Wednesday, 26 November 2008

ಚಿತ್ರ ೮೦

ತಿರುಕ ಹೇಳುತ್ತಾರೆ:


ಮನೆಯ ಬಾಗಿಲಿಗೆ ಬಂದವರು
ಒಳಗೆ ಬರಲಾರದವರು
ಅದೇಕೆ ಹಾಗೆ ನಿಂತಿಹರೋ
ಬನ್ನಿರೈ ಮಿತ್ರರೇ ಬನ್ನಿರೈ

ಅದೇನೋ ಸಂಶಯ
ಎಲ್ಲಿಲ್ಲದ ಭಯ
ಎಮ್ಮಲ್ಲಿಲ್ಲ ಬೆಳಕು
ಎಲ್ಲೆಲ್ಲಿ ನೋಡಿದರೂ ಕೊಳಕು

ಒಳಗಿರುವುದೇನೋ
ಸಿಂಹವೋ ನರಭಕ್ಷಕನೋ
ನಾನೊಂದು ಹಸುಳೆ
ಹೆಜ್ಜೆಯ ಸಪ್ಪಳಕೂ ಹೆದರುವವಳೇ

ಒಳ ಬರಲು ಹಾದಿ ಹದ ಮಾಡಿಹುದು
ಮಾಗಿರುವ ಹಣ್ಣು ನಿಮ್ಮ ಹಡಪದಲ್ಲಿಹುದು
ಒಳಗೆ ಸೊಗಸಾದ ಜೇನಿಹುದು
ಸೇರಿಸಿ ಮಿಶ್ರಿಸಿ ತಿನ್ನುವ ಬನ್ನಿರೈ

ನನ್ನ ಹೆಸರಂತೆ ಮೊಲ
ಪ್ರೀತಿಯಿಂದ ಅಮ್ಮ ಕರೆವುದು ಕಮಲ
ಕೊಡುವೆಯಾದರೆ ನೀನೊಂದು ಗಜ್ಜರಿ
ತೋರುವೆ ಒಳಬರುವ ದಾರಿ

ಹೆದರದಿರಿ ಬೆದರದಿರಿ
ಒಳಬಂದು ಬೆದರಿಸದಿರಿ
ನೀವು ನನ್ನವರು ನಾನು ನಿನ್ನವಳು
ಬನ್ನಿರೈ ಒಳ ಬನ್ನಿರೈ ಹೆದರದೇ ಬನ್ನಿರೈ

Thursday, 20 November 2008

ಚಿತ್ರ ೭೯



ತಿರುಕ ಅವರ ಕವನ:

ಅರ್ಜುನನ ರಥದ ಮೇಲೆ
ಕೃಷ್ಣನ ಸಾರಥ್ಯದೊಂದಿಗೆ
ಅನಾದಿ ಕಾಲದಿಂದ
ಎಂದೂ ಇಳಿಯಲಿಲ್ಲ
ಇಳಿಯುವುದಿಲ್ಲ
ಹಾರದೇ ಇರುವುದಿಲ್ಲ
ಆಗಿರುವೆ ರಾಷ್ಟ್ರದ ಲಾಂಛನ
ತ್ಯಾಗ ಬಲಿದಾನಗಳ ಸಂಕೇತ

ಏರುತಿಹುದು
ಹಾರುತಿಹುದು
ಭಗವಾ ಧ್ವಜ
ಮಂದಿರದ ಸಂಕೇತ
ಜನಜೀವನದ ದ್ಯೋತಕ
ಉದ್ದಗಲ ಅಲೆಯುತ್ತಿರುವ
ಅಳೆಯುತ್ತಿರುವ ಸಮುದ್ರಕೆ
ಮಿತಿಯ ತೋರುತಿಹೆ

ಒಂದೆಡೆ ಕಮರಿ,
ಕಬಳಿಸಲು ಸಂಚು ಹಾಕುತಿಹ ಸಮುದ್ರ
ಅದರ ಭೋರ್ಗರೆತ
ಆಸರೆಗೆ ಬಂಡೆಯೊಂದಿಹುದು
ಅದೊಂದುದಿನ ಕರಗಬಹುದು
ಇನ್ನೊಂದೆಡೆ ಭಕ್ತರ ಹೊಳೆ
ಎನ್ನ ಮೇಲಿನ ಅಪಾರ ಭಕ್ತಿ
ಅವರ ಮೇಲೆ ಎನಗಿಹುದು ನಿಸ್ಸಂದೇಹ ನಂಬುಗೆ
ಸಮುದ್ರದಿಂದ ಕಾಪಾಡುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

ರವಿಯು ಇಳಿದರೇನು
ಏರಿದರೇನು
ಧ್ವಜ ಹಾರುತಲೇ ಇರುವುದು
ಜನರಲಿ ನಂಬುಗೆಯ ಮೂಡಿಸುವುದು
ಭಗವಾಧ್ವಜ ರಕ್ಷತಿ ರಕ್ಷಿತಃ