Monday 28 May, 2007

ಚಿತ್ರ - 3



ಕವನಗಳನ್ನು ಕವನಗಳಿಗೆ ಮೀಸಲಾದ ಜಾಗದಲ್ಲಿ ಬರೆಯಿರಿ. ಆಮೇಲೆ ಕವನಗಳನ್ನು ಅಲ್ಲಿಂದ ಇಲ್ಲಿಗೆ ಎತ್ತಿಕೊಳ್ಳಲಾಗುವುದು.
..
..ಕವನಗಳು-ಬರಹಗಳು...
.
..ಸಿಂಧು Sindhu ವಿಮರ್ಶಿಸಿದ್ದು ಹೀಗೆ.....
ನೇರನೋಟದಲ್ಲಿ ಕಂಡದ್ದನ್ನು ಅರಿಯುವುದೇ ಕಷ್ಟ.
ನಾವು ಕಾರ್ಪಯಣಿಗರ ಓಟಕ್ಕೆ ಬೇಕು
ದೂರಗ್ರಾಹೀ ಹಿನ್ನೋಟದ ಕನ್ನಡಿ...
ಕಂಡದ್ದು ಕಾಣಿಸಿದ್ದಕ್ಕಿಂತ ಹತ್ತಿರವಿರಬಹುದು,
ಕಾಣಬೇಕಾದ್ದು ಮರೆಯಾಗಿರಬಹುದು..
ಭಾವಲಹರಿಯ ಕಣ್ಣು ಹಾಯಿಸಿದರೆ, ರಸ್ತೆ ಕಾಣದೆ ಹೋಗಲೂ ಬಹುದು.
ಇದು ಕಷ್ಟದ ಹಾದಿ..
ಎಚ್ಚರದ ಪಯಣಿಗನೇ ಬೇಕು.
ಬದುಕಿನಂತಲ್ಲ..
ಪಯಣಿಸುತ್ತ ಕನಸ ಕಾಣುವಂತಿಲ್ಲ..
ಲಹರಿಯಲಿ ತೇಲುವಂತಿಲ್ಲ..
ಬೇಸರ ಬೇಡ ಮಿರುಗುವ ಪುಟ್ಟ ಕನ್ನಡಿಯೇ,
ನೀನಿಲ್ಲದೆ ನಾವು ಆಧುನಿಕರ ಓಟದ ಬದುಕು ಸಾಗುವುದಿಲ್ಲ.
ಹೇಗೆ ಹೇಳಲಿ,
ಒಳ(ಆಳ)ನೋಟದ ವಾಕಿಂಗ್ ಅಭ್ಯಾಸವಾಗಲೂಬಹುದು..

SHREE ನೆನಪುಗಳಿಗೆ ಸಿಕ್ಕಾಪಟ್ಟೆ ಬೈದುಕೊಂಡರು...

ಹಗಲು-ಕನಸು..
ಬಾಳ ಹಾದಿ ಇನ್ನುಳಿದಿದೆ ದೂರ
ಆದರ್ಯಾಕೋ ಹಿನ್ನೋಟದ ಸೆಳೆತ...
ಇಂದು ನಡೆವ ದಾರಿಯಲ್ಲಿದೆ ಹಸಿರು..
ಹಿಂದೆ ತಿರುಗಿದರೆ ಕಾಣದು ಉಸಿರು..
ಖಾಲಿತನದ ಮೇಲ್ಯಾಕೀ ಮೋಹ?
ಮನದ mUಲೆಯಲಿ ಯಾಕೀ ಮೌನ?
ಮರೆಯಲು ಸಾಧ್ಯವೆ ನಮ್ಮ ನೆನ್ನೆಗಳು?
ಬೆನ್ನಟ್ಟಿ ಬರುತಿಹವು ನಿನ್ನ ನೆನಪುಗಳು...
ಬಿಟ್ಟೆ ದಾರಿ, ಹೋಗಲೊಲ್ಲವು ಮುಂದೆ,
ನಾ ಹೋಗಲೆಳಸಿದರೆ ಅಪ್ಪಿಕೊಳುವವು ಬಿಡದೆ
..............
ಬದುಕಿಗೆ ಕನ್ನಡಿ ಸಾಕ್ಷಿಯಾಗಿಹುದು
ಮನದ ಕನ್ನಡಿಗೆ ಮಬ್ಬು ಕವಿದಿಹುದು
ಒರಸಿಹೆ ನೋವು, ನಗುವಿನ ನೀರ್ ಚೆಲ್ಲಿ
ತಿಳಿಯದ ಕನ್ನಡಿ - ನೆಲಸಿಹೆ ನೀನಿಲ್ಲಿ
ಬಾನ ವಿಸ್ತರವ ಬೊಗಸೆಗಿಳಿಸುವ ಚಪಲ
ದಿಟವ ಮರೆತು ಕನವರಿಸುವ ತವಕ
ಹೃದಯ ಹಕ್ಕಿಯೊಲು ಹಾರಿದೆ ಇಂದು
ಕನಸಿಗೆಲ್ಲಿ ಕೊನೆ? ಬಾನಿರುವುದು ಮುಂದು...
ಬಾಳ ಹಾದಿ ಇನ್ನುಳಿದಿದೆ ದೂರ
ಆದರ್ಯಾಕೋ ಹಿನ್ನೋಟದ ಸೆಳೆತ.....


ಶ್ಯಾಮಾ ಕೂಡ ನೆನಪುಗಳಿಗೆ ಬೈದರು....
* * *
ನಿನ್ನ ನೆನಪುಗಳ ಗಾಳಿ
* * *
ನನ್ನ ನಿನ್ನೆಗಳನ್ನೆಲ್ಲ ಮರೆತೇ ಬಿಡಬೇಕೆಂದು ನಾ ಹೊರಟರೆ
ಮತ್ಯಾಕೆ ಅವು ನನ್ನ ಬೆನ್ನ ಬಿಡುತ್ತಿಲ್ಲ..
ಬಾಗಿ ನೋಡುತ್ತಿರುವ ಆ ಕನ್ನಡಿಯಲ್ಲಿ ಬರೀ ನಿನ್ನೆಗಳದೇ ಬಿಂಬ
ಆ ಹಸಿರು ಹಾಸಿನ ನೆಲದ ಮೇಲೆ
ನಡೆಯ ಹೊರಟರೆ ಅಲ್ಲಿ ಬೀಸುತ್ತಿದೆ
ಬರೀ ನಿನ್ನದೇ ನೆನಪುಗಳ ಗಾಳಿ...
ಒಂಟಿಯಾದರೂ ನಾ ಒಂಟಿಯಲ್ಲ
ನನ್ನ ಸುತ್ತಲಿವೆ ನಿನ್ನ ನೂರು ನೂರಾರು ನೆನಪುಗಳು
ನಿನ್ನೆಯ ಆ ನೋವುಗಳು...
ಮನವು ಏನೋ ಮಾತಡುತ್ತಿದೆ ಆದರೆ ಏನೊಂದೂ ಕೇಳುತ್ತಿಲ್ಲ
ಬರೀ ಆ ಹಸಿರು ಬಯಲಿನ ಹಾದಿಯಲ್ಲಿ
ನಿನ್ನ ನೆನಪುಗಳ ಗಾಳಿಯದೇ ಅಬ್ಬರ
ಮತ್ತೆ ಕನ್ನಡಿಯತ್ತ ತಿರುಗಿ ನೋಡಿದೆ,
ಈ ಸಾರಿ ಕನ್ನಡಿಯೆಲ್ಲ ಮಬ್ಬು ಮಬ್ಬು
ನಿನ್ನೆಗಳ ಬಿಂಬವೂ ಕಾಣಲಿಲ್ಲ
ಮುಂದೆ ಸಾಗೋಣವೆಂದು ನಡೆಯುತ್ತಿದ್ದ ದಾರಿಯತ್ತ ನೋಡಿದೆ ಅಲ್ಲೂ
ಆ ಹಸಿರು ಹಾಸಿನ ನೆಲ ಕಾಣಲಿಲ್ಲ,
ಬಹುಶಃ ನಿನ್ನ ನೆನಪಿನ ಗಾಳಿಗೆ
ಒಡ್ದಿದ ನನ್ನ ಕಣ್ಣುಗಳು ಮಂಜಾಗಿದ್ದವು.


ಭಾವಜೀವಿ... ತಮ್ಮನ್ನು ತಾವು ಕಳೆದುಕೊಂಡರು..!!

ಕಳೆದ ನಾನು!
*************
ಸೂರ್ಯ ಮುಳುಗುವ ಹೊತ್ತು, ಯೋಚಿಸಿದೆ,
ಭವದ ಹಾದಿಯೊಳು ಬಂದು ಹೋದವರೆಷ್ಟು ?
ಕನ್ನಡಿಯೊಳಗಿನ ಗಂಟಾದರು ಕೆಲವರು,
ಮುಂದೆ ಸರಿದಂತೆಲ್ಲಾ ಹಿಂದೆ ಓಟಕಿತ್ತರು ಹಲವರು,
ಚಿತ್ತದೊಳಗಣ ಚಿತ್ರ ಹೊಳೆಯುತ್ತಲೇ ನನ್ನೊಡನಿತ್ತು
ನನ್ನೊಳಗಿನ ಬೆಳಗನ್ನೂ ಮೀರಿ ಮಿಂಚುತ್ತಿತ್ತು.
ಹಿಂದಿಕ್ಕಿ ಬಂದುದೆಲ್ಲಾ ಅದರ ಎದೆಯಲ್ಲಿ
ಯಾರದೋ ಬಿಂಬ, ಆಗಸದ ಸಣ್ಣ ತುಣುಕು
ಸಾಯುತ್ತಿರುವ ಸೂರ್ಯ, ನನ್ನದೇ ದಾರಿ,
ನನ್ನ ನೆರಳು, ಎಲ್ಲವೂ ಅಲ್ಲಿತ್ತು,
ಆದರೂ ನಾನೇಕೆ ಅಲ್ಲಿ ಕಾಣುತ್ತಿಲ್ಲ!?

Satish ಹಿಂದೆ ನೋಡಿದರೆ ತಪ್ಪೇನಿಲ್ಲವೆಂದರು...
ಹಿನ್ನೋಟದ ಕಿರುತೆರೆ
ಚಿಕ್ಕದಿರಲಿ ಚೊಕ್ಕವಿರಲಿ ಹಿಂದೆ ನೋಡ್ವ ಕನ್ನಡಿ
ಹಸನಬಾಳ್ವೆಗದುವೆ ಮೂಲ ಸ್ವಚ್ಛವಾದ ನಡೆನುಡಿ
ದೂರದೃಶ್ಯ ದೊಡ್ಡದಾದ ಗಾಜಿನಲ್ಲಿ ಕಂಡರೆ
ಹಳೆಯದನೆಲ್ಲ ನೆನಪಿಸುವ ಹಿನ್ನೋಟದ ಕಿರುತೆರೆ.
ದೊಡ್ಡದನ್ನು ಚಿಕ್ಕದಾಗಿಸೊ ಪೀನ ಮಸೂರ
ಎದಿರುಬರುವ ಮುಂಬಾಳಿಗೆ ಒಂದು ಅಸರ
ಹಿತವಾದ ಬದುಕಿಗೆ ಎರಡು ಕಣ್ಣು ಸಾಲದೆ
ವೇಗವಾಗಿ ನಡೆವುದು ಹೇಗೆ ಹಿಂದೆ ನೋಡದೆ.
ಚಾಲಕನೋ ಪ್ರಯಾಣಿಕನೋ ಯಾರಾದರೇನಂತೆ
ಒಬ್ಬೊಬ್ಬರಿಗೂ ಅವರವರದೇ ಚಿಂತೆ
ಹಿನ್ನೋಟದಿಂದ ಹಲವರ ಬದುಕು ಉಲ್ಬಣ
ಕೆಲವರಿಗೆ ಹಿನ್ನೋಟವಿರದೆ ಬಣಬಣ.
ಹಿನ್ನೋಟದಿ ಬದುಕನ್ನು ನೋಡುವುದೇ ಸೊಗಸು
ಕಿರುತೆರೆಗೆ ಅಲ್ಪ ಸಮಯ ಮುಡುಪಿಡುವುದೇ ಲೇಸು
..


MD - ಜೀವನದ ಆಗುಹೋಗುಗಳು ಅತಿಸಹಜವೆಂದು ಸ್ವೀಕರಿಸುವ ನೋಟ ಬೀರುತ್ತಾರೆ...

ಜಗದ ಈ ಪಯಣದಲಿ
ಮುಂದೆ ಮುಂದ್ಮುಂದೆ ನೋಡಿಯೇ
ಚಲಿಸುತ್ತ
ರಸ್ತೆಯ ತಿರುವಿನಲ್ಲಿ ಭೇಟಿಯಾದ
ಪಯಣಿಗರನ್ನು ಮರೆಯುತ್ತ
ಸಾಗಿದೆ ಈ ಜೀವನ

ಅಚಾನಕ್ಕಾಗಿ
ಹೊಳೆದಿದೆ ಈಗ
ಇರಲಿ ಕಣ್ಣು,ಮುಂದಿನ ಅನಿರೀಕ್ಷಿತಗಳಿಗೆ !
ಮರೆಯದಿರಲಿ ದಾಟಿ ಹೋದ ಆ ಘಳಿಗೆ

ನೋಡೋಣ ಬಾ
ಕಾಣುವ ಅಪೂರ್ವ ಭೂತವನ್ನು
ಮನಸಿನ ಗಾಜಿನಲಿ

ಕೆಣಕೋಣ ಬಾ
ಮೂಡಿ ಮರೆತು ಹೋದ ಪ್ರೀತಿಯ ಚಕ್ಕೆಗಳನ್ನು
ನೆನಪಿನ ದೋಣಿಯಲಿ

ಇದ್ದುಕೊಂಡು ಸಾಗಿಕೊಂಡು ಇಂದಿನ ಉಸಿರಿನೊಂದಿಗೆ

Monday 21 May, 2007

ಎರಡನೆಯ ಚಿತ್ರ...








ಇದು ಕಿಶೋರ್ ಬರೆದ ತೈಲ ಚಿತ್ರ...

ಕವನಗಳನ್ನು ’ಕವನಗಳಿಗೆ' ಮೀಸಲಾದ ಜಾಗದಲ್ಲಿ ಬರೆಯಿರಿ. ಆಮೇಲೆ ಕವನಗಳನ್ನು ಅಲ್ಲಿಂದ ಇಲ್ಲಿಗೆ ಎತ್ತಿಕೊಳ್ಳಲಾಗುವುದು.

ಕವನಗಳು

ನಾಳಿನ ಬದುಕಿನ ಚಳಿಗೆ

ಇವತ್ತು ಬಾಲ್ಯದ ಬೆಚ್ಚನೆಯ ಸ್ವೆಟರ್ ತೊಟ್ಟು..

?!!!!

ಬೆಚ್ಚನೆ ಸ್ವೆಟರ್ ತೊಟ್ಟು,

ನಿಂತಿದ್ದಾಳೆ ಅಕ್ಕ,

ತೊಟ್ಟ ಅಂಗಿಯ ಕಾವಿನೊಡನೆ,

ಅಕ್ಕನ ಬೆಚ್ಚನೆ ಮಡಿಲು ಹೊದ್ದು

ನಿಂತವನು ಪುಟ್ಟ ತಮ್ಮ..

ತೂಗಿನಿಂತ ಪುಟ್ಟ ಜುಟ್ಟಿನ ಪುಟಾಣಿ ಪೋರಿ,

ತಮ್ಮನಿಗೋ ಅವಳು ದೊಡ್ಡ ಅಮ್ಮನದೇ ಇನ್ನೊಂದು ಪರಿ..

ಅವಳ ನೋಟ ಆಚೆಗೆ,

ಇವನ ನೋಟ ಈಚೆಗೆ,

ಹಿಡಿಯಲಿದ್ದಾರೆ ಇಬ್ಬರೂ ಕವಲು ದಾರಿ

ಬದುಕಿನ ಕಣ್ಣು ಮುಚ್ಚಾಲೆಯಾಟದಿ..

ನಾಳಿನ ಕತ್ತಲ ನೆರಳು ದೂರ ದಾರಿ

ಇಂದಿನ ಬಾಲ್ಯದಿ ಕನಸಲಂತೂ

ಮೊಗವ ಬೆಳಗಿದೆ, ಬೆಳಕಿನ ಕಿರಣ ತೂರಿ ತೂರಿ..

ಬೆಳಕಿನ ಚಿನ್ನಾಟವ, ಚಿನ್ನಾರಿಗಳೊಡನೆ

ತೈಲವರ್ಣದಿ ರಚಿಸಿದ್ದು ಕಿಶೋರ

ಸೃಜನತೆಗೆ ಹೊಸಹಾದಿ ತೋರಿ..

- ಸಿಂಧು Sindhu


ಬಾಳು ಇಟ್ಟಿಗೆಯ ಗೋಡೆಯಲ್ಲ, ತಮ್ಮಾ,

ಕೇಳಿಕೋ ಬೆಚ್ಚಗಿರಲು ತನು ಮನ, ಅಚ್ಚರಿಯ ಪಡಬೇಕಿಲ್ಲ

ಕಿವಿಯಲೊಂದು ಗುಟ್ಟು, ಎದೆಯೊಳಗಿಳಿಬಿಟ್ಟು

ನಮ್ಮಿಬ್ಬರ ಪ್ರೀತಿ ನಂಟು ಬಾಡದು, ನಂಬಿಕೋ.

ಇಬ್ಬನಿಯ ಮಣಿ ಕರಗುವುದು ಕಿರಣಗಳ ಗೆರೆಗೆ

ನಮ್ಮ ಚಳಿ ಕರಗುವುದು ಅಮ್ಮನಕ್ಕರೆಯ ಕರೆಗೆ

ಕಣ್ಣು ಹಾಯುವತನಕ, ಬಣ್ಣ ತೇರಿದೆ ನೋಡು

ನಿನ್ನ ಹೆಜ್ಜೆಯ ಜೊತೆಗೆ ನನ್ನ ಗೆಜ್ಜೆಯ ಜಾಡು.

ನಡೆ ಮುಂದೆ ನಡೆ ಮುಂದೆ, ಅನುಜಾ ನಿಲ್ಲದಿರು

ಮುಂದೆ ಕನಸುಗಳಿಹವು, ಹಿಂದೆಯೇ ನಾವು.

- suptadeepti

ಮುದ್ದು ತಮ್ಮ,

ನಾನೇ ನಿನ್ನಮ್ಮ!

ಪೊರೆಯುವೆ ನಿನ್ನ ಕಾಡದಂತೆ

ಕ್ರೂರ ವಾಸ್ತವದ ಗುಮ್ಮ

- sritri


ನಾಳೆಗಳ ನಿರೀಕ್ಷೆಯಲ್ಲಿ...

ಅಕ್ಕ ತಮ್ಮನ ಜೋಡಿ ನಿಂತಿಹುದು

ಮೆಟ್ಟಿಲಿನ ಬಳಿಯಲ್ಲಿ

ಹುಸಿಮುನಿಸು -ತಮ್ಮನ ಜತೆಗೆ

ಮುಗುಳುನಗೆ -ಅಕ್ಕನ ಮೊಗದಲ್ಲಿ

ನೋಡು ತಮ್ಮಾ ಏರಬೇಕಾದ ದಾರಿಯೆಡೆಗೆ

ಒಮ್ಮೆ ತಿರುಗಿ ನೋಡು..

ಮುಖತಿರುಗಿಸಿದರೆ ಹೇಗೆ ? ನಮ್ಮ ನಾಳೆಗಳು

ಇರುವುದಲ್ಲಿ! ಅತ್ತ ಓಡು..

ಒಂದರ ನಂತರ ಇನ್ನೊಂದು

ಹತ್ತಬೇಕು ಮೆಟ್ಟಲು

ಸತತ ಪ್ರಯತ್ನ , ಛಲ ಬೇಕೇ

ಬೇಕು ಗುರಿ ಮುಟ್ಟಲು

ನೋವೊ ನಲಿವೋ ಪಯಣಿಸುತಿರಬೇಕು

ಪಯಣಕೆ ಹೆದರಬೇಡ, ನೀ ಮುಂದೆ ಸಾಗು

ನ್ಯಾಯ ಮಾರ್ಗದಲಿ ಮುನ್ನಡೆದರೆ ಸಾಕು

ಧೈರ್ಯದಿಂದಲೆ ನೀ ಮುನ್ನುಗ್ಗು

ಬೇರೆಬೇರೆಯಾದರೂ ನಮ್ಮ ಪಯಣದ ಹಾದಿ

ಜತೆಗಿರುವೆ ನಾ , ನೆನಪಾದಾಗಲೆಲ್ಲ

ನಮ್ಮ ಒಡನಾಟ, ಪ್ರೀತಿ ಮರೆಯಾಗದು

ಮಮತೆ ಇಹುದು ಹೃದಯದೊಳಗೆಲ್ಲ

- ಅರ್ಚನಾ


ಬುದ್ಧಿವಾದ ತಪ್ಪು ಮಾಡಿ ಬೆರಳ ಕಚ್ಚುವುದು,

ಅಕ್ಕ ಕಿವಿ ಹಿಂಡುವುದು

ಹಿಂದಿನಿಂದಲೂ ನಡೆದು ಬಂದಿದೆ

ನೀನೇನು ಹೊಸಬನಲ್ಲ ಬಿಡು

ಅದು ಹಾಗೇ:

ಮೆಟ್ಟಿಲಿಳಿಯುವುದು ತುಂಬಾ ಸುಲಭ

ಹತ್ತುವುದು ಮಾತ್ರ ಕಷ್ಟ

ಹಾಗಂತ ಧೃತಿಗೆಡದಿರು ಮಗು,

ನಿನ್ನ ಮುಖದಲ್ಲಿರುವ ತುಂಟ ನಗು

ನಿನ್ನಕ್ಕನ ಮುಖದಲ್ಲಿರುವ ಅನುನಯದ ನಗು..

ಕಾಯಲಿವೆ ನಿನ್ನ, ನಡೆ ಮುನ್ನುಗ್ಗು

ನಿನ್ನ ತಲೆಯ ಕ್ರಾಪನ್ನು ಅಕ್ಕನ ಕೈಗಳು ತಿದ್ದಲಿವೆ

ಅದಕ್ಕೇ ನೋಡು: ಅವಳಿಗೆ ಎರಡು ಜಡೆ ಇವೆ..!

- ಸುಶ್ರುತ ದೊಡ್ಡೇರಿ


ಉಣ್ಣೆಯ ನುಣ್ಣನೆಯ ಆ ಸ್ವೆಟರ್ ಗಿಂತ

ನಿನ್ನ ಬೆಚ್ಚನೆಯ ಆ ಕೈ ಹಿಡಿತವೆ

ಹೆಚ್ಚು ಹಿತವಾಗಿದೆಯಲ್ಲ,

ಅಮ್ಮನ ಸ್ಪರ್ಶದಂತಿದೆಯಲ್ಲ

ಅದು ಯಾಕೆ? ನೀ ಹೇಳೆ ಅಕ್ಕ

ನಾ ನಿನ್ನ ಅಮ್ಮನಲ್ಲವೋ ನನ್ನ ಮುದ್ದು ತಮ್ಮ

ನೀ ಕೇಳಿಲ್ಲಿ, ನಾ ನಿನ್ನ ಅಮ್ಮನಲ್ಲ

ಆದರೂ ಒಡಲಾಳದಲ್ಲಿ ನಿನಗಾಗಿ ಅಮ್ಮನಷ್ಟೇ ಅಕ್ಕರೆಯಿದೆ,

ನನ್ನ ಕಂಗಳಲ್ಲಿ ನಿನ್ನ ನಾಳೆಗೆಳ ಕನಸುಗಳ ಬಿಂಬವಿದೆ,

ಮುಂಬರುವ ನಾಳೆಗಳ ಎದುರಿಸಲು ನಿನ್ನಲ್ಲಿ ಚೈತನ್ಯ ತುಂಬುವ ಹುರುಪಿದೆ

ನೀ ಜಗ್ಗದಿರು ಬಗ್ಗದಿರು ಕಷ್ಟಗಳಿಗೆ, ಸೋಲುಗಳಿಗೆ

ಏನೇ ಬಂದರೂ ನೀ ನಿಲ್ಲದಿರು ಓಡುತಿರು,

ನಿನ್ನೊಡನೆ ಹೆಜ್ಜೆ ಹಾಕಲು ನಾನಿರುವೆ ಎಂದೆಂದೂ

- ಶ್ಯಾಮಾ


ಆಟ

ಕಣ್ಣಾ ಮುಚ್ಚೇ ಕಾಡೇ ಗೂಡೇ ಆಡೋ ಹೊತ್ನಲ್ಲಿ

ನಮ್ಮಯ ಹಿಂದೆ ಇಟ್ಟಿಗೆ ಗೋಡೇ ಕವಿದಾ ಕತ್ಲಲ್ಲಿ

ಆಟ ಅಂದ್ರೆ ಆಟ ಅದು ಮುಚ್ಚಿದ ಕಣ್ಣನು ತೆರೆಸೋದು

ನೇರ ನೋಟಕ್ ಕಾಣೋದನ್ನು ಕಣ್ಣು ಬಿಟ್ಟು ಹುಡುಕೋದು.

ನಮ್ಮನು ನೋಡಿ ಪಾಪ ಅಂತ ಹೇಳ್ತಾರ್ ನೋಡ್ದೋರು

ಬಡತನವೆಂದ್ರೆ ಶಾಪ ಅಂತ ಯಾರದು ಅಂದೋರು

ದೇವ್ರು ಕೊಡೋ ವಿಷ್ಯಾ ವಸ್ತುಗಳಿಗೇನೂ ಹಿನ್ನೆಲೆ ಬೇಕಿಲ್ಲ

ಕೊನೆಗೆ ಮುಫತ್ತಾಗಿ ಸಿಗ್ತಾ ಇರೋ ಗಾಳೀ ನೀರೇ ಸಾಕಲ್ಲ.

ಕೈಯಲ್ಲಿರೋ ಬೆರಳಿನ ಹಾಗೆ ಬೇರೆ ನಾವೆಲ್ಲ

ಹಲವು ಕೋನದ ದೃಷ್ಟೀ ನಮದು ಎಲ್ಲೂ ತಾಗಲ್ಲ

ಆದ್ರೂ ಒಬ್ರಿಗೊಬ್ರೂ ನಾವು ಆಸರೆಯಾಗ್ತೀವಿ

ಯಾರೋ ಹೂಡಿದ್ ಆಟಗಳಲ್ಲಿ ಭಾಗೀಯಾಗ್ತೀವಿ.

ಯಾರೋ ಕಟ್ಟಿದ ಕಟ್ಟೇ ಕಟ್ಟಳೆ ಲೆಕ್ಕಕೆ ಬಾರವು

ಇಂಥಾ ಆಟ್ದಲ್ಲಿ ಸೇರೋರ್ದೆಲ್ಲ ಜಯವೇ ಜಯವು.

-Satish




ಕುರುಡು ಬದುಕಿಗೆ ಬೆಂಗಾವಲಿಲ್ಲ
ಮುನ್ನಡೆಯುವ ಸಂತಸ
ನಿನ್ನ ಮುಟ್ಟಿದಾಗ


ಸಿಕ್ಕಿ ಬಿದ್ದೆನೋ
ಬೆತ್ತ ತಂದಳೋ
ಎತ್ತ ಹೋಗಲೋ...


ಬೆಂಗಾವಲಿಲ್ಲವೆಂದು
ಹಿನ್ನಡೆಯೇಕೆ?
ಅದು ಗೋಡೆಯಲ್ಲ, ಮೆಟ್ಟಿಲು!

-ವಿಕ್ರಮ ಹತ್ವಾರ

ಮುದ್ದು ಮಗುವೆ,
ನಿಂಗೊಂಡು ಸತ್ಯ ಗೊತ್ತಾ?
ಅಂದು
ನಾ ಬಾಯಲ್ಲಿ ಬೆರಳಿತ್ತು
ಉಗುರು ಕಚ್ಚುತ್ತಿದ್ದಾಗ
ಅಮ್ಮ ಬೈದ ಳು ಅತ್ತ ಳು ಕರೆದ ಳು
ಕೊನೆಗೆ ಬೇಸತ್ತು ಸುಮ್ಮನಾದ ಳು
ಇಂದು
ನನ್ನ ಮಗ
ಮೂರು ಹೊತ್ತು ಬಾಯಲ್ಲಿ ಕೈ
ಉಗುರು ಕಚ್ಚಿದ್ದೆ ಕಚ್ಚಿದ್ದು
ಇದು ವ ಂಶಿಯವೋ
ಅನುವಂಶೀಯವೋ
ಇಲ್ಲ
ನೋಡಿ ಕಲಿ ಮಾಡಿ ತಿಳಿ
ಪರಿಪಾಲನೆಯೋ.............

- ಅಹರ್ನಿಶಿ


.~.ಬೆಪ್ಪ.~.

ಅಕ್ಕ ನಾ ಬೆದರಿ ಬೆಪ್ಪನಾಗಿಹೆನು
ಬಾಳ ತೀರಕ್ಕೆ ಹೋಗಲಿ ಹೇಗಕ್ಕ
ಎಷ್ಟೊಂದು ಮೆಟ್ಟಿಲಿವೆ ಹತ್ತಲಿ ಹೇಗೆ
ಹತ್ತಿಹೋಗಲು ಜೊತೆಗೆ ಯಾರು ಬರುವರಕ್ಕ

ಸಾಕಿ ಸಲಹಲು ಅಪ್ಪ ಅಮ್ಮ ಇರುವರಪ್ಪ
ಆಡಿ ನಲಿಯಲು ಜೊತೆಗೆ ಗೆಳೆಯರಿಹರಪ್ಪ
ಸರಸ ವಿರಹಕ್ಕೆ ಸಂಗಾತಿ ಬರುವಳಪ್ಪ
ಕಣ್ಣಾಗಿ ಜೊತೆಗೆ ಸದಾ ನಾನಿರುವೆನಪ್ಪ

ಹಕ್ಕಿ ಪಿಕ್ಕಿಳು ಹಾಡು ಹಾಡುತ್ತಾವೆ
ಮರಗಿಡಬಳ್ಳಿಗಳು ತೂಗಿ ತಂಗಾಳಿ ಬೀಸುತ್ತಾವೆ
ಸೂರ್ಯ ಚಂದ್ರ ತಾರೆಯರು ಬೆಳಕು ಚೆಲ್ಲುತ್ತಾರಪ್ಪ
ಎಷ್ಟೆಲ್ಲ ಇದೆಯೋ ಈ ಸೃಷ್ಠಿಯ ಒಡಲಲ್ಲಿ ನೀನರಿಯೋ ಬೆಪ್ಪ

ಹಿಂದೊಂದು ಜನ್ಮದಲಿ ಜೊತೆಗಿದ್ದೆವಂತೆ
ಮುಂದೊಂದು ಜನ್ಮ ನಮಗಿದೆಯಂತೆ
ಹಿಂದು ಮುಂದುಗಳನು ನಾನರಿಯೆನಪ್ಪ
ಬೆದರದಿರು ಎಂದೆಂದು ಜನ್ಮದಂತ್ಯದವರೆಗು ನಾನಿನ್ನ ಜೊತೆಗಿರುವೆನು

ಇಷ್ಟೊಂದು ಸೊಗಸೆ ಈ ಬಾಳು ಅಕ್ಕ
ಬಾಳ ಹೊಕ್ಕಿ ನೋಡುವೆ ಇಂದೇ ನನ್ನಕ್ಕ
ಮೆಟ್ಟಿನಿಲ್ಲುವೆ ಬಂದ ನೂರು ಕಷ್ಟಗಳನ್ನೆಲ್ಲ
ಮುಟ್ಟಿ ಜಯಿಸುವೆ ಬಾಳ ತೀರವನಕ್ಕ

-ಕುಮಾರ ಸ್ವಾಮಿ ಕಡಾಕೊಳ್ಳ

Thursday 17 May, 2007

ಮೊದಲ ಚಿತ್ರ

ಚಿತ್ರ ೧.

ನಿಮ್ಮ ಕವನವನ್ನ ಕವನಗಳಿಗೆ ಇರುವ ಜಾಗದೊಳಗೆ ಬರೆಯಿರಿ, ನಂತರ ಅದನ್ನ ಇಲ್ಲಿಗೆ ಎತ್ತಿಕೊಳ್ಳಲಾಗುವುದು.

ದೀಪದ ಬೆಳಕು
ನೀಲಾಂಜನದ ಬಳಿ ಕುಳಿತಿದ್ದಾನೆ ನಿರಂಜನ
ದೀಪದ ಬೆಳಕು ಮುಖದ ಮೇಲೆ ರಂಜನ
ಪೋರನ ಕಣ್ಣ ಭಾವ ಅರ್ಥವಾಗುತ್ತಿಲ್ಲ
ಮುಖ ಕೆಂಪೇರಿರುವುದು ನಾಚಿಕೆಯಿಂದಲ್ಲ
ಈ ದೀಪದ ಬೆಳಕು ಏನೇನನ್ನೆಲ್ಲಾ ತೋರಿಸುತ್ತಿದೆ...
ಕವಿತೆಯ ಬದಲು ಕತೆ ಹೇಳುತ್ತಿದೆ... (!)
ಹೊರಗೆಲ್ಲೋ ಆಟವಾಡಿಕೊಂಡಿದ್ದ ತಮ್ಮನನ್ನು
ಮೊದಲು ಸೆರೆಹಿಡಿದು ತಂದದ್ದು ಅಕ್ಕ
ನಂತರ ಸೆರೆಹಿಡಿದದ್ದು ಕೆಮೆರಾ
ಕತ್ತಲಾಗುತ್ತಿದ್ದಂತೆ ಹಚ್ಚಿದ ದೀಪ..
ಹಚ್ಚಿದ್ದು ಒಂದೇ ದೀಪ;
ಆದರೆ ಆ ಕೋಣೆಯಲ್ಲೀಗ ಅದೆಷ್ಟು ದೀಪಗಳಿವೆ ನೋಡಿ:
ಪೋರನ ಕಣ್ಣಲ್ಲೊಂದು,
ಕೆಮೆರಾದ ಕಣ್ಣಲ್ಲೊಂದು,
ಕೆಮೆರಾ ಹಿಡಿದ ಜೀವದ ಕಣ್ಣಲ್ಲೊಂದು,
ಅಷ್ಟೇ ಅಲ್ಲ; ಬೆಳಗುತಿರುವ ದೀಪದ ಹಿಂದೆ ಮತ್ತೊಂದು ನೆರಳ ದೀಪ...!
(ಈಗ ನೋಡುತಿರುವ ನನ್ನ ಕಣ್ಣಲ್ಲೂ.. ಹಾಂ, ನಿಮ್ಮ ಕಣ್ಣಲ್ಲೂ..!)
ಈ ಚಿತ್ರದ ದೀಪದಲ್ಲಿ ಒಂದು ಮಜಾ ಇದೆ.
ಇದು ಬೆಳಗುವುದನ್ನು ನಿಲ್ಲಿಸುವುದೇ ಇಲ್ಲ..!
ಇದರ ಒಡಲ ಎಣ್ಣೆ ಎಂದೂ ಬತ್ತುವುದಿಲ್ಲ..
ಪೋರನ ಮುಖದ ಮೇಲಿನ ಕಾಂತಿ ನಿರಂತರವಾಗಿರುತ್ತೆ..
ನೋಡುವ ಕಣ್ಣಿರುವವರೆಗೆ...
ದೀಪ ಹಚ್ಚುವ ಮನಸು ಮನುಷ್ಯನಲ್ಲಿ ಇರುವವರೆಗೆ...
ದೀಪ ಬೆಂಕಿಯಾಗದೇ ಇರುವವರೆಗೆ...
- ಸುಶ್ರುತ ದೊಡ್ಡೇರಿ

ತಿಂಗಳಿನ ಅಂಗಳದಿ ಮಂಗಳವೆ ತುಂಬಿರಲಿ
ಕಂಗಳಲಿ ಇಂಗದಿರಲೆಂದೆಂದು ಕಾಂತಿ
ದೀಪಗಳ ಸಾಲಿನಲಿ ಹಣತೆಗಳ ಓಣಿಯಲಿ
ತಾಪಗಳ ಬದಿಗಿರಿಸಿ ಕಳೆದುಬಿಡು ಭ್ರಾಂತಿ
ಆಗಸದಿ ಆಡುತಿಹ ಬಿಳಿಮೋಡದಿಂದೆಲ್ಲ
ನಗುವರಳಿ ಹರಹರಡಿ ಹರುಷದಲೆ ಶಾಂತಿ
ಮತ್ತೊಂದು ಕಾರ್ತೀಕ ಸಡಗರದಿ ಬಯಸುವೆನು
ನೆತ್ತಿಯಲಿ ತಂಪೆಣ್ಣೆ, ಗೂಡಿನಲಿ ಪ್ರಣತಿ.
(೧೮-ಅಕ್ಟೋಬರ್-೨೦೦೦)

-suptadeepti
ಬೆಳದಿಂಗಳ ಹಂಬಲದಿ ನಾನು
ನಟ್ಟಿರುಳ ಬದುಕಲ್ಲಿ ಹಣತೆ ಹಚ್ಚಿ ಕಾದಿದ್ದೇನೆ
ಅಲ್ಲಿ ಬಾಗಿಲ ಸಂದಿಯಿಂದ ಇಣುಕುತ್ತಿರುವುದೇನು
ಜೀವನ್ಮುಖೀ ಬೆಳ್ದಿಂಗಳಾ?
ಬಾಗಿಲ ಸಂದಿಗೆ ಬಂದವಳು
ಮನೆಯೊಳಗೆ ಬರಳಾ?
ಕೊಡಲೇನುಂಟು ಇಲ್ಲಿ,
ನಿನ್ನ ಬೆಳಕಲ್ಲಿ ತೋಯುವ ಕತ್ತಲೆಯಷ್ಟೆ!
ಕತ್ತಲಿನಿಂದ ಬೆಳಕಿನೆಡೆಗೆ
ದೀಪ ತೋರುತಿದೆ ದಾರಿ...
ಓ ಬಾಲಕ,
ನಿನ್ನ ಆ ಮುಗುಳುನಗೆಯೋ ಚೇತೋಹಾರಿ..
ದೀಪದ ಕಾಂತಿ ನಿನ್ನ ಮುಖದ ಮೇಲೋ?
ಇಲ್ಲ ನಿನ್ನ ಮಂದಹಾಸದ ಪ್ರಭೆಯಲ್ಲಿ
ದೀಪ ಬೆಳಗುತಿದೆಯೋ?
ಹಚ್ಚು ನೀ ದೀಪದಿಂದ ಮತ್ತೆಷ್ಟೋ ದೀಪಗಳ
ಇತ್ತು ಮುಖದಲ್ಲಿ ಆ ಮೆಲುನಗೆಯ
ಬೆಳಗು ನೀ ಮನೆ ಮನಗಳ
- ಶ್ಯಾಮಾ

ಹೊಳೆವ ನಕ್ಷತ್ರ ಕಂಗಳ ಪೋರ
ದೀಪದಡಿ ಏನಿದೆ, ಎಂದಿನಂತೆ ಕತ್ತಲು!
ಅಗೊ ನೋಡು, ಬೆಳಕು ಹೊರಟಿದೆ
ಕತ್ತಲನ್ನು ನುಂಗುತ್ತಾ ,ದಾರಿ ತೋರುತ್ತಾ,
ಕಣ್ಣಿನ ಜೋಳಿಗೆಯಲ್ಲಿ ಒಂದಿಷ್ಟು
ಕನಸ ಬೊಂತೆಗಳನ್ನು ತುಂಬಿಕೋ,
ಕಂಡಷ್ಟು ದೂರ, ಕನಸುಗಳು
ಖಾಲಿಯಾಗುವವರೆಗೆ ಸಾಗು,
ಬೆಳಕು ಆರಿದರೂ ನಿನ್ನ ಕಣ್ಣ ನಕ್ಷತ್ರ ಸದಾ ಉರಿಯಲಿ
ಇನ್ನಷ್ಟು ದೀಪಗಳ ಹೊತ್ತಿಸಲಿ, ಮತ್ತಷ್ಟು ನಕ್ಷತ್ರ ಅಂಟಿಸಲಿ,
ಬಗಲ ಕನಸುಗಳು ಮರಿ ಈಯಲಿ..
ಹೊರಟು ಬಿಡು ಬೆಳಕ ಬಯಲಿನಲಿ
ದಾರಿ ಮುಗಿವವರೆಗೆ ಗುರಿಯು ಕರೆವ ಕಡೆಗೆ !

- ಭಾವಜೀವಿ...
ಕಾಲುದೀಪ
ಇನ್ನೂ ಯಾಕೆ ಕುಳಿತೇ ಇದ್ದೀ ಓಡು ಓಡು ಓಡು

ದೊಡ್ಡದೈತೆ ಬೆಳಕಿನ ವೇಗ ನೋಡು ನೋಡು ನೋಡು.
ಬೆಳಕಿನ ಬಣ್ಣ ಕಣ್ಣಲಿ ತುಂಬ್ಕೊಂಡ್ರಷ್ಟೇ ಸಾಲಂಗಿಲ್ಲ
ಸುತ್ತಲ ಕತ್ತಲು ಮುತ್ತದೆ ತಾನು ಸುಮ್ಕೇ ಇರಂಗಿಲ್ಲ.
ಗೂಡಲ್ಲಿದ್ರೂ ದೀಪಾ ತಾನು ಸುತ್ಲನ್ನೆಲ್ಲ ಬೆಳಗೀನೂ
ಕತ್ಲನ್ನ್ ತನ್ನ ಬುಡಕ್ಕೊತ್ತಿ ಕರಗೋದಿಲ್ವೇ ತಾನೂ.
ಎಲ್ಲಿದ್ರೂನೂ ಎತ್ತರಕ್ಕ್ ಬೆಳೀಲಿ ನಿನ್ ಮನೆ ಕಾಲುದೀಪ
ಬೆಳಕಿನ್ ಜೊತೆ ಇರೋ ಕತ್ಲು ಆಗ್ದೇ ಇರ್ಲಿ ಶಾಪ.

- Satish

ಕಣ್ಣಲ್ಲೇ ಅಷ್ಟೊಂದು ಬೆಳಕಿದೆ
'ದೀಪದ ಬಳಿ ಯಾಕೆ ಮಗೂ?
ಒಳಗೊಳಗೇ ಬೆಳಕಿದೆ ಅಷ್ಟೊಂದು
ದೀಪದ ಬೆಳಕು ಯಾಕೆ ಮಗೂ?

Wednesday 16 May, 2007

ಚಿತ್ರಕವನ

ಕಣ್ಣೆದುರಲ್ಲಿ ಕಾಣುವುದನ್ನು ತನ್ನ ದೃಷ್ಟಿಗನ್ವಯವಾಗಿ ಸೆರೆಹಿಡಿಯುವುದು ಒಬ್ಬ ಕಲಾಕಾರನ ಸ್ವಾತಂತ್ರ್ಯ.
ಆ ಚಿತ್ರದಲ್ಲಿ ನೂರು ಕಥೆಗಳು, ಕವಿತೆಗಳು ಅಡಗಿರಬಹುದು...
ಚಿತ್ರ ಸೆರೆ ಹಿಡಿದವರು ಕಾಣದ ಇನ್ನೊಂದು ನೋಟವಿರಬಹುದು...
ಈ ರೀತಿಯ ವಿವಿಧ ನೋಟಗಳತ್ತ ಒಂದು ನೋಟ - ಈ ಪ್ರಯತ್ನ.
ವಾರಕ್ಕೊಂದು ಚಿತ್ರ - ಪೈಂಟಿಂಗ್ ಇರಬಹುದು, ಫೋಟೋ ಇರಬಹುದು, ಇಲ್ಲಿ ಕವಿಗಳ, ನೋಡುಗರ ದಾರಿ ಕಾಯುತ್ತಿರುತ್ತದೆ...
ಅದಕ್ಕೆ ಕವನ, ಬರಹ ಯಾರು ಬೇಕಾದರೂ ಬರೆಯಬಹುದು...
ಎಲ್ಲಾ ಆನ್ ಲೈನ್ ಕನ್ನಡಿಗರಿಗೆ ’ಚಿತ್ರಕವನ’ಕ್ಕೆ ಆಹ್ವಾನ...