Monday 26 November, 2007

ಚಿತ್ರ - ೨೯


ರಾಧಾಕೃಷ್ಣ ಆನೆಗುಂಡಿ ಅವರ ಕಲ್ಪನೆಯಲ್ಲಿ ಹದಿನಾರರ ಕನಸುಗಳು...

ಇನ್ನೂ ವರುಷ ಹದಿನಾರು
ಕನಸುಗಳು ಸಾವಿರ
ಮೊಗೆದಷ್ಟು ಮುಗಿಯುವುದಿಲ್ಲ....

ಸೂರ್ಯ ಮುಳುಗುವ ಬಗ್ಗೆ ಕಾತುರ
ಕೆಂಪಾಗುವುದಾದರು ಹೇಗೆ ಎನ್ನುವುದೇ ಪ್ರಶ್ನೆ
ಕಡಲಲ್ಲಿ ಮಾಯಾವಾಗುವುದಾದರು ಹೇಗೆ ?

ಹಂಚಿಕೊಳ್ಳಲು ಸಾಕಷ್ಟಿದೆ
ಕಡಲ ಅಲೆಯ ಅಬ್ಬರದ ನಡುವೆ ಆಲಿಸುವವರಾದರು ಯಾರು?
ಮನಸ್ಸೆ ಹೀಗೆ ಒಮ್ಮೆ ಅಬ್ಬರಿಸಿದರೆ
ಮತ್ತೊಮ್ಮೆ ಶಾಂತವಾಗುತ್ತದೆ.

ಕನಸುಗಳು ಅಷ್ಟೆ ಕಡಲ ಅಬ್ಬರಕ್ಕಿಂತ ಭಿನ್ನವಲ್ಲ.
ವರ್ಷ ಬದಲಾದಂತೆ ಕನಸು ಬದಲಾಗುತ್ತದೆ
ಅದಕ್ಕೆ ಚಿಂತೆ ಹದಿನಾರು ದಾಟುವುದಾದರು ಹೇಗೆ.


ಸತೀಶ ಅವರ ನೋಟದಲ್ಲಿ ಗಾಳಿಗಣಗಿಸುವ ಅಲೆಗಳು...

ಇಲ್ಲಿ ಯಾರೋ ಕುಳಿತು ನೋಡಿಯೇ ನೋಡುವ
ನಂಬಿಕೆಯಲ್ಲಿ ಮರದ ಧಿಮ್ಮಿಗಳ ಆಸನಗಳ ಸಾಲು
ಅದೋ ಅಲ್ಲಿ ಯಾರು ಬರಲಿ ಬರದಿರಲಿ ಎನ್ನುವ
ಬಂದು ಹೋಗುವ ಗಾಳಿಗಣಗಿಸುವ ಅಲೆಗಳ ಪಾಲು.

ಅದೆಷ್ಟೋ ದೂರದಲ್ಲಿರುವ ಅದ್ಯಾವುದೋ ಲೋಕದಲ್ಲಿ
ಎಂದೋ ಹರಳುಗಟ್ಟುವ ಕನಸುಗಳು ಅಲೆಗಳಂತೆ
ಯಾವುದ್ಯಾವುದೋ ನದಿ ನೀರು ಬಂದು ಸೇರಿ ಕೂಡಿದಲ್ಲಿ
ಜಂಗಮದ ರೂಪವನು ಹೊದ್ದುಕೊಂಡ ತೆರೆಗಳಂತೆ.

ಶತಮಾನ ಬಾಳುವಂತೆ ಉಸುಕಿನಲ್ಲಿ ಹುದುಗಿಸಿದ ಆಸನಗಳು
ನೀರಿದ್ದರೂ ನೊರೆಯಿದ್ದರೂ ಬೇರುಗಳನ್ನು ಚಿಗುರಿಸಲಾರವು
ಪದೇ ಪದೇ ಬಂದು ಹಿಂದೆ ಹೋಗುವ ಅಲೆಯ ದಿಬ್ಬಣಗಳು
ದಡವನ್ನು ಅಪ್ಪಿ ಹಿಡಿದು ಆವರಿಸಿದ ಮರಳನ್ನು ತೋಯಿಸಲಾರವು.

ನೀನೇನೇ ಹೇಳು ಗೆಳೆಯಾ...
ಬರಿಯ ಅಲೆಯನಷ್ಟೇ ನೋಡದಿರು ಎನ್ನುವುದು ನಮ್ಮ ನಿಯಮ
ಈಗ ಕೈ ಮೈಗೆಲ್ಲ ನಮ್ಮ ಬರಹಗಳನು ಅಂಟಿಸಿಕೊಳುವ ಕಾಲದಲಿ
ನಾವೇಳಿಸೋ ಪ್ರತೀ ಅಲೆಗಳಲೆ ನಮ್ಮನಳೆವುದೇ ಮರ್ಮ.


ಸೀಮಾ ನೋಡಿದ್ದು ಬೇರೆಯಾಗುತ್ತಿರುವ ಗೆಳೆಯರನ್ನು...

ಹುಟ್ಟಿದ್ದು ಎಲ್ಲೋ, ಬಾಲ್ಯ ಇನ್ನೆಲ್ಲೋ
ಓದಿದ್ದು ಮಾತ್ರ ಜೊತೆಯಲ್ಲಿ
ಕನಸ ಕಟ್ಟುತ್ತಾ ಕಾಲ ಕಳೆಯುವುದು ಮಾತ್ರ ಇಲ್ಲಿ...
ಇದೇ ಸಮುದ್ರದ ದಡದಲ್ಲಿ.

ಕಣ್ಮುಚ್ಚಿ ಒಡೆಯುವುದರಲ್ಲಿ
ಮುಗಿದೇ ಹೋಯಿತು ಓದು ನೋಡು,
ಇನ್ನೇನಿದ್ದರೂ ಜೀವನದಲ್ಲಿ
ಅರಸುತ್ತಾ ಹೋಗುವುದು ಬೇರೇನೋ ಜಾಡು.

ಕವಲೊಡೆಯುತ್ತಿದೆ ಜೀವನದ ದಾರಿ...
ಈ ಸಮಯದಲ್ಲಿ ಒಂದೇ ಹಾರೈಕೆ ಸರಿ.
ಇದ್ದರೂ ನೀನು ದೇಹದಿಂದ ದೂರ,
ಇರು ಎಂದೆಂದೂ ಮನಸ್ಸಿಗೆ ಹತ್ತಿರ.

ಆದರೂ ಏಕೋ ಕೊರಗುತ್ತಿದೆ ಮನಸ್ಸು...
ಕೂಡಿ ಕಟ್ಟಿದ ಕನಸು ಮಾತ್ರ ಜೊತೆಯಲ್ಲಿ,
ನಿನ್ನಂತಹ ಗೆಳೆಯ ಇರುವುದಿಲ್ಲ ಬಳಿಯಲ್ಲಿ.
ಕೂಡಿ ಬಂದರೆ ಕಾಲ
ಮುಂದೆಂದಾದರೂ ಜೊತೆಯಾಗೋಣ ಇಳಿ ವಯಸ್ಸಿನಲ್ಲಿ.

Monday 19 November, 2007

ಚಿತ್ರ - ೨೮




ಸತೀಶ ಅವರ ಕೀಲಿಮಣೆಯಿಂದ... ಏನವ್ವಾ ತಾಯಿ...

ಏನವ್ವಾ ತಾಯಿ ಆಸೆ ಆಮಿಷ ಹೊತ್ಕೊಂಡ್ ಕುಂತೀ
ಆಸೆ ಆಮಿಷ ಇದ್ದೋರ್ ಯಾರೂ ತೋರ್ಸೋದಂತೂ ಇಲ್ಲ
ಸಾಲಾ ಮೈಮೇಲ್ ಬಿದ್ದು ರೌದ್ರ ನರ್ತನ ಮಾಡೋ ಮುನ್ನ
ಸರತೀ ಸಾಲಲ್ಲಿ ನಿಂತ್ಕೊಳೋದು ಒಳಿತು ನೀನು ನಿನ್ನತನವನ್ನ.

ಏನವ್ವಾ ನೀನು ಎಲ್ಲಾರ್ ಮುಂದ ಅಂಗಡಿ ತಕ್ಕೊಂಡ್ ಕುಂತೀ
ಕನ್ಸೂ ಮನ್ಸುಗಳನೆಲ್ಲಾ ಯಾರೂ ಬಿಚ್ಕೊಂಡ್ ಕೂರೋದಿಲ್ಲ
ಕಾಲಾ ಎದ್ದೂ ಮುಂದಿನ ಮನೆಗೆ ಹೋಗೋ ಒಳಗೇ ತನ್ನ
ಕಾಲ ಮೇಲೆ ನಿಂತ್ಕೊಳೋದ್ ನೀನು ನೋಡೋದ್ ಚೆನ್ನ.

ಏನವ್ವಾ ಮಗಳೇ ಸಂಪ್ರದಾಯ ಮೈ ಮೇಲ್ ಹೊದ್ಕೊಂಡ್ ಕುಂತೀ
ಆಚಾರ ವಿಚಾರಗಳೆಲ್ಲ ಇಂದು ದಿಣ್ಣನೆ ಬದಲಾಗ್ತಿರೋ ಕಾಲ್ದಲ್ಲಿ
ನಿನಗೊಬ್ಳಿಗೇ ಏಕೆ ಹಿಂದಿನದನ್ನು ಮುಂದಕ್ಕೊಯ್ಯುವ ತವ್ಕಾ
ಕೇಳಿಲ್ಲೇನೂ ನಿನ್ನ ವಾರಿಗೆಯವರ ಹಡೆದವ್ವರೂ ಮರುಹುಟ್ಟಿರೋ ಗಮ್ಕಾ.

ಏನವ್ವಾ ನೀನು ಮುರಾ ಸಂಜೆಗೆ ರಂಗನು ಮೆತ್ತೋರ್ ಹಾಗೆ ಕುಂತೀ
ಅಪ್ಪಾ ಅಣ್ಣಾ ಮನೇಗ್ ಇನ್ನೇನ್ ಬಂದೇ ಬಿಟ್ರೂ ಅನ್ನೋ ಹೊತ್ನಲ್ಲಿ
ಹೊಟ್ಟೇ ಪಾಡಿನ್ ರಾತ್ರೀ ರೊಟ್ಟೀ ಹುಡುಕೋ ನಮ್ಮ ಬೀಡಲ್ಲಿ
ಬದಲೀ ಯಾಕೆ ಹೆಣ್ಣು ಮಕ್ಳೂ ಹಿಂಗೇ ಇರ್ಲಿ ಎನ್ನೋ ನಮ್ಮ ನಾಡಲ್ಲಿ.


ಸಿಂಧು ಅವರ ನೋಟ... ಬದುಕು!

ಕವಡೆ ಬೀಸಿದಾಗಲೆಲ್ಲ
ಬಿದ್ದಿದ್ದು ವಚ್ಚಿ
ಒಂದೊಂದೇ ಹೆಜ್ಜೆ ಇಟ್ಟು
ಮುನ್ನಡೆದ ಬದುಕ
ಹಾದಿಯ ತುಂಬ
ಬಿಸಿಲು ನೆರಳಾಟ
ಯಾರದೋ ಕಣ್ ಸೆಳೆದು
ಕವಡೆ ಜೋತಿಷ ನುಡಿಯೆ
ಬರುವ ದಕ್ಷಿಣೆಗೆ
ಸರಿಹೋದೀತು
ಸೆಟ್ಟರಂಗಡಿಯ ಲೆಕ್ಕ
ದಿನಕೊಂದು ಹೊತ್ತು ಉಂಡರೆ
ಅದೇ ಸುಖ.

ಕವಡೆಯ ಬೀಸಿ
ತಮ್ಮ ನಾಳೆಯ ತಾವೆ ತಿಳಿವವರು
ಕೂರುವರು ಇಲ್ಯಾಕ
ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ,
ಇಂದೇ!
ತಿಳಿಯುವ ತಿಣುಕಾಟವಿಲ್ಲ
ಬರಿದೆ
ಬದುಕಬೇಕಿದೆ!

ಜೋತಿಷ ಕೇಳಿದ ಮಂದಿ
ಪಾರ್ಕು ದಾಟುವ ಮುನ್ನವೆ
ಮರೆತವರು
ನಾನು ಮರೆಯುವ ಹಾಗಿಲ್ಲ
ನನ್ನ ಮೂಗಿಗೇ ಕವಡೆ!

ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ
ಉಂಹೂಂ
ಬರೀ ವಚ್ಚಿ
ಪ್ರತೀ ಸಲಿಯೂ
ಬೆರಳಸಂದಿಯಲೆ ನುಸಿದು ಹೋಗುವ
ಗಿಚ್ಚಿ..


ಮನಸ್ವಿನಿ ಅವರ ಕಲ್ಪನೆಯಲ್ಲಿ...

ದೀಪದ ಬೆಳಕಲ್ಲಿ
ಹಳೆಯ ಸಾಮಾನು
ಹರಡಿ ಕೂತಿದ್ದೇನೆ
ಚಂದದ ಗೊಂಬೆಗಳಲ್ಲ
ಅಂದದ ಬಳೆಗಳಲ್ಲ
ನನ್ನ ಮಣೆ,ಕವಡೆ
ಆಡುವ ಹೊತ್ತಲ್ಲ
ಜೊತೆಯಲಿ ಯಾರಿಲ್ಲ
ಹಿಂದೆ ಮಲಗಿರೋ ಅವ್ವ
ದೀಪವಾರಿಸಹತ್ತಿದ್ದಾಳೆ
ಬೈಯುತ್ತಿದ್ದಾಳೆ
ಸಾಮಾನು ಕಟ್ಟಿಟ್ಟು
ಆಸೆಗಳನ್ನ ಮುಚ್ಚಿಟ್ಟು
ಮಲಗುತ್ತೇನೆ ಈಗ!

Monday 12 November, 2007

ಚಿತ್ರ - ೨೭




ಈ ಚಿತ್ರದ ಬಗ್ಗೆ ಸತೀಶ ಹೇಳಿದ್ದು ಮೇಲೇ-ಕೆಳಗೆ

ಕೆಳಗಡೆ ಹೋಗೋ ಭಾರ ಇದ್ರೇ ತಾನೆ
ಮೇಲಕ್ಕ್ ಹೋಗೋರ್ ಅಗೋದ್ ಹಗುರ
ಮೇಲೇ-ಕೆಳಗೇ ಹೋಗೋದೇನಿದ್ರೂ
ಮಕ್ಕಳ ಮನಸಿಗೆ ಅದೇ ಸಡಗರ.

ಕಣ್ಣೂ ಕೂದಲು ತೋರಿಸಿ ನೋಡುವ
ಪಾಲು ಕೇಳದ ಗೋಡೆಯ ಮುಖಗಳು
ಮೇಲೋ-ಕೆಳಗೋ ಇದ್ದುದು ಇರಲಿ
ಎಂದೂ ನಗೆಯ ನಿಲ್ಲಿಸದ ಸೂತ್ರಗಳು.

ಗಾಳಿಯ ಹೊಡೆತಕೆ ಬಾಳೆಯ ಕುಡಿಯು
ತನ್ನೊಳು ತಾನೆ ಹರಿದಿಹುದು
ಸಂತಸಕೆ ಹಿನ್ನೆಲೆ ಗೋಡೆಯ ಮೇಲೆ
ತನ್ನಯ ಭಾರಕೆ ತಾನು ಬಾಗಿಹುದು.

ಮೇಲೆ ಹೋದೋರ್ ಜೀಕೀ ಜೀಕಿ
ಕೆಳಗೆ ತರುವುದು ಒಂದು ಬಗೆ
ಈಗಾಗಲೇ ಕೆಳಗೆ ಇಳಿದು ಬಿಟ್ಟವರು
ತಮ್ಮಯ ಭಾರಕೆ ನಕ್ಕ ನಗೆ.


ಮತ್ತು ಸೀಮಾ ಹೇಳಿದ್ದು ಈ ಕೆಳಗೆ...

ಮಕ್ಕಳಾಟದಲ್ಲಿ ಮೇಲಕ್ಕೂ, ಕೆಳಕ್ಕೂ ಹೋಗೋದೆ ಒಂದು ಮಜಾ,
ದೊಡ್ಡವರಿಗೆ ಜೀವನದಲ್ಲಿ ಮೇಲಕ್ಕೂ, ಕೆಳಕ್ಕೂ ಅನುಭವಿಸೋ ಸಜಾ.

ಮಕ್ಕಳೆನ್ನುತ್ತಾರೆ, ದೊಡ್ಡವರು ಮಾಡುವ ಕೆಲಸ ಚೆನ್ನ.
ದೊಡ್ಡವರೆನ್ನುತ್ತಾರೆ, ನೀನು ಮಗುವಾಗಿಯೇ ಇರು ಚಿನ್ನ.

ಮಕ್ಕಳಾಗಿದ್ದಾಗಲೇ ಮುಗಿದು ಹೋಯಿತು ಎಲ್ಲಾ ಆಟ;
ನಂತರದಲ್ಲೆನಿದ್ದರೂ ಜೀವನ ಜಂಜಾಟ.

ಅದಕ್ಕೇ ಇರಬೇಕು ಕವಿ ಹೇಳಿದ್ದು...
ಓ ಸಮಯವೇ ಒಮ್ಮೆ ಹಿಂದಿರುಗಿ ನೋಡು,
ಇದೊಂದು ರಾತ್ರಿಯ ಮಟ್ಟಿಗೆ ನನ್ನನ್ನು ಮಗುವನ್ನಾಗಿ ಮಾಡು.

Monday 5 November, 2007

ಚಿತ್ರ - ೨೬




ಹಚ್ಚಿರುವ ದೀಪ ಕಿಚ್ಚಾಗದಿರಲಿ, ಶಾಪವಾಗದಿರಲಿ ಎಂಬ ಹಾರೈಕೆ ಸತೀಶ ಅವರದ್ದು.

ಹಚ್ಚಿರುವ ಬೆಳಕು ಉರಿಯುತಿರಬೇಕು
ನಮ್ಮನಿಮ್ಮೆಲ್ಲರ ಸಂಭ್ರಮವಾಗಬೇಕು
ಬೆಳಕಿನ ಬುಡ ಕತ್ತಲಲ್ಲೇ ಇರಲಿ ಸುತ್ತ
ನೆರೆಹೊರೆ ಮುಕ್ತವಾಗಿರಲಿ.

ದೊಡ್ಡವರು ಚಿಕ್ಕವರನು ಕೈ ಹಿಡಿದು ನಡೆಸಿ
ಬಾಳಿನುದ್ದಕ್ಕೂ ಬರೀ ಒಳಿತನ್ನೇ ಹರಸಿ
ಎಣ್ಣೆ ಮುಗಿಯುವವರೆಗಿನ ಬೆಳಕಿನ ಶಾಂತ
ಪ್ರಕಾಶ ಶುದ್ಧವಾಗಿರಲಿ.

ಕಿಚ್ಚಾಗದಿರಲಿ ಊರು ಮನೆ ಕಾಡು ಕಬಳಿಸಿ
ದಳ್ಳುರಿಯಾಗದಿರಲಿ ನಡುವೆ ದ್ವೇಷ ಬೆಳೆಸಿ
ಶಾಂತ ಜ್ಯೋತಿಯ ಜ್ವಾಲೆ ಕ್ರೋಧವಾಗುತ್ತಾ
ವೈಮನಸ್ಯ ಹುಟ್ಟದಿರಲಿ.

ನಮಗೂ ನಿಮಗೂ ಎಲ್ಲರಿಗೂ ಬೇಕೇ ಬೇಕು ದೀಪ
ಒಂದನ್ನೊಂದು ಸೇರಿ ಬೆಳೆಯೋ ಬೆಳಕು ಆಗೋದಿಲ್ಲ ಶಾಪ.


ಜಗದ ಹಿತ ಬಯಸುವಲ್ಲಿ ಸಹನೆ ಮುಗಿಯದಿರಲಿ ಎಂಬ ಹಾರೈಕೆ ಸೀಮಾ ಅವರದ್ದು.

ತನ್ನನ್ನು ತಾನೇ ಸುಟ್ಟುಕೊಂಡು
ಜಗತ್ತಿಗೆಲ್ಲ ಬೆಳಕನ್ನು ಕೊಡುತ್ತದೆ, ಈ ದೀಪ.
ಅದು ತಾಳ್ಮೆಯ ಪ್ರತೀಕ.
ಆದರೆ ಆ ತಾಳ್ಮೆ ಎಲ್ಲಿಯವರೆಗೆ?
ಎಣ್ಣೆ ಮುಗಿಯುವವರೆಗೆ.

ಆ ದೀಪದಂತೆಯೇ ನನ್ನನ್ನು ನಾನು ಸುಟ್ಟುಕೊಂಡು
ಜಗದ ಹಿತ ಬಯಸಬಲ್ಲೆ.
ಆದರೆ ಎಲ್ಲಿಯವರೆಗೆ?
ಸಹನೆಯೆಂಬ ಎಣ್ಣೆ ಮುಗಿಯುವವರೆಗೆ
ಓ ದೇವರೇ, ನನ್ನ ಸಹನೆ ಮುಗಿಯದಿರಲಿ!