Tuesday, 15 April 2008

ಚಿತ್ರ-49




ತ್ರಿವೇಣಿಯವರು ಹೂವ ಹಾಸಿನ ಬಗ್ಗೆ ಹೀಗೆ ಹೇಳುತ್ತಾರೆ.

ಹಸುರಲ್ಲಿ ಹೋಲಿ

ಮಕಮಲ್ಲು ಹಾಸಿನ ಮೇಲೆ ಹೂವ ರಂಗೋಲಿ
ಮಾಲಿನ್ಯಕೆಡೆಯಿಲ್ಲ; ಹಸಿರ ದರಬಾರು!
ಹಾದಿಹೋಕರಿಗೆಲ್ಲಾ ಪರಿಮಳದ ಹೋಲಿ
ನಿಸರ್ಗವೇ ವಹಿಸಿಹುದು ಜಗದ ಕಾರುಬಾರು

ದೇವನಡಿಗೂ ಅಲ್ಲ; ಹೆಣ್ಣ ಮುಡಿಗೂ ಇಲ್ಲ
ಹೀಗೇಕೆ ಬಿದ್ದಿವೆ ಇಲ್ಲಿ, ಅಯ್ಯೋ ಪಾಪ!
ದೇವಲೋಕದಿಂದ ಜಾರಿ ಬಿದ್ದಿಹುದಲ್ಲ
ಯಾರು ಕೊಟ್ಟಿರಬಹುದು ಮುನಿದು ಶಾಪ?

ಬರಡು ಬಾಳನು ಹರಸಿ ಸ್ವರ್ಗಮಾಡಿದೆ ಚೆಲುವು
ಒಂದೂ ಕುಂದಿರದ ಸಹಜ ಸೌಂದರ್ಯದಿಂದ
ಅಕಳಂಕ ಸೊಬಗಿಗೆ ತಲೆಬಾಗುತಿದೆ ಮನವು
ಪ್ರಕೃತಿಯೇ ದೈವವೆಂಬನುಭೂತಿಯಿಂದ.


ವಿಜಯಾ, ತಮ್ಮ ಕವನದಲ್ಲಿ ...

ಕಣ್ಣಲ್ಲಿ ತುಂಬಿತ್ತು ಹಸಿರಾದ ನಾಳೆ
ಕರೆ ಬಂದಿತ್ತು ಹೋಗುವುದಕೆ
ಕೊಂಡಿ ಕಳಚಿ ನೆಲಕ್ಕುರುಳೆ

ಹೋಗುವುದಕೆ ಭಯವಿಲ್ಲ ಅಗಲಿಕೆಯ ತಾಳೆ
ಹೋಗುವ ಮುನ್ನ ಧರೆಯ ಚೆಲುವಾಗಿಸಿ
ಸಾರ್ಥಕ ನನ್ನ ಜೀವನ ಕೇಳೆ

ಮತ್ತೆ ಹುಟ್ಟಿ ಬರುವೆ ನಾ ನಾಳೆ
ಮೊಗ್ಗಾಗಿ, ಹೂವಾಗಿ, ಕಾಯಾಗಿ,
ಹಣ್ಣಾಗಿ ಸಂತೃಪ್ತಿಯ ಬಾಳು ಬಾಳೆ




ತವಿಶ್ರೀ ಹೂವ ಅಂತರಾಳವನ್ನು ಹೀಗೆ ಕವನದೊಳಗೆ ಹೆಣೆದಿದ್ದಾರೆ.

ಪ್ರಕೃತಿಯಂಶ

ಹುಟ್ಟಿದೆ ನಾ ಆ ಪ್ರಕೃತಿಯಿಂದ
ಸೇರುತಿಹೆ ಆ ಪ್ರಕೃತಿಯೊಳಗೆ
ಏರಿಸುವಿರೇಕೆ ನಿಮ್ಮ ಮುಡಿಯ ಕಡೆಗೆ
ಯಾಕೆ ಓಗೊಡಲಿ ಕ್ಷುಲ್ಲಕರ ಈ ಕರೆಗೆ

ವಿರಮಿಸುತಿಹೆ
ಕಾದಿಹುದು ಎನಗಾಗಿ
ತಣ್ಣನೆಯ ಹಸುರು ಹಾಸು
ನಿಮ್ಮಲೊಬ್ಬ ಛಡಿ ಹಿಡಿದಿಹನು
ಎಮ್ಮೆಲ್ಲರನು ಒಟ್ಟಿಸಿ, ಗುಡಿಸಿ
ಮೂಡಿಸುವನು ಬುರ್ನಾಸು

ನಿಮ್ಮ ಹಾಗೆಯೇ ನಾನೂ
ಲೋಕದ ಒಂದಂಶ
ನಿಮ್ಮಲಿಹ ಆತ್ಮ ಚೇತನ
ತಿಳಿಯಿರಿ, ಎನ್ನಲೂ ಇಹುದು
ನಮ್ಮೆಲ್ಲರ ಓಟ ಧ್ಯೇಯ ಒಂದೇ
ಸೇರುವ ಆ ಪರಮಾತ್ಮ

ನಾ ತಾಯೊಡನಿರಲು
ಸೆಳೆಯುವಿರಿ ಕೀಳುವಿರಿ
ಸಂತೋಷಿಸುವಿರಿ
ನಿಮ್ಮ ಕ್ಷಣಿಕ ಆನಂದಕೆ, ಸುಖಕೆ

ತಾಯಿ ವೃಕ್ಷದಿ ನಾ ಬೇರಾಗಲು
ಎನ್ನನ್ಯಾಕೆ ತುಳಿಯುವಿರಿ
ಹೀಗಳೆಯುವಿರಿ
ಮೂಲೆ ಗುಂಪಾಗಿಸುವಿರಿ
ಎನಗಿಲ್ಲವೇ
ನಿಮ್ಮಂತಿರುವ ಸ್ವಾತಂತ್ರ್ಯ

ಎನಗೂ ನೀಡಿ
ನಿಮ್ಮೊಡನಿರುವ ಅವಕಾಶ
ನಮ್ಮವರೊಡನಿದ್ದು
ಜಗವ ಮುಂದುವರೆಸಲು ಅವಕಾಶ

ಹೇಳಿ ಎನಗಿಲ್ಲವೇ
ಸಂತತಿಯ ಮುಂದುವರೆಸುವ
ಅವಕಾಶ
ಬೀಜ ಮೊಳೆಸಲು
ಪರಕಾಯ ಪ್ರವೇಶ

ನಮ್ಮಲೂ ಇಹುದು
ನಿಮ್ಮಂತೆ
ಬಿಳಿ ಕಂದು
ಕೆಂಪು ನೀಲ ವರ್ಣರಾಗ
ನಮ್ಮೆಲ್ಲರಲಿಹುದು ಅನುರಾಗ
ನಿಮ್ಮಂತಿಲ್ಲ ವರ್ಣದ್ವೇಷ

ತಿಳಿಯಬಾರದೇಕೆ
ನಮ್ಮಲಿಹ ನಿಮ್ಮಲ್ಲಿರದಿಹ ಒಂದಂಶ
ನಾವೆಲ್ಲ ಒಂದೇ
ನಮ್ಮೆಲ್ಲರದೂ ಜಗವೊಂದೇ


ಕುಮಾರ ಸ್ವಾಮಿ ಕಡಾಕೊಳ್ಳ ರು ಈ ಬಾರಿ ತಮ್ಮ ಭಾವ ಲಹರಿಯನ್ನ ಹೀಗೆ ಹರಿಬಿಟ್ಟಿದ್ದಾರೆ.

ಇದೇನಾ ನಂಬಿಕೆ?

ಯಾಕೋ ಮನಸ್ಸು ಕೆರಳಿತ್ತು. ಅವಳ ಜೊತೆ ಜಗಳ ಆದಾಗಿನಿಂದ ಮನಸ್ಸು ತುಂಬಾ ಚಟಪಟಿಸುತ್ತಿದೆ, ಸಿಡುಕುತ್ತಿದೆ, ಯಾರಮೇಲೆಂದರೆ ಅವರ ಮೇಲೆ ರೇಗುತ್ತಿದೆ.

ಸಮಯ ಮದ್ಯಾಹ್ನ ಮೂರಾಗಿತ್ತು. ಆಗತಾನೆ ಮುಂಗಾರಿನ ಮೊದಲ ವರ್ಷಧಾರೆ ಬಿರುಗಾಳಿಯ ಜೊತೆ ಸುರಿದು ಸುಮ್ಮನಾಗಿತ್ತು. ನನ್ನೂರಿನ ಹಳೆ ಗೆಳೆಯನ ಕಾಲ್ ಬಂತು ಮಳೆಬರ್ತಿದೆ ನಂತರ ಕರೆಮಾಡು ಎಂದೇಳಿ ಬಂದುಮಾಡಿದೆ. ಕೊನೆಯಲ್ಲಿರುವ ಆಲದ ಮರದಡಿಗೆ ಹೋಗಿ ನಿಂತೆ, ಮಳೆ ಬಿಟ್ಟಿದ್ದರೂ ಮರದಿಂದ ಹನಿ ತಟಗುಟ್ಟುತ್ತಿತ್ತು. ದಾರಿಯಲ್ಲಿ ಹೋಗುತಿದ್ದ ನೂರಾರು ವಾಹನಗಳ ಸದ್ದು ಕಿವಿಗೆ ಬಡಿತಿದ್ದರೂ ಏನನ್ನು ಕೇಳಿಸದವನಂತೆ ಎಲ್ಲೋ ನೋಡುತ್ತ ನಿಂತಿದ್ದೆ. ಸುಳಿಗಾಳಿ, ಬಿರಿಮಳೆಗೆ ಸಿಲುಕಿ ನೆಲಕ್ಕೆ ಬಿದ್ದಿದ್ದ ಹೂವುಗಳ ಕಡೆ ನನ್ನ ನೋಟ ನೆಟ್ಟಿತು. ವರ್ಷ ಪೂರ್ತಿ ಮಣ್ಣಿನಿಂದ ನೀರು ಸತ್ವ ಹೀರಿ, ಬಿಸಿಲು ಗಾಳಿ ಸಹಿಕೊಂಡು, ಫಲಕೊಡಲು ಹೂವರಳಿಸಿತ್ತು. ಇನ್ನೇನು ನಾಲ್ಕುದಿನ ಕಾದಿದ್ದರು ಹೂವು ಈಚಾಗಿ, ಈಚು ಬಲಿತು ಕಾಯಿಯಾಗಿ ಹಣ್ಣು ಮಾಗುತ್ತಿತ್ತು. ಹಣ್ಣು ಯಾರೇ ತಿಂದರು ಬೀಜ ತನ್ನ ವಂಶ ಬೆಳೆಸುತ್ತದೆ ಎಂಬ ಬಯಕೆಯಲ್ಲಿ ಮರ ಜೀವಿಸುತ್ತಿತ್ತು. ಆದರೆ ಮುಸಲಧಾರೆ ಮರದ ಕನಸಿಗೆ ಮಸುಕು ಹಾಕಿ ನಗುತ್ತಿತ್ತು. ಮರ ಬದುಕನ್ನೇ ಕಳೆದುಕೊಂಡ ಭಾವದಿಂದ ನರಳುತ್ತಿತ್ತು. ಆದರೆ ಬಿದ್ದ ಹೂವುಗಳು ನಗುತ್ತಲೇ ಇದ್ದವು. ಮೈಯಲ್ಲ ಸುಂದರ ಬಣ್ಣ ಹೊತ್ತು ಎಲ್ಲರನ್ನ ಸೆಳೆಯುತ್ತಿದ್ದವು. ಅವಳ ಮುಡಿಗೇರಲೇ, ದೇವರ ಪೂಜೆಗೆ ಅರ್ಪಿಸಿ ಕೊಳ್ಳಲೇ ಎಂಬ ತುಡಿತ ನನಗೆ ಇನ್ನೂ ಆ ಹೂವಲ್ಲಿ ಕಾಣಿಸುತ್ತಿತ್ತು. ಮಳೆಯ ಹನಿಗಳು ಹೂವಿನ ಪಕಳೆಯ ಮೇಲೆ ಮುತ್ತಂತೆ ಜೊಡಿಸಿದ್ದರಿಂದ ಸೊಗಸಾಗಿ ಕಾಣುತ್ತಿದ್ದವು. ನೋಟ ಆ ಹೂವುಗಳಲ್ಲೇ ನೆಟ್ಟಿತು. ಮನಸ್ಸು ತನ್ನ ವಾಸ್ತವನ್ನು ಆ ಹೂವಿನ ಜೊತೆ ತುಲನೆ ಮಾಡವುದರಲ್ಲಿ ತೊಡಗಿತು. ವರ್ಷಗಳ ಹಿಂದೆ ಮುಂಗಾರಿನ ಸಮಯ ಮೇಘಗಳು ನಭವನ್ನು ಮುತ್ತಿ ಕವಿಯುವ ಜೋರು. ನಾನೊಂದು ಸ್ನೇಹದ ಸಸಿ ನೆಟ್ಟಿದ್ದೆ. ಅವಳ ಮತ್ತು ನನ್ನ ಭಾವದ ನೀರೆರೆದು ನೆಟ್ಟ ಸಸಿ. ಮಾತು, ಮುನಿಸು, ಕಷ್ಟ, ಸುಖ, ನೋವು, ನಗು, ಬದುಕಿ ಎಲ್ಲಾ ಆಯಾಮಗಳನ್ನು ಆ ಸ್ನೇಹದ ಸಸಿಯ ನೆರಳಲ್ಲಿ ಸೇರಿಸಿದ್ದೆವು. ಆ ಸಸಿ ಹೂವನ್ನು ಬಿಟ್ಟು ಎಲ್ಲರನ್ನೂ ಸೆಳೆದಿತ್ತು ಮೋಹವನ್ನು ತನ್ನಲ್ಲಿ ಸೇರಿಸಿಕೊಂಡಿತ್ತು. ಆ ಸುಂದರ ಮಕರಂದ ತುಂಬಿಕೊಂಡು ಅರಳಿದ ಹೂವು ದುಂಬಿಗಳನ್ನ ಕರೆಯುತ್ತಿತ್ತು. ಪಾತರಗಿತ್ತಿಗಳನ್ನ ಅಣಕಿಸುತ್ತಿತ್ತು. ಸ್ನೇಹದ ಹೂವು ನೋಡಿ ಎಲ್ಲರ ಮತ್ಸರ ಹೆಚ್ಚಿತು. ಸುಂದರ ಹೂವು ಬೀಗುತ್ತಿತ್ತು. ಬಿರುಗಾಳಿ ಬರಬಹುದೆಂದು ಮರೆತು ಹಾಯಾಗಿ ತೂಗೋ ಗಾಳಿಗೆ ತಲೆದೂಗುತ್ತಿತ್ತು. ಆದರೆ ವಿಧಿಯ ಆಟ ಏನಿತ್ತೊ, ಎತ್ತಲಿಂದಲೋ ಬಂದ ಶಂಕೆ ಎಂಬ ಬಿರುಗಾಳಿ ಸುಳಿಸುಳಿದು ಬೀಸಿ ಹೂವುನ್ನು ನೆಲಕ್ಕುರುಳಿಸಿದೆ. ಹೂವು ನರಳತ್ತ ವೇದನೆಯಲ್ಲಿ ಬಾಡುತ್ತಿದೆ. ಭಾವನೆಗಳ ಮಿಲನದಿಂದ ಅರಳಿದ ಹೂವು ಇನ್ನಲ್ಲವಾಗಿದೆ. ಆದೋ ಇಲ್ಲಿರುವ ಮರ ಮತ್ತೊಮ್ಮೆ ಹೂವನ್ನು ಅರಳಿಸುವ ಆಸೆ ಹೊತ್ತು ಬಿಸಿಲು ಮಳೆಗೆ ಮೈಯೊಡ್ಡಿ ನಿಂತಂತೆ ನಾನೆಟ್ಟ ಆ ಸ್ನೇಹದ ಸಸಿಯಲ್ಲಿ ಮತ್ತೊಮ್ಮೆ ಭಾವ ನಂಟಿನ ಹೂವುನ್ನು ನೋಡುವ ನಿಚ್ಚಿತ ನಿರೀಕ್ಷೆಯಲ್ಲಿ ಬಂದ ನೋವು, ಕಷ್ಟ, ದುಃಖ, ನಿಂದನೆಗಳನ್ನು ಸಹಿಸುತ್ತ ಜೀವ ಸಾಗಿಸುತ್ತಿದೆ. ಇದೇನಾ ನಂಬಿಕೆ?



ಸತೀಶ್ ಅವರ ಚಿಂತೆ ಇರದ ಹೂಗಳು ಕವನ ಹೀಗೆ ಹೇಳುತ್ತದೆ.

ಚಿಂತೆ ಇರದ ಹೂಗಳು
ಜಾರಿ ಬಿದ್ದ ತಂಗಳು
ಕಂಡು ಕಾಣದಂತೆ ಕರುಳು
ಎರಚಿ ಹೋದ ಸಿರಿಗಳು.

ನಿನ್ನೆ ಎಲ್ಲ ಮರೆಯುವ
ಮುಂದೆ ನಾಳೆ ಎನ್ನುವ
ಬರಿ ಬವಣೆಯ ಅವಯವ
ಕಂಡು ಮುಂದುವರೆಯುವ.

ಹಿರಿದು ಅರಳಿ ಎದ್ದೆವು
ನಮ್ಮತನವ ಹೊದ್ದೆವು
ನಾಳೆ ಇರದ ಕನಸ ನಾವು
ಇಂದು ತಾನೆ ಕಂಡೆವು.

ಭೂಮಿಯಿಂದ ಭೂಮಿಗೆ
ಬಾನಿನಾಚೆ ಬದುಕಿಗೆ
ಹುಟ್ಟು-ಸಾವು ಹೀಗಿದೆ
ನಮ್ಮ ಪಯಣ ಸಾಗಿದೆ.



ಕುಮಾರ ಸ್ವಾಮಿ ಕಡಾಕೊಳ್ಳ ರು ಕವನದ ಮೂಲಕವೂ ತಮ್ಮ ಭಾವವನ್ನ ಹಂಚಿಕೊಂಡಿದ್ದಾರೆ.

ಮಾಸಿತು ಭಾವನೆ ಬಣ್ಣ **

ಮೊನ್ನೆ ಮೊಗ್ಗಾಗಿ ಕುಡಿಯಲ್ಲಿ ಚಾಚಿ
ನಿನ್ನೆ ಬಣ್ಣದ ಹೂವಾಗಿ ಅರಳಿ ನಕ್ಕು
ತುಂಬಿಸಿ ಸುತ್ತೆಲ್ಲ ಪರಿಮಳದ ಮತ್ತು
ಇಂದು ಜೀವನ ಯಾತ್ರೆಯ ಮುಗಿಸುವ ತಯಾರಿ!!

ನಿನ್ನೆ ಪಾತರಗಿತ್ತಿಯ ಅಣಕಿಸಿದ ಗತ್ತು
ಅಂದಿನಿಂದ ಸುಂದರಿಯ ಮುಡಿಗೇರುವ ಮಸಲತ್ತು
ದೇವರಗೆ ನಿನ್ನ ನೀನು ಅರ್ಪಿಸಿಕೊಳ್ಳುವ ನೆಚ್ಚು
ಇಂದು ಹಸಿರ ಹುಲ್ಲಮೇಲೆ ನೆಲಕಚ್ಚಿತು ಯ್ಯಾಕೋ?

ದುಂಬಿಯು ಬಳಸುತ ನಿನ್ನ ಕಚಕುಳಿಯನಿಡುತ್ತಿತ್ತು
ಸೂರ್ಯನು ನೋಡುತ್ತ ಕಣ್ಣು ಹೊಡೆಯುತಿದ್ದ
ನನ್ನ ಮನಸು ಕದ್ದು ಮೋಡಿಮಾಡಿತ್ತಲಿದ್ದ, ನಿನಗೆ
ಈಗ ಸಿಡುಕ್ಯಾಕೋ ದೂರ ಹೋಗುವ ಮನಸ್ಯಾಕೋ

ಮುಂಜಾನೆ ಮಂಜ ಹನಿಯ ಪಕಳೆಯಲಿಡಿದು
ಮುತ್ತುಗಳನೆ ಮಾಡಿ ಪೋಣಿಸಿ ಮೆರೆದಿದ್ದೆ
ಹನಿಯಲ್ಲಿ ಒಲವಿನ ಗೆಳತಿಯ ಬಿಂಬ ತೋಸಿಸಿದ್ದೆ
ಈಗ್ಯಾಕೋ ಹಾಗೆ ಬಾಡುತ ಅಲ್ಲಿ ಬಿದ್ದೆ

ನಾನೊಂದು ಕನಸು ನಿನ್ನ ನಂಬಿ ಕಟ್ಟಿದ್ದೆ
ನನ್ನ ಒಲವಿನ ಗೆಣತಿಗೆ ನಿನ್ನ ಮುಡಿಗೆ ಮುಡಿಸುವೆನೆಂದಿದ್ದೆ
ಅಂದಿನಿಂದ ಇಂದಿನವರೆಗೆ ಕಾಯುತಲೇ ಕೂತಿದ್ದೆ
ಅವಳು ಬರುವ ಮೊದಲೇ ನೀ ಜಾರಿಬಿದ್ದೆ

ಏಸೊಂದು ದಿನದಿಂದ ಬೀಸುವಾ ಗಾಳಿಗೆ
ಮೂಗು ತಿವಿಯುತ್ತ ಠೀವಿಯಿಂದ ಕೂತಿದ್ದೆ
ಅದುಯಾಕೋ ಇಂದು ಬುಡಕಳಚಿ ಬಿದ್ದೆ
ನನ್ನ ಭಾವನೆಯ ಬಣ್ಣವನು ಮಾಸಿಸಿ ಬಿಟ್ಟೆ

ಯಾರು ಬಲ್ಲರು ನಡೆಯುವ ವಿಧಿಯಾಟವ
ಬಲ್ಲವರು ಇಲ್ಲ ಅರಿಯಲು ಆಗುವುದಿಲ್ಲ
ಎಲ್ಲದರ ಅರಿವಿದ್ದರು ನಂಬಿ ಕಟ್ಟಿದರು
ಬದುಕುವ ನೂರು ಕನಸುಗಳನು, ಇದವೇ ಏನಾ ಬದುಕು??

Monday, 7 April 2008

ಚಿತ್ರ -48





ಅನ್ನಪೂರ್ಣ ದೈತೋಟರ ಚುಟುಕು ಹೀಗಿದೆ...

ಅದೋ ಅಲ್ಲಿಹುದೆನ್ನ ಕನಸುಗಳು !
ಹೂವಿನ ಹಾದಿಯಿದೆ ರವಿಯ ಪ್ರಭೆ ಇದೆ
ಆ ಪ್ರಭೆ ನನ್ನ ಕಣ್ಣುಗಳಲ್ಲಿ ಬೆಳಗುತಿದೆ
ಅಲ್ಲಿರುವೆ ಒಂದು ದಿನ ನನ್ನ ಕನಸುಗಳ ನನಸಿನಲ್ಲಿ..

ಶ್ರೀನಿವಾಸ್ ಹಸಿಮನಸಿನ ಕಾತರವನ್ನು ಹೀಗೆ ಹಿಡಿದಿಟ್ಟಿದ್ದಾರೆ..

ನಿನ್ನೆ ನೋಡಲು ಬಂದವರು
ಮಲ್ಲಿಗೆಯ ದಂಡ ಇತ್ತವರು
ನಾಚಿ ತಗ್ಗಿದ ಮೊಗವೆತ್ತಿದವರು
ಅದೇಕೋ ಅದುಹೇಗೋ
ಮನದೊಳಗಚ್ಚಳಿಯದೇ
ನಿಂದಿಹರು

ಬೇಗ ಬರುತ್ತೀನೆಂದವರು
ಯಾಕೋ ಇನ್ನೂ ಬರಲಿಲ್ವೇ?
ಬೆಳಗಿನ ಗಾಡಿ ಬಂದಾಗಿದೆ
ಸಂಜೆಯ ಗಾಡಿ ಹೊರಡಲನುವಾಗಿದೆ

ಎಡಗಣ್ಯಾಕೋ ಅದುರುತಿಹುದಲ್ಲ
ಅಧರ ನಡುಗುತಿಹುದಲ್ಲ
ಎದೆ ಬಡಿತ ಮುಗಿಲೆಡೆ ಓಡುತಿದೆ
ಅದಾಗಬಾರದಲ್ಲ
ಹಾಗಾಗಬಾರದಲ್ಲ
ಹುಸಿಯಾಗಸಲು
ನೀ ಬೇಗ ಬಾರೆಯಲ್ಲ

ನಿನ್ನೆ ಮುಡಿದ ಹೂ
ಅರಳಿದ್ದ ಜಾಜಿ ಮೊಲ್ಲೆ ಮಲ್ಲಿಗೆಯ ದಂಡು
ನಿನ್ನೆ ಅರಳಿತು
ಮುಡಿಯಲಿ ನಗುತಿತ್ತು
ಇಂದು ಕಿಟಕಿಯ ಸರಳಿನ ಮೇಲೆ
ಮುದುಡಿದೆ, ತೂಗಾಡಿದೆ
ಅವುಗಳ ಮೊಗವೇಕೋ ಬಾಡಿದೆ

ಮಲ್ಲಿಗೆ ಜಾಜಿ ನಿಮ್ಮ ಹಾಗೆ
ನಾ ಆಗಬಾರದಲ್ಲವೇನೇ?
ಹೀಗಾಗಬಾರದಲ್ಲವೇನೇ
ಮನದಲಿ ಮೂಡುತಿಹುದು
ಸುಳ್ಳಾಗಲಿ ತಾನೆ?

ಸಮಯ ಓಡುವುದು ಬೇಡ
ಸವಿಗಳಿಗೆಯ ಇನ್ನೂ ಸವಿಯುವುದಿದೆಯಲ್ಲ
ಗಡಿಯಾರ ನಿಂತು ಹೋಗಬಾರದೇ
ಮುಳ್ಳು ಮುನ್ನಡೆಯಬಾರದೇ!
ಮುದುಡಿದ ಹೂ ಅರಳಬಾರದೇ
ಸುಕ್ಕಿಡುತಿಹ ಮೊಗವರಳಬಾರದೇ!

ಎನ್ನ ಕಾಪಾಡು ಹರಿಯೇ
ನಾ ಹೊಗುವೆ ನಿನ್ನ ಮೊರೆಯೇ
ಯಾರ ಬಳಿ ಸುರಿಯಲಿ ಎನ್ನ ಅಳಲು
ಬೇಗ ಬಂದು ತುಂಬಬಾರದೇ ನನ್ನೊಡಲು

ವಿಜಯಾರ ಹಾರೈಕೆ ಹೀಗಿದೆ...

ನಿತ್ಯ ನೂತನ ಹೂವು ದಿವ್ಯ ಮುಡಿಯನು ಅರಸಿ
ದಿಟ್ಟ ನೋಟ ಬೆಚ್ಚನೆಯ ಬೆಳಕಿನೆಡೆಗೆ ನಡೆಸಿ
ನಿಂತ ನೋವನು ಮರೆಸಿ, ನಲಿವನ್ನು ಕೈಚಾಚಿ ವರಿಸಿ
ಇಟ್ಟ ಹೆಜ್ಜೆ ಧೃತಿಗೆಡದೆ ಹಸನಾಗಲಿ ಬಾಳು ... ಹರಸಿ :-)


ಭಾವ ದರ್ಪಣ ವಿರಹವನ್ನು ವಿವರಿಸುವ ಪರಿ ಇದು...

ಈಗಷ್ಟೇ ಬಂದು ಹೋದ ನೀನು..
ಈಗಷ್ಟೇ ಮುಡಿದು ತೆಗೆದ ಮಲ್ಲಿಗೆ..
ಮಲ್ಲಿಗೆ ಘಮವಿನ್ನೂ ತಾಜಾ..
ನೀನೇಕೆ ಅಷ್ಟು ದೂರ ಹೋದೆ ನನ್ನ ರಾಜ..??

ಸರಳುಗಳು, ಸರಪಳಿಗಳು
ಕಾಣವು ನನಗೆ ಅವುಗಳೆಲ್ಲವೂ..
ಯಾವ ಬಂಧನವಿಲ್ಲ ಈ ಮಲ್ಲಿಗೆ ಘಮಕೆ
ಅಂತೆ ಯಾವ ಬೇಲಿಗಳಿಲ್ಲ ಎನ್ನೊಲವಿನ ನೋಟಕೆ..

ಹೀಗೆ ಬಂದು ಹಾಗೆ ಹೋಗುವ ನಿನ್ನೊಲವ ರೀತಿ
ಆದರೂ ಕಂಗಳಲೇಕೋ ತುಳುಕುತಿದೆ
ನಿನಗಾಗೇ ನನ್ನ ಪ್ರೀತಿ..

ಈ ನನ್ನ ಪ್ರೀತಿ ಒರತೆ
ಕಣ್ಣ ಹನಿಯಾಗುವ ಮುಂಚೆ
ಮತ್ತೆ ಬಂದೆನ್ನ ಸೇರು ಗೆಳೆಯ
ಇನ್ನೆಂದೂ ಬೇರೆಯಾಗದಂತೆ ಮೆಲ್ಲಗೆ..
ನೀನಾಗು ನನ್ನ ಬಾಳಲಿ ನಗುವ ಸದಾ-ಮಲ್ಲಿಗೆ..

ಕುಮಾರ ಸ್ವಾಮಿ ಕಡಾಕೊಳ್ಳ ಈ ಚಿತ್ರದಲ್ಲಿ ಕಾಯುವಿಕೆಯನ್ನು ಕಂಡಿದ್ದಾರೆ.....

** ಕಾದಿರುವೆ ಅಭಿಸಾರಿಕೆ **

ಇನಿಯ ನಿನ್ನ ಕನಸನ್ನು ಕಂಗಳಲಿ ಕಟ್ಟಿ
ಕಾದಿಹೆನು ಎವೆಮುಚ್ಚದೆ ಕಾತುರದಿಂದ
ನಿದ್ದೆಯಲಿ ಜಾರಿಬಿಡುವೆನೆಂಬ ಆತಂಕ
ಕಂಗಳ ತೆರೆದು ನಿನ್ನ ಹುಡುಕುತಿರುವೆನು

ನಿನ್ನೆ ನೀ ತಂದು ಮುಡಿಸಿದ ಮಲ್ಲೆ
ಮುದುಡಿ ಬಾಡಿ ಮುನಿಸಿ ಮಾಸಿಹವು
ಇಂದು ತರುವೆಯ ಬಿಳಿದುಂಡು ಮಲ್ಲಿಗೆ?
ಎಂದು ಮನಸು ಮೌನದಲಿ ಕೇಳಿಹುದು

ಕಂಗಳ ಕೊಳದೊಳಗೆ ನಿನ್ನದೇ ಬಿಂಬ
ಸನಿಹವಿರದ ನಿನ್ನನ್ನು ಅಲ್ಲಿ ಕಾಣುತಿಹೆನು
ವಿರಹ ವಡಬಾನಲವಾಗಿ ಕುದಿಯುತಿಹುದು
ಬಾರೋ ಕಾಂತ ಕೊಳಬತ್ತುವ ಮೊದಲು

ಒಂಟಿಯಾಗಿ ಕುಳಿತಿರುವೆ ಗೋಡೆಗಳ ನಡುವೆ
ನೆನವುತ್ತ ಮುದದಿ ನೀಕೊಟ್ಟ ಚುಂಬನ
ಆದರದಿ ನೀನು ಬಿಗಿದಪ್ಪಿದ ಬಿಸಿ ಆಲಿಂಗನ
ಮೈಯಲ್ಲಿ ನವುರು ಯಾತನೆ, ಅಣೆಯಲ್ಲಿ ಬೆವರು

ಹಸಿವಿನ ಅರಿವಿಲ್ಲ ಉದರ ಬರಿದಾದರು
ಬರಿ ನಿನ್ನದೇ ನೆನಪು ಕ್ಷಣಕ್ಷಣವು ಕನವರಿಕೆ
ಕಾಲಸೂಚಕನ ಮುಳ್ಳು ತಿರುಗದೆ ತಡದಂತೆ
ಗಳಿಗೆ ಯುಗವಾಗಿ ಬಳಲಿರುವೆ ಬಾರೋ

ಹಲ್ಲಿ ಲೊಚಗುಟ್ಟಿದರೂ, ಕರು ನೆಗೆದರೂ
ಇರುವೆ ನಡೆವ ಶಬ್ದ ಸುಳಿದರೂ ಸಾಕು
ಮನಕೆ ನೀ ನಡೆದು ಬಂದೆಂಬ ತಳವೆಳಗು
ಮುನಿಸು ಮನದಲ್ಲಿ ಜಗದ ಜಂಜಾಟದಲ್ಲಿ

ಇಣುಕಿದೆ ಸೂರ್ಯ ರಶ್ಮಿ ತೆರದ ಕಿಟಕಿಯಲಿ
ಸುಯ್ಯುತಿದೆ ಗಾಳಿ ಸುಳಿ ಸುಳಿಯಾಗಿ
ವಾಲುತ್ತ ಪಡುವಣದಿ ನಿತ್ಯ ನಡೆದಿಹನು
ತಡ ಇನ್ನುಯಾಕೋ ಇನಿಯ ನೀಬಾರೋ ಬೇಗ

ಕಾಲಲ್ಲಿ ಕಿರುಗೆಜ್ಜೆಯ ಗಲಿರು ಗಲಿರು ನಾದ
ಕೋಣೆಯಲಿ ಕೈ ಬಳೆಯ ಮನ ಮೋಹಕ ಸದ್ದು
ಉಸಿರ ಬಿಸಿ ಏರುತಿದೆ ನೆನಪಿನ ಸುಳಿದಾಟಕೆ
ರತಿಬಯಕೆಯ ಬಸಿರು ಕ್ಷಣಗಣಿಕೆಯ ನಡೆಸಿದೆ

ಬಿಸಿಕೂಳ ಕೈತುತ್ತು ಉಣಿಸುವ ಬಯಕೆ
ಜೇನುತುಪ್ಪ ಸೇರಿಸಿ ಹಾಲುಸಕ್ಕರೆ ಬೆರಸಿ
ನಿನಗೆ ಕುಡಿಸುವ ಹಂಬಲವು ಮನದಲ್ಲಿ
ಅಂಗನೆ ಅಭಿಸಾರಿಕೆ ನಾನು, ಕಾದಿರುವೆ ಬಾರೋ

ಮನಸ್ವಿನಿ ನೆನಪುಗಳನ್ನು ಮರೆಯಲಾರದೆ ಚಡಪಡಿಸಿದ್ದಾರೆ...:)

ಮರೆತೇನೆ!

ಮರೆತೇನು, ಮನಸಾ ಮರೆತೇನು
ಇದು ಬರಿ ಭ್ರಮೆಯೇನು!
ಮರೆತೆನೆಂಬ ಅರಿವು ನಿಜವಲ್ಲ
ನಿನ್ನ ನೆನಪು ನನ್ನ ಬಿಡದಲ್ಲ!

ಕನಸು ಕಪ್ಪಾಯ್ತು, ಅಸೆಗಳು ಬತ್ತಾಯ್ತು
ಬರಿ ನೆನಪು ಮಾತ್ರ ನನದಾಯ್ತು
ನೀ ಬರುವ ಹಾದಿಯಲಿ, ನಿನ್ನ ಕಾಯುತ ನಾನು
ಕಳೆದಾಯ್ತು ಇನಿಯ, ಯುಗವನ್ನು

ಬತ್ತಿದ ಮನವಿತ್ತು, ಬಾಡಿದ ಮುಖವಿಟ್ಟು
ನೀ ತೊರೆದ ಸತ್ಯವನೂ ಮುಚ್ಚಿಟ್ಟು
ಕಾದು ಕೂತಿಹೆನು ಶಬರಿಯಂತೆ
ಬಾ ನನ್ನ ಉಸಿರಿಗೆ ಉಸಿರಂತೆ

ಸತೀಶ್-ರದ್ದು ವಾಸ್ತವಕ್ಕೆ ಶರಣು ಹೋಗುವ ತಂತ್ರ...:)

...ಶರಣು ಹೋಗಿಹ ಕೂಗು

ಮುಂಬರುವ ಬಾಳ್ವೆಯ ಬೆಳಕಿನ
ದಾರಿಯ ಅಡ್ಡಡ್ಡ ಸೀಳುವ ಕಂಬಿಗಳಿವೆ
ನೆಟ್ಟ ನೋಟದ ತೆರೆದಂಕದ ಪರದೆಯ
ಮುಂದೆ ಅದೆಲ್ಲೋ ಹುದುಗಿಹ ಕಥೆಯಿವೆ.

ಕತ್ತಲೊಳಗೆ ಕುಳಿತು ಕನಸ ಹೆಣೆಯುವ
ಮನಕಂಜಿ ಹೆದರಿದಂತಿಹ ಆಸೆಗಳು
ಬೆಳಕಿನ ಕತ್ತನು ಅಲ್ಲೇ ಹಿಸುಗಿಹ ಪರದೆಯ
ಕೊನೆಯಿಂದ ಕೊನೆಗೆ ಚಾಚಿಕೊಂಡ ಗಳು.

ಬಿಡಿಸಿ ಪೋಣಿಸಿ ಮುಡಿದು ಬದಿಗೊತ್ತಿದ
ಹೂಗಳ ಗುಂಪಿನಲ್ಲೂ ಇನ್ನೂ ಉಳಿದ ನಗು
ಕಾಲವನು ಕತ್ತಲೆಯೊಳಗೆ ಸೇರಿಸಿ ಸುಪ್ತತೆ
ತಪ್ತತೆಗಳಿಗೆ ಶರಣು ಹೋಗಿಹ ಕೂಗು.

ನಿರೀಕ್ಷೆಗಳೇ ಹೀಗೆ ನಾವಂದುಕೊಂಡ ಹಾಗೆ
ಎಂದಾದರೂ ಏನಾದರೂ ಆದದ್ದಿದೆಯೇ
ಬೇಡವೆಂದರೂ ಸುಮ್ಮನೇ ಮುಂದೆ ಹೋಗುತ್ತಲೇ
ಇರುವ ಕಾಲ ಚಿಂತಿಸುವವರನ್ನು ತಡೆದದ್ದಿದೆಯೇ.

ಇರು ನೀನು ಹೇಗೆ ಎಲ್ಲಿ ಬೇಕಾದರೂ
ನನ್ನ ಮನದಾಳದಲ್ಲಿ ಸದಾ ಸುಪ್ತವಾಗಿ
ನಿನ್ನೊಡನೆ ನಾನು ನನ್ನೊಡನೆ ನೀನು
ಎಂದು ಹಾಡುವ ದಿನಗಳು ಶಾಶ್ವತವಾಗಿ.