Wednesday, 26 November 2008

ಚಿತ್ರ ೮೦

ತಿರುಕ ಹೇಳುತ್ತಾರೆ:


ಮನೆಯ ಬಾಗಿಲಿಗೆ ಬಂದವರು
ಒಳಗೆ ಬರಲಾರದವರು
ಅದೇಕೆ ಹಾಗೆ ನಿಂತಿಹರೋ
ಬನ್ನಿರೈ ಮಿತ್ರರೇ ಬನ್ನಿರೈ

ಅದೇನೋ ಸಂಶಯ
ಎಲ್ಲಿಲ್ಲದ ಭಯ
ಎಮ್ಮಲ್ಲಿಲ್ಲ ಬೆಳಕು
ಎಲ್ಲೆಲ್ಲಿ ನೋಡಿದರೂ ಕೊಳಕು

ಒಳಗಿರುವುದೇನೋ
ಸಿಂಹವೋ ನರಭಕ್ಷಕನೋ
ನಾನೊಂದು ಹಸುಳೆ
ಹೆಜ್ಜೆಯ ಸಪ್ಪಳಕೂ ಹೆದರುವವಳೇ

ಒಳ ಬರಲು ಹಾದಿ ಹದ ಮಾಡಿಹುದು
ಮಾಗಿರುವ ಹಣ್ಣು ನಿಮ್ಮ ಹಡಪದಲ್ಲಿಹುದು
ಒಳಗೆ ಸೊಗಸಾದ ಜೇನಿಹುದು
ಸೇರಿಸಿ ಮಿಶ್ರಿಸಿ ತಿನ್ನುವ ಬನ್ನಿರೈ

ನನ್ನ ಹೆಸರಂತೆ ಮೊಲ
ಪ್ರೀತಿಯಿಂದ ಅಮ್ಮ ಕರೆವುದು ಕಮಲ
ಕೊಡುವೆಯಾದರೆ ನೀನೊಂದು ಗಜ್ಜರಿ
ತೋರುವೆ ಒಳಬರುವ ದಾರಿ

ಹೆದರದಿರಿ ಬೆದರದಿರಿ
ಒಳಬಂದು ಬೆದರಿಸದಿರಿ
ನೀವು ನನ್ನವರು ನಾನು ನಿನ್ನವಳು
ಬನ್ನಿರೈ ಒಳ ಬನ್ನಿರೈ ಹೆದರದೇ ಬನ್ನಿರೈ

Thursday, 20 November 2008

ಚಿತ್ರ ೭೯



ತಿರುಕ ಅವರ ಕವನ:

ಅರ್ಜುನನ ರಥದ ಮೇಲೆ
ಕೃಷ್ಣನ ಸಾರಥ್ಯದೊಂದಿಗೆ
ಅನಾದಿ ಕಾಲದಿಂದ
ಎಂದೂ ಇಳಿಯಲಿಲ್ಲ
ಇಳಿಯುವುದಿಲ್ಲ
ಹಾರದೇ ಇರುವುದಿಲ್ಲ
ಆಗಿರುವೆ ರಾಷ್ಟ್ರದ ಲಾಂಛನ
ತ್ಯಾಗ ಬಲಿದಾನಗಳ ಸಂಕೇತ

ಏರುತಿಹುದು
ಹಾರುತಿಹುದು
ಭಗವಾ ಧ್ವಜ
ಮಂದಿರದ ಸಂಕೇತ
ಜನಜೀವನದ ದ್ಯೋತಕ
ಉದ್ದಗಲ ಅಲೆಯುತ್ತಿರುವ
ಅಳೆಯುತ್ತಿರುವ ಸಮುದ್ರಕೆ
ಮಿತಿಯ ತೋರುತಿಹೆ

ಒಂದೆಡೆ ಕಮರಿ,
ಕಬಳಿಸಲು ಸಂಚು ಹಾಕುತಿಹ ಸಮುದ್ರ
ಅದರ ಭೋರ್ಗರೆತ
ಆಸರೆಗೆ ಬಂಡೆಯೊಂದಿಹುದು
ಅದೊಂದುದಿನ ಕರಗಬಹುದು
ಇನ್ನೊಂದೆಡೆ ಭಕ್ತರ ಹೊಳೆ
ಎನ್ನ ಮೇಲಿನ ಅಪಾರ ಭಕ್ತಿ
ಅವರ ಮೇಲೆ ಎನಗಿಹುದು ನಿಸ್ಸಂದೇಹ ನಂಬುಗೆ
ಸಮುದ್ರದಿಂದ ಕಾಪಾಡುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

ರವಿಯು ಇಳಿದರೇನು
ಏರಿದರೇನು
ಧ್ವಜ ಹಾರುತಲೇ ಇರುವುದು
ಜನರಲಿ ನಂಬುಗೆಯ ಮೂಡಿಸುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

Wednesday, 12 November 2008

ಚಿತ್ರ ೭೮



ತಿರುಕ ಅವರ ಕವನ :

ನಿಸರ್ಗ ಶಕ್ತಿ


ನೀರ ನೋಡಿದೊಡೆ ಮನದಲಿ ಕುಣಿದಾಟ
ಮಿತಿ ಇಲ್ಲದ ಸಮುದ್ರದಲಿ ನೊರೆಯಾಟ
ಅಂಕೆ ಶಂಕೆಯಿಲ್ಲದ ಮೆರೆದಾಟ
ಹೆತ್ತವರ ಒಡಲಿಗೆ ನೀಡುವುದು ಪರದಾಟ

ಕಡಲ ತೀರ ಸೇರಲು
ಮಕ್ಕಳ ಮನದಲಿ ತವಕ
ಕಡಲ ತೀರದಲಿ ನೀರ ನೊರೆ
ಬದಿಯ ಪ್ರಪಂಚವ ಮರೆ

ಹೆಜ್ಜೆ ಮುಂದಾದೊಡೆ ಪೂರ್ವಜರ ನೆನಪು
ತನುವಾಗುವುದು ಕಡಿವಾಣವಿಲ್ಲದ ಹುಚ್ಚು ಕುದುರೆ
ಕಾಲ ತಳದಿ ಉಸುಕಿನ ಕೊರೆತ
ಮುಂದಿಹುದು ಅಲೆಗಳ ಭೋರ್ಗರೆತ

ಕೈ ಬೀಸಿ ಕರೆಯುತಿಹ ಕಡಲ ನೋಡಿ
ಸುಮ್ಮನಿರಲಾದೀತೇ?
ಮೊದಲಾಯ್ತು ನೀರಿನೊಡನೆ ಚೆಲ್ಲಾಟ
ತುಂಟ ಮಿತ್ರರೊಡಗೂಡಿ ಚೆಂಡಾಟ

ಅಲೆಯೊಡನೆ ಚೆಂಡಿನ ಸೆಳೆದಾಟ
ಮರಳಿ ತರಲು ಮಕ್ಕಳ ಪರದಾಟ
ದೂರ ದೂರಕೆ ನೀರಿನ ಎಳೆದಾಟ
ನಿಸರ್ಗ ದೈವದ ಶಕ್ತಿಯ ಮೆರೆದಾಟ

ಒಂದರೆಚಣದ ಆನಂದ
ಆನಂದದಿ ಮೇಲೇರಿ ಪರಮಾನಂದ
ಅಣು ಆತ್ಮವು ನಿಸರ್ಗ ಪರಮಾತ್ಮನೆಡೆಗೆ
ಮಿಲಿತವಾಗುವುದೆಂತಹ ದುರ್ದೈವ! :D :(

Friday, 7 November 2008

ಚಿತ್ರ ೭೭



















ಚಿತ್ರ ೭೭ ಕ್ಕೆ ಬರೆದ ಕವನಗಳು

ಹರೀಶ ಮಾಂಬಾಡಿ ಅವರ ಕವನ -

ಹಿಂದಿರುಗಿ ನೋಡದೆ
ಸಾಗು ಮುಂದಕೆ..
ಕಳೆದು ಹೋದದ್ದಕ್ಕೆ
ಚಿಂತಿಸಿ ಫಲವೇನು?
ಹೆಜ್ಜೆಯಿಡುವಾಗ
ಜಾಗ್ರತೆ..! ಹಗ್ಗ
ತುಂಡಾಗಿ ಬಿದ್ದರೆ
ಯಾರೂ ರಕ್ಷಣೆಗಿಲ್ಲ
ಏಕೆಂದರೆ ನೀನ್ಯಾರಿಗೂ ಆಗಲ್ಲ
ಹುಲು ಮಾನವ


ತಿರುಕ ಅವರ ಕವನ-
ಮುಗಿಯದ ಓಟ

ಹಿಂತಿರುಗಿ ನೋಡದೆಯೇ ಮೇಲೆ ಮೇಲೆ ಏರುವಿಕೆ
ಹಿಂದಿನದ ನೆನೆಯದೇ ಮುಂದಿನದ ನಿರೀಕ್ಷಿಸದೇ
ಹಾದಿ ಸವೆಸುವಿಕೆ,
ತುಂಬಿಹುದು ಮನದಲಿ ಹಂಬಲಿಕೆ -
ಹಾದಿಯಲಿ ಇಡುವ ಹೆಜ್ಜೆ
ಗಳೆಲ್ಲವುಗಳ ಛಾಪು ಮೂಡಿಸುವಿಕೆ
ಪತಾಕೆ ಹಾರಿಸುವ ಬಯಕೆ ...

ಎಲ್ಲರೂ ಇಚ್ಛಿಸುವುದು
ನಿರಾಯಾಸದ ಏರುವಿಕೆ
ತುತ್ತ ತುದಿಯಲಿ ಚಿರಂತನ ನಿಲುವ ಬಯಕೆ
ಕಣ್ಬಿಡುತಿಹ ಅರುಣಗೆ ಸಡ್ಡು ಹೊಡೆಯಲು
ಪೋರನ ಓಟ

ದಣಿವು ಕಡಿಮೆ ಮಾಡಲು ಸೋಪಾನ
ಇಕ್ಕೆಲಗಳಲಿರುವ ಕಮರಿಯಲಿ
ಬೀಳದಂತೆ ತಡೆ ಗೋಡೆ
ಏರುವಾಗ ಆಸರಿಸಲು ಕೈ ಪಿಡಿ
ಪೋರನಿಗೆ ಅದರವಶ್ಯಕತೆಯಿಲ್ಲ :)

ಬಯಕೆ ಈಡೇರುವುದಾ?
ಕಾಣುತಿಹುದೆಲ್ಲವೂ ಸುಳ್ಳಾ?
ಕಾಣದ ತುತ್ತ ತುದಿ ಕಂಡವರಿಹರಾ?
ಕಂಡವರು ಮತ್ತೆ ಕೆಳಗೆ ಬಂದಿಹರಾ?
ಹೋದವರು ಮತ್ತೆ ಬರುವರಾ? ...

ಕಳೆದು ಹೋದುದ ಮತ್ತೆ ಪಡೆಯಬಹುದಾ?
ಮುಂದಾಗುವುದ ಈಗಲೇ ಕಾಣಬಹುದಾ? ...


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ದೂರದೊಂದು ತೀರ

ಒಂದು ಎರಡು ಮೂರು
ಎಶ್ಟು ಮೆಟ್ಟಿಲು
ಸೇರಲು ತೀರ?
ಬಿಡಿಸಿದಶ್ಟು ಬಿಚ್ಚುವ
ಕನಸಿನ ಬಯಲು
ಸೋಜಿಗ ಅಹುದಲ್ಲವೆ
ಬದುಕಿನ ಆಳ

ಹತ್ತಿ ಹೋಗುವೆನೆ
ಬೆದರಿ ಬಳಲದೆ
ಬದುಕಿನ ಆ ತೀರಕೆ
ಕಾಣುವೆನೆ ಕಂಡ
ನೂರು ಕನಸುಗಳ
ನುಣುಪು ಬಣ್ಣದ
ಬೆಚ್ಚನೆಯ ನೋಟವನಲ್ಲಿ
ಇಚ್ಚೆಯು ಬಂದಾಗ?

ಬೆಚ್ಚನೆಯ ಹೊದಿಕೆ
ನೊಚ್ಚನೆ ಇರಲು ಅಟ್ಟೆ
ಇದ್ದರು ಏನೆಂತೆ
ಬದುಕಿನ ಮುಂದೆ?
ಎದೆಗಾರಿಕೆಯೊಂದು
ಎದೆ ಆಳದಲ್ಲಿ
ಎದರಿಸಲು ಬೇಕಲ್ಲವೆ
ಬರುವ ಬವಣೆಗಳನು
ಇದುರುಗೊಳ್ಳಲು

ಆ ತೀರ ಬಲ್ಲವರಿಲ್ಲ
ಕೇಳಿ ತಿಳಿಗೊಳ್ಳಲು
ತಿಳಿಯಲೋದವರು
ಮರಳಿ ಬಂದಿಲ್ಲ
ತಿಳಿದು ಇಲ್ಲಿಯ
ದಿಟ ಇರುವಿಕೆಯನ್ನು
ಮುಟ್ಟುವೆನು ಅರಿಯಲು
ಬದುಕಿನಾಚೆಯ ತೀರವನು


ಕುಕೂಊ.....
ಪುಣೆ