Monday 24 September, 2007

ಚಿತ್ರ - ೨೦


ಸತೀಶ ಅವರು 'ನೆರಳಿಗೊಂದು ನೆಲೆ' ಯಲ್ಲಿ ಬರೆದದ್ದು ಹೀಗೆ...

ಜನರೆಲ್ಲ ನಗರಗಳಲ್ಲೇ ತುಂಬಿಹರೇ ಹೊರತು
ಸ್ವಚ್ಛಂದ ಗಾಳಿಯಾಡುವಲ್ಲಲ್ಲ
ಈಗಾಗಲೇ ಕುಳಿತ ಆಸನಗಳ ಆಸೆಯೇ ಹೊರತು
ಖಾಲಿ ಬಿದ್ದ ಆಸನಗಳ ಮೇಲಲ್ಲ.

ಪ್ರತಿ ಆಸನಕೂ ಪಕ್ಕದಲಿ ನೆರಳನೊಡ್ಡಿದರೂ
ಬಿಸಿಲಲಿ ಬೇಯುವ ಬಯಕೆ
ಎಂದೂ ಕೆಸರಾಗದ ಇಟ್ಟಿಗೆ ಹಾಸಿದರೂ
ಹಿಂಗದ ದಾಹ ನೆಲಕೆ.

ಕೆಸರೂ-ಮಣ್ಣೂ ನಿಧಾನವಾಗಿ ನೆಲವ ಕ್ರಮಿಸಿ
ಜೊತೆಗೆ ಅದೆಲ್ಲೆಲ್ಲಿಂದಲೋ ಎಲೆಗಳು ಹಾರಿ
ಬಾಗಿದ ರೆಂಬೆಕೊಂಬೆಗಳು ಒಂದನ್ನೊಂದು ರಮಿಸಿ
ಹಸಿರಾಗಿರುವ ಎಲೆಗಳ ತುದಿಯಿಂದ ನೀರು ಜಾರಿ.

ನೆರಳಿದೆ ಆಸನವಿದೆ ಕೆಸರಿರದ ಜಾಗವಿದೆಯೆಂದರೂ
ಕೂತು ಸ್ವಚ್ಛಂದವನು ಆಸ್ವಾದಿಸುವ ಮನವಿಲ್ಲ
ನೆರಳ ಸೂಸುವ ನೆಪದಲ್ಲಿ ಕೊಂಬೆಗಳು ಬಳುಕಿವೆಯಾದರೂ
ನೆರಳಿಗೊಂದು ನೆಲೆ ತೋರಿಸೋ ಬಿಸಿಲಿಲ್ಲ.



Monday 17 September, 2007

ಚಿತ್ರ - ೧೯




ಸತೀಶ ತಮ್ಮ "ಎಲ್ಲೋ ಹುಟ್ಟಿದ್ ಮರಾ ಯಾರೋ ಕೊಡೋ ರೂಪಾ
ದಲ್ಲಿ
" ಹೇಳಿದ್ದು


ಸುತ್ಗೇ ಚಾಣಾ ಹಿಡ್ಕೊಂಡು ಕುಕ್ಕರಗಾಲಲ್ ಕುತ್ಗೊಂಡು
ಭೀಷ್ಮನ್ನ್ ಹುಬ್ಬಿನ್ ಒಳಗಿನ್ ದೃಷ್ಟೀಲ್ ನೋಡಿದ್ದನ್ನೇ ನೋಡ್ಕೊಂಡು
ಎಲ್ಲೋ ಹುಟ್ಟಿದ ಮರಕ್ ನೀನೂ ಏನೋ ರೂಪಾ ಕೊಡ್ತೀಯಾ
ರಚ್ಚೇ ಹಿಡಿದಾ ಮಕ್ಕಳ ಹಾಗೆ ಚಕ್ಕಳೆಯನ್ನು ಹರಡ್ತೀಯಾ.

ಕಲ್ಲಲ್ಲ್ ಕೆತ್ತೋದ್ ಕಷ್ಟಾ ಅಂತ ಮರವನ್ನ್ ಜನ ಹಿಡ್ಕೊಂಡ್ರು
ಬಂದಿದ್ದ್ ಬುದ್ದೀ ನೋಡಿದ್ದ್ ವಿಷ್ಯಾ ಅಂತಾ ಕಾಯ್ಕಾ ಕಂಡ್ಕೊಂಡ್ರು
ಕೆತ್ತೋರೆಲ್ಲ ಬಡಗೀ ಅಲ್ಲ ಬಿಟ್ಟೋರೆಲ್ಲ ಹೊರಡೋದಿಲ್ಲ
ಏನೋ ರೀತೀ ಯಾವ್ದೋ ನೀತಿ ಬಗ್ಸಿದ ಗೋಣಿಗೆ ತಿಳಿಯೋದಿಲ್ಲ.

ಯಾವ್ದೋ ಜಾತಿ ಏನೋ ಮರ ಸುತ್ಗೇ ಉಳಿ ಒಂದೇ ಪರ
ನೋಡೋರ್ ನೋಟಾ ವಕ್ರಾ ಇದ್ರೂ ನಿನ್ನಯ ಗೆರೆ ಒಂದೇ ಥರ
ಏಟಿನ್ ಮೇಲೇ ಏಟದು ಬಿದ್ದು ಸಣ್ಣಗೆ ತಾನು ಧೂಳದು ಎದ್ದು
ಗಟ್ಟೀ ಇರೋವ್ ಸುಮ್ನಿರೋವಾಗ ಹಾರೋವೆಲ್ಲ ಮಾಡ್ತಾವ್ ಸದ್ದು.

ಕೆಲಸಕೆ ನೇರಾ ಬೇಕೋ ಅನ್ನೋ ನಿನ್ನಾ ಸೀಸದ ಕಡ್ಡೀ ಆಧಾರ
ಪದೇ ಪದೇ ನೋವನು ತಿಂದು ನೇರದೆ ಹುಟ್ಟುತ್ತಲ್ಲಾ ಆಕಾರ.

Sunday 9 September, 2007

ಚಿತ್ರ - 18




ಬಾಳಹಾದಿಯಲ್ಲಿ , ಸಾಧನೆಯ ಹಿಂದೆ ನಡೆದು ದೂರದಲ್ಲಿರುವ ಅನುಜನ ಬಗ್ಗೆ ಹೇಳಿದ್ದು – ಸೀಮಾ

ನನ್ನ ಪ್ರೀತಿಯ ತಮ್ಮ,
ಸಾಧನೆಯ ಹಾದಿಯಲ್ಲಿ ನೀನು ಹೋದೆ ದೂರ ದೂರ
ನಾನು ಇರಲು ಈಚೆ ತೀರ;
ದೇಹದಿಂದ ಇದ್ದರೂ ದೂರ
ಮನದಲ್ಲಿದೆ ಪ್ರೀತಿ ಅಪಾರ.
ಬಾಲ್ಯದ ಅನ್ಯೋನ್ಯತೆ ಇನ್ನೂ ಇದೆ
ಕೂಡಿ ಕಟ್ಟಿದ ಕನಸೂ ಜೊತೆಯಲ್ಲಿದೆ.
ತೀರ ಬೇರೆಯಾದರೇನು?
ಬೇರೆಯಾಗೇವು ನೀನು-ನಾನು,
ಮರೆಯಲಾರೆವು ಕೂಡಿ ಆಡಿದ ಆ ದಿನಗಳನು.

ಜತೆಗಾರನಾಗಬೇಕಿದ್ದ ಗೆಳೆಯ ಒಂಟಿಗತಿಯಲಿ ತನ್ನನ್ನು ಬಿಟ್ಟು ಹೊರಟಾಗ ಮಹಿಳೆಯ ದೃಷ್ಟಿಯಲಿ ನಿಂತು ರಂಜು ಹೇಳಿದ್ದು :

ಜೀವನ ಯಾತ್ರೆಯಲ್ಲಿ ಇಬ್ಬರೂ ಜೊತೆಗೂಡಿ
ನಡೆಯುತ್ತೇವೆಂದೇ ಬಾಳದಾರಿಯಲ್ಲಿ ಒಂದಾಗಿದ್ದು..
ಆದರೆ ಈಗ ನೀ ಮುಂದೆ ಮುಂದೆ ನಡೆದಿರುವೆ..
ನಾನು ನಿನ್ನ ವೇಗ ಪಡೆಯಲಾರದೇ ಹಿಂದೆ ಉಳಿದಿರುವೆ;
ಈಗ ಸುಸ್ತಾಗಿ ನಿಂತಿರುವೆ.
ನೀನು ನನ್ನೊಂದಿಗೆ ನಡೆದು ಈಗ ನನ್ನ ಹಿಂದಿಕ್ಕಿ
ಮತ್ತೊಂದು ತೀರದೆಡೆಗೆ ಹೊರಟಿರುವೆ..
ನಾನು ನಿನ್ನ ಕರೆದರೂ, ನೀನು ಕೇಳಿಸಿಯೂ ಕೇಳಿಸಿಕೊಳ್ಳದವನಂತೆ
ಮುಂದುವರೆದು ಈಗ ನನ್ನ ಕೂಗಿಗೂ ಸಿಗದವನಾಗಿರುವೆ.
ಆದರೆ ಗೆಳೆಯ, ಒಮ್ಮೆ ನನ್ನೆಡೆಗೆ ನೋಡಲಾರೆಯಾ?
ನನ್ನನ್ನೂ ನಿನ್ನೊಂದಿಗೆ ಕರೆದುಕೊಂಡು ಹೋಗಲಾರೆಯಾ?
ನಾನು-ನೀನು ಇನ್ನೊಮ್ಮೆ ಒಂದಾಗಿ ಜೊತೆಗೂಡಿ ನಡೆಯಲಾರೆವಾ?

ವಿಕ್ರಮ ಹತ್ವಾರ ದಿಟ್ಟ ಹೆಂಗಸಿನ ರೂಪ ತೆರೆದಿಟ್ಟಿದ್ದು ‘ ನಾನೊಂದು ತೀರ ‘ ದಲ್ಲಿ :

ಯಾಕಲೇ ಬಸಿಯಾ, ಹೆಂಗೈತ್ಲಾ ಮೈಗೆ?. ಏನಂತ್ ಮಾಡಿದ್ದೀಲೇ
ನನ್ನ; ಇನ್ನೊಂದ್ ಕಿತಾ ತಿರುಗ್ ನೋಡಿದ್ರೆ ಗ್ರಾಚಾರ ಬುಡಸ್ಬಿಡ್ತೀನಿ.
ಅಲ್ ಕುಂತಿರೋ ಜೋಡಿ ನೋಡಿ ನಿಂಗೆ ಮತ್ತೆ ನನ್ ತಾವ ಬರ್ಬೇಕು
ಅಂತ ತೆವಳಾ?. ಮತ್ ನೋಡು, ತಿರುಗ್ ನೋಡ್ಬೇಡ ಬೋ..ಕೆ.
ಓಯ್ತಾ ಇರು ಓಯ್ತಾ ಇರು.

ಸತೀಶಬದಲಾದ ಸ್ವರೂಪ’ ಎನ್ನುವ ಕವಿತೆಯ ಮೂಲಕ ಪ್ರತಿಬಿಂಬಿಸಿದ್ದು ಆಧುನಿಕ ಮಹಿಳೆಯ ರೂಪವ :

ಹಲವು ಸಂಸ್ಕೃತಿಯನು ಮೈವೆತ್ತ ಮಹಿಳೆ
ತಲೆಮಾರಿನ ಒಬ್ಬೊಂಟಿ ಸಂವಾದದ ಕಹಳೆ

ಗಂಡಸಿನ ಬಟ್ಟೆ ತೊಟ್ಟು, ಸೊಂಟಕೆ ಕೈ ಇಟ್ಟು
ಕೂದಲ ಮೇಲ್ಕಟ್ಟಿ ಕರಿಮಣಿ ಧರಿಸಿ ನಿಲ್ಲಬೇಕು
ಅತ್ತೆ-ಮಾವ, ನಾದಿನಿ ಮೈದುನರ ಜೊತೆಗೆ
ಏಗುವುದೂ ಅಲ್ಲದೇ ಗಂಡನಿಗೆ ತಕ್ಕವಳಾಗಬೇಕು.

ಬದಲಾದ ಪ್ರಬುದ್ಧತೆಯಲಿನ ಮಗುವಿನಿಂದ ಹಿಡಿದು
ವೃದ್ದಾಪ್ಯದಲ್ಲಿನ ತಂದೆ-ತಾಯಿ ಅತ್ತೆ-ಮಾವರೊಂದು ಕಡೆ
ಒಬ್ಬರ ಸಂಬಳ ಸಾಲದ ಸಂಸಾರದ ಹಾಡಿಗೆ
ಜೋಡಿಸಬೇಕು ಧ್ವನಿಯ ತಾನು ಅದೇ ದಿಟ್ಟ ನಡೆ.

ಸದಾ ಜಗಳ ತಂದು ಒಡ್ಡೋ ಸಂಸಾರ ಜಂಜಡವೆಂಬ
ಬಂಡಿಯ ಹೊತ್ತು ತೂಗಿ ಸಾಗಬೇಕು ನೊಗವ
ಕೂಡಿಸೋ ಶಕ್ತಿಗಳಿಗಿಂತ ಕಳೆಯೋ ಶಕ್ತಿಯೇ ಹೆಚ್ಚೇ
ಕೊನೆಗೆ ಬಾಯಿಗಳನು ತುಂಬ ಬೇಕು ಅನ್ನವೆಂಬ ನಗುವ.

ಎತ್ತ ನೋಡಿದರೂ ಅತ್ತ ನೆರೆಯ ನೀರೇನೋ ಇದೆ
ಸಮುದ್ರ-ಸಾಗರ ಸಣ್ಣಗುಂಡಿಗಳ ನಡುವೆ ನಾನು ಕಾಣದೆ.

Monday 3 September, 2007

ಚಿತ್ರ - 17




ಅನಿವಾಸಿಯವರು ಹೈಕು ಮಾದರಿಯಲ್ಲಿ ಬರೆದಿದ್ದು :
ನಾಳೆಯ ಎಳೆ ಬೆಳಕು
ಹೊರಳಿ ಬಂದು ಮೂಸಿ ಮೈ
ತಿಕ್ಕಿ ಬಾಲವಾಡಿಸುವಾಗ
ಬೇರು ಬಿಳಲು
ಆಳಕ್ಕಿಳಿದ
ಆಲಕ್ಕೆ ಒಳಗೊಳಗೇ ಪುಲಕ.

ಶ್ರೀತ್ರಿ ಕಾಲನ ಕ್ರೌರ್ಯವನ್ನು ನೇಗಿಲಿಗೆ ಹೋಲಿಸುತ್ತಾ ಹೇಳುತ್ತಾರೆ :
ಅವ್ವನ ಮೈತುಂಬಾ
ಕ್ರೂರ ಕಾಲ ಎಳೆದ
ನೇಗಿಲ ಗುರುತುಗಳು!

ಅವಶ್ಯಕತೆ ಇದ್ದಾಗ ಬರದ ಮಗನ ನೆನಪಿನಲ್ಲಿರುವ ತಾಯಿಯ ಬಗ್ಗೆ ಬರೆದಿದ್ದು ಸಾಗರ್ :
ಬಿಸಿಲಿನ ಜಳವ ಅಡ್ಡ ಹಾಕಿದ
ಆ ಸೀರೆಯ ಸೆರಗು
ಇಂದು ಬಿಸಿಲಿನಲಿ ಒಣಗುತಿರಲು
ಅದನ್ನು ಹೊದ್ದ ನನ್ನಮ್ಮ
ಬಾರದ ಮಗನ ನೆನಪಿನಲಿ
ಬಾಡಿ ಹೋಗಿಹಳು ..

ವಿಕ್ರಮ ಹತ್ವಾರ ಕಾವ್ಯಮಯವಾಗಿ ಮನಸಿಗೆ ಮುಟ್ಟುವಂತೆ ಈ ಕೆಳಗಿನಂತೆ ಬರೆದಿದ್ದಾರೆ :
ಇನ್ನೂ....
ಹೀರಿ ಮುಗಿಸು,
ಉಳಿದ ನರ
ನಾಡಿಗಳೂ ಸೆಟೆದು ನಿಂತಿವೆ.

ನಡಿಗೆ ಕೊನೆಗೊಂಡು
ದಾರಿಯಲ್ಲೊಂದು ನೆಲೆ ಕಂಡು
ಮುಖದ ಹಂಗಿಲ್ಲದೆ ಮಿಂದು
ಚೆಂದದೊಂದು ಸೀರೆಯುಟ್ಟು
ಮಂಡಿ ಮಡಚಿ
ಮುದ್ರೆ ಬಿಗಿದು
ಕುಳಿತಿದ್ದೇನೆ.
ಕಾಲದ ಬಳಿಕ ಇನ್ನೇಕೆ-
ಕಾಲ ಬಳಿ ಬೆಳಕು?.

ಅವನ ನಮ್ರತೆ ನುಡಿಯಿತು-
ನಡೆದು ಬಂದವರ ನಮಿಸಲು,
ಕಾಲ ಕಾಣಿಸುವ ಬೆಳಕು.

ಸಿಂಧು ಅವರು ತಮ್ಮ ‘ಅರ್ಘ್ಯ ಪಾದ್ಯ’ ಎಂಬ ಕವಿತೆಯ ಮೂಲಕ ಓದುಗರಿಗೆ ಹೇಳಿದ್ದು :
ಚೆಲುವು,ಕಸುವು, ಚಲನ
ಎಲ್ಲ ಕಾಲನಿಗೆ ಮಣಿದು
ಸುಕ್ಕಾಗಿ,ಮುದುಡಿ,ನಿಶ್ಚಲವಾಗಿ
ಕುಳಿತ ಗಳಿಗೆಯಲ್ಲೂ
ಕತ್ತಲೆಯ ಮರೆಹೋಗದೆ
ಬೆಳಕ ಬರವ ಕಾಯುತ್ತ
ಕೂತ ದೇಹದ ಗುಡಿಯ ದೇವಿಯೇ
ನಿನಗೆ ಹೊನ್ನಗಿಂಡಿಯ ಹೇಮಧಾರೆಯ
ಅರ್ಘ್ಯ ಪಾದ್ಯ..
ಇನ್ನೇನ ಕೊಡಲಿ
ಏನ ಹರಸುವೆ ಅಮ್ಮಾ..?

ಎಲ್ಲ ಸುಕ್ಕಿನ ಹಿಂದೆ ಮಿರುಗಿದ ಸೊಬಗು
ಸುಸ್ತಾಗಿ ಕೂತ ಮೈಯ ಒಳಗೆ ಅಂದು ಮೆರೆದ ಚೈತನ್ಯ
ಮಡಚಿ ಕೂತ ಕಾಲ್ಗಳ ಆಸರೆಗೆ ಅವತ್ತಿನ ನಡಿಗೆ
ಎಲ್ಲ ಕಳೆದು ಕೂತ ಭಾವದಲ್ಲಿ
ಉಳಿದೆಲ್ಲ ಪಡೆದು ಹರಿಯಿಸಿದ ಬೆಳಕ ಪ್ರಭಾವಳಿ..
ನೆರಳ ಕೊಡಲು ಬಿಸಿಲು ಬೇಕು,
ಬೆಳಕು ಹೊಳೆಯಲು ಕತ್ತಲಿರಬೇಕು..

ಹರಸಲೇನಿದೆ ಮಗುವೆ..
ಮಣಿಯುವುದು ಮುಖ್ಯ,
ಮಣಿದವಗೇ ಬೆಳಕಿನ ಸೌಖ್ಯ!

ತನ್ನ ಹರೆಯದ ದಿನಗಳನ್ನು ನೆನೆಯುತ್ತಿರುವ ವೃದ್ದೆಯ ಬಗ್ಗೆ ಬರೆದಿದ್ದು ಸುಶ್ರುತ ದೊಡ್ಡೇರಿ:
ಹೀಗೆ ಕಾಣಿಸುತ್ತೀನಷ್ಟೇ;
ನನ್ನ ಹೃದಯದಲ್ಲಿನ ನೆನಪುಗಳಿಗೆ
ಇನ್ನೂ ಸುಕ್ಕು ಆವರಿಸಿಲ್ಲ ನಲ್ಲಾ...
ಹೀಗಿಲ್ಲಿ ಕೂತಾಗ, ಈ ಮುದಿ ಕಣ್ಣುಗಳಿಗೆ
ಲಲನೆಯರ ಹರಿದಾಟ ಕಂಡಾಗ,
ನನ್ನ ಹರೆಯದ ದಿನಗಳ ನೆನಪಾಗುತ್ತದೆ...
ನಿನ್ನ ನೆನಪಾಗುತ್ತದೆ...

ನಾನು ಬಿಸಿಲಲ್ಲಿ ಹೋಗುವಂತಾದರೆ ನೀನು ಕೇಳುತ್ತಿದ್ದೆ:
"ನಾ ನಿನ್ನ ಛತ್ರಿಯಾಗಲೇ?
ಸಾಲು ಮರವಾಗಿ ದಾರಿಗೆ ತಂಪಾಗಲೇ?
ಅಥವಾ ಮೋಡವಾಗಿ ಆ ಸೂರ್ಯನನ್ನೇ ಮುಚ್ಚಿಬಿಡಲೇ?"
ನಿನ್ನ ಪ್ರೀತಿ ಮಾತುಗಳೇ
ನನಗೆ ಲತಾಕುಂಜವಾಗುತ್ತಿದ್ದವು.

ಆದರೆ ಹೀಗೆ ಮ್ಯಾಲಿನದ್ಯಾವುದೋ ಲೋಕಕೆ
ನನಗಿಂತ ಮುಂಚೆ ಹೊರಟು ಹೋದೆ ಯಾಕೆ?

ಹಾಂ, ಈಗ ನಾನು ಹೇಳಿದ ಮೇಲೆ ತಪ್ಪಿನ ಅರಿವಾಗಿ,
ಹಳೆಯ ಭರವಸೆಗಳ ನೆನಪಾಗಿ
ಮೋಡವಾಗಿ ಹೋಗಿ ರವಿಯನ್ನು ಮುಚ್ಚಿಬಿಟ್ಟೀಯಾ..!

ಬದುಕ ವಿಪರ್ಯಾಸಗಳಿಗೆ ದೃಷ್ಟಾಂತ ನಾನೀಗ:
ದಿನಕರನ ಕಣ್ಣು ಚುರುಕಾಗುತ್ತಿದ್ದಂತೆ
ಹೊರಬರಬೇಕು ನಾನು ದಿನವೂ...
ಬಿಸಿಲು ತಾಕಿದರೆ ಮಾತ್ರ ಈ ಸುಕ್ಕು ಚರ್ಮ
ಕೊಂಚ ಮಿದುವಾಗುತ್ತದೆ;
ಯಾರಾದರೂ ಮುಟ್ಟಿದರೆ, ತಟ್ಟಿದರೆ
ಸಧ್ಯ, ಅರಿವಾಗುತ್ತದೆ...

ನಿನ್ನ ಪ್ರೀತಿ ನೆರಳ ನೆನಪು ಸಾಕು ಬಿಡು:
ನೀನು ಬೆರಳ ನೀಡಿ ಕರೆದುಕೊಳ್ಳುವನಕ
ಬೆಚ್ಚಗೆ ಬದುಕಿಕೊಂಡಿರುತ್ತೇನೆ.

ಸಾಯುವವರೆಗಾದರೂ ಉಳಿದುಕೊಳ್ಳಬೇಕಲ್ಲ ಮಾರಾಯಾ..!

ಪ್ರಶ್ನೇ ಮೇಲ್ ಪ್ರಶ್ನೇ’ ಅಂತ ಬರೆದಿದ್ದು ಸತೀಶ :
ಸುಮ್ನೇ ಯಾಕ್ ಕುಂತಿ ನಡೀ ತಾಯೀ
ಬೆಳ್ಳಂಬೆಳಗು ಬಿದ್ದತಿ ಕಾಣಂಗಿಲ್ಲೇನು?
ನೆತ್ತೀ ಸುಡೋ ಬಿಸ್ಲು, ಕಂಡ್ರೂ ಕಾಣ್ದಿರೋ ಮಕ್ಳು
ಇರೋರೆಲ್ಲಾ ಇದ್ರೂ ಯಾರೂ ನೋಡಂಗಿಲ್ಲೇನು?

ಮೈಯಿನ್ನ್ ನರಾ ಕಾಣಾಕ್ ಹತ್ತಿ
ಒಣಗಿದ್ ಜೀವಾ ಜೋತ್‌ಗ್ಯಂಡ್ ಬತ್ತಿ
ಹೋದದ್ದೆಲ್ಲಾ ಹಳೇ ನೆಪ್ಪು ಅಂತಾ ಕುಂತ್ಯೇನು?

ಜೀವಾ ಸತ್ರೂ ಬೆಳ್ಯೋ ಉಗುರಾ
ಅಸೇ ಕನ್ಸೂ ಎಷ್ಟೋ ದೂರಾ
ನಿಜಾ ತೋರ್ಸೋ ಬೆಳಕನ್ ನೀನು ನೋಡಿದ್ದೀಯೇನು?

ಬಡವ್ರ ಕಾಲು ಎಂದೂ ಮುಂದೆ
ಬಾಯಿ-ಕೈ ಇರೋವೇ ಹಿಂದೆ
ತಲೆಯಾಗೇನೂ ಇಲ್ಲಾ ಎಂದು ಯಾರದು ಅಂದೋರು?

ಮುದ್ದಿನ ಮಾತಿಗೆ ಮರುಳಾಗಲ್ಲ
ಸೀರೇ-ಹೆಂಡಕೆ ಮಾರ್ ಹೋಗಲ್ಲ
ಅಂತಾ ಹೇಳ್ತಾ ನಿನ್ನಯ ಮತವನು ಮಾರಿದ್ದೀಯೇನು?

ಕಾಲಿಗಷ್ಟೇ ಬೆಳಕನ್ನ್ ತೋರ್ಸೋ
ಪ್ರಶ್ನೇ ಮೇಲೇ ಪ್ರಶ್ನೇ ಕೇಳ್ಸೋ
ಬುದ್ದೀ ಇದ್ದೋರ್ ಹಾಗೆ ಮಾಡೋರಿಂದ ದೂರಿದ್ದೀಯೇನು?