
ಅಸತ್ಯ ಅನ್ವೇಷಿ ಯವರು ಬರೆದಿರುವುದು:
ಹಾಯಾಗಿ ಮಲಗಿರೋ ರಸ್ತೆ ಹಾಸುಗೆ ಮೇಲೆ
ಜೀವನದ ನಿರ್ಜೀವ ಚಕ್ರಗಳ ಓಡಾಟ;
ಬದುಕ ಬೆಂಗಾಡಿನಲಿ ಬಂದು ಹೋಗುವವರಿಹರು
ಉಂಡು ಹೋಗುವರು, ಕೊಂಡೂ ಹೋಗುವರು;
ಜೀವನದ ಬಂಡಿಯಲಿ ನೋವು ನಲಿವುಗಳು ಅವಿರತ
ತೊಲಗುತಲಿರುವುದೇ ಜಂಜಡವು ಅನವರತ?
ಕುಮಾರ ಸ್ವಾಮಿ ಕಡಾಕೊಳ್ಳ ಯವರು ತಮ್ಮ " ಆವರ್ತನ " ಎಂಬ ಕವನದಲ್ಲಿ ಅಭಿಪ್ರಾಯ ತಿಳಿಸಿದ್ದು ಹೀಗೆ:
ಕಾನನದ ಒಡಲು ಸೀಳಿ
ತರು ಲತೆಯ ಮೂಲ ಅಡಗಿಸಿ
ಅಟ್ಟ ಹಾಸದಿ ಹಾಸಿ ಮಲಗಿದೆ
ದಿಟ್ಟರಾರು ನನ್ನ ಮೆಟ್ಟಿನಿಲ್ಲಲು ಎಂದು ಬೀಗುತ ಅದೋ ದಾರಿ ಅಲ್ಲಿ
ಬಿಟ್ಟು ಬಿಡದೆ ಮತ್ತೆ ಹುಟ್ಟಿ ಬೆಳೆದಿವೆ ಬದಿಯಲಿ
ಆಲ ಅಲಸು ಬೇಲ ಬೇವು ಮರಗಳು
ಅಡರಿ ಹಬ್ಬಿವೆ ಲತೆಗಳು ತರುಗಳ ಆಸರೆಯಲಿ
ಹಾದಿಗೆ ಉತ್ತರಕೊಟ್ಟಂತೆ ಉಲಿಯುತಿವೆ ಹಕ್ಕಿಗಳು ಮರದಮೇಲೆ
ದಾರಿ ತರು ಲತೆ ಹಕ್ಕಿ ಪಿಕ್ಕಿಯ ನಡುವೆ
ಯಾರು ಮಿಗಿಲೆಂದು ವಾದವ ನಡೆದಿರಲು
ಘಟ ಘೋರ ಘರ್ಜನೆ ಮಾಡುತ್ತ ದಿಟ್ಟ ದ್ವನಿಯೊಂದು
ನಾನೇ ಮಿಗಿಲೆಂದು ಬಂದಿತು ಮಾನವ ದಂಡೊಂದು
ಕುಡಿಸಿ ತೈಲನು ಹಚ್ಚಿ ಒಡಲಿಗೆ ಕಿಚ್ಚನು
ಉರುಳುವ ಗಾಲಿಗಳ ಸೂತ್ರವನು ಹಿಡಿದು ಕಾಲಲ್ಲಿ
ಇಚ್ಚೆಗನುಸಾರ ನಿರ್ಜೀವದ ಓಟವನು ಬದಲಿಸುತ
ನಾನೆ ಸರದಾರ ಈ ಸೃಷ್ಟಿಗೆಲ್ಲ ಎಂದು ಬೀಗಿನಲಿ
ಮೌನವೆ ಮಾತಾಗಿ ಹರಿದಿತ್ತು ಜಲ ಝರಿಯು
ಮೂಖ ತಾನಾಗಿ ಕೇಳಿತ್ತು ಪ್ರೆಶ್ನೆಯೊಂದು
ಹೊನಲು ಹಸಿರಾಗಲು ಬಿಸಿಲು ತನಿಯಾಗಲು
ಧರೆಯು ಉಸಿರಾಡಲು ಕಾರಣರು ಯಾರೆಂದು?
ಎಲ್ಲ ನೋಡಿಯು ನೋಡದಿಹನಂತೆ
ನಸು ನಕ್ಕು ಇಣುಕುತಿಹನು ಬಾನಿನೊಡೆಯ
ಚೆಲ್ಲಿ ಬೆಳಕನು ಉಣಿಸುತ ಜೀವಾಗ್ನಿಯನು
ನಡೆಸಿಹನು ಸೃಷ್ಠಿಯನು ಮಾಡುತ ಆವರ್ತನ
ನಾನು ನಾನಲ್ಲ ಎಲ್ಲರಲು ನಾನಿಲ್ಲ
ನಾನಾಗಿರುವ ಸೃಷ್ಠಿಯು ನನ್ನದಲ್ಲ
ಏನು ಇಲ್ಲದೆ ಎಲ್ಲ ನನ್ನದೆಂದು ಬಂದಿಸುವ ಹುನ್ನಾರದಿ ಮೆರೆವ
ಮನುಜ ಜೀವನ ಆವರ್ತನ ಎಂತ ಅನರ್ಥ
ಸತೀಶ ಅವರ ಶಬ್ದಗಳಲ್ಲಿ "ಬಿಳಲಿನ ಅಳಲು"
ಯಾವಾಗ್ ನೋಡುದ್ರೂ ಗುಯ್ ಅನ್ನೋ ಗಾನ
ತುಂಬಿದ್ ರೋಡೂ, ಪಕ್ಕದಿ ಉದ್ದಕೆ ಹಾಸಿದ ಮರಗಳ
ಸಾಲನ್ನ್ ನೋಡೂ, ನಿಂತಿರೋ ಜೀವ ಓಡೋ ಬದುಕು.
ಯಾವತ್ತಿದ್ರೂ ಎಷ್ಟೇ ಬೆಳೆದ್ರೂ ಹೂವೇ ಇರದ ಆಲ
ಬಿಳಲಿನ ಬೆಳೆಯು, ಎಲ್ಲಾ ಕಡೆಗೂ ಉದ್ದಕೆ ಚಾಚಿ
ಹರಡುವ ಕಳೆಯು, ಬೆಳೆಯುವ ಬವಣೆ ಹಿಗ್ಗುವ ಬಯಕೆ.
ಯಾವನೇ ಇರಲಿ ಸೃಷ್ಟಿಯ ಮುಂದೆ ಸಣ್ಣವನೆಂಬ ಚಿತ್ರ
ಓಡುವ ಮಂದಿ, ಥರ ಥರ ವಾಹನ ತರುವಾ ಧೂಳಲಿ
ನಮ್ಮೊಳು ಬಂಧಿ, ದೂರಕೆ ದೂರಕೆ ಹೋಗುವ ಕಾತರ.