Monday 25 June, 2007

ಚಿತ್ರ - 7



ಕವಿತೆ ನೇಯ್ದವರು...

ದಡದಿ ತಂಗಿರುವ ಆಸೆ ದೋಣಿಯನೇರಿ
ಬದುಕ ನೀಲಿ ಸಮುದ್ರದಲಿ ಸಾಗಿ
ಪರಿಶ್ರಮದ ಹುಟ್ಟುಹಾಕಿ ಮೀಟಿ
ಕಷ್ಟದಲೆಗಳ ಹಿಂದೆ ನೂಕಿ
ದಿನದ ಬುತ್ತಿಯ ಹಿಡಿದು ಬಲೆಬೀಸಿ
ನಾಳೆಗೂ ಒಂದಷ್ಟು ಉಳಿಸಿ

ಮತ್ತದೇ ದಡಕೆ ಹಿಂದಿರುಗಿ ಮಲಗುವ ಮುನ್ನ-
ಹೊಲಿಯಲೇಬೇಕಿದೆ ಹರಿದು ಹೋಗಿರುವ ಕನಸ ಬಲೆಗಳನ್ನ...

- ಸುಶ್ರುತ ದೊಡ್ಡೇರಿ

ನೇಯುತ್ತೇವೆ ನಾವು....

ಕನಸುಗಳ ಹೆಣೆಯುತ್ತೇವೆ, ಇಳಿಗಾಲದಲ್ಲಿ
ಹೊರೆಹೊರುವ ಬಲವೀಯುತ್ತೇವೆ ಬಲೆಗೆ
ಹೆಣೆದೇ ಹೆಣೆಯುತ್ತೇವೆ, ಬುತ್ತಿಗಳ ನೆನಪಲ್ಲಿ
ಇಂದು ತಂದಿದ್ದನ್ನು ನಾಳೆಗೆ ಉಳಿಸಿಕೊಳ್ಳುವವರೆಗೆ.

ನೆಲೆಯಿಲ್ಲದ ನೀರಿನಲ್ಲಿ ನಮ್ಮ ಜೀವ ಸೆಲೆ
ಸೆಳೆತದೊಳಗೆ ಎಳೆಯಬೇಕು ಜೀವ ಬಲೆ
ಅಲೆಯೆದುರಿನ ಬದುಕು, ಅಸಂಖ್ಯ ಜೀವ ನೆಲೆ
ಅಳೆದೂ ಅಳೆಯಲಾಗದ ಅದಮ್ಯ ಜೀವ ಕಲೆ.

"ಹೊಯ್" ಅಂದಾಗ ಸೇರಿಕೊಳ್ಳುವ ಬಲ
ಒಂದಾಗಿ ದುಡಿದಾಗ ಕೂಡಿಕೊಳ್ಳುವ ಬಲ
ಹಲವು ಹಸ್ತಗಳಲ್ಲಿ ಗುರಿಯೊಂದರ ಬಲ
ಸೇರಿ ಬಾಳುವಲ್ಲಿ ನಾಳೆಗಳಿಗೆ ಬೆಂಬಲ.

- ಸುಪ್ತದೀಪ್ತಿ

ಎರಡು ಪೂರಕ ಸ್ವಗತ

ಜಲವಾಸಿ - ಮೀನ ರಾಶಿ:
ಗೊತ್ತಿದೆ ನೀನು ಹಿಡಿಯುತ್ತೀ ಅಂತ
ಆದ್ರೂ ಬಂದು ಸಿಗುತ್ತೇನೆ ನಾನು ಗಾಳಕ್ಕೆ
ನಾನೇನೋ ತಿನ್ನಲು ಹೋಗಿ ಸಿಕ್ಕಿಬಿದ್ದೆ ನಿನಗೆ
ಎಂಬ ಭಾವದ ಆಟವೆಷ್ಟು ಚೆನ್ನ
ಅದು ಸಾವಿನಾಟವಾದರೂ.

ಸುಮ್ಮನೆ ಹೊರಟಿದ್ದೆವು ನಾವು ಗೆಳೆಯರ ಗುಂಪು
ಏನೂ ತಿನ್ನಲಲ್ಲ, ಯಾವುದನ್ನೂ ಕಚ್ಚಲಲ್ಲ
ಇದ್ದಕ್ಕಿದ್ದಂತೆ ಬಂದೆರಗಿ ಹಿಡಿದುಬಿಟ್ಟಿದೆ
ಬಲೆ ತಾನೇ ತಾನಾಗಿ, ಇದು ಬೇಕಿರಲಿಲ್ಲ
ಇಲ್ಲಿ ಆಟವಿಲ್ಲ, ಮಾಟವಿಲ್ಲ, ಬರಿಯ ಸಾವಿನ ಹೂಟ!

ನೆಲವಾಸಿ-ಧನುರ್ ರಾಶಿ:
ಬಿರುಬಿಸಲು, ಸುರಿವ ಮಳೆ-ಗಾಳಿ, ಅಬ್ಬರಿಸುವ ಕಡಲು
-ಗಳ ಮಧ್ಯೆ ನಮ್ಮ ಜೀವ ಹಿಡಿದು, ನಿಮ್ಮ ಜೀವ ಕಳಚಿ
ಮಾರ್ಕೆಟಲ್ಲಿ ಕಾಯುವ ಕೈಗಳಲ್ಲಿ ನಿಮ್ಮನ್ನೆಸೆದು
ಮನೆಯಲ್ಲಿ ಕಾಯುತ್ತಿರುವ ಕೈಗಳಿಗೆ
ಊಟ ಹಿಡಿದು ಹೋಗುತ್ತೇವೆ ನಾವು;
ಇಲ್ಲ ಇದು ಆಟವಲ್ಲ, ನಮಗೆ ಬರಿಯ ಬದುಕು.

ಅಲ್ಲಲ್ಲಿ ಹೊಲಿಗೆ ಬಿಟ್ಟ ಬದುಕಿನ ಕಿಂಡಿಗಳ
ಗೋಡೆ ಬೀಳದಿರಲು, ಹೊಲಿಯುತ್ತಿದ್ದೇವೆ-
ಹಿಡಿದಿಟ್ಟ ನೀವು ತಪ್ಪಿ ಹೊಗದಿರಲು.
ಇದು ಆಟವಲ್ಲ, ಹರುಕು
ಬದುಕಿನ ತೇಪೆ.

ಆಟ ಆಗ ಮಾತ್ರ, ಸುಮ್ಮನೆ ಹೊರಟ
ನಿಮಗರಿವಾಗದಂತೆ ಬೀಸಿ ಹಿಡಿವಾಗ,
ಕ್ಷಣ ಮಾತ್ರ ಆಟ, ಮತ್ತೆಲ್ಲ ಬದುಕು.

- ಸಿಂಧು

ಭಲೆ ಬಲೆ!

ಜೀವಜಲವ ಹುಡುಕುವಂಥ ಸಾವಿರ ಕಣ್ಣಿನ ಬಲೆ
ಬಿಡಿಸಬೇಕು ಹೆಣೆಯಬೇಕು ಬದುಕೆನ್ನುವ ಕಲೆ
ಗೋಣು ಬಗ್ಗಿಸಿ ದುಡಿಯದಿರೆ ಸುಟ್ಟೇಬಿಡುವ ಸೂರ್ಯ
ಯಾರು ಇರಲಿ ಯಾರು ಬಿಡಲಿ ನಿಲ್ಲದು ಕೈಂಕರ್ಯ.

ಹಲವು ನೀರ ತನ್ನೊಡಲಲಿ ಬಿಟ್ಟು ದೂರ ಸಾಗಿಹುದು
ಹಲವು ತೀರ ಕಂಡು ತಾನು ಪೋಣಿಸಿ ನೋಡಿಹುದು
ಭಲೆ ಬಲೆ ಎಂದವರಷ್ಟೇ ಏನೋ ಅರಿತ ಮಹಾಜಾಲ
ನೀರನಷ್ಟೇ ಅಲ್ಲ ಗಾಳಿಯನೂ ಸೋಸಿಬಿಡುವ ಛಲ.

ತೇವವೆಲ್ಲಿ ಒಣಗಿಹೋಯ್ತು ಜೀವಜಲದ ಮರೆಯೇ
ನೀರಿರದ ಕಡಲಿಗೆ ನಾವೆ ದೂಕುವುದು ಸರಿಯೇ
ತಮ್ಮ ಕೆಲಸ ತಾವು ಕಂಡು ಒಣಗುತಿಹರು ಪಾಪ
ಇವರ ನಡುವೆ ಒಂಟಿ ತಾನು ಛತ್ರಿ ಹಿಡಿದ ಭೂಪ.

ಭಲೆ ಎನ್ನುತ ಅದೇ ನೀರಿಗೆ ಬೀಸುವುದು ನಮ್ಮ ಬಲೆ
ಸಿಗುವುದು-ಬಿಡುವುದು ಎಲ್ಲ ಆ ದೇವನಿಗೆ ಬಿಟ್ಟ ಕಲೆ.

- ಸತೀಶ್

4 comments:

Sushrutha Dodderi said...

ದಡದಿ ತಂಗಿರುವ ಆಸೆ ದೋಣಿಯನೇರಿ
ಬದುಕ ನೀಲಿ ಸಮುದ್ರದಲಿ ಸಾಗಿ
ಪರಿಶ್ರಮದ ಹುಟ್ಟುಹಾಕಿ ಮೀಟಿ
ಕಷ್ಟದಲೆಗಳ ಹಿಂದೆ ನೂಕಿ
ದಿನದ ಬುತ್ತಿಯ ಹಿಡಿದು ಬಲೆಬೀಸಿ
ನಾಳೆಗೂ ಒಂದಷ್ಟು ಉಳಿಸಿ

ಮತ್ತದೇ ದಡಕೆ ಹಿಂದಿರುಗಿ ಮಲಗುವ ಮುನ್ನ-
ಹೊಲಿಯಲೇಬೇಕಿದೆ ಹರಿದು ಹೋಗಿರುವ ಕನಸ ಬಲೆಗಳನ್ನ...

ಸುಪ್ತದೀಪ್ತಿ suptadeepti said...

ನೇಯುತ್ತೇವೆ ನಾವು....

ಕನಸುಗಳ ಹೆಣೆಯುತ್ತೇವೆ, ಇಳಿಗಾಲದಲ್ಲಿ
ಹೊರೆಹೊರುವ ಬಲವೀಯುತ್ತೇವೆ ಬಲೆಗೆ
ಹೆಣೆದೇ ಹೆಣೆಯುತ್ತೇವೆ, ಬುತ್ತಿಗಳ ನೆನಪಲ್ಲಿ
ಇಂದು ತಂದಿದ್ದನ್ನು ನಾಳೆಗೆ ಉಳಿಸಿಕೊಳ್ಳುವವರೆಗೆ.

ನೆಲೆಯಿಲ್ಲದ ನೀರಿನಲ್ಲಿ ನಮ್ಮ ಜೀವ ಸೆಲೆ
ಸೆಳೆತದೊಳಗೆ ಎಳೆಯಬೇಕು ಜೀವ ಬಲೆ
ಅಲೆಯೆದುರಿನ ಬದುಕು, ಅಸಂಖ್ಯ ಜೀವ ನೆಲೆ
ಅಳೆದೂ ಅಳೆಯಲಾಗದ ಅದಮ್ಯ ಜೀವ ಕಲೆ.

"ಹೊಯ್" ಅಂದಾಗ ಸೇರಿಕೊಳ್ಳುವ ಬಲ
ಒಂದಾಗಿ ದುಡಿದಾಗ ಕೂಡಿಕೊಳ್ಳುವ ಬಲ
ಹಲವು ಹಸ್ತಗಳಲ್ಲಿ ಗುರಿಯೊಂದರ ಬಲ
ಸೇರಿ ಬಾಳುವಲ್ಲಿ ನಾಳೆಗಳಿಗೆ ಬೆಂಬಲ.

ಸಿಂಧು sindhu said...

ಎರಡು ಪೂರಕ ಸ್ವಗತ

ಜಲವಾಸಿ - ಮೀನ ರಾಶಿ:
ಗೊತ್ತಿದೆ ನೀನು ಹಿಡಿಯುತ್ತೀ ಅಂತ
ಆದ್ರೂ ಬಂದು ಸಿಗುತ್ತೇನೆ ನಾನು ಗಾಳಕ್ಕೆ
ನಾನೇನೋ ತಿನ್ನಲು ಹೋಗಿ ಸಿಕ್ಕಿಬಿದ್ದೆ ನಿನಗೆ
ಎಂಬ ಭಾವದ ಆಟವೆಷ್ಟು ಚೆನ್ನ
ಅದು ಸಾವಿನಾಟವಾದರೂ.

ಸುಮ್ಮನೆ ಹೊರಟಿದ್ದೆವು ನಾವು ಗೆಳೆಯರ ಗುಂಪು
ಏನೂ ತಿನ್ನಲಲ್ಲ, ಯಾವುದನ್ನೂ ಕಚ್ಚಲಲ್ಲ
ಇದ್ದಕ್ಕಿದ್ದಂತೆ ಬಂದೆರಗಿ ಹಿಡಿದುಬಿಟ್ಟಿದೆ
ಬಲೆ ತಾನೇ ತಾನಾಗಿ, ಇದು ಬೇಕಿರಲಿಲ್ಲ
ಇಲ್ಲಿ ಆಟವಿಲ್ಲ, ಮಾಟವಿಲ್ಲ, ಬರಿಯ ಸಾವಿನ ಹೂಟ!

ನೆಲವಾಸಿ-ಧನುರ್ ರಾಶಿ:
ಬಿರುಬಿಸಲು, ಸುರಿವ ಮಳೆ-ಗಾಳಿ, ಅಬ್ಬರಿಸುವ ಕಡಲು
-ಗಳ ಮಧ್ಯೆ ನಮ್ಮ ಜೀವ ಹಿಡಿದು, ನಿಮ್ಮ ಜೀವ ಕಳಚಿ
ಮಾರ್ಕೆಟಲ್ಲಿ ಕಾಯುವ ಕೈಗಳಲ್ಲಿ ನಿಮ್ಮನ್ನೆಸೆದು
ಮನೆಯಲ್ಲಿ ಕಾಯುತ್ತಿರುವ ಕೈಗಳಿಗೆ
ಊಟ ಹಿಡಿದು ಹೋಗುತ್ತೇವೆ ನಾವು;
ಇಲ್ಲ ಇದು ಆಟವಲ್ಲ, ನಮಗೆ ಬರಿಯ ಬದುಕು.

ಅಲ್ಲಲ್ಲಿ ಹೊಲಿಗೆ ಬಿಟ್ಟ ಬದುಕಿನ ಕಿಂಡಿಗಳ
ಗೋಡೆ ಬೀಳದಿರಲು, ಹೊಲಿಯುತ್ತಿದ್ದೇವೆ-
ಹಿಡಿದಿಟ್ಟ ನೀವು ತಪ್ಪಿ ಹೊಗದಿರಲು.
ಇದು ಆಟವಲ್ಲ, ಹರುಕು
ಬದುಕಿನ ತೇಪೆ.

ಆಟ ಆಗ ಮಾತ್ರ, ಸುಮ್ಮನೆ ಹೊರಟ
ನಿಮಗರಿವಾಗದಂತೆ ಬೀಸಿ ಹಿಡಿವಾಗ,
ಕ್ಷಣ ಮಾತ್ರ ಆಟ, ಮತ್ತೆಲ್ಲ ಬದುಕು.

Satish said...

ಭಲೆ ಬಲೆ!

ಜೀವಜಲವ ಹುಡುಕುವಂಥ ಸಾವಿರ ಕಣ್ಣಿನ ಬಲೆ
ಬಿಡಿಸಬೇಕು ಹೆಣೆಯಬೇಕು ಬದುಕೆನ್ನುವ ಕಲೆ
ಗೋಣು ಬಗ್ಗಿಸಿ ದುಡಿಯದಿರೆ ಸುಟ್ಟೇಬಿಡುವ ಸೂರ್ಯ
ಯಾರು ಇರಲಿ ಯಾರು ಬಿಡಲಿ ನಿಲ್ಲದು ಕೈಂಕರ್ಯ.

ಹಲವು ನೀರ ತನ್ನೊಡಲಲಿ ಬಿಟ್ಟು ದೂರ ಸಾಗಿಹುದು
ಹಲವು ತೀರ ಕಂಡು ತಾನು ಪೋಣಿಸಿ ನೋಡಿಹುದು
ಭಲೆ ಬಲೆ ಎಂದವರಷ್ಟೇ ಏನೋ ಅರಿತ ಮಹಾಜಾಲ
ನೀರನಷ್ಟೇ ಅಲ್ಲ ಗಾಳಿಯನೂ ಸೋಸಿಬಿಡುವ ಛಲ.

ತೇವವೆಲ್ಲಿ ಒಣಗಿಹೋಯ್ತು ಜೀವಜಲದ ಮರೆಯೇ
ನೀರಿರದ ಕಡಲಿಗೆ ನಾವೆ ದೂಕುವುದು ಸರಿಯೇ
ತಮ್ಮ ಕೆಲಸ ತಾವು ಕಂಡು ಒಣಗುತಿಹರು ಪಾಪ
ಇವರ ನಡುವೆ ಒಂಟಿ ತಾನು ಛತ್ರಿ ಹಿಡಿದ ಭೂಪ.

ಭಲೆ ಎನ್ನುತ ಅದೇ ನೀರಿಗೆ ಬೀಸುವುದು ನಮ್ಮ ಬಲೆ
ಸಿಗುವುದು-ಬಿಡುವುದು ಎಲ್ಲ ಆ ದೇವನಿಗೆ ಬಿಟ್ಟ ಕಲೆ.