ಕೈ ಝಾಡಿಸು
ಹೆದರಿಕೆಯ ಹೋಗಲಾಡಿಸು
ಅಪ್ಪನಂತೆ ನೀ ಎತ್ತರಕೆ ಬೆಳೆ
ತಮ್ಮ
ಯಾಕೋ ಹೆದರಿಕೆಯಾಗುತಿದೆ
ನಿನ್ನ ಮೇಲಿನ ನಂಬಿಕೆ ಮಾಯವಾಗುತ್ತಿದೆ
ಸಂಜೆಯೂಟವ ಕೊಡುವವರಾರೆ
ಪುಸ್ತಕ ಬಳಪ ಕೊಡಿಸುವವರಾರೆ
ಪಾಠವ ಹೇಳಿಕೊಡುವವರಾರೆ
ನಿದ್ರೆ ಬರಲು ಹೊದಿಸುವವರಾರೆ
ಬೇಡಕ್ಕಾ ಬೇಡ
ನೀನೂ ಹೋಗಬೇಡ
ನನ್ನ ಜೊತೆ ಎಂದಿಗೂ ನೀನಿರು
ನಾವೆಲ್ಲಿಗೂ ಹೋಗುವುದು ಬೇಡ
ಸುನಾಥ:
ವಿಶ್ವಾಸ ತುಂಬಿದ, ನಗುಮುಖದ ಪುಟ್ಟ ಪಯಣಿಗನೆ,
ನಿನ್ನ ದೀರ್ಘಪ್ರಯಾಣಕ್ಕೆ ಶುಭಾಶಯಗಳು.
Posted by ಅಮರ at 9:50 am 2 ಕವನ/ಬರಹಗಳು
Wednesday 25 February, 2009
ಚಿತ್ರ ೯೩
ದೀಪದಿಂದ ದೀಪ ಹಚ್ಚು
ದೀಪದಿಂದ ದೀಪ ಹಚ್ಚು
ಜಗವ ಬೆಳಗಲಿ ಕಿಚ್ಚು
ರಾತ್ರಿಯೂ ತೋರುವುದು ಹಗಲು
ಮುಚ್ಚಿಟ್ಟಿದ್ದೆಲ್ಲವೂ ಬಟಾ ಬಯಲು
ದೀಪಗಳ ರಂಗವಲ್ಲಿ
ಹೂಗಳ ಮೇಲೋಗರ
ಬಣ್ಣಗಳ ಸಿಂಚನೆ
ಕಣ್ಣೋಟದಲಿ ಮನರಂಜನೆ
ಹಚ್ಚಿಹುದು ದೀಪಗಳು ಹದಿನೈದು
ಒಂದೊಂದು ದೀಪದ ಸುತ್ತ ಹೂ ಇಪ್ಪತ್ತೈದು
ಮುಸ್ಸಂಜೆಯಲಿ ಬರುವಳು ಮಹಾಲಕ್ಷ್ಮಿ
ಸುವರ್ಣವ ತರುವಳು ಕನಕಲಕ್ಷ್ಮಿ
ಪುಟ್ಟ ದೀಪಕೆ ಬತ್ತಿ ಹೊಸೆದು
ತುಪ್ಪ ಹಾಕಿ ಜಗಕೆ ಬೆಳಕ ಚೆಲ್ಲಲು
ನಲಿಯುತ ಉಲಿಯುತ ಆಡುವ ದೀಪ ಆತ್ಮದ ದ್ಯೋತಕ
ನಂದಿ ಬೆಳಕು ಆರಲು ಜಗದಲಿ ಸೂತಕ
ಸುನಾಥ :
ಮನವ ಬೆಳಗುತಿದೆ ಈ ಜ್ಯೋತಿ.
Posted by ಅಮರ at 6:50 pm 3 ಕವನ/ಬರಹಗಳು
Wednesday 18 February, 2009
ಚಿತ್ರ ೯೨
ತವಿಶ್ರೀ :
ವಾಹನ ನಿಲು ತಾಣ
ಅತ್ತ ಪೋಗಲೋ ಇಲ್ಲ
ಇತ್ತ ಬರಲೋ - ದ್ವಂದ್ವದಲೇ ಕಾಲ ಕಳೆವುದು
ಅತ್ತ ನೋಡುತಿಹನಾತ
ಇತ್ತ ನೋಡುತಿಹನೀತ
ಆತನ ದಿಟ್ಟಿ ಈತನ ಕಿಸೆಯ ಕಡೆ
ಈತನ ವಾರೆ ನೋಟ ಆಕೆಯ ಕಡೆ
ಪುಟ್ಟಕ್ಕನಿಗೊಂದು ಕೈಗೂಸು
ಆ ಕೂಸಿನ ಮೂಗಲಿ ಗೊಣ್ಣೆ
ಮುದುಕಪ್ಪನಿಗೆ ಊರುಗೋಲಂತೆ ಎಳೆ ಸತಿ
ಆತನಿಗೆ ಜರದಾ ಅರೆಯಲು ಆಕೆಯ ಕೈಯಲಿ ಬೆಣ್ಣೆ
ಒಂದೆಡೆ ಮಲಯಾಳೀ ಲುಂಗಿ
ಇನ್ನೊಂದೆಡೆ ಬಣ್ಣ ಬಣ್ಣದ ಅಂಗಿ
ಪೈಜಾಮ ಈ ಕಡೆ ಆದರೆ
ಆ ಕಡೆ ಉದ್ದನೆಯ ಷರಾಯಿ
ತೀಡಿದ ಮೀಸೆ ನುಣ್ಣಗೆ ಬೋಳಿಸಿದ ಗಡ್ಡ
ಕತ್ತರಿಯ ಮೊಗವನ್ನೇ ಕಾಣದವ ದಡ್ಡ
ಒಬ್ಬನ ಕೈಯಲಿ ಗಣೇಶ ಬೀಡಿ
ಇನ್ನೊಬ್ಬನಲಿ ವಿಲಾಯತೀ ಮೋಟು ಸಿಗರೇಟು
ನೀರೂರಿಸುವ ಪಾಲಕ್ ಪನ್ನೀರು, ಗುಲಾಬ್ ಜಾಮೂನು
ತಣ್ಣಗಿರುವ ಬೋರ್ಡಿನ ಮೇಲೆ ಬಿಸಿನೀರು ಬಾದಾಮಿ ಹಾಲು
ಎಲ್ಲ ಬೋರ್ಡಿನಲ್ಲಿ ಮಾತ್ರ ಕಾಣಲು ಲಭ್ಯ
ಬಾಯಿಗೆ ಸಿಗಲೊಲ್ಲದು ಇವುಗಳ ಸೌಲಭ್ಯ
ಊರಿನಲ್ಲೆಲ್ಲೂ ಮಳೆಯೇ ಇಲ್ಲ
ಬಿದ್ದ ಹನಿ ಹನಿಯೂ ಆವಿಯಾಗುವುದು
ಬಸ್ ಸ್ಟ್ಯಾಂಡಿನಲಿ ತೇಪೆ ಹಚ್ಚಿದ ಮಾಡು
ಹನಿಯ ಒಗ್ಗೂಡಿಸಿ ಧುಮ್ಮಿಕ್ಕುವ ಮಳೆಯನಿಲ್ಲಿ ನೋಡು
ಈ ಬಸ್ಸು ಮುಂಬಯಿಗೆ ಹೋಗುವುದೋ
ಬೆಂಗಳೂರಿಗೆ ಹೋಗುವುದೋ
ತಿಳಿಸದಾದ ಬೋರ್ಡು
ಬರುವುದು ಹೋಗುವುದು
ಹೋಗಲೆಂದೇ ಬರುವುದು
ಅಲ್ಲಿಹುದು ಬೆಂಕಿ ಆರಿಸಲು ಬಕೆಟ್ಟು
ನೀರಿಲ್ಲಿ ಮಳಲಿಲ್ಲ - ಅವುಗಳ ಸಖ್ಯದಲಿ
ಆರಿಲಿರುವ ಬೆಂಕಿಯೂ
ಆರಲೊಲಿಯದು
ಕಂಟ್ರೋಲರ್ ಬಿಟ್ಟಿ ಬೀಡಿ ಸೇದಿ,
ಪುಕ್ಕಟೆ ದೋಸೆ ತಿಂದು ಕಾಫಿ ಕುಡಿದು
ಗ್ಯಾಸ್ ಬಿಡುತಿಹನು
ಮನೆಯಲ್ಲಿದ್ದ ಸಾಮಾನೆಲ್ಲ ಮೂಟೆಕಟ್ಟಿ ಬಸ್ ಟಾಪಿಗೇರಲು ಕಾಯುತಿಹುದು
ಸುಧಾ ಮಯೂರ ತುಷಾರ ಉದಯವಾಣಿಗಳ
ಭರಾಟೆಯ ಮಾರಾಟ - ಎಲ್ಲಕ್ಕೂ ಬೆಲೆ ಇದೆ
ಮಾರಾಟ ಆಗುವುದಿದೆ - ಕಾಯುವಿಕೆಗೆ ಬೆಲೆ ಇಲ್ಲ ಕಾಲವಿಲ್ಲ
ಬಸ್ಸು ಮಾತ್ರ ಕಾಣಲೊಲ್ಲದು, ಬಂದರೂ ನಮ್ಮೂರಿಗೆ ಹೋಗಲೊಲ್ಲದು
ನಮ್ಮನು ಹೊತ್ತೊಯ್ಯಲಾರದದು
ಹೊತ್ತರೂ ಸ್ಪ್ಯಾನರ್, ಜ್ಯಾಕ್, ಸ್ಟೆಪ್ನಿಗಳ ಜಾಡು ಹುಡುಕುವುದು
ಹೀಗಿಹುದು ನಮ್ಮೂರಿನ ರಸ್ತೆ
ಎಲ್ಲೆಲ್ಲೂ ಅವ್ಯವಸ್ಥೆ
ಮೂಲೆಯಲಿ ಗಬ್ಬು
ನಾರುವ ಮೂತ್ರಾಲಯದ
ಬಗ್ಗೆ ಹೇಳುವುದೋ ಅಥವಾ ಸುಮ್ಮನಿರುವುದೋ
ಹೇಳದಿದ್ದರೆ ಸಾಕಷ್ಟೆ - ತಿಂದದ್ದು ಹೊರಬರಬಾರದು
Posted by ಅಮರ at 4:15 pm 1 ಕವನ/ಬರಹಗಳು
Wednesday 11 February, 2009
ಚಿತ್ರ ೯೧
ತವಿಶ್ರೀ :
ಕಲಿತ ಪಾಠ
ಅಂಟಿಯೂ ಅಂಟದಂತಿಹುದು
ತನ್ನೆದೆಯ ಮೇಲಿನ ನೀರ ಗುಳ್ಳೆಯ ಹೊರುವುದು
ಹನಿ ಹನಿಯಾಗಿ ಬೀಳುವುದ ತಡೆವುದು
ತಡೆದು ಬಾಯಾರಿದವಗೆ ಉಣಿಸುವುದು
ತನಗೆ ಮಾತ್ರ ಹನಿ ಮಾತ್ರವೂ ಹಿಡಿದಿಟ್ಟುಕೊಳ್ಳದು
ಆರೈಕೆ ಇಲ್ಲದೆ ನಿಸರ್ಗದಿ ಬೆಳೆವುದು
ಮಂದಿ ಮಂದೆಗಳಿಗೆ ಉಣಿಸುವುದು
ಅನಂತ ಆಗಸ ಏರುವ ಛಾತಿ ಇದ್ದರೂ ಕೆಳಗೇ ನೋಡುತಿಹುದು
ಸ್ವಾರ್ಥಿಗೆ ನಿಸ್ವಾರ್ಥದರಿವು ಮೂಡಿಸುವುದು
ಎನಗಿಂತ ಕಿರಿಯರಿಲ್ಲ
ಎನಗೆಲ್ಲ ಹಿರಿಯರೆಲ್ಲ ಎಂದು ಸಾರುವುದು
ಇಂದಿದ್ದು ನಾಳೆಗೆ ಹೇಳಹೆಸರಿಲ್ಲದೆ ಹೋಗುವುದು
ತಡವಲು ಗಡುಸಿನಂತೆ ತೋರುವುದು
ಚಿವುಟಲು ಹಸುಗೂಸಿನಂತೆ ಕಣ್ಣೀರ್ಗರೆವುದು
ಎದುರಾಡದು, ಹಿಂಸಿಸದು
ಉತ್ತಮ ಪಾರಮಾರ್ಥಿಕ ಚಿಂತನೆಗೆ ಒತ್ತು ನೀಡುತಿಹುದು
ಅಂಟಿಯೂ ಅಂಟದಿರು
ಯಾರಿಗೆ ಯಾರೂ ಅಲ್ಲ
ಆತ್ಮಕೆ ನಂಟಿಲ್ಲ ಅಂಟಿಲ್ಲ ಎಂಬುದ
ಸುಲಭದಿ ಜೀವನ ಪರಿಯ ತಿಳಿ ಹೇಳುವುದು
ಇದರಿಂದ ಕಲಿವ ಪಾಠ ಇಹುದಲ್ಲವೇ?
ನಿಸರ್ಗದ ಅಂಶವಿದು ದೈವಾಂಶವಲ್ಲವೇ?
ಇದ ತಿಳಿವುದು ಸುಲಭವಲ್ಲವೇ
ನಿಸರ್ಗವ ರಕ್ಷಿಸೋಣ - ನಮ್ಮನು ನಾವು ರಕ್ಷಿಸೋಣ
Posted by ಅಮರ at 5:21 pm 3 ಕವನ/ಬರಹಗಳು
Wednesday 4 February, 2009
ಚಿತ್ರ ೯೦
ದೈವಾಂಶ
ದೂರ್ ಸೆ ದೇಖಾ ತೊ ಪತ್ಥರ್ ಪಡಾ ಥ
ಓ ತೊ ಅಪನಾ ಸಾಯಿಬಾಬಾ ಥ
ತೋ ಹೈ ದಾತ ತೋ ಹೈ ವಿಧಾತಾ
ತುಮ್ಹೀ ಪಿತಾ ತುಮ್ಹೀತೊ ಮಾತಾ
ತೂನೆ ಸಬಕೀ ಬಿಗಡೀ ಬನಾಯೀ ...
ತೂನೆ ಅಪನಾ ರೂಪ ದಿಖಲಾಯಿರೇ
ರವಿಯ ಪ್ರಖರತೆ ತಾಳಲಾಗುವುದೇ!
ಹೊಂಬೆಳಕಿನ ಶಕ್ತಿಯನಾದರೂ
ತಡೆಯಲಾಗುವುದೇ?
ತೇಜೋಮಯ ಆತ್ಮಗಳೂ, ಆ ಶಕ್ತಿಯ
ಮುಂದೆ ಗೌಣವೆನಿಸದಿರದೇ?
ಮೆಟ್ಟಿಲು ಹತ್ತಲೂ ಬೇಕು ಶಕ್ತಿ
ಇಳಿಯಲೂ ಬೇಕು ಶಕ್ತಿ
ಕೂರಲೂ ಬೇಕು ಶಕ್ತಿ
ನೇಸರನೇ ಆ ಶಕ್ತಿಯ ಮೂಲ
ಶಕ್ತಿ ಇಲ್ಲದಿರೆ ಯುಕ್ತಿಯಾದರೂ ಆದೀತು
ಯುಕ್ತಿಗೆ ಬೇಕು ಮನದಲಿ ಶಕ್ತಿ
ಯುಕ್ತಿಗೂ ಬೇಕು ಶಕ್ತಿ
ಆ ಶಕ್ತಿಯೂ ನೇಸರನ ಯುಕ್ತಿ
ಏರುವವರೆಗೆ ಬೇಕು ಯುಕ್ತಿ ಶಕ್ತಿ
ಏರಿದವ ತೋರುವನು ವಿರಕ್ತಿ
ವಿರಕ್ತಿ ಮೂಡಲು ಬೇಕು ಭಕ್ತಿ
ಎಂದಿಗೂ ಆತನಲಿರಲಿ ಭಕ್ತಿ
ನೇಸರನು ನಿಸರ್ಗದ ಅಂಶ
ಆ ಅಂಶಭೂತ ದೈವಾಂಶ
ಆತನಿಗೆಂದಿಗೂ ನಾ ಶರಣ
ಧೂಳಾಗಿರುವೆ ನಿನ್ನ ಚರಣ
ನಿನ್ನ ಕೃಪೆಯವರೆಗೆ ಎನಗಿಲ್ಲ ಮರಣ
ತೋರು ದೇವ ಎನ್ನ ಮೇಲೆ ಕರುಣ
Posted by ಅಮರ at 5:04 pm 2 ಕವನ/ಬರಹಗಳು
Wednesday 28 January, 2009
ಚಿತ್ರ ೮೯
ಅನುಭವ ಪಾಠಶಾಲೆ
ಸೇರು ಅಚ್ಚೇರು ಪಾವು ಚಟಾಕು
ಚಟಾಕಿಗೊಂದು ಕೊಸರು
ಇಂದಾಗಿಹುದು ಕೈ ಮೈ ಕೆಸರು
ಮುಂದಾಗುವುದು ಇವರ ಬಾಳು ಮೊಸರು
ವಾದದಲ್ಲಿ ಸೇರಾಗುವನು ಸವ್ವಾಸೇರು
ವಾಹನ ರಿಪೇರಿಯಲ್ಲಿ ವಯಸ್ಸಿಗೆ ಮೀರಿದ ಮೇರು
ತಿಳಿಯದ ವಿಷಯವೇ ಇಲ್ಲ
ಅಕ್ಷರ ಜ್ಞಾನ ಮಾತ್ರ ಇಲ್ಲವೇ ಇಲ್ಲ
ಅಬ್ರಹಾಂ ಸಲೀಂ ಮುಕ್ತರ್ ರೇ ಇವನ ಗುರುಗಳು
ಸರಿಯಾಗಿ ಕಲಿಯದಿದ್ದರೆ ಸ್ಪ್ಯಾನರ್ ನ ಏಟುಗಳು
ಮೈ ಕೈ ಎಲ್ಲೆಲ್ಲೂ ಗಾಯದ ಕಲೆಗಳು
ನಯ ನಾಜೂಕನ್ನೇ ಅರಿಯದ ಅಬ್ಬೇಪಾರಿಗಳು
ಈ ಅಮೀರನ ಹಿಂದೆ ನಾಲ್ಕು ಮರಿಗಳು
ನೋಡಲು ಮಾತ್ರ ಅವರು ಕುರಿಗಳು
ಕೆಣಕಿದರೆ ಹಸಿದ ಹೆಬ್ಬುಲಿಗಳು
ಅಮ್ಮೀಜಾನ್ ಮುಂದೆ ಬಾಲ ಮುದುರಿದ ಮರಿಗಳು
ಮನೆಯೊಳಗಿರುವುದು ಒಂದೇ ಕೋಣೆ
ದಿನಕೊಂದು ಊಟಕೆ ಒಂದೇ ತಾಟು
ಮಲಗಲು ನೆಲವೇ ಸುಪ್ಪತ್ತಿಗೆ
ಮಳೆ ಬಿಸಿಲು ಛಳಿಗೆ ಛಾವಣಿಯ ಹೊದಿಕೆ
ನಿನ್ನೆಯ ನೆನಪಿಲ್ಲ
ನಾಳೆಯ ಪರಿವೆ ಇಲ್ಲ
ಎಲ್ಲಿಂದ ಬಂದೆವೆಂಬ ಅರಿವಂತೂ ಇಲ್ಲವೇ ಇಲ್ಲ
ಎಲ್ಲಿಗೆ ಹೋಗುವುದೋ ಗೊತ್ತಿಲ್ಲ
ಆಗಾಗ ಬರುವರು ಕ್ಯಾಮೆರಾ ಹಿಡಿದ ಮಂದಿ
ಎಮ್ಮ ಚಿತ್ರವೇ ಅವರಿಗೆ ಆಹಾರಕೆ ದಾರಿ
ಸ್ನಾನ ಕಾಣದ ಮೈ, ಜಡ್ಡುಗಟ್ಟಿದ ಮುಖ
ದಲ್ಲಿ ಅದೇನು ಕಾಣುವರೋ, ಕಾಣಿಸುವರೋ!
ತಿಳಿದ ಅಯ್ಯನವರು ಹೇಳುವರು -
ನಾವೇ ಹೆಚ್ಚಿನ ತಿಳುವಳಿಕೆಯವರು
ಯಾರಿಗೂ ದೊರೆಯದ, ನಮಗೆ ದೊರೆತಿಹುದು
ಅನುಭವ ಪಾಠಶಾಲೆ
ಕುಮಾರಸ್ವಾಮಿ ಕಡಾಕೊಳ್ಳ:
ಹಳ್ಳಿ ಬೀಡು
ಹಳ್ಳಿ ಬೀಡಿದು
ಒಳ್ಳೆ ನಾಡಿದು
ಸುತ್ತೆಲ್ಲ ನೋಡಲು
ಗರಿಯ ಗುಡಿಸಲು
ತುಂಟ ಪೋರರು
ಮುಗುದ ಹಸುಳೆಯರು
ಕುಂಟಬಿಲ್ಲೆಯನಾಡುವ
ಹೆದಗಾರ ಬಂಟರಿವರು
ಪಾಟದ ಪರಿವಿಲ್ಲ
ಆಟದಲಿ ಬಿಡುವಿಲ್ಲ
ಕೊಳಕಿಗೆ ಕನಲಿಲ್ಲ
ನಲಿವಿಗೆ ಕೊರಗಿಲ್ಲ
ನಡುಹಗಲ ಬಿಸಿಲು
ಬೆಳಕಿನ ಗಮ್ಮತ್ತು
ಬಿಸಿಲಗುದೆರೆಯ ಬೆನ್ನೇರಿ
ಬೆವರು ಹನಿದಿತ್ತು
ಮೇಲು ಕೀಳಿಲ್ಲ
ಬಡವ ಬಲ್ಲಿದನ ಗೆಂಟಿಲ್ಲ
ಮೊಗದಲ್ಲೋಂದೇ ಕಳೆ
ನಗುತ ನಲಿವ ಕಳೆ
ಇಲ್ಲಿಲ್ಲ ಸೋಗು
ಏನೀದ್ದರು ಸೀದ
ಹೊರಹೊಳಗೂ ಒಂದೇ
ಇದೇ ಅಲ್ಲವೆ ನಾಕ!!
ಸ್ವಾಮಿ.ಕಡಾಕೊಳ್ಳ
ಪುಣೆ
Posted by ಅಮರ at 2:40 pm 3 ಕವನ/ಬರಹಗಳು
Wednesday 21 January, 2009
ಚಿತ್ರ ೮೮
ಗೇರ್ ಗೇರ್ ಮಂಗಣ್ಣ
ಕಡ್ಲೆಕಾಯ್ ತಿನ್ನಣ್ಣ
ಕೈ ಮೈ ಕೆರ್ಕೊಳಣ್ಣ
ನಿನ್ನ ನೋಡಿ ನಾ ನಗೋಣ
ಹಿಂದೆ ಹೇಳ್ತಿದ್ರು
ಮಂಗನ ಆಟ ನೋಡಲು ಚಂದ
ಅದನ ನೋಡಲೆಂದೇ ನೀ ತಾ ಬಂದ
ಹಾದಿ ಬೀದಿಯಲೂ ಮಂಗನ ನೋಡುತ ನಿಂದ
ಈಗೆಲ್ಲಿ ಮಂಗ
ಮಂಗ ಮಾಯ - ಬದಲಿಗೆ
ಎಲ್ಲೆಲ್ಲಿ ನೋಡಲೂ ಕಾಣುವಿರಿ
ಜೋಡಿ ಮಂಗ
ಕಂಬಿಯ ಮೇಲೆ ಕುಳಿತಿಹೆ ನಾನಿಲ್ಲಿ
ಕಲ್ಲು ಹಾಸಿನ ಮೇಲೆ ಜೋಡಿ ಎದುರಲ್ಲಿ
ನಾ ಮಾಡುತಿಹ ಚೇಷ್ಟೆ ಈಗೆಲ್ಲಿ
ಅದನೆಲ್ಲ ಅಭ್ಯಸಿಸುತಿಹರು ಅವರಲ್ಲಿ
ಮಂಗನೆದುರು ನೋಡಿ ಜೋಡಿ ಮಂಗ
ಲಾಲ್ ಬಾಗ್ ಕೆರೆ ಏರಿಯ ಮೇಲೆ
ಮರದ ಕೆಳಗೆ ತಣ್ಣನೆಯ ನೆರಳಲ್ಲಿ
ಅವರನೇ ನೋಡಲು ಪೋಲೀ ರಂಗ
ಸಂಜೆಯ ಇಳಿಗೆಂಪಿಗೆ
ಮೈ ಕಾಯುಸುತಿಹೆ
ರಾತ್ರಿಯ ತಂಪು ತಡೆಯಲು
ಶಕ್ತಿ ಶೇಖರಿಸುತಿಹೆ
ಜನಗಳೆಲ್ಲ ಬರುತಿಹರಿಲ್ಲಿ
ತೋಟವ ನೋಡಲಲ್ಲ
ಎನ್ನ ನೋಡುವ ತವಕವಂತೂ ಇಲ್ಲ
ನಿಸರ್ಗವ ಸವಿಯಲಂತೂ ಅಲ್ಲವೇ ಅಲ್ಲ
ಈ ಜೋಡಿಗಳ ಲಲ್ಲೆ ಸರಸ ಸಲ್ಲಾಪ ನೋಡಲು
ತಿನಿಸಿಲ್ಲದೇ ಬಾಯಿ ಚಪ್ಪರಿಸಲು
ಈಗ ಹೇಳಿ
ಮೋಜಿನ ವಸ್ತು - ಚಿತ್ರದಲಿ ಕಾಣಿಸುತಿಹ ಮಂಗವೋ ಅಥವಾ ಮರೆಯಲಿರುವ ಆ ಜೋಡಿಯೋ! :P
Posted by ಅಮರ at 12:39 pm 1 ಕವನ/ಬರಹಗಳು
Tuesday 13 January, 2009
ಚಿತ್ರ ೮೭
ರಾಗಿ ಬೆಳಸೆ
ರಾಗಿಯ ಹೊಲ ನೋಡು
ತೂಗೋ ತೆನೆ ಕಾಣು
ಬೆಳೆಸೆಯ ಬಯಕೆ ಬಂತು
ಬಾಯಲ್ಲ ನೀರು ತುಂಬ್ತು
ಉತ್ತರೆ ಮಳೆ ಬಂತು
ಒತ್ತಾಗಿ ಕಾಳ್ ತುಂಬ್ತು
ಮ್ಯಾರ್ಯಾಗೆ ಮೆದೆ ನಿಂನ್ತು
ಸುಗ್ಗಿ ಸೊಗಸು ಅಂತು
ಹಕ್ಕಿಗಳ ಹಿಂಡು ಬಂತು
ಇರುವೆಗಳು ಸಾಲುಕಂಡ್ತು
ಹುಟ್ಟೆಲ್ಲ ತಿಂದುಉಡ್ತು
ಉಳಿದಿದ್ದು ನಮಗಂತು
ಒಕ್ಕಲಿಗನ ಕಣತುಂಬ್ತು
ತುರುಗಳಿಗೆ ಮೇವಾಯ್ತು
ವರುಶಕ್ಕೆ ಕೂಳಾಯ್ತು
ನಾಳೆನ ತಲ್ಲಣ ಬಿಡ್ತು
ಹೆಂಗಪ್ಪಿನ ರಾಗಿಕಾಳು
ತಿಂದರೆ ಬ್ಯಾನೇ ದೂರು
ರಾಗಿತಿಂದವನ ನೋಡು
ಬೀಮನೇ ಅಂತೆ ಕೇಳು
ಕುಡಿಯ ಬೆಳಸಿದ ಕಾಳು
ಬಿಸಿಲು ಮಳೆಯಲಿ ಮಿಂದು
ಉತ್ತುಬಿತ್ತಿ ಬೆವರ ಹುಯ್ದು
ಹೊತ್ತು ಹೊತ್ತಿನಲಿ ಎದ್ದು
ಕುಡಿಯಾನ ಕೆಲಸದಾಗ
ನಾಡಿನ ಬದುಕೇ ಐತಿ
ಅಂತ ಒಕ್ಕಲಿಗನಿಗೆ
ನೂರು ಸಾಣು ಹೇಳು
ಕುಡಿಯ-ಒಕ್ಕಲಿಗ
ಸಾಣು- ವಂದನೆ, ನಮನ
ಹುಟ್ಟು- ಸೃಷ್ಠಿ
ಕುಕೂಊ(ಕುಮಾರಸ್ವಾಮಿ ಕಡಾಕೊಳ್ಳ)
ತವಿಶ್ರೀ:
ಭೂದೇವಿ
ಪುಟ್ಟ ಪುಟ್ಟ ಕಾಳು
ಕಪ್ಪು ಕಂದು ಬಣ್ಣದ ಕಾಳು
ಜೀವಿಗಳೆಲ್ಲವುಕೂ ಕೂಳು
ಕಣ್ಣು ಹಾಯುವವರೆವಿಗೆ ಸಾಲು ಸಾಲು
ಕೋಟಿ ಕೋಟಿ ಜೀವಿಗಳ ಶಕ್ತಿದಾತ
ಅಣುವಿನಲಣುವಿನ ರೂಪ
ಇದನರಿಯದೇ ಹತ್ತಿಕ್ಕುವವನು ಗಾಂಪ
ಜಗದಳಿವುಳಿವಿಗೆ ಆಗುವನು ಶಾಪ
ತುಂಬಿ ತುಳುಕುತ್ತಿದೆ ರಾಗಿ ತೆನೆ
ಬಡವನ ಹೊಟ್ಟೆ ತುಂಬುವ ಹಾಲ್ಗೆನೆ
ಕಟಾವಿಗೆ ಕಾಯುತ್ತಿದೆ
ಜೊಳ್ಳು ತೂರಿ ಗಟ್ಟಿ ಇಳಿಸಲು ಕಾಯುತ್ತಿದೆ
ಮಾರುಕಟ್ಟೆಯಲ್ಲಿ ರಾರಾಜಿಸಲು ಹವಣಿಸುತ್ತಿದೆ
ಮುದ್ದೆಯ ನುಂಗಲು ಲೋಕದ ಬಾಯಿ ಕಾಯುತ್ತಿದೆ
ಇದಲ್ಲವೇ ಭೂ ತಾಯಿಯ ಕರುಣೆ
ಹೊರುವಳು ಒಂದು ಕಾಳಿಗೆ ಕೋಟಿ ಕಾಳು ಕೊಡುವ ಬವಣೆ
ಕಡು ಕಷ್ಟಗಳ ಕೊಡಲೂ, ಹೊಮ್ಮಿಸುವಳು ಶಾಂತಿ ರೂಪ
ತಿಳಿ ಈಕೆಯೇ ದೈವ ಸ್ವರೂಪ
Posted by ಅಮರ at 4:14 pm 3 ಕವನ/ಬರಹಗಳು