Wednesday 31 December, 2008
Wednesday 24 December, 2008
ಚಿತ್ರ ೮೪
ತವಿಶ್ರೀ:
ಬಂಜೆ
ಮಾನವ:
ಎಷ್ಟು ಮೇಲೆ ದೃಷ್ಟಿ ಹರಿಸಿದರೇನಂತೆ
ನೀ ಮೇಲ ಹೋಗಲಾರೆ,
ಬೆಳೆಯಲಾರೆ, ಟಿಸಿಲೊಡೆಯಲಾರೆ
ಬದುಕ ನೀಡಲಾರೆ
ನೀನೊಂದು ಬಂಜೆ
ಆದರೂ ಯಾರಿಗೂ ಅಂಜೆ
ಉಗ್ರವಾದ, ಭೂಕಂಪ ನಿಸರ್ಗ ಕೋಪ ಎಲ್ಲವನ್ನೂ ಸಹಿಸೆ
ಬಂಜೆಯ ಪಟ್ಟದ ಮುಂದೆ ಅವೆಲ್ಲ ತೃಣಮಾತ್ರ
ಮರದ ಅಳಲು:
ಇನಿತು ಕಾಲ ನಿನ್ನ ಸಲುಹಿದುದ ಮರೆತೆಯಾ?
ಅಂದು ಅನ್ನ ಉಣಿಸಲು
ಎನ್ನ ಹೊಗಳಿ ಅಟ್ಟಕೇರಿಸಿದೆ
ನಾ ದೇವ ಸಮಾನ ಎಂದುಲಿದೆ
ಹಿಂದಿನಿಂದಲೇ ಎನ್ನ ಕರುಳ ಬಳ್ಳಿಯ ಕಡಿದೆ
ಅಂಗೋಂಪಾಂಗಗಳ ಕತ್ತರಿಸಿ
ತತ್ತರಿಸುವಂತಾಗಿಸಿದೆ
ಎನ್ನುಸಿರ ನಿಲ್ಲಿಸಿದೆ
ಮಾನವ:
ಕಡು ಕಷ್ಟವೇ ನಿನ್ನಾಹಾರ
ಸುಖವೆಂದರೇನೆಂದೇ ನೀ ತಿಳಿಯೇ
ಈ ಭೂಮಿಗೆ ನೀ ಭಾರ
ಎಷ್ಟು ನೇಸರನ ಶಕ್ತಿ
ಉಂಡರೇನಂತೆ
ಎಷ್ಟು ನೀರು ಗೊಬ್ಬರ
ಉಣಿಸಿದರೇನಂತೆ
ಉರುವಲಿಗೆ ಮಾತ್ರ ಬರುವ
ನೀನೊಂದು ಬಂಜೆ
ಮರದ ಅಳಲು:
ಯಾಕಿಂಥ ಬೆರಕಿತನ ನಿನಗೆ
ನಿನ್ನ ಸುಖದೆಡೆಗೇ ಆಲೋಚನೆ
ನಾನಿರುವುದು ಕೇವಲ ಯಾಚನೆಗೆಯೇ?
ಇಲ್ಲಿಯವರೆವಿಗೆ ನಾ ಜಗವ
ಸಲುಹಿದುದ ಮರೆಯುವುದಾ?
ಎನ್ನ ಈ ಸ್ಥಿತಿಗೆ ಯಾರು
ಕಾರಣ? ನೀನಲ್ಲವೇ?
ನಿನ್ನ ಕೃತ್ರಿಮತನಕ್ಕೆ
ಎನ್ನ ಹೀಗಳೆವುದು ಸರಿಯೇ!
Posted by ಅಮರ at 1:22 pm 1 ಕವನ/ಬರಹಗಳು
Wednesday 17 December, 2008
ಚಿತ್ರ ೮೩
ತವಿಶ್ರೀ:
ಹಾರೋಣ ತೇಲೋಣ
ಆತ:
ಹಿಡಿಯಬಲ್ಲೆಯಾ ನೀ ಎನ್ನ
ಜೂಟ್ ಜೂಟ್ ಜೂಟ್
ಸನಿಹ ಬರಲಾರೆ ನೀ ಎನ್ನ
ಹಿಡಿದಿಹೆನು ನಾ ಪ್ಯಾರಾಚೂಟ್
ಆಕೆ:
ಹಾರಿ ಏರಿ ನೀ ಬಂದೆ
ಓಡುತಿಹೆ ನೀ ಎನ್ನ ಮುಂದೆ
ಬಾರದಿರಲೇ ನಾ ನಿನ್ನ ಹಿಂದೆ
ಎನ್ನ ಇರಿಸಿಕೋ ನಿನ್ನ ಮುಂದೆ
ಆತ:
ನಿನಗೆ ಗೊತ್ತೇ ಇದರ ಫೀಲಿಂಗು
ಹೆಸರಿಗಿದು ಪ್ಯಾರಾಸೈಲಿಂಗು
ಆಗಸದಲಿ ಸಡ್ಡು ಹೊಡೆಯುವುದೊಂದು ಥ್ರಿಲ್ಲಿಂಗು
ಪರಲೋಕದಲಿ ತೇಲಿಸುವುದು ಇದರ ಗುಂಗು
ಆಕೆ:
ನಿನ್ನ ಮನದಿಂಗಿತ ನನಗೂ ತಿಳಿವುದು
ನಾನೂ ನಿನ್ನೊಂದಿಗೆ ತೇಲಬಹುದು
ಕಾಮನಬಿಲ್ಲಿನ ಕಮಾನು ಏರುವಾ
ದಿಕ್ಕಿಗಂತವಿರುವುದ ತೋರುವಾ
Posted by ಅಮರ at 11:34 am 2 ಕವನ/ಬರಹಗಳು
Wednesday 10 December, 2008
ಚಿತ್ರ ೮೨
ತವಿಶ್ರೀ :
ಸಮಜೋಡಿ
ಪುಟ್ಟ ಪುಟ್ಟ ಹೆಜ್ಜೆಯನಿಡು
ನಿನ್ನ ಕೈಗಳನು ನನ್ನಲಿಡು
ಅಲ್ಲಿ ದೂರಕೆ ಹೋಗುವಾ
ಹೊಟ್ಟೆ ಹಸಿವವರೆವಿಗೆ ಆಡುವಾ
ಎನಗಿಲ್ಲ ಜೊತೆಗೆ ಯಾರೂ
ನಿನ್ನ ಜೊತೆಯಾಗುವೆನು ಬಾರೋ
ಇಬ್ಬರಿಗೂ ತಣ್ಣಗಿಹ ನೆತ್ತರು
ಕ್ಷಣದಲಿ ಮೂಡುವುದು ಮುನಿಸು
ಹಣೆಗೆ ಕೆನ್ನೆಗೆ ಇಡುವರು ದೃಷ್ಟಿ ಬೊಟ್ಟು
ಎಲ್ಲ ನಿನ್ನ ಮುದ್ದಾಡುವರು
ಈ ಮನೆಗೆ ನಾನೇ ದೃಷ್ಟಿ ಬೊಟ್ಟು
ಎನ್ನ ನೋಡಿ ನಿಟ್ಟುಸಿರನಿಡುವರು
ಸೂಟು ಬೂಟು ಹಾಕಿ ಹಾಕಿ ಸುಸ್ತಾಗಿದೆಯಂತೆ
ಒಂದು ಜೀವನದ ಏರಿನಲ್ಲಿ ಇನ್ನೊಂದು ಇಳಿವಿನಲ್ಲಿ
ಮನೋಸ್ಥಿತಿ ಒಂದೇ
ಈಗ ಹೇಳಿದ್ದು ಇನ್ನೊಂದರೆಕ್ಷಣದಲ್ಲಿ ಮರೆವು
ಗಾಳಿಗೆ ಹೊಯ್ದಾಡುವಂತಿರುವ ಹೂವಿನಂತಹ ತಲೆ
ಬೆಳ್ಳಿಯಂತೆ ಫಳಫಳಿಸುವ ತಲೆಗೂದಲು
ಇಬ್ಬರಲೂ ಕಾಣುವರು ಬೊಚ್ಚು ಬಾಯಿ
ಇಬ್ಬರೂ ತೂಗುವರೇ ತಕ್ಕಡಿಯಲಿ ಒಂದೇ ಸಮ
ಇಲ್ಲಿ ನೋಡಿ ಇನ್ನೊಂದು ಅಂತಹದೇ ನಡುಗುವ ತಲೆ
ಗೆಜ್ಜೆಯ ನಾದದಿ ಮೂಡುವುದು ಘಲ ಘಲ ಸದ್ದು
ಬಾಯಲಿ ನವಲುತಿರುವ ಪೇಪರಿನ ಚೂರು
ತಲೆ ತುಂಬಾ ಮಿರಮಿರ ಹೊಳೆಯುತಿರುವ ಕಪ್ಪನೆ ಕೇಶರಾಶಿ
ಕೈ ಬಾಯಿ ಸನ್ನೆಯಲೇ ಇಬ್ಬರದೂ ಸಂವಾದ
ಇಬ್ಬರಿಗೂ ಅಕ್ಕ ಪಕ್ಕದವರ ಅರಿವೇ ಇಲ್ಲ
ಅರೆಮನಸ್ಕರಾಗಿ ಒಂದೆಡೆ ನಿಲ್ಲದ ಮನ
ಇವರ ಮನ ಹಿಡಿದಿಡುವುದೊಂದೇ ಆದ ಗಾನ
ಅರುವತ್ತರ ಅರುಳು ಮರುಳಿನ ಅಜ್ಜನದು ಮಗುವಿನ ಮನಸು
ಇಬ್ಬರಿಗೂ ಈಗ ಹೇಳಿದ್ದು ಮರುಘಳಿಗೆಯಲಿ ಮರೆವು
ಒಬ್ಬರದು ಸುಕ್ಕುಗಟ್ಟಿಹ ಚರ್ಮ, ಉಡುಗುತ್ತಿರುವ ಚೈತನ್ಯ
ಇನ್ನೊಂದರದು ಕೋಮಲ ತೊಗಲು, ಪುಟಿದೇಳುತಿಹದು ಅನನ್ಯ
Posted by ಅಮರ at 11:27 am 1 ಕವನ/ಬರಹಗಳು
Tuesday 2 December, 2008
ಚಿತ್ರ ೮೧
ಜೋಗಿ:
ಕೊಳಲೇ
ಕೊಳದಿರಲೇ
ತವಿಶ್ರೀ:
ಜಾತ್ರೆ
ಅಂದಂತೆ ಬರಗೂರಲಿ ಪುಟ್ಟ ಸಂತೆ
ಅಡುಗೆಗೆ ಬೇಕು ತರಕಾರಿಯ ಕಂತೆ
ಅಪ್ಪನಿಗೆ ಅಮ್ಮನ ಅಣತಿಯಂತೆ
ಸಹಾಯಿಸಲು ನಾನೂ ಹೋಗಬೇಕಂತೆ
ಅಪ್ಪ ತರಕಾರಿಯ ಆರಿಸುತಿರಲು ಅತ್ತ
ಪುಟ್ಟನ ಕಣ್ಣು ಜಾತ್ರೆಯ ಬಣ್ಣಗಳ ಸುತ್ತ
ಬಾಯಿ ನೀರೂರಿಸುವ ಸಿಹಿತಿಂಡಿಗಳು
ಮನದಲೇನೇನೋ ಆಮಿಷಗಳು
ಬರಗೂರ ಜಾತ್ರೆಯಲಿ ಪಡಪೋಶಿ ಗುಂಡ
ಬೆಂಡು ಬತ್ತಾಸು ಆಟಿಕೆಗಳ ರಾಶಿಯ ಕಂಡ
ಎಷ್ಟೊಂದು ತುತ್ತೂರಿಗಳ ನೋಡಿ
ತೆರೆಯಿತು ಅವನ ಪುಟ್ಟ ಬಾಯಿ
ತುತ್ತೂರಿ ಮಾರುವನ ನೋಡಿದ ಕಿಟ್ಟ
ಹಿರಿ ಹಿರಿ ಹಿಗ್ಗುತಿಹ ಪುಟ್ಟ
ಪೀಪಿ ಬಲೂನು ಆಟಿಕೆಗಳ ನೋಡಿ
ಮುಚ್ಚದಾಯಿತು ಪುಟ್ಟನ ಬಾಯಿ
ಇತ್ತಂತೆ ತೆರೆದ ಬಾಯಿ ತೆರೆದಂತೆ
ಕಾಣದ ಸ್ವರ್ಗವ ಕಂಡನಂತೆ
ಬಾಯೊಳೊಂದು ನೊಣವ ಸೇರಿ
ಮತ್ತೆ ಜಗಕೆ ಇಳಿದನೀ ಪೋರ
Posted by ಶ್ರೀನಿಧಿ.ಡಿ.ಎಸ್ at 10:32 pm 2 ಕವನ/ಬರಹಗಳು
ಹಳೆಯ ವರ್ಷದ ಇರುಳು ಚಳಿಯಲ್ಲಿ ಮುಗಿಯುತ್ತಿದೆ.
ಹೊಸ ವರ್ಷವು ಹೊಸ ಬೆಳಕನ್ನು ತರಲಿ.
ನಿಶ್ಶಕ್ತ ಮುಂಜಾವು
ಮುಂಜಾವಿನ ಮಬ್ಬುಗತ್ತಲು
ಮಂಜು ಕವಿದ ಬಿಳಿಪರದೆ
ಎದುರೇನೂ ಕಾಣದು
ಕಣ್ಣು ಉಜ್ಜಿ ಉಜ್ಜಿ ಹೆಜ್ಜೆ ಇರಿಸಬೇಕು
ಕಂದೀಲಿನ ಕಿರುಗಣ್ಣ ನೋಟದಾನ
ಅಬ್ಬೇಪಾರಿ ವಿದ್ಯುತ್ತಿನ
ಯುಕ್ತಿಯಿಲ್ಲದ ಶಕ್ತಿಯ ಕಿರುದಾನ
ನೋಡುಗರಿಗೆ ದಾನದಷ್ಟೇ ದೃಷ್ಟಿ
ಶತಪಥಗಳಿಂದಾಚೆ ಕಾರ್ಗತ್ತಲು
ಎದುರಾದುದಕೆ ಚೇತನದ ಢಿಕ್ಕಿ
ಕಣ್ಣಿದ್ದೂ ಕುರುಡುತನಕೆ ಸಿಕ್ಕಿ
ರೆಕ್ಕೆಯಿದ್ದೂ ಹಾರಲಾರದಿದು ಹಕ್ಕಿ
ಗಾಡಿಯೇರಿರುವ
ಸಾಮಾನು ಸರಿರಾತ್ರಿವರೆವಿಗೆ
ಗಿರಾಕಿಗಳ ಮನ ಒಲಿಸಲು ಪ್ರಯತ್ನಿಸಿ
ಸುಸ್ತಾಗಿ
ಹೊದ್ದು ಮಲಗಿದೆ
ಛಳಿಗೆ ಅಲ್ಲಾಡಲು ಆಗದಾಗಿದೆ
ಕ್ಷಣ ಮಾತ್ರದಲಿ
ನೇಸರನ ಆಗಮನ
ಯುಕ್ತಿಯೊಡಗೂಡಿದ ಶಕ್ತಿಯ ವರದಾನ
ಮಂಜಿನ ಪಲಾಯನ
ನಿಶ್ಶಕ್ತರಿಗೂ ಶಕ್ತಿಯ ಫಲಪ್ರದಾನ
ವಿದ್ಯುತ್ತಿಗಿಹುದು ನೇಸರನ ಶಕ್ತಿ
ಆದರಿಲ್ಲ ಆತನ ಯುಕ್ತಿ
ಅಂಧಕಾರ ಜಗಕೆ ಕೊಡಬಲ್ಲ ಮುಕ್ತಿ
ಕಗ್ಗತ್ತಲು ತುಂಬಿರುವ
ಹೊರಗಣ್ಣ ತೆರೆದರೇನು
ಮುಚ್ಚಿದರೇನು
ಅಜ್ಞಾನದ ಮಂಜಿನಿಂದ
ಏನೂ ಕಾಣದು - ಅರಿವಾಗದು
ಪ್ರಕೃತಿ ದೈವ ನೇಸರನಿಂದಲ್ಲವೇ
ಒಳಗಣ್ಣು ತೆರೆವುದು?
ನೇಸರನ ನಂಬು
ಒಳಗಣ್ಣ ತೆರೆ
ಮಾಗಿಯ ಚಳಿ ಮಾಯುತ್ತಿದ್ದಂತೆ ಸಂಭ್ರಮದ ಸಂಕ್ರಾಂತಿಯ ಎದುರುಗೊಳ್ಳುವಿಕೆ