Monday 31 December, 2007

ಚಿತ್ರ- ೩೪



ಸತೀಶ ಹೇಳುವಂತೆ ನಾಳೆಯ ಕನಸುಗಳನು ನಿರುಕಿಸುವುದು ಒಳಿತು

ಅಲ್ಲಿನ ಬಸದಿ ಬಿಡಾರಗಳು
ಶೀಲ ಗೋಪುರಗಳು ನಕ್ಷತ್ರಿಕೆಗಳು
ಹಚ್ಚನೆ ಹಸಿರು ಹೂವಿನ ಚಿತ್ತಾರದ ವನ
ಅದೆಷ್ಟೋ ಮೆಟ್ಟಿಲುಗಳನ್ನು ಏರಿ ಬರೋ ಜನ.

ಹಗಲು ರಾತ್ರಿ ಶ್ರಮಿಸಿ ನೀರುಣಿಸಿ
ಹಸಿರನ್ನ ಹಸಿರಾಗಿಸಿಟ್ಟುಕೊಂಡಿರೋ
ಸಾಹಸಿಗರ ನಡುವೆ
ಬಿಸಿಲಿನಲಿ ಬಸವಳಿದ ಗೋಡೆಗಳ
ಬಿರುಕಗಳನ್ನು ಅವಲೋಕಿಸುತ್ತಲೋ
ಅಲ್ಲಲ್ಲಿ ಹುದುಗಿಸಿದ ಚಿತ್ರಗಳ
ಮನಸಿನೊಳಗಿರುವುದನು ಓದುತ್ತಲೋ
ದೇವರ ಪಟವಿಟ್ಟು ಹಣದಿಂದ ಮುಚ್ಚಿದ
ದೇಗುಲ ವ್ಯವಸ್ಥೆಗೆ ಎತ್ತನಿನಿಂದ ಸುತ್ತಿದರೇನು?

ದೂರದ ಖಾಲಿ ಬಸದಿಗಳ ನೆರಳಲಿ
ಪಿಸುಮಾತಿನಲೇ ಸಂವಾದಿಸುವ ಕೊರಳಲಿ
ನವ್ಯತೆಗೆ ಕರಗುವ ಮೈ ಮನಗಳ ನೋಡುತ್ತಾ
ಎಷ್ಟು ಹೊತ್ತು ಕುಳಿತರೂ
ಹಿಂಗದ ಹಸಿವು ದಾಹಗಳ ಮುಂದೆ
ಸೌಂದರ್ಯದ ವರ್ಣನೆಗೆ ಬಿಡುವೆಲ್ಲಿ ತಂದೆ?

ಪಕ್ಕದಲ್ಲಿದ್ದು ಕಣ್ಣಿಗೆ ಕಾಣ್ವುದು ಹಸಿರು
ಬಿಸಿಲಿನಲ್ಲಿ ಬೆಂದು ಹೋಗ್ವುದು ಉಸಿರು
ಕಟ್ಟಿ ಮುಂಡಾಸ ಕೈ ಚೆಲ್ಲಿ ಕುಳಿತು
ನಾಳೆಯ ಕನಸುಗಳನು ನಿರುಕಿಸುವುದು ಒಳಿತು.

Monday 24 December, 2007

ಚಿತ್ರ- ೩೩



ಪುಣೆಯ ಕುಮಾರಸ್ವಾಮಿ, ತಮ್ಮ 'ರಣಧೀರ ಶಿವಾಜಿ' ಕವನದಲ್ಲಿ ಅಜ್ಜ ತನ್ನ ಮೊಮ್ಮಗನಿಗೆ ಇತಿಹಾಸ ಪುಟಗಳನ್ನು ತೆರೆದಿಟ್ಟಿದ್ದು ಹೀಗೆ:

ಅಜ್ಜ ಯಾರ ಮೂರ್ತಿ ಇದು
ಎಷ್ಟೊಂದು ಗಂಭೀರ ವರ್ಚಸ್ಸು
ಯಾರು ಈ ತೇಜೋ ಪುರುಷ
ಹೇಳು ನನಗೆ ಮೂರ್ತಿಯ ಕಥೆಯನ್ನ

ಮೊಘಲರ ಅಟ್ಟಹಾಸ ಹುಟ್ಟಡಗಿಸಿ
ಪಶ್ಚಿಮ ದೇಶದ ಕೆಂಪು ಮೂತಿಗಳ ತೇಜೋವದೆ ಮಾಡುತ್ತ
ಆಹತಕೆ ಸಿಕ್ಕು ನರಳಿದ ಹಿಂದೂನೆಲವನ್ನು
ಮತ್ತೇ ಸಲಹಿದ ಧೀರೋತ್ತಮ ಶಿವಾಜಿ ಈತನು

ಅಳಿದ ವಿಜಯನಗರ ಸಾರ್ಮಾಜ್ಯದ ನೆಲದಲ್ಲಿ
ಬಸವಳಿದು ಹೋಗಿದ್ದ ಹಿಂದುಗಳ ಹಿಂಡಲ್ಲಿ
ಗಂಡುಗಲಿಯಂತೆ ಗರ್ವದಿಂದ ಮೇಲೆದ್ದು ಬಂದು
ನರ ರಾಕ್ಷಸರ ಒಡಲ ಸೀಳಿದ ಅಂಜದ ಗಂಡಿವನು

ರಾಮಧಾಸರಿಂದ ಧರ್ಮ ರಕ್ಷಣೆಯ ದೀಕ್ಷೆತೊಟ್ಟು
ಮಾವಳಿಗಳಿಂದ ಸೈನಿಕ ದಂಡು ಕಟ್ಟಿ
ಸಯ್ಯಾದ್ರಿ ಶಿಕರದಲ್ಲಿ ಕೋಟೆಗಳ ಕಟ್ಟಿ
ಶತ್ರುಗಳ ರಟ್ಟೆಯನು ಹುಟ್ಟಡಗಿಸಿದ ರಣಧೀರನು

ಜೀಜಾಮಾತೆಯ ಶ್ರೀರಕ್ಷೆಯಲ್ಲಿ
ದಾದಾಜಿ ಕೊಂಡದೇವ ಗುರು ಮಾರ್ಗದರ್ಶನದಲ್ಲಿ
ವೇದ ಶಾಸ್ತ್ರ ಪುರಾಣಗಳ ಅರಿತ ನಿಪುಣನು
ಇಂದು ನಮೆಲ್ಲರಿಗಾಗಿಹನು ಮಾರ್ಗದರ್ಶಕನು

ಸಯ್ಯಾದ್ರಿಯ ಶಿಕರದಲ್ಲಿ ಕೋಟೆ ಕೊತ್ತಲಗಳಲಿ
ಗುಡಿ ಗೋಪುರದಲ್ಲಿ ಕಾಡು ಕೊಲ್ಲಿಗಳಲ್ಲಿ
ಹಿಂದೂ ದರ್ಮದ ಕೀರ್ತಿದ್ವಜವ ಹಾರಿಸಿದ
ಅಮರ ಕೀರ್ತಿವಂತನು ಈ ಶಿವಾಬನು

ಮೊಮ್ಮಗ ಸಿನಿಕನಾಗಿ ಇತಿಹಾಸದ ಬಗ್ಗೆ ಹೇಳಿದ ತಾತನ ಮೇಲೆ ಹರಿಹಾಯ್ದಿದ್ದು, ಸತೀಶ ಅವರು ನಮ್ಮ ಎದುರಿಗೆ 'ಅದೇನು ಕಥೆ ಅಂತ ಹೇಳ್ತೀರೋ ತಾತ?' ಎನ್ನುವ ಕವನದಲ್ಲಿ ಓದುಗರಿಗೆ ಹೇಳಿದ್ದು :

ತೋಪು ಮತಾಪು ಪಿರಂಗಿಗಳನೆಲ್ಲ ಎತ್ತರದ
ಕಟ್ಟೆ ಏರಿಸಿ ಸುತ್ತಲನು ನಂದನವನವ ಮಾಡಿ
ಅದೆಷ್ಟೋ ಜನರು ರಕ್ತ ಸುರಿಸಿ ಬೆಳೆದ ನಾಡ
ನೆಲವ ಹಸಿರಿನಿಂದ ಕಂಗೊಳಿಸಿ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಸ್ವಾತಂತ್ರ್ಯಾ ಅಂತ ಅದೇನೇನೋ ಹೇಳ್ತೀರಾ
ಅದು ನಮ್ಮೊಳಗಿದೆಯೋ ಅಥವಾ ಹೊರಗೋ
ಕಥೆ ಹೇಳೋರ್ ಪ್ರತಿಮೆಗಳನೆಲ್ಲ ಏರಿಸಿಡ್ತೀರಾ
ಮೇಲಿನ ಕೊಳೆಯನು ತೊಳೆಯದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಪರಂಗಿಯವ್ರನ್ನ ಒಳಗಡೆ ಯಾಕ್ ಬಿಟ್‌ಗೊಂಡ್ರಿ
ಹಾಗೆ ಬಂದೋರನ್ನ ಬೆಳೆಯೋಕ್ ಯಾಕ್ ಬಿಟ್ರಿ
ಅಂದೇ ನಿಮ್ಮೊಳಗಿರದಿದ್ದ ಒಗ್ಗಟಿನಿಂದ ಕಲಿತದ್ದೇನು
ಏನೇನೋ ಪ್ರಶ್ನೆಗೆ ಉತ್ತರವೇ ಸಿಗದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಅಂದು ಸಿಡಿಯದೇ ಉಳಿದ ತೋಪು ಮತಾಪುಗಳು
ನೀರು ನೆಲವ ಕಂಡಿರದ ಅದೆಷ್ಟೋ ಬೀಜಗಳು
ಇಂದು ಜಗವನ್ನೇ ಜನರು ಸಣ್ಣದನಾಗಿ ಮಾಡುವ ಹೊತ್ತಿಗೆ
ಎಲ್ಲಿಂದೆಲ್ಲಿಗೆ ಹೊರಡುತ್ತಿದ್ದೇವೆಂದು ತೋರದ ಅದೇನು
ಕಥೆ ಅಂತ ಹೇಳ್ತೀರೋ ತಾತ?

Monday 17 December, 2007

ಚಿತ್ರ- ೩೨



ಅಸತ್ಯ ಅನ್ವೇಷಿ ಯವರು ಬರೆದಿರುವುದು:

ಹಾಯಾಗಿ ಮಲಗಿರೋ ರಸ್ತೆ ಹಾಸುಗೆ ಮೇಲೆ
ಜೀವನದ ನಿರ್ಜೀವ ಚಕ್ರಗಳ ಓಡಾಟ;

ಬದುಕ ಬೆಂಗಾಡಿನಲಿ ಬಂದು ಹೋಗುವವರಿಹರು
ಉಂಡು ಹೋಗುವರು, ಕೊಂಡೂ ಹೋಗುವರು;

ಜೀವನದ ಬಂಡಿಯಲಿ ನೋವು ನಲಿವುಗಳು ಅವಿರತ
ತೊಲಗುತಲಿರುವುದೇ ಜಂಜಡವು ಅನವರತ?

ಕುಮಾರ ಸ್ವಾಮಿ ಕಡಾಕೊಳ್ಳ ಯವರು ತಮ್ಮ " ಆವರ್ತನ " ಎಂಬ ಕವನದಲ್ಲಿ ಅಭಿಪ್ರಾಯ ತಿಳಿಸಿದ್ದು ಹೀಗೆ:

ಕಾನನದ ಒಡಲು ಸೀಳಿ
ತರು ಲತೆಯ ಮೂಲ ಅಡಗಿಸಿ
ಅಟ್ಟ ಹಾಸದಿ ಹಾಸಿ ಮಲಗಿದೆ
ದಿಟ್ಟರಾರು ನನ್ನ ಮೆಟ್ಟಿನಿಲ್ಲಲು ಎಂದು ಬೀಗುತ ಅದೋ ದಾರಿ ಅಲ್ಲಿ

ಬಿಟ್ಟು ಬಿಡದೆ ಮತ್ತೆ ಹುಟ್ಟಿ ಬೆಳೆದಿವೆ ಬದಿಯಲಿ
ಆಲ ಅಲಸು ಬೇಲ ಬೇವು ಮರಗಳು
ಅಡರಿ ಹಬ್ಬಿವೆ ಲತೆಗಳು ತರುಗಳ ಆಸರೆಯಲಿ
ಹಾದಿಗೆ ಉತ್ತರಕೊಟ್ಟಂತೆ ಉಲಿಯುತಿವೆ ಹಕ್ಕಿಗಳು ಮರದಮೇಲೆ

ದಾರಿ ತರು ಲತೆ ಹಕ್ಕಿ ಪಿಕ್ಕಿಯ ನಡುವೆ
ಯಾರು ಮಿಗಿಲೆಂದು ವಾದವ ನಡೆದಿರಲು
ಘಟ ಘೋರ ಘರ್ಜನೆ ಮಾಡುತ್ತ ದಿಟ್ಟ ದ್ವನಿಯೊಂದು
ನಾನೇ ಮಿಗಿಲೆಂದು ಬಂದಿತು ಮಾನವ ದಂಡೊಂದು

ಕುಡಿಸಿ ತೈಲನು ಹಚ್ಚಿ ಒಡಲಿಗೆ ಕಿಚ್ಚನು
ಉರುಳುವ ಗಾಲಿಗಳ ಸೂತ್ರವನು ಹಿಡಿದು ಕಾಲಲ್ಲಿ
ಇಚ್ಚೆಗನುಸಾರ ನಿರ್ಜೀವದ ಓಟವನು ಬದಲಿಸುತ
ನಾನೆ ಸರದಾರ ಈ ಸೃಷ್ಟಿಗೆಲ್ಲ ಎಂದು ಬೀಗಿನಲಿ

ಮೌನವೆ ಮಾತಾಗಿ ಹರಿದಿತ್ತು ಜಲ ಝರಿಯು
ಮೂಖ ತಾನಾಗಿ ಕೇಳಿತ್ತು ಪ್ರೆಶ್ನೆಯೊಂದು
ಹೊನಲು ಹಸಿರಾಗಲು ಬಿಸಿಲು ತನಿಯಾಗಲು
ಧರೆಯು ಉಸಿರಾಡಲು ಕಾರಣರು ಯಾರೆಂದು?

ಎಲ್ಲ ನೋಡಿಯು ನೋಡದಿಹನಂತೆ
ನಸು ನಕ್ಕು ಇಣುಕುತಿಹನು ಬಾನಿನೊಡೆಯ
ಚೆಲ್ಲಿ ಬೆಳಕನು ಉಣಿಸುತ ಜೀವಾಗ್ನಿಯನು
ನಡೆಸಿಹನು ಸೃಷ್ಠಿಯನು ಮಾಡುತ ಆವರ್ತನ

ನಾನು ನಾನಲ್ಲ ಎಲ್ಲರಲು ನಾನಿಲ್ಲ
ನಾನಾಗಿರುವ ಸೃಷ್ಠಿಯು ನನ್ನದಲ್ಲ
ಏನು ಇಲ್ಲದೆ ಎಲ್ಲ ನನ್ನದೆಂದು ಬಂದಿಸುವ ಹುನ್ನಾರದಿ ಮೆರೆವ
ಮನುಜ ಜೀವನ ಆವರ್ತನ ಎಂತ ಅನರ್ಥ

ಸತೀಶ ಅವರ ಶಬ್ದಗಳಲ್ಲಿ "ಬಿಳಲಿನ ಅಳಲು"

ಯಾವಾಗ್ ನೋಡುದ್ರೂ ಗುಯ್ ಅನ್ನೋ ಗಾನ
ತುಂಬಿದ್ ರೋಡೂ, ಪಕ್ಕದಿ ಉದ್ದಕೆ ಹಾಸಿದ ಮರಗಳ
ಸಾಲನ್ನ್ ನೋಡೂ, ನಿಂತಿರೋ ಜೀವ ಓಡೋ ಬದುಕು.

ಯಾವತ್ತಿದ್ರೂ ಎಷ್ಟೇ ಬೆಳೆದ್ರೂ ಹೂವೇ ಇರದ ಆಲ
ಬಿಳಲಿನ ಬೆಳೆಯು, ಎಲ್ಲಾ ಕಡೆಗೂ ಉದ್ದಕೆ ಚಾಚಿ
ಹರಡುವ ಕಳೆಯು, ಬೆಳೆಯುವ ಬವಣೆ ಹಿಗ್ಗುವ ಬಯಕೆ.

ಯಾವನೇ ಇರಲಿ ಸೃಷ್ಟಿಯ ಮುಂದೆ ಸಣ್ಣವನೆಂಬ ಚಿತ್ರ
ಓಡುವ ಮಂದಿ, ಥರ ಥರ ವಾಹನ ತರುವಾ ಧೂಳಲಿ
ನಮ್ಮೊಳು ಬಂಧಿ, ದೂರಕೆ ದೂರಕೆ ಹೋಗುವ ಕಾತರ.

Monday 10 December, 2007

ಚಿತ್ರ- ೩೧





ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕಲ್ಪನೆಯ ಗಾಳಿಪಟ
1.

ಅಕ್ಕ ಪಕ್ಕ ನೀಲಿ
ನಡುವೆ ಕೆಂಪು ಹಸಿರು ಹಳದಿ ಪಟ್ಟಿ

ಅಡ್ಡ ಉದ್ದ ಕಡ್ಡಿ
ಕಟ್ಟಿ ಬಲು ಗಟ್ಟಿ

ಸೂತ್ರದಾರ ಕಟ್ಟಿ
ಬಾಲೊಂಗೋಚಿ ಹಚ್ಚಿ

ಬಿಚ್ಚಿ ದಾರದ ಕಟ್ಟು
ತೂರಿ ತೂರಿ ಎತ್ತಿ

ಗಾಳಿಗೆದುರಿಗೆತ್ತಿ
ಬಯಲಲಿ ತೇಲಿಬಿಟ್ಟು

2.

ಕಲಿಸಿ ಕೊಡೋ ಅಪ್ಪ
ಇನ್ನು ತಡ ಯಾಕ

ಮೇಲೆ ನೋಟ ಇಟ್ಟು
ಕಲ್ಲಟೆದು ಜಾರಿ ಬಿದ್ದು

ತರಚಿ ಆದ ಗಾಯ
ಇಲ್ಲ ಅದರ ಧ್ಯಾನ

ಮತ್ತೆ ಎದ್ದು ಬಿದ್ದು
ಎಲ್ಲರಲು ಮುಂದೆ ಇದ್ದು

ಎತ್ತರೆತ್ತರ ಎತ್ತರಕೆ
ಹಾರಿಸಿ ನನ್ನ ಪಟ

ದಾರ ಹಿಗ್ಗಿ ಹಿಗ್ಗಿ
ಹೋಗಿ ನುಗ್ಗಿ ಮುಂದೆ

ನಿನ್ನೆ ಸೋಲಿಸಿದವನ
ಬೆನ್ನ ಅಟ್ಟಿ ಅಟ್ಟಿ

ಟಾಗ ಆಕಿ ಅದಕೆ
ಸೊಂಟಾ ಮುರಿ ಬೇಕ

3.

ಕಪ್ಪು ಬಿಳಿಯ ಮೋಡ
ಜೊತೆಗೆ ನಿನ್ನ ಆಟ

ಹಾರೊ ಹಕ್ಕಿ ಜೊತೆ
ಏನು ನಿನ್ನ ಮಾತ

ಸುಡುವ ರವಿಯ ಕಣ್ಣ
ಏರಲು ಭಯಾವೇನಣ್ಣ

ಗಾಳಿ ಜೊತೆ ಹಾರಿ
ಬೆಟ್ಟದ ತುದಿಗೆ ಹೋಗಿ

ನೋಡುವೆ ಅಲ್ಲಿ ಇಣುಕಿ
ಕಾಣುವೆ ನಾನು ಬಲು ಸಣ್ಣ

ಗಿರಕಿ ಹಾಕಿ ಹಾಕಿ
ಎತ್ತ ತಿರುಗಿ ಹೋಗ್ತಿ

ಬರುತ್ತಾರೆ ನೋಡ
ಹಿಂದೇ ಹಾಕಲು ನಿನ್ನ

ನೀಲಿ ಬಯಲ ಆಟ
ಎಂತಾ ಸೊಗಸ ಐತಾ

ನಿನ್ನ ಜೊತೆ ಆಟ
ಎಂತ ಹಸನಾಗೈತ

ಪಡುವಣ ದಿಕ್ಕಿನಾಗೆ
ರವಿಯು ಆತುರದಾಗೆ

ಹೊತ್ತು ಆಯಿತು ಎಂದು
ಜಾರಿ ಹೋಗುತ್ತಾನೆ

ಮುಗಿಲ ಮಾರಿ ಬಣ್ಣ
ತಿರುಗಿದೆ ಕೆಂಪಗೆ ಅಣ್ಣ

ಮನೆಗೆ ಹೋಗೋಣ ಈಗ
ಇಳಿದೋ ಬಾರೋ ಬೇಗ



ಸತೀಶ ಅವರು ಹೇಳುವಂತೆ- ಗಟ್ಟಿ ಇರಬೇಕು ಆಧಾರ ಸೂತ್ರ

ಹಳ್ಳ ಕೊಳ್ಳಗಳನ್ನೂ ತೂರಿಕೊಂಡು
ಬಯಲಿನ ಬೆನ್ನನ್ನೂ ಸವರಿಕೊಂಡು
ಎಲ್ಲಿಂದ ಅದೆಲ್ಲಿಗೋ ಹಾರೋ ಗಾಳಿ
ಅದರ ಜೊತೆಗೇ ಸುಳಿವ ಧೂಳಿ
ವಿಶಾಲ ನಭವೇ ಮಿತಿ ಎನ್ನೋ ಆಟ
ಅಲ್ಲಿ ಎತ್ತರವನ್ನು ಮೀರುವುದೇ ಹೂಟ.

ಮೇಲಿನ ಕೆಳಗಿನ ನೀಲಿಯ ನಡುವೆ
ರಂಗನು ಬಳಿದಿಹ ನನ್ನಯ ಚೆಲುವೆ
ಬಾಲವು ಇದ್ದರೂ ಹೆಸರಿಗೆ ಮಾತ್ರ
ಗಟ್ಟಿ ಇರಬೇಕು ಆಧಾರ ಸೂತ್ರ
ದಿಕ್ಕಿರದ ದೂರದಲಿ ಹಾರುವ ಸಾಧನೆ
ಒಮ್ಮೆ ಗಾಳಿ ನಿಂತರೆನ್ನುವ ಯೋಚನೆ

ಹಾರುವ ಹಾರಿಸುವ ತಂತ್ರವಿರುವಂತೆ
ಇಲ್ಲಿ ಬರಿಗಾಲು ಬರಿಗೈ ಇದ್ದರೇನಂತೆ
ಮೋಜು ಪಡೆಯಬೇಕು ತಂದೆ ಮಕ್ಕಳು
ಕೈ ಹಿಡಿದು ನಡೆಸದಿಹ ಬಾಳ ಕತ್ತಲು
ಎಂದೂ ಬೆಳೆಯ ಬೇಕು ಮುಗಿಲ ಮೀರಿ
ದಿನದಿನವೂ ಹತ್ತಿರವಾಗಲಿ ಹಿಡಿದ ಗುರಿ.

Monday 3 December, 2007

ಚಿತ್ರ- ೩೦




ಸತೀಶ ಅವರು ಹೇಳಿದ್ದು... ನಾವೂ ಯೋಳು ಮಂದಿ

ನಾವೂ ಯೋಳು ಮಂದಿ
ಎಂಟೆದೆ ಗಂಟನು ಸೊಂಟಕೆ ಕಟ್ಟಿ
ಚೆಂದ ಚಿತ್ತಾರದ ಬಣ್ಣವ ಹೊದ್ದು
ಕೈಗೆ ಕಡಾಯಿಯ ಕಿಣಕಿಣ ಸದ್ದು
ದುಡಿಯೋ ಜೀವವ ದೂಡುತಲಿದ್ದು
ಮುಷ್ಟಿಯ ಹಿಟ್ಟಿಗೆ ಕಾಳಗ ನಡೆಸುವ.

ನಾವೂ ಯೋಳು ಮಂದಿ
ಯಾಡೀ ಯಾಡೀ ಎನ್ನುತ ಕರೆಯುವ
ಪರದೆಗೆ ರಂಗನು ಉಗಿದು ಒಮ್ಮೆಲೆ
ಕೈ ಕೈ ಹಿಡಿದು ಒಮ್ಮತ ತೋರುತ
ದಿನವಿಡಿ ದುಡಿತ ಬೆನ್ನದು ಬಾಗುತ
ಬಡಬಾನಲದ ಉರಿ ಹರಿಸುತಲಿರುವ.

ನಾವೂ ಯೋಳು ಮಂದಿ
ಸಿಂಬೆಯ ಜೊತೆಗೆ ಹುಟ್ಟಿದ ತಲೆಯು
ಮರಳು ಚಾಣಾ ಸುತ್ತಿಗೆ ಕುಟ್ಟಲು ಕಲ್ಲು
ಹಿಂದಿನ ಗೋಡೆಗೆ ಹೊತ್ತೆವು ನೀರು
ನೋವನು ದಪ್ಪ ಚರ್ಮದ ಸುಕ್ಕಿಗೆ ಮುಕ್ಕಿಸಿ
ಹಗುರ ಮನಸಿನ ಭಾರದ ಹೊಟ್ಟೆಯ
ನಾವೂ ಯೋಳು ಮಂದಿ.


ಸೀಮಾ ಹೇಳಿದ್ದು...

ಪ್ರತಿಯೊಂದು ಬಟ್ಟೆಗೂ ಬೇರೆ ಬಣ್ಣ,
ಪ್ರತಿಯೊಂದು ಸನ್ನಿವೇಶಕ್ಕೂ ಅದರದೇ ಬಣ್ಣ.
ಪ್ರತಿಯೊಬ್ಬ ಮನುಷ್ಯನಿಗೂ ಬೇರೆಯದೇ ಬಣ್ಣ,
ಎಲ್ಲರೂ ಮನಸ್ಸಿನಲ್ಲೂ ಒಂದೊಂದು ಬಣ್ಣ;
ಈ ಜಗತ್ತೊಂದು ಬಣ್ಣದ ಪೊಟ್ಟಣ!