ಚಿತ್ರ-49
ತ್ರಿವೇಣಿಯವರು ಹೂವ ಹಾಸಿನ ಬಗ್ಗೆ ಹೀಗೆ ಹೇಳುತ್ತಾರೆ.
ಹಸುರಲ್ಲಿ ಹೋಲಿ
ಮಕಮಲ್ಲು ಹಾಸಿನ ಮೇಲೆ ಹೂವ ರಂಗೋಲಿ
ಮಾಲಿನ್ಯಕೆಡೆಯಿಲ್ಲ; ಹಸಿರ ದರಬಾರು!
ಹಾದಿಹೋಕರಿಗೆಲ್ಲಾ ಪರಿಮಳದ ಹೋಲಿ
ನಿಸರ್ಗವೇ ವಹಿಸಿಹುದು ಜಗದ ಕಾರುಬಾರು
ದೇವನಡಿಗೂ ಅಲ್ಲ; ಹೆಣ್ಣ ಮುಡಿಗೂ ಇಲ್ಲ
ಹೀಗೇಕೆ ಬಿದ್ದಿವೆ ಇಲ್ಲಿ, ಅಯ್ಯೋ ಪಾಪ!
ದೇವಲೋಕದಿಂದ ಜಾರಿ ಬಿದ್ದಿಹುದಲ್ಲ
ಯಾರು ಕೊಟ್ಟಿರಬಹುದು ಮುನಿದು ಶಾಪ?
ಬರಡು ಬಾಳನು ಹರಸಿ ಸ್ವರ್ಗಮಾಡಿದೆ ಚೆಲುವು
ಒಂದೂ ಕುಂದಿರದ ಸಹಜ ಸೌಂದರ್ಯದಿಂದ
ಅಕಳಂಕ ಸೊಬಗಿಗೆ ತಲೆಬಾಗುತಿದೆ ಮನವು
ಪ್ರಕೃತಿಯೇ ದೈವವೆಂಬನುಭೂತಿಯಿಂದ.
ವಿಜಯಾ, ತಮ್ಮ ಕವನದಲ್ಲಿ ...
ಕಣ್ಣಲ್ಲಿ ತುಂಬಿತ್ತು ಹಸಿರಾದ ನಾಳೆ
ಕರೆ ಬಂದಿತ್ತು ಹೋಗುವುದಕೆ
ಕೊಂಡಿ ಕಳಚಿ ನೆಲಕ್ಕುರುಳೆ
ಹೋಗುವುದಕೆ ಭಯವಿಲ್ಲ ಅಗಲಿಕೆಯ ತಾಳೆ
ಹೋಗುವ ಮುನ್ನ ಧರೆಯ ಚೆಲುವಾಗಿಸಿ
ಸಾರ್ಥಕ ನನ್ನ ಜೀವನ ಕೇಳೆ
ಮತ್ತೆ ಹುಟ್ಟಿ ಬರುವೆ ನಾ ನಾಳೆ
ಮೊಗ್ಗಾಗಿ, ಹೂವಾಗಿ, ಕಾಯಾಗಿ,
ಹಣ್ಣಾಗಿ ಸಂತೃಪ್ತಿಯ ಬಾಳು ಬಾಳೆ
ತವಿಶ್ರೀ ಹೂವ ಅಂತರಾಳವನ್ನು ಹೀಗೆ ಕವನದೊಳಗೆ ಹೆಣೆದಿದ್ದಾರೆ.
ಪ್ರಕೃತಿಯಂಶ
ಹುಟ್ಟಿದೆ ನಾ ಆ ಪ್ರಕೃತಿಯಿಂದ
ಸೇರುತಿಹೆ ಆ ಪ್ರಕೃತಿಯೊಳಗೆ
ಏರಿಸುವಿರೇಕೆ ನಿಮ್ಮ ಮುಡಿಯ ಕಡೆಗೆ
ಯಾಕೆ ಓಗೊಡಲಿ ಕ್ಷುಲ್ಲಕರ ಈ ಕರೆಗೆ
ವಿರಮಿಸುತಿಹೆ
ಕಾದಿಹುದು ಎನಗಾಗಿ
ತಣ್ಣನೆಯ ಹಸುರು ಹಾಸು
ನಿಮ್ಮಲೊಬ್ಬ ಛಡಿ ಹಿಡಿದಿಹನು
ಎಮ್ಮೆಲ್ಲರನು ಒಟ್ಟಿಸಿ, ಗುಡಿಸಿ
ಮೂಡಿಸುವನು ಬುರ್ನಾಸು
ನಿಮ್ಮ ಹಾಗೆಯೇ ನಾನೂ
ಲೋಕದ ಒಂದಂಶ
ನಿಮ್ಮಲಿಹ ಆತ್ಮ ಚೇತನ
ತಿಳಿಯಿರಿ, ಎನ್ನಲೂ ಇಹುದು
ನಮ್ಮೆಲ್ಲರ ಓಟ ಧ್ಯೇಯ ಒಂದೇ
ಸೇರುವ ಆ ಪರಮಾತ್ಮ
ನಾ ತಾಯೊಡನಿರಲು
ಸೆಳೆಯುವಿರಿ ಕೀಳುವಿರಿ
ಸಂತೋಷಿಸುವಿರಿ
ನಿಮ್ಮ ಕ್ಷಣಿಕ ಆನಂದಕೆ, ಸುಖಕೆ
ತಾಯಿ ವೃಕ್ಷದಿ ನಾ ಬೇರಾಗಲು
ಎನ್ನನ್ಯಾಕೆ ತುಳಿಯುವಿರಿ
ಹೀಗಳೆಯುವಿರಿ
ಮೂಲೆ ಗುಂಪಾಗಿಸುವಿರಿ
ಎನಗಿಲ್ಲವೇ
ನಿಮ್ಮಂತಿರುವ ಸ್ವಾತಂತ್ರ್ಯ
ಎನಗೂ ನೀಡಿ
ನಿಮ್ಮೊಡನಿರುವ ಅವಕಾಶ
ನಮ್ಮವರೊಡನಿದ್ದು
ಜಗವ ಮುಂದುವರೆಸಲು ಅವಕಾಶ
ಹೇಳಿ ಎನಗಿಲ್ಲವೇ
ಸಂತತಿಯ ಮುಂದುವರೆಸುವ
ಅವಕಾಶ
ಬೀಜ ಮೊಳೆಸಲು
ಪರಕಾಯ ಪ್ರವೇಶ
ನಮ್ಮಲೂ ಇಹುದು
ನಿಮ್ಮಂತೆ
ಬಿಳಿ ಕಂದು
ಕೆಂಪು ನೀಲ ವರ್ಣರಾಗ
ನಮ್ಮೆಲ್ಲರಲಿಹುದು ಅನುರಾಗ
ನಿಮ್ಮಂತಿಲ್ಲ ವರ್ಣದ್ವೇಷ
ತಿಳಿಯಬಾರದೇಕೆ
ನಮ್ಮಲಿಹ ನಿಮ್ಮಲ್ಲಿರದಿಹ ಒಂದಂಶ
ನಾವೆಲ್ಲ ಒಂದೇ
ನಮ್ಮೆಲ್ಲರದೂ ಜಗವೊಂದೇ
ಕುಮಾರ ಸ್ವಾಮಿ ಕಡಾಕೊಳ್ಳ ರು ಈ ಬಾರಿ ತಮ್ಮ ಭಾವ ಲಹರಿಯನ್ನ ಹೀಗೆ ಹರಿಬಿಟ್ಟಿದ್ದಾರೆ.
ಇದೇನಾ ನಂಬಿಕೆ?
ಯಾಕೋ ಮನಸ್ಸು ಕೆರಳಿತ್ತು. ಅವಳ ಜೊತೆ ಜಗಳ ಆದಾಗಿನಿಂದ ಮನಸ್ಸು ತುಂಬಾ ಚಟಪಟಿಸುತ್ತಿದೆ, ಸಿಡುಕುತ್ತಿದೆ, ಯಾರಮೇಲೆಂದರೆ ಅವರ ಮೇಲೆ ರೇಗುತ್ತಿದೆ.
ಸಮಯ ಮದ್ಯಾಹ್ನ ಮೂರಾಗಿತ್ತು. ಆಗತಾನೆ ಮುಂಗಾರಿನ ಮೊದಲ ವರ್ಷಧಾರೆ ಬಿರುಗಾಳಿಯ ಜೊತೆ ಸುರಿದು ಸುಮ್ಮನಾಗಿತ್ತು. ನನ್ನೂರಿನ ಹಳೆ ಗೆಳೆಯನ ಕಾಲ್ ಬಂತು ಮಳೆಬರ್ತಿದೆ ನಂತರ ಕರೆಮಾಡು ಎಂದೇಳಿ ಬಂದುಮಾಡಿದೆ. ಕೊನೆಯಲ್ಲಿರುವ ಆಲದ ಮರದಡಿಗೆ ಹೋಗಿ ನಿಂತೆ, ಮಳೆ ಬಿಟ್ಟಿದ್ದರೂ ಮರದಿಂದ ಹನಿ ತಟಗುಟ್ಟುತ್ತಿತ್ತು. ದಾರಿಯಲ್ಲಿ ಹೋಗುತಿದ್ದ ನೂರಾರು ವಾಹನಗಳ ಸದ್ದು ಕಿವಿಗೆ ಬಡಿತಿದ್ದರೂ ಏನನ್ನು ಕೇಳಿಸದವನಂತೆ ಎಲ್ಲೋ ನೋಡುತ್ತ ನಿಂತಿದ್ದೆ. ಸುಳಿಗಾಳಿ, ಬಿರಿಮಳೆಗೆ ಸಿಲುಕಿ ನೆಲಕ್ಕೆ ಬಿದ್ದಿದ್ದ ಹೂವುಗಳ ಕಡೆ ನನ್ನ ನೋಟ ನೆಟ್ಟಿತು. ವರ್ಷ ಪೂರ್ತಿ ಮಣ್ಣಿನಿಂದ ನೀರು ಸತ್ವ ಹೀರಿ, ಬಿಸಿಲು ಗಾಳಿ ಸಹಿಕೊಂಡು, ಫಲಕೊಡಲು ಹೂವರಳಿಸಿತ್ತು. ಇನ್ನೇನು ನಾಲ್ಕುದಿನ ಕಾದಿದ್ದರು ಹೂವು ಈಚಾಗಿ, ಈಚು ಬಲಿತು ಕಾಯಿಯಾಗಿ ಹಣ್ಣು ಮಾಗುತ್ತಿತ್ತು. ಹಣ್ಣು ಯಾರೇ ತಿಂದರು ಬೀಜ ತನ್ನ ವಂಶ ಬೆಳೆಸುತ್ತದೆ ಎಂಬ ಬಯಕೆಯಲ್ಲಿ ಮರ ಜೀವಿಸುತ್ತಿತ್ತು. ಆದರೆ ಮುಸಲಧಾರೆ ಮರದ ಕನಸಿಗೆ ಮಸುಕು ಹಾಕಿ ನಗುತ್ತಿತ್ತು. ಮರ ಬದುಕನ್ನೇ ಕಳೆದುಕೊಂಡ ಭಾವದಿಂದ ನರಳುತ್ತಿತ್ತು. ಆದರೆ ಬಿದ್ದ ಹೂವುಗಳು ನಗುತ್ತಲೇ ಇದ್ದವು. ಮೈಯಲ್ಲ ಸುಂದರ ಬಣ್ಣ ಹೊತ್ತು ಎಲ್ಲರನ್ನ ಸೆಳೆಯುತ್ತಿದ್ದವು. ಅವಳ ಮುಡಿಗೇರಲೇ, ದೇವರ ಪೂಜೆಗೆ ಅರ್ಪಿಸಿ ಕೊಳ್ಳಲೇ ಎಂಬ ತುಡಿತ ನನಗೆ ಇನ್ನೂ ಆ ಹೂವಲ್ಲಿ ಕಾಣಿಸುತ್ತಿತ್ತು. ಮಳೆಯ ಹನಿಗಳು ಹೂವಿನ ಪಕಳೆಯ ಮೇಲೆ ಮುತ್ತಂತೆ ಜೊಡಿಸಿದ್ದರಿಂದ ಸೊಗಸಾಗಿ ಕಾಣುತ್ತಿದ್ದವು. ನೋಟ ಆ ಹೂವುಗಳಲ್ಲೇ ನೆಟ್ಟಿತು. ಮನಸ್ಸು ತನ್ನ ವಾಸ್ತವನ್ನು ಆ ಹೂವಿನ ಜೊತೆ ತುಲನೆ ಮಾಡವುದರಲ್ಲಿ ತೊಡಗಿತು. ವರ್ಷಗಳ ಹಿಂದೆ ಮುಂಗಾರಿನ ಸಮಯ ಮೇಘಗಳು ನಭವನ್ನು ಮುತ್ತಿ ಕವಿಯುವ ಜೋರು. ನಾನೊಂದು ಸ್ನೇಹದ ಸಸಿ ನೆಟ್ಟಿದ್ದೆ. ಅವಳ ಮತ್ತು ನನ್ನ ಭಾವದ ನೀರೆರೆದು ನೆಟ್ಟ ಸಸಿ. ಮಾತು, ಮುನಿಸು, ಕಷ್ಟ, ಸುಖ, ನೋವು, ನಗು, ಬದುಕಿ ಎಲ್ಲಾ ಆಯಾಮಗಳನ್ನು ಆ ಸ್ನೇಹದ ಸಸಿಯ ನೆರಳಲ್ಲಿ ಸೇರಿಸಿದ್ದೆವು. ಆ ಸಸಿ ಹೂವನ್ನು ಬಿಟ್ಟು ಎಲ್ಲರನ್ನೂ ಸೆಳೆದಿತ್ತು ಮೋಹವನ್ನು ತನ್ನಲ್ಲಿ ಸೇರಿಸಿಕೊಂಡಿತ್ತು. ಆ ಸುಂದರ ಮಕರಂದ ತುಂಬಿಕೊಂಡು ಅರಳಿದ ಹೂವು ದುಂಬಿಗಳನ್ನ ಕರೆಯುತ್ತಿತ್ತು. ಪಾತರಗಿತ್ತಿಗಳನ್ನ ಅಣಕಿಸುತ್ತಿತ್ತು. ಸ್ನೇಹದ ಹೂವು ನೋಡಿ ಎಲ್ಲರ ಮತ್ಸರ ಹೆಚ್ಚಿತು. ಸುಂದರ ಹೂವು ಬೀಗುತ್ತಿತ್ತು. ಬಿರುಗಾಳಿ ಬರಬಹುದೆಂದು ಮರೆತು ಹಾಯಾಗಿ ತೂಗೋ ಗಾಳಿಗೆ ತಲೆದೂಗುತ್ತಿತ್ತು. ಆದರೆ ವಿಧಿಯ ಆಟ ಏನಿತ್ತೊ, ಎತ್ತಲಿಂದಲೋ ಬಂದ ಶಂಕೆ ಎಂಬ ಬಿರುಗಾಳಿ ಸುಳಿಸುಳಿದು ಬೀಸಿ ಹೂವುನ್ನು ನೆಲಕ್ಕುರುಳಿಸಿದೆ. ಹೂವು ನರಳತ್ತ ವೇದನೆಯಲ್ಲಿ ಬಾಡುತ್ತಿದೆ. ಭಾವನೆಗಳ ಮಿಲನದಿಂದ ಅರಳಿದ ಹೂವು ಇನ್ನಲ್ಲವಾಗಿದೆ. ಆದೋ ಇಲ್ಲಿರುವ ಮರ ಮತ್ತೊಮ್ಮೆ ಹೂವನ್ನು ಅರಳಿಸುವ ಆಸೆ ಹೊತ್ತು ಬಿಸಿಲು ಮಳೆಗೆ ಮೈಯೊಡ್ಡಿ ನಿಂತಂತೆ ನಾನೆಟ್ಟ ಆ ಸ್ನೇಹದ ಸಸಿಯಲ್ಲಿ ಮತ್ತೊಮ್ಮೆ ಭಾವ ನಂಟಿನ ಹೂವುನ್ನು ನೋಡುವ ನಿಚ್ಚಿತ ನಿರೀಕ್ಷೆಯಲ್ಲಿ ಬಂದ ನೋವು, ಕಷ್ಟ, ದುಃಖ, ನಿಂದನೆಗಳನ್ನು ಸಹಿಸುತ್ತ ಜೀವ ಸಾಗಿಸುತ್ತಿದೆ. ಇದೇನಾ ನಂಬಿಕೆ?
ಸತೀಶ್ ಅವರ ಚಿಂತೆ ಇರದ ಹೂಗಳು ಕವನ ಹೀಗೆ ಹೇಳುತ್ತದೆ.
ಚಿಂತೆ ಇರದ ಹೂಗಳು
ಜಾರಿ ಬಿದ್ದ ತಂಗಳು
ಕಂಡು ಕಾಣದಂತೆ ಕರುಳು
ಎರಚಿ ಹೋದ ಸಿರಿಗಳು.
ನಿನ್ನೆ ಎಲ್ಲ ಮರೆಯುವ
ಮುಂದೆ ನಾಳೆ ಎನ್ನುವ
ಬರಿ ಬವಣೆಯ ಅವಯವ
ಕಂಡು ಮುಂದುವರೆಯುವ.
ಹಿರಿದು ಅರಳಿ ಎದ್ದೆವು
ನಮ್ಮತನವ ಹೊದ್ದೆವು
ನಾಳೆ ಇರದ ಕನಸ ನಾವು
ಇಂದು ತಾನೆ ಕಂಡೆವು.
ಭೂಮಿಯಿಂದ ಭೂಮಿಗೆ
ಬಾನಿನಾಚೆ ಬದುಕಿಗೆ
ಹುಟ್ಟು-ಸಾವು ಹೀಗಿದೆ
ನಮ್ಮ ಪಯಣ ಸಾಗಿದೆ.
ಕುಮಾರ ಸ್ವಾಮಿ ಕಡಾಕೊಳ್ಳ ರು ಕವನದ ಮೂಲಕವೂ ತಮ್ಮ ಭಾವವನ್ನ ಹಂಚಿಕೊಂಡಿದ್ದಾರೆ.
ಮಾಸಿತು ಭಾವನೆ ಬಣ್ಣ **
ಮೊನ್ನೆ ಮೊಗ್ಗಾಗಿ ಕುಡಿಯಲ್ಲಿ ಚಾಚಿ
ನಿನ್ನೆ ಬಣ್ಣದ ಹೂವಾಗಿ ಅರಳಿ ನಕ್ಕು
ತುಂಬಿಸಿ ಸುತ್ತೆಲ್ಲ ಪರಿಮಳದ ಮತ್ತು
ಇಂದು ಜೀವನ ಯಾತ್ರೆಯ ಮುಗಿಸುವ ತಯಾರಿ!!
ನಿನ್ನೆ ಪಾತರಗಿತ್ತಿಯ ಅಣಕಿಸಿದ ಗತ್ತು
ಅಂದಿನಿಂದ ಸುಂದರಿಯ ಮುಡಿಗೇರುವ ಮಸಲತ್ತು
ದೇವರಗೆ ನಿನ್ನ ನೀನು ಅರ್ಪಿಸಿಕೊಳ್ಳುವ ನೆಚ್ಚು
ಇಂದು ಹಸಿರ ಹುಲ್ಲಮೇಲೆ ನೆಲಕಚ್ಚಿತು ಯ್ಯಾಕೋ?
ದುಂಬಿಯು ಬಳಸುತ ನಿನ್ನ ಕಚಕುಳಿಯನಿಡುತ್ತಿತ್ತು
ಸೂರ್ಯನು ನೋಡುತ್ತ ಕಣ್ಣು ಹೊಡೆಯುತಿದ್ದ
ನನ್ನ ಮನಸು ಕದ್ದು ಮೋಡಿಮಾಡಿತ್ತಲಿದ್ದ, ನಿನಗೆ
ಈಗ ಸಿಡುಕ್ಯಾಕೋ ದೂರ ಹೋಗುವ ಮನಸ್ಯಾಕೋ
ಮುಂಜಾನೆ ಮಂಜ ಹನಿಯ ಪಕಳೆಯಲಿಡಿದು
ಮುತ್ತುಗಳನೆ ಮಾಡಿ ಪೋಣಿಸಿ ಮೆರೆದಿದ್ದೆ
ಹನಿಯಲ್ಲಿ ಒಲವಿನ ಗೆಳತಿಯ ಬಿಂಬ ತೋಸಿಸಿದ್ದೆ
ಈಗ್ಯಾಕೋ ಹಾಗೆ ಬಾಡುತ ಅಲ್ಲಿ ಬಿದ್ದೆ
ನಾನೊಂದು ಕನಸು ನಿನ್ನ ನಂಬಿ ಕಟ್ಟಿದ್ದೆ
ನನ್ನ ಒಲವಿನ ಗೆಣತಿಗೆ ನಿನ್ನ ಮುಡಿಗೆ ಮುಡಿಸುವೆನೆಂದಿದ್ದೆ
ಅಂದಿನಿಂದ ಇಂದಿನವರೆಗೆ ಕಾಯುತಲೇ ಕೂತಿದ್ದೆ
ಅವಳು ಬರುವ ಮೊದಲೇ ನೀ ಜಾರಿಬಿದ್ದೆ
ಏಸೊಂದು ದಿನದಿಂದ ಬೀಸುವಾ ಗಾಳಿಗೆ
ಮೂಗು ತಿವಿಯುತ್ತ ಠೀವಿಯಿಂದ ಕೂತಿದ್ದೆ
ಅದುಯಾಕೋ ಇಂದು ಬುಡಕಳಚಿ ಬಿದ್ದೆ
ನನ್ನ ಭಾವನೆಯ ಬಣ್ಣವನು ಮಾಸಿಸಿ ಬಿಟ್ಟೆ
ಯಾರು ಬಲ್ಲರು ನಡೆಯುವ ವಿಧಿಯಾಟವ
ಬಲ್ಲವರು ಇಲ್ಲ ಅರಿಯಲು ಆಗುವುದಿಲ್ಲ
ಎಲ್ಲದರ ಅರಿವಿದ್ದರು ನಂಬಿ ಕಟ್ಟಿದರು
ಬದುಕುವ ನೂರು ಕನಸುಗಳನು, ಇದವೇ ಏನಾ ಬದುಕು??

