ಚಿತ್ರ- ೩೮
ಎರಡು ಬಗೆಯ ದೃಷ್ಟಿಕೋನದಲ್ಲಿ ಕುಮಾರಸ್ವಾಮಿ ಕಡಾಕೊಳ್ಳ ಅವರು ಚಿತ್ರವನ್ನು ನೋಡಿದ್ದು...
ಪ್ರೇರಕ
ಇರುವನೊಬ್ಬ ನನ್ನೊಳಗೆ ಪ್ರೇರಕ
ಸದಾ ನನ್ನ ಪಾಲಿಸುವ ಪಾಲಕ
ಬಿದ್ದು ಹೋದರು ಎದ್ದುನಿಲ್ಲಿಸುವ
ಹಬ್ಬಿದ ಕತ್ತಲಲ್ಲೂ ದಾರಿ ತೋರುವ
ಅಗೋಚರವಾಗಿ ಅಡಗಿ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ
ಇರುವನೊಬ್ಬ ನನ್ನೊಳಗೆ ಪ್ರೇರಕ
ಸ್ವಾಭಿಮಾನದ ಕಿಚ್ಚು ಹಚ್ಚಿ
ಬವಣೆ ಇದ್ದರು ದಿಟ್ಟತನವ ಹೊಮ್ಮಿಸಿ
ಬದುಕಿ ನಡೆಯುವ ದಾರಿ ತೋರಿಸಿ
ನನ್ನ ಸೂತ್ರದಾರಿಯು ತಾನೆ ಆದರು
ತೋರಿಸಿಕೊಳ್ಳದೆ ಅವಿತು ನನ್ನ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ
ಇರುವನೊಬ್ಬ ನನ್ನೊಳಗೆ ಪ್ರೇರಕ
ನನಗಿಲ್ಲ ಭಯ ಇವನಿರುವತನಕ
ಯಾರ ಹಂಗಿಲ್ಲ ವಶವರ್ತಿ ನಾನಲ್ಲ
ಅಂಗ ಊನ ವಿಕಲಾಂಗನಾದರು
ಭಂಗವಿಲ್ಲ ಬದುಕಿಗೆ ಜಂಗಾಬಲವೆಲ್ಲ
ಮೆಟ್ಟುವೆ ಕಷ್ಟಗಳ ದಿಟ್ಟ ದೀರನಾಗಿ
ಮಾಡುವೆ ಕಾಯಕ ಜಟ್ಟಿಯ ಪಟುವಂತೆ
ಇದ್ದರೆ ಸಾಕು ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ
ಇರುವನೊಬ್ಬ ನನ್ನೊಳಗೆ ಪ್ರೇರಕ
ದುಃಖ ಭಯ ದೀನ ಭಾವ ಅಳಿಸಿ
ದೂರ ದೂಡಿ ದುಮ್ಮಳ ಉಮ್ಮಳ
ಬೆಂಬಲವಿಟ್ಟು ಹಂಬಲಿಸುವ ನನಗೆ
ಬೆಂಬಿಡದೆ ಕಾಯುತ್ತ ಬಾಳ ದಾರಿ ತೋರುತ್ತ
ನರ್ಲಿಪ್ತನಿಗೆ ಚೇತನವ ತುಂಬುತ್ತ
ನಡೆಸುವ ನನ್ನನ್ನು ಅಗೋಚರ ಪ್ರೇರಕ
ಅವನೇ ನನ್ನ ಅಂತರಾತ್ಮಕ
ಸೇವಾಕಾಂಕ್ಷಿ
ಮುಂಗೈಯ ಕಳೆದುಕೊಂಡ ಅಂಗವಿಕಲನಿವನು
ಬೀದಿ ಅಂಗಳದಲ್ಲಿ ಹರಡಿರುವ ಕಸವ ಗೂಡಿಸಿ
ಸ್ವಚ್ಚ ನಾಡನು ಕಟ್ಟುವ ಹೆಚ್ಚುಗಾರಿಕೆಯವನು
ಇಚ್ಚೆಗೆ ಅಡಿಯಿಟ್ಟ ಕೆಚ್ಚೆದೆಯವನು
ಮುಡುಹುನಾಗಿರುವ ಕುರುಹು ದೇಹಕೆ ಮಾತ್ರ
ಮನದಲ್ಲಿ ಚಿಮ್ಮಿದೆ ಅಮಿತ ಚೇತನ
ಸೇವೆ ಸಲ್ಲಿಸುವ ಸಹಸ್ರ ಸಾಹಸ ನಿಯತ
ಯಾರು ಸರಿಸಾಟಿ ಇವನ ಮುನ್ನಡೆಗೆ
ಇವನಿಗೆ ಇಲ್ಲ ಮೇಲು ಕೀಳೆಂಬ ಭಾವ
ಜಾತಿ ಧರ್ಮದ ಸೋಗು ಸೊಲ್ಲಿಲ್ಲ
ನಿತ್ಯ ಕಾಯಕ ನಿಯಮ ಯೋಗಿವರ್ಯ
ಬತ್ತಿದ ದೇಹವಿದ್ದರು ಉಕ್ಕಿದೆ ಉತ್ಸಾಹ
ವಿಧಿಯ ಅವಕೃಪೆಗೆ ಹೊತ್ತ ಹೂನ ಕಾಯ
ಕಾಡಿಲ್ಲ ಮನಸ್ಸನ್ನ ದೀನ ತಾನೆಂದು
ಧೀರತನದಿ ಬದುಕು ನಡೆಸುವ ದಿಟ್ಟ
ಕಲಿಸುತಿರುವನು ನಮಗೊಂದು ಅರಿವಿನ ಪಾಠ
ಮೂದಲಿಸುವರು ಇವನ ನೋಡಿ
ಓದು ಬರಹ ಕಲಿತ ಆಧುನಿಕ ಕಲಿಗಳು
ಹಣದ ಹಟ್ಟಹಾಸದಿ ಮೆರೆವ ಗೌಣ ಗುಣ ಸಿರಿವಂತರು
ಕೊಳಕು ದೇಹ ವಸ್ತ್ರ ಕುಷ್ಠರೋಗಿಯೆಂದು
ನಮ್ಮೆಲ್ಲ ಕೊಳಕನು ತೊಳೆಯುವ ಪಣತೊಟ್ಟವರು
ಗುರಿಯಾಗಿಹರು ಸಮಾಜದ ಕೀಳು ಜನರೆಂದು
ಅರಿಯರವರು ನಮ್ಮ ಕೊಳಕು ತೊಳೆಯುವ
ಕಾಯಕ ನಿರತ ಮೂರ್ತ ಮೂರ್ತಿಗಳಿವರೆಂದು
ಕಸವನ್ನು ತೆಗೆಯುವ ಈ ಕಾರ್ಯವೇ ಧರಣಿಗೆ ಕೊಡುಗೆಯೆಂದು ಶಾಂತಲಾ ಭಂಡಿಯವರು ಹೇಳಿದ್ದು...
ಅಲ್ಲು ಕಸವು ಇಲ್ಲು ಕಸವು
ಎಲ್ಲು ಕಸವು ತುಂಬಿದೆ
ಹಿಂದೆ ಗುಡಿಸಿ ಎಸೆದ ಕಸವೆ
ಮುಂದೆ ಚೆಲ್ಲಿ ನಿಂತಿದೆಪ
ಚಂದ ಮಾಡು ಜಗವ ನೀನು
ಒಳ್ಳೆ ಕೆಲಸವೆ ಲಭಿಸಿರೆ
ನೀನು ಗುಡಿಸಿ ಎಸೆದ ಕಸವು
ಜನತೆ ಮನಕಿದೋ ಮರಳಿತೆ೧
ಫಲವು ಇಹುದು ಜಗದಲಿದಕೆ
ನಿನ್ನ ವೃತ್ತಿ ಪ್ರೀತಿಗೆ
ನಗುತ ಕಶ್ಮಲ ತೆಗೆವ ಕಾರ್ಯವೆ
ನಿನ್ನ ಕೊಡುಗೆಯು ಧರಣಿಗೆ೨
ಎನ್ ಎಸ್ ಲಕ್ಶ್ಮೀನಾರಾಯನ ಭಟ್ ರವರಲ್ಲಿ ಕ್ಷಮೆಯಾಚಿಸುತ್ತ ....
(ಈ ಹಾಡನ್ನು ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರ "ಈಚೆ ನಾನು ಆಚೆ ನೀನು" ಈ ಹಾಡಿನ ರೀತಿಯಲ್ಲಿ ಹಾಡಬಹುದಾಗಿದೆ.)
ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಮರ್ಯಾದೆ ಇದೆ ಎಂದು ಹೇಳುತ್ತ ಸತೀಶ ಹೇಳಿದ್ದು...
ಗುಡಿಸುವವನ ಹೂಟ
ಎಡಗೈಯಿಲ್ಲದ ಚೊಂಚ ಹಳದಿ ಟೋಪೀ ಅಣ್ಣಾ
ಕಸವ ಗುಡಿಸಿ ಧೂಳೆಬ್ಬಿಸಿ ಮುಚ್ಚ ಬೇಡ ಕಣ್ಣಾ.
ರಸ್ತೆ ನಾಲ್ಕು ಕೂಡಿ ಹೆಜ್ಜೆ ಹತ್ತು ಸಾಗೋವಲ್ಲಿ
ನಿನಗಂತೂ ಇಲ್ಲ ಯಾವುದೇ ಆತಂಕ ಅಡ್ಡಿಗಳು
ದಿನವೂ ನಿನ್ನೊಡನಿದ್ದು ಗುಡಿಸಿ ಎಲ್ಲವ ಓಡುತಲಿದ್ದು
ಧೂಳನು ತೆಗೆದು ತಮಗೇ ಮೆತ್ತಿದ ಪೊರಕೆ ಕಡ್ಡಿಗಳು.
ಮೆತ್ತಿ ಮುತ್ತಿನಿಂತ ಎಷ್ಟೋ ವರ್ಷದ ಧೂಳನು
ಗುಡಿಸಿ ಉಣಬಡಿಸುವೆ ಹಳೆಯ ನೋವನು
ಗುಡಿಸಿದಷ್ಟು ಬರುವವಂತೆ ಹಳೆಯದೆಲ್ಲ ಮೇಲೆ
ಎಷ್ಟೇ ಜನುಮ ಮುಗಿದರು ನಿಲ್ಲದ ಸರಮಾಲೆ.
ಕಸ ಹೊಡೆದರೂ ಕಿರೀಟ ಹೊತ್ತರೂ
ಕೆಲಸಕ್ಕಿವೆ ಅವುಗಳದೇ ಮರ್ಯಾದೆ
ಅವರವರ ಕರ್ಮ ಅವರವರು ಮಾಡಿ
ಮುಂದೆ ಹೋದರೆ ಎಲ್ಲಿದೆ ಫಿರ್ಯಾದೆ.
ಗುಡಿಸಿ ಹೊಸದ ತೋರಿಸುವ ನಿನ್ನ ಈ ಆಟ
ಬಲ್ಲವರೇ ಬಲ್ಲರೂ ನಿನ್ನ ಮನಸಿನ ಹೂಟ.
ಅಂಗವಿಕಲನಾದರೂ ಬಾಳಿಗೆ ಮುಖ ತಿರುವಿಸಿಲ್ಲ ಎಂದು ಅನಿಲ ಜೋಶಿ ಹೇಳುತ್ತಾರೆ...
ನೀಳದೇಹ ನೀಳ್ಗಡ್ಡದೊಡೆಯ
ಅಳತೆಯಲಿ ಕೈ ಗಿಡ್ಡವೆಂದು
ಹಳಹಳಿಸುತ್ತ ಕುಳಿತಿಲ್ಲ, ಬಾಳ
ಬೇಳುವೆಗೆ ಮುಖ ತಿರುವಿಲ್ಲ
ಎಳೆಬಿಸಿಲಿರಲಿ ಮರ ನೆರಳಿರಲಿ
ಕೋಲುಪೊರಕೆಯ ’ಹಿಡಿದು’
ಕಾಲ ಕೆಳಗಣ ಕಸ ಬಳಿದು ರಸ್ತೆ
ಬೆಳಗುತ ಬಾಳ ತೇರನೆಳೆವುದ ನೋಡಿ
ಎತ್ತಿದ ತೋಳು ಅರೆ ತಿರುಗಿದ ದೇಹ
ನೆಟ್ಟ ನೋಟ ನೋಡಿ ಹೇಳಿ, ಸಮ-
ಚಿತ್ತದೀ ನಿಲುವು ನೆನಪಿಸದೆ ನಾಟ್ಯ?
ಹೊಟ್ಟೆಗಾಗಿ ದುಡಿವವನಷ್ಟೇ ಅನಿಸುವದೆ?